1000 ವರ್ಷ ಹಳೆಯ ದೇವಸ್ಥಾನದಲ್ಲಿ 'ಕಪಟನಾಟಕ ಸೂತ್ರಧಾರಿ' ಶೂಟಿಂಗ್; ಹೊಸಬರ ಸಿನಿಮಾದ ಹೈಲೈಟ್ ಏನು?
ಕನ್ನಡ ಚಿತ್ರರಂಗ ಸೋಲಿನ ಸುಳಿಯಲ್ಲಿ ಸಿಲುಕಿದ್ದರೂ, ಜನರು ಥಿಯೇಟರ್ಗಳ ಕಡೆಗೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದರೂ, ಹೊಸಬರು ಸಿನಿಮಾ ಮಾಡುವುದಕ್ಕೆ ನಿಲ್ಲಿಸಿಲ್ಲ. ಹೊಸ ಆಲೋಚನೆಯೊಂದಿಗೆ, ಕಂಟೆಂಟ್ಗಳೊಂದಿಗೆ ಸಿನಿಮಾ ಮಾಡುವ ಸಾಹಸ ಮಾಡುತ್ತಲೇ ಇದ್ದಾರೆ. ಪ್ಯಾನ್ ಇಂಡಿಯಾ ಮೂಡ್ನಲ್ಲಿ ಇರುವ ಪ್ರೇಕ್ಷಕರನ್ನು ಹೇಗಾದರೂ ಮಾಡಿ ಚಿತ್ರರಂಗಕ್ಕೆ ಕರೆದುಕೊಂಡು ಬರಬೇಕು ಎಂಬ ಹರಸಾಹಸ ನಡೆಯುತ್ತಲೇ ಇದೆ. ಅಂತಹದ್ದೇ ಒಂದು ಸಿನಿಮಾ 'ಕಪಟನಾಟಕ ಸೂತ್ರಧಾರಿ'.
'ಕಪಟನಾಟಕ ಸೂತ್ರಧಾರಿ' ಮತ್ತೊಂದು ಹೊಸಬರ ತಂಡ ಸೇರಿಕೊಂಡು ಮಾಡಿರುವ ಸಿನಿಮಾ. ಧೀರಜ್ ಎಂ.ವಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸದ್ಯ ಸಿನಿಮಾದ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದು ಭಾರತದ ಮೊದಲ ನ್ಯೂ ಏಜ್ ಪೊಲಿಟಿಕಲ್ ಸಟೈರ್ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ. ಹೀಗಾಗಿ ಈ ಸಿನಿಮಾದ ಬಗ್ಗೆ ಕುತೂಹಲ ಮೂಡಿಸಿದೆ.

ಕನ್ನಡ ಫಿಲ್ಮಿ ಕ್ಲಬ್ನ ಸಂಸ್ಥಾಪಕರಾಗಿರುವ ಧೀರಜ್ ಎಂ.ವಿ 'ಕಪಟನಾಟ ಸೂತ್ರಧಾರಿ' ಸಿನಿಮಾ ಮೂಲಕ ನಿರ್ದೇಶನಕ್ಕೆ ಇಳಿದಿದ್ದಾರೆ. ಸಮಾಜದಲ್ಲಿರುವ ಅಸಮಾನತೆ, ದಬ್ಬಾಳಿಕೆಗೆ ಹಾಸ್ಯದ ರೂಪ ಕೊಟ್ಟು ಕಥೆಯನ್ನು ಹೆಣೆಯಲಾಗಿದೆ. ಮಠ ಗುರುಪ್ರಸಾದ್ ಅವರೊಂದಿಗೆ ಧೀರಜ್ ಎಂ.ವಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿದೆ. ಅಲ್ಲದೆ ಕಿರುಚಿತ್ರ, ಸಾಕ್ಷ್ಯಚಿತ್ರಗಳನ್ನೂ ನಿರ್ದೇಶಿಸಿದ್ದು, ಇದು ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಮೊದಲ ಸಿನಿಮಾ.
'ಕಪಟನಾಟ ಸೂತ್ರಧಾರಿ' ನ್ಯೂ ಏಜ್ ರಾಜಕೀಯ ವಿಡಂಬನಾತ್ಮಕ ಸಿನಿಮಾ ಎಂದು ಇವರೇ ಹೇಳಿಕೊಂಡಿದ್ದಾರೆ. ಅದರಲ್ಲೂ ಭಾರತದ ಮೊದಲ ನ್ಯೂ ಏಜ್ ರಾಜಕೀಯ ವಿಡಂಬನಾತ್ಮಕ ಸಿನಿಮಾ ಹೇಗಾಗುತ್ತೆ? ಎನ್ನುವುದಕ್ಕೆ ಕಾರಣಗಳನ್ನು ಕೊಟ್ಟಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಈ ಸಿನಿಮಾ ಪೋಸ್ಟರ್ ಅನ್ನು ಡಾಲಿ ಧನಂಜಯ್ ರಿಲೀಸ್ ಮಾಡಿ ಶುಭ ಹಾರೈಸಿದ್ದರು. ಅಲ್ಲಿಂದ ಈ ಹೊಸಬರ ಸಿನಿಮಾ ಕುತೂಹಲ ಕೆರಳಿಸಿದೆ.
"ನ್ಯೂ ಏಜ್ ಎಂದರೆ ಹೊಸ ಯುಗ ಎಂದು ಅರ್ಥವಲ್ಲ. ನವಯುವ ಅಥವಾ ನ್ಯೂ ಏಜ್ 1970ರ ದಶಕದಲ್ಲಿ ಪಾಶ್ಚಿಮಾತ್ಯ ದೇಶಗಳಲ್ಲಿ ಆರಂಭ ಆದ ಒಂದು ಚಳುವಳಿ. ಧರ್ಮ, ಆಧ್ಯಾತ್ಮಿಕ, ಆಡಳಿತ ವ್ಯವಸ್ಥೆಯಲ್ಲಿ ವ್ಯತ್ಯಾಸಗಳಾಗಿದ್ವು. ಆ ಚಿಂತನೆಯನ್ನು 'ನ್ಯೂ ಏಜ್' ಅಥವಾ 'ನವಯುಗ' ಸಿದ್ಧಾಂತ ಎಂದು ಕರೆಯುತ್ತಾರೆ. ಕಪಟನಾಟಕ ಸೂತ್ರಧಾರಿ ಈ ಸಿದ್ಧಾಂತಗಳನ್ನು ಅಳವಡಿಸಿಕೊಂಡಿದೆ. ಹೀಗಾಗಿ ಇದು ಭಾರತದ ಮೊದಲ ನ್ಯೂ ಏಜ್ ರಾಜಕೀಯ ವಿಡಂಬನಾತ್ಮಕ ಸಿನಿಮಾ" ಎಂದು ನಿರ್ದೇಶಕ ಧೀರಜ್ ಹೇಳುತ್ತಾರೆ.
'ಕಪಟನಾಟಕ ಸೂತ್ರಧಾರಿ' ಸಿನಿಮಾವನ್ನು ನಿರ್ದೇಶಕರು ಒಂದೇ ಶೆಡ್ಯೂಲ್ನಲ್ಲಿ ಶೂಟ್ ಮಾಡಿದ್ದಾರೆ. ಸುಮಾರು 55 ದಿನಗಳ ಕಾಲ ಬ್ರೇಕ್ ಇಲ್ಲದಂತೆ ಚಿತ್ರೀಕರಣ ಮಾಡಿದ್ದಾರೆ. ಇನ್ನೊಂದು ವಿಶೇಷ ಅಂದರೆ, ಸುಮಾರು 1000 ವರ್ಷದಷ್ಟು ಹಳೆಯದಾದ ದೇವಸ್ಥಾನದಲ್ಲಿ ಈ ಸಿನಿಮಾದ ಬಹುಪಾಲು ಭಾಗವನ್ನು ಚಿತ್ರೀಕರಣ ಮಾಡಲಾಗಿದೆ. ಆ ದೇವಸ್ಥಾನದ ಶ್ರೀಮಂತಿಕೆ, ಇತಿಹಾಸ ಹಾಗೂ ವಾಸ್ತುಶಿಲ್ಪವನ್ನು ಸೆರೆಹಿಡಿಯಲಾಗಿದೆ. ಇದು ಈ ಸಿನಿಮಾದ ಬಹುಮುಖ್ಯ ಭಾಗವಾಗಿದೆ. ಇದರೊಂದಿಗೆ ಐತಿಹಾಸಿಕ ಸಂಗತಿಗಳನ್ನು ಈ ಸಿನಿಮಾದಲ್ಲಿ ಅಳವಡಿಸಲಾಗಿದೆ.
ಈ ಸಿನಿಮಾದಲ್ಲಿ ಸುಮಾರು 100ಕ್ಕೂ ಅಧಿಕ ಮಂದಿ ಕಲಾವಿದರು ನಟಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಅಭಿರಾಮ್ ಅರ್ಜುನ್ ನಟಿಸಿದ್ದಾರೆ. ಹಾಗೇ ಬ್ಯುಸಿನೆಸ್ ಹೆಡ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಗ್ರೀಷ್ಮಾ ಶ್ರೀಧರ್, ಮುರಳಿ ಶಂಕರ್ ಶಾಸ್ತ್ರಿ, ವರುಣ್ ಗುರುರಾಜ್, ಧೀರಜ್ ಎಂ.ವಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. 'ಕಪಟನಾಟಕ ಸೂತ್ರಧಾರಿ' ಕನ್ನಡ ಚಿತ್ರರಂಗಕ್ಕೆ ಹೊಸ ಪ್ರಯೋಗವಾಗಿದ್ದು, ಒಂದು ವೇಳೆ ಪ್ರೇಕ್ಷಕರ ಮನಗೆದ್ದ ಟ್ರೇಂಡ್ ಹುಟ್ಟಾಕುವುದರಲ್ಲಿ ಅನುಮಾನವಿಲ್ಲ.


Click it and Unblock the Notifications











