Kantara Mimicry Controversy: ಇರಾನ್-ಇಸ್ರೇಲ್ ಯುದ್ಧದಿಂದ ಇಂಗ್ಲೆಂಡ್ನಲ್ಲೇ ಬೀಡು; ರಣ್ವೀರ್ ಸಿಂಗ್ ಕೋರ್ಟ್ಗೆ ಹೇಳಿದ್ದೇನು
ಬಾಲಿವುಡ್ ನಟ ರಣ್ವೀರ್ ಸಿಂಗ್ 'ಕಾಂತಾರ' ಸಿನಿಮಾದ ದೈವವನ್ನು ಅಣುಕು ಮಾಡಿ ಪೇಚಿಗೆ ಸಿಕ್ಕಿಕೊಂಡಿದ್ದರು. ಗೋವಾದಲ್ಲಿ ನಡೆದ ಸಿನಿಮಾ ಕಾರ್ಯಕ್ರಮದ ವೇಳೆ ರಣ್ವೀರ್ ಸಿಂಗ್ ದೈವವನ್ನು ಅಣಕಿದ್ದರು. ಇದು ವಿವಾದಕ್ಕೆ ತಿರುಗಿತ್ತು. ರಣ್ವೀರ್ ಸಿಂಗ್ ವಿರುದ್ಧ ತುಳುನಾಡಿನ ಜನರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂಬಂಧ ರಣ್ವೀರ್ ಸಿಂಗ್ ವಿರುದ್ಧ ದೂರು ಕೂಡ ದಾಖಲಾಗಿತ್ತು.
ರಣ್ವೀರ್ ಸಿಂಗ್ ದೈವವನ್ನು ಅವಮಾನ ಮಾಡಿದ್ದು, ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪ ಮಾಡಿದ್ದರು. ಈ ಬೆನ್ನಲ್ಲೇ ರಣ್ವೀರ್ ಸಿಂಗ್ ವಿರುದ್ಧ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಡ್ನಲ್ಲಿ ಖಾಸಗಿ ದೂರು ದಾಖಲಾಗಿತ್ತು. ಹಾಗೇ ಹೈಗ್ರೌಂಡ್ಸ್ ಪೊಲೀಸರು ಈ ಸಂಬಂಧ ರಣ್ವೀರ್ ಸಿಂಗ್ ವಿರುದ್ಧ ಎಫ್ಐಆರ್ ಅನ್ನು ದಾಖಲಿಸಿದ್ದರು. ಇದನ್ನು ರದ್ದು ಮಾಡಬೇಕು ಎಂದು ರಣ್ವೀರ್ ಸಿಂಗ್ ಹೈಕೋರ್ಟ್ಗೆ ಅರ್ಜಿಯನ್ನು ಸಲ್ಲಿಸಿದ್ದರು.

ಈ ಅರ್ಜಿ ನಿನ್ನೆ ( ಮಾರ್ಚ್ 2) ವಿಚಾರಣೆಗೆ ಬಂದಿತ್ತು. ಹೈಕೊರ್ಟ್ನ ಏಕಸದಸ್ಯ ಪೀಠದ ನ್ಯಾಮೂರ್ತಿ ಎಂ.ನಾಗಪ್ರಸನ್ನ ಅವರು ರಣ್ವೀರ್ ಸಿಂಗ್ ಅರ್ಜಿಯನ್ನು ಕೈಗೆತ್ತಿಕೊಂಡರು. ಆದರೆ, ಈ ಕೇಸ್ಗೆ ಸಂಬಂಧಿಸಿದ ವಿಚಾರಣೆ ವೇಳೆ ರಣ್ವೀರ್ ಸಿಂಗ್ ಗೈರು ಹಾಜರಾಗಿದ್ದರು. ಇದಕ್ಕೆ ಕಾರಣವೇನು? ರಣ್ವೀರ್ ಸಿಂಗ್ ಯಾಕೆ ಬರಲಾಗುತ್ತಿಲ್ಲ? ಅನ್ನೋದನ್ನು ಕೋರ್ಟ್ಗೆ ರಣ್ವೀರ್ ಸಿಂಗ್ ಪರ ವಕೀಲರು ತಿಳಿಸಿದ್ದಾರೆ.
ರಣ್ವೀರ್ ಸಿಂಗ್ ಪರ ವಕೀಲರಾದ ಸಜ್ಜನ್ ಪೂವಯ್ಯ ಹೈಕೋರ್ಟ್ಗೆ ನಟನ ಅನುಪಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಪೊಲೀಸರು ನೀಡಿರುವ ನೋಟಿಸ್ ಅನ್ನು ಸ್ವೀಕರಿಸಲಾಗಿದೆ. ಆದರೆ, ರಣ್ವೀರ್ ಸಿಂಗ್ ಇಂಗ್ಲೆಡ್ನಲ್ಲಿ ಇರುವುದರಿಂದ ಬರುವುದಕ್ಕೆ ಆಗುತ್ತಿಲ್ಲ ಎಂದು ಮಾಹಿತಿಯನ್ನು ನೀಡಿದರು. ರಣ್ವೀರ್ ಸಿಂಗ್ ಪರ ವರ ಹೇಳಿಕೆಯನ್ನು ದಾಖಲಿಸಿದ ಬಳಿಕ ಕಾಂತಾರ ಮಿಮಿಕ್ರಿ ಪ್ರಕರಣವನ್ನು ಮಾರ್ಚ್ 9ಕ್ಕೆ ಮುಂದೂಡಲಾಯ್ತು. ಅಲ್ಲದೇ ಫೆಬ್ರವರಿ 24ರ ಮಧ್ಯಂತರ ಆದೇಶವನ್ನು ವಿಸ್ತರಿಸಿದೆ.
ಕೆಲಸ ನಿಮಿತ್ತ ಬಾಲಿವುಡ್ ನಟ ರಣ್ವೀರ್ ಸಿಂಗ್ ಇಂಗ್ಲೆಂಡ್ನಲ್ಲಿ ಇದ್ದಾರೆ. ಕೋರ್ಟ್ಗೆ ಹಾಜರಾಗುವುದಕ್ಕೆ ಅವರಿಗೆ ಸಮಯ ಬೇಕಿದೆ. ಇರಾನ್-ಇಸ್ರೇಲ್ ಯುದ್ಧ ನಡೆಯುತ್ತಿರುವುದರಿಂದ ಬಹುತೇಕ ವಿಮಾನಗಳು ಸ್ಥಗಿತಗೊಂಡಿವೆ. ಹೀಗಾಗಿ ಅವರು ಇಂಗ್ಲೆಂಡ್ನಲ್ಲಿಯೇ ಉಳಿಯಬೇಕಾಗಿದೆ. ಅಲ್ಲಿಂದ ಬಂದ ಕೂಡ ಅವರು ಅಧಿಕಾರಿಗಳನ್ನು ಭೇಟಿಯಾಗುತ್ತಾರೆಂದು ಹೇಳಿದ್ದಾರೆ.
ರಣ್ವೀರ್ ಸಿಂಗ್ ಪರ ವಕೀಲರು ನೀಡಿದ ಮಾಹಿತಿಯನ್ನು ಆಧರಿಸಿ ಹೈ ಕೋರ್ಟ್ ನ್ಯಾಯಾಧೀಶರಾದ ಎಂ, ನಾಗಪ್ರಸನ್ನ ಅವರು ವಿಚಾರಣೆಯನ್ನು ಮಾರ್ಚ್ 9ಕ್ಕೆ ಮುಂದೂಡಿದರು. ಅಲ್ಲದೇ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರಿಗೆ ಎರಡು ದಿನಗಳೊಳಗಾಗಿ ಆಕ್ಷೇಪಣಾ ಅರ್ಜಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ. ಇನ್ನು ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಆಕ್ಷೇಪಣಾ ಅರ್ಜಿ ಸಿದ್ದವಾಗಿದ್ದು, ಇನ್ನೆರಡು ದಿನಗಳನ್ನು ಸಲ್ಲಿಸಲಾಗುವುದು ಎಂದು ಹೇಳಿದ್ದಾಗಿ ವರದಿಯಾಗಿದೆ.
ಇನ್ನು ಗೋವಾದಲ್ಲಿ ನಡೆದ 56ನೇ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ 'ಕಾಂತಾರ'ದಲ್ಲಿ ರಿಷಬ್ ಶೆಟ್ಟಿ ಪಾತ್ರವನ್ನು ಅಣಕಿಸಿದ್ದರು. ರಿಷಬ್ ಶೆಟ್ಟಿ ದೈವದ ರೂಪ ತಾಳಿ ನಟಿಸಿದ್ದ ಪಾತ್ರವನ್ನು ಮಿಮಿಕ್ರಿ ಮಾಡಿದ್ದರು. ಅಲ್ಲದೇ ಅದನ್ನು "ಹೆಣ್ಣು ದೆವ್ವ" ಎಂದು ಕರೆದಿದ್ದರು. ಈ ಸಂಬಂಧ ವಿರೋಧ ವ್ಯಕ್ತವಾಗಿತ್ತು. ಬೆಂಗಳೂರು ಮೂಲದ ವಕೀಲರಾದ ಪ್ರಶಾಂತ್ ಮೆಥಲ್ ದೂರ ದಾಖಲಿಸಿ, ರಣ್ವೀರ್ ಸಿಂಗ್ ಚಾಮುಂಡಿ ದೈವಗೆ ಅಗೌರವ ನೀಡಿದ್ದಾರೆ. ಕರಾವಳಿ ಭಾಗದ ಜನರ ಹಿಂದೂ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಹೇಳಿದ್ದಾರೆ.


Click it and Unblock the Notifications











