'ಕಾಂತಾರ' ಮಾಡೋಕೆ ಹೋಗಿ 'ಕೆರಾಡಿ ಫಿಲ್ಮ್ ಸಿಟಿ' ಕಟ್ಟಿದ ರಿಷಬ್: ಮೀನು ಮಾರೋಳಿಗೆ ಚಮಕ್!
ಸಿನಿಮಾ ಅಂದ್ಮೇಲೆ ಸೆಟ್ಟು ಹಾಕೋದು. ಆ ಸೆಟ್ಟಲ್ಲಿ ತಿಂಗಳುಗಟ್ಟಲೆ ಸಿನಿಮಾ ಮಾಡೋದು ಇದೆಲ್ಲವೂ ಕಾಮನ್. ಯಾವುದೇ ಸಿನಿಮಾ ಮಾಡಿದ್ರೂ, ಅಗತ್ಯ ಬಿದ್ದರೆ ಸೆಟ್ಟು ಹಾಕಿನೇ ಶೂಟ್ ಮಾಡುತ್ತಾರೆ. ಆದರೆ, ಸಿನಿಮಾ ಎಲ್ಲೂ ಸೆಟ್ಟು ಅಂತ ಕಾಣಿಸುವುದೇ ಇಲ್ಲ. ಅಷ್ಟು ನೈಜತೆಯನ್ನು ಕಾಪಾಡಿಕೊಳ್ಳುತ್ತಾರೆ.
ಇತ್ತೀಚೆಗೆ ಸ್ಯಾಂಡಲ್ವುಡ್ನ ಕೆಲವು ಸಿನಿಮಾಗಳು ಸೆಟ್ಟಿನಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡಿವೆ. 'ಕೆಜಿಎಫ್ 2'ಗೆ ಹಾಕಿದ ಸೆಟ್ಟು ವಿಶ್ವದಾದ್ಯಂತ ಸದ್ದು ಮಾಡಿತ್ತು. ಅದೇ ಇನ್ನೊಂದು ಕಡೆ 'ವಿಕ್ರಾಂತ್ ರೋಣ' ಸೆಟ್ಟು ಕೂಡ ಬೆರಗುಗೊಳಿಸಿತ್ತು. ಇದರ ಜೊತೆಗೆ 'ಕಾಂತಾರ'ಗೆ ಹಾಕಿದ ಸೆಟ್ಟಿನ ಬಗ್ಗೆನೂ ಬೇಜಾನ್ ಟಾಕ್ ಶುರುವಾಗಿದೆ.
ಈಗಾಗಲೇ 'ಕಾಂತಾರ' ಮನುಷ್ಯ ಹಾಗೂ ಪರಿಸರದ ನಡುವಿನ ಸಂಬಂಧದ ಕಥೆ ಅನ್ನೋದನ್ನು ಸ್ಪಷ್ಟ ಪಡಿಸಿದ್ದಾರೆ. ಈ ಸಂಘರ್ಷಕ್ಕಾಗಿಯೇ 'ಕಾಂತಾರ' ತಂಡ ಒಂದು ಊರಿನ ಸೆಟ್ಟನೇ ಹಾಕಿತ್ತು. ಆ ಸೆಟ್ಟಿನ ಸುತ್ತನೇ ಹಲವು ಇಂಟ್ರೆಸ್ಟಿಂಗ್ಸ ಸ್ಟೋರಿಗಳಿವೆ. ಅದೇನು ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

90 ದಶಕದಲ್ಲಿ ನಡೆಯೋದೇ 'ಕಾಂತಾರ'
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಸಿನಿಮಾ 'ಕಾಂತಾರ' ನಾಳೆ (ಸೆಪ್ಟೆಂಬರ್ 30) ಬಿಡುಗಡೆಯಾಗುತ್ತಿದೆ. ಈಗಾಗಲೇ ಟ್ರೈಲರ್, ಸಾಂಗ್ ಎಲ್ಲವೂ ಪ್ರೇಕ್ಷಕರ ಗಮನ ಸೆಳೆದಿದೆ. 90ರ ದಶಕದ ಕಾಲಘಟ್ಟದಲ್ಲಿ ನಡೆಯೋ ಕಥೆಯಾಗಿದ್ದರಿಂದ ಸೆಟ್ಟು ಹಾಕಿ ಶೂಟ್ ಮಾಡಬೇಕಿತ್ತು. ಇದೊಂದು ಕಾಲ್ಪನಿಕ ಕಥೆಯಾಗಿದ್ದರೂ, ಈ ಕಥೆಯೊಳಗೆ ಬಂದಿರೋ ಸನ್ನಿವೇಶಗಳು ರಿಯಲ್. ಕರಾವಳಿ ಭಾಗದ ಬಹುತೇಕ ಎಲ್ಲಾ ಭಾಗಗಳನ್ನು ಟಚ್ ಮಾಡಿರೋ ಸಿನಿಮಾ. ಹೀಗಾಗಿ ಸೆಟ್ ಪ್ರಮುಖ ಪಾತ್ರವಹಿಸಿದೆ. ಆ ಸೆಟ್ ಹಾಕಿದ ಬಳಿಕ ಹುಟ್ಟಿಕೊಂಡಿದ್ದೇ 'ಕೆಎಫ್ಸಿ'.

'ಕೆರಾಡಿ ಫಿಲ್ಮ್ ಸಿಟಿ'ಯ ಹಿನ್ನೆಲೆ ಏನು?
'ಕಾಂತಾರ' ಸಿನಿಮಾಗಾಗಿ ರಿಷಬ್ ಶೆಟ್ಟಿ ಊರು ಕೆರಾಡಿಯಲ್ಲಿ ಒಂದು ಊರಿನ ಸೆಟ್ಟನ್ನೇ ಹಾಕಿದ್ದರು. 90ರ ದಶಕದ ಕಥೆಯಾಗಿದ್ದರಿಂದ ಈ ಸಿನಿಮಾಗೆ ಸೆಟ್ಟು ಮಹತ್ವದ ಪಾತ್ರ ವಹಿಸಿಕೊಂಡಿದೆ. ಈ ಸೆಟ್ ಹಾಕಿದ್ದಷ್ಟೇ ಅಲ್ಲ. ಆ ಸೆಟ್ಟಿಗೆ ಇಡೀ ತಂಡ ಸೇರಿಕೊಂಡು ಕೆರಾಡಿ ಫಿಲ್ಮ್ ಸಿಟಿ ಅನ್ನೋ ಹೆಸರನ್ನೇ ಇಟ್ಟಿದೆ. ಇದನ್ನೇ ಶಾರ್ಟ್ ಅಂಡ್ ಸ್ವೀಟ್ ಆಗಿ 'ಕೆಎಫ್ಸಿ' ಅಂತಲೂ ಕರೆದಿದ್ದಾರೆ. ಅಸಲಿಗೆ ಇದರಲ್ಲೊಂದು ವೆಲ್ಫೇರ್ ಅಸೋಸಿಯೇಷನ್ ಕೂಡ ಇದೆಯಂತೆ. ಅಂದ್ಹಾಗೆ, ಇದೆಲ್ಲಾ ತಮಾಷೆಗೆ ಅಂತ ಹೇಳಿದ್ದರು. ಈ ಸೆಟ್ಟಿನ ಹಿಂದೆ ಇಂಟ್ರೆಸ್ಟಿಂಗ್ ಕಥೆಗಳೇ ಇವೆ.

ಮೀನು ಮಾರೋಳಿಗೆ ಚಮಕ್
ರಿಷಬ್ ಶೆಟ್ಟಿಯ ಊರು ಕೆರಾಡಿ ಸಮೀಪದಲ್ಲಿಯೇ ಸೆಟ್ ಹಾಕಲಾಗಿತ್ತು. ಸುಮಾರು 30 ಮನೆಗಳನ್ನು ಕಟ್ಟಿದ್ದರು. ಅಲ್ಲಿ ಆಲೆಮನೆ, ನ್ಯಾಯಬೆಲೆ ಅಂಗಡಿ ಸೇರಿದಂತೆ ಒಂದೂರಿನಲ್ಲಿ ಏನಿತ್ತೋ ಎಲ್ಲವೂ ಇತ್ತು. ರಿಷಬ್ ಮನೆಗೆ ಸದಾ ಮೀನು ತಂದು ಮಾರುವ ಮಹಿಳೆ ಹಲವು ದಿನಗಳಿಂದ ಬಂದಿರಲಿಲ್ಲ. ಹೀಗಾಗಿ ಸೆಟ್ಟು ಹಾಕಿದ ಮೇಲೆ ಮೀನು ಮಾರಲು ಬಂದಾಗ, ಅದೊಂದು ಊರು ಬೆಳೆದು ಬಿಟ್ಟಿದೆ ಎಂದು ಭಾವಿಸಿದ್ದರು. ಹೀಗೆ ರಿಷಬ್ ಮನೆಗೆ ಬಂದವರು 'ಕೆರಾಡಿ ಫಿಲ್ಮ್ ಸಿಟಿ'ಗೆ ಬಂದು 'ಮೀನು ಬೇಕಾ ಮೀನು' ಅಂತ ಕೂಗಿದ್ದಾರೆ. ಆದರೆ, ಯಾರೂ ಮನೆಯಿಂದ ಹೊರಬರಲೇ ಇಲ್ಲ. ಹೀಗಾಗಿ ನಿರಾಸೆಯಿಂದ ಹೋಗಿದ್ದನ್ನು ರಿಷಬ್ ನೆನಪಿಸಿಕೊಂಡಿದ್ದಾರೆ.

ಮೀನು ಮಾರೋ ಹೆಂಗಸಿನ ಬೇಸರ ತಿಳಿಯಾಗಿದ್ದೇಗೆ?
'ಕಾಂತಾರ' ಸಿನಿಮಾಗೆ ಒಂದು ಮನೆಯನ್ನೂ ಬಾಡಿಗೆ ಪಡೆದಿದ್ದರು. ಅದಕ್ಕೆ ಮಣ್ಣು ಬಳಿಕ 90ರ ದಶಕದ ಮನೆಯಾಗಿ ಪರಿವರ್ತಿಸಿದ್ದರು. ಅವರ ಮನೆಗೆ ಹೋಗಿ ಮೀನು ಮಾರಲು ಬಂದ ಹೆಂಗಸು ಅಳಲು ತೋಡಿಕೊಂಡಿದ್ದರು. ಎಷ್ಟು ಕರೆದರೂ ಯಾರೂ ಮನೆಯಿಂದ ಹೊರಬರಲೇ ಇಲ್ಲ ಎಂದು ಹೇಳಿದ್ದರು. ಅದಕ್ಕೆ ಆ ಮನೆಯವರು ಅದು ಸಿನಿಮಾದವರು ಹಾಕಿದ ಸೆಟ್ಟು ಅಂತ ಹೇಳಿದ ಮೇಲೆ ಆ ಹೆಂಗಸು ನಿರಾಳರಾಗಿದ್ದು.

ಈ ಸೆಟ್ಟಿನ ಮಹತ್ವವೇನು?
ರಿಷಬ್ ಶೆಟ್ಟಿ ಹೇಳೋ ಪ್ರಕಾರ, ಅವರ ಊರು ಇನ್ನೂ ಹಾಳಾಗಿಲ್ಲ. ಪ್ರಕೃತಿ ಜೊತೆ ಹೊಂದಿಕೊಂಡಿದೆ. ಅಲ್ಲೊಂದು ಇಲ್ಲೊಂದು ಮನೆಯಿರುವ ಊರು ಅದು. ಹೀಗಾಗಿ ಪ್ಲ್ಯಾನ್ ಮಾಡಿಕೊಂಡು ಸೆಟ್ಟು ಹಾಕಲಾಗಿತ್ತು. ಮೀನು ಮಾರುವ ಹೆಂಗಸು ಅಳಲು ತೋಡಿಕೊಂಡ ಮನೆಯನ್ನು ಮಾತ್ರ ಸ್ವಲ್ಪ ಬದಲಾಯಿಸಲಾಗಿತ್ತು. ಬಳಿಕ ಅದನ್ನು ಸರಿಪಡಿಸಿ, ಬಣ್ಣ ಸುಣ್ಣ ಬಳಿದು ಕೊಡಲಾಗಿತ್ತು. ಹೀಗೆ 'ಕಾಂತಾರ'ದ ಸೆಟ್ಟಿನಲ್ಲೊಂದು ಇಂಟ್ರೆಸ್ಟಿಂಗ್ ಕಥೆಯಿದೆ.


Click it and Unblock the Notifications











