"ಬಂಗಾರಪ್ಪನವರ ಮಕ್ಕಳನ್ನು ಒಂದು ಮಾಡುವುದಕ್ಕೆ ನಾನ್ಯಾರು?"- ಬೆಳಗಾವಿಯಲ್ಲಿ ಶಿವಣ್ಣ ಹೇಳಿಕೆ
ಬೆಳಗಾವಿ: ಶಿವರಾಜ್ಕುಮಾರ್ ಸದ್ಯ ಸೆಂಟರ್ ಆಫ್ ಟ್ರ್ಯಾಕ್ಷನ್ ಆಗಿದ್ದಾರೆ. ಒಂದ್ಕಡೆ 'ಕರಟಕ ದಮನಕ' ಸಿನಿಮಾದ ವಿಜಯ ಯಾತ್ರೆಯಲ್ಲಿ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಪತ್ನಿ ಗೀತಾ ಶಿವರಾಜ್ಕುಮಾರ್ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದು ಪ್ರಚಾರ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಪತ್ನಿ ಚುನಾವಣಾ ಅಖಾಡಕ್ಕೆ ಇಳಿದಿದ್ದಕ್ಕೆ ಎಲ್ಲರ ಕಣ್ಣು ಶಿವಣ್ಣನ ಮೇಲಿದೆ.
ಇಂದು (ಮಾರ್ಚ್ 12) ಶಿವರಾಜ್ಕುಮಾರ್ ತಮ್ಮ 'ಕರಟಕ ದಮನಕ' ಸಿನಿಮಾದ ವಿಜಯಯಾತ್ರೆಗೆ ಬೆಳಗಾವಿಗೆ ಹೋಗಿದ್ದರು. ಸಿನಿಮಾ ಗೆದ್ದ ಖುಷಿಯಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಿ, ಅವರಿಗೆ ಧನ್ಯವಾದಗಳನ್ನು ಹೇಳುತ್ತಿದ್ದಾರೆ.

ಶಿವಣ್ಣ ಬೆಳಗಾವಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆ ಭಾಗಕ್ಕೂ ತಮ್ಮ ಕುಟುಂಬಕ್ಕೂ ನಂಟಿನ ಬಗ್ಗೆ ಮಾತಾಡಿದ್ದಾರೆ. " ಬೆಳಗಾವಿಗೂ ಡಾ. ರಾಜಕುಮಾರ ಕುಟುಂಬಕ್ಕೂ ಅವಿನಾಭಾವ ಸಂಬಂಧ ಇದೆ. ಈ ಭಾಗದ ಜನರ ಪ್ರೀತಿ ವಿಶ್ವಾಸಕ್ಕೆ ನಾವು ಚಿರಋಣಿಯಾಗಿದ್ದೇವೆ" ಎಂದು ನಟ ಡಾ. ಶಿವರಾಜಕುಮಾರ ಹೇಳಿದರು.
ಹಾಗೇ "ಕರಟಕ ದಮನಕ ಸಿನಿಮಾವನ್ನು ಯೋಗರಾಜ್ ಭಟ್ ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ಉತ್ತರ ಕರ್ನಾಟಕದ ಭಾಷೆಯ ಸೊಗಡು, ಖ್ಯಾತ ನಟರಾದ ಪ್ರಭುದೇವ ಜೊತೆಗಿನ ನಟನೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಜನರಿಂದಲೂ ಉತ್ತಮ ಬೆಂಬಲ ಸಿಗುತ್ತಿದೆ" ಎಂದು ಹರ್ಷ ವ್ಯಕ್ತಪಡಿಸಿದರು. ಈ ವೇಳೆ ಮಾಧ್ಯಮದವರು ಪತ್ನಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವ ಬಗ್ಗೆ, ಬಂಗಾರಪ್ಪ ಕುಟುಂಬವನ್ನು ಒಂದು ಮಾಡುವ ಬಗ್ಗೆ ಪ್ರಶ್ನೆ ಮಾಡಿದ್ದರು. ಅದಕ್ಕೆ ಶಿವಣ್ಣ ಕೊಟ್ಟ ಉತ್ತರ ಹೀಗಿತ್ತು.
ಗೀತಾ ಶಿವರಾಜ್ಕುಮಾರ್ ಶಿವಮೊಗ್ಗ ಕ್ಷೇತ್ರದಿಂದ ಲೋಕಸಭಾ ಅಖಾಡಕ್ಕೆ ಇಳಿದಿದ್ದಾರೆ. ಹೀಗಾಗಿ ಸ್ಯಾಂಡಲ್ವುಡ್ ತಾರೆಯರು ಪ್ರಚಾರಕ್ಕೆ ಬರುವ ಸಾಧ್ಯತೆ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. "ಇನ್ನೂ ನಾವು ಯಾರಿಗೂ ತೊಂದರೆ ಕೊಡುವುದಕ್ಕೆ ಹೋಗಿಲ್ಲ. ಈ ಬಾರಿ ಬಿಸಿಲು ಜಾಸ್ತಿಯಿದೆ. ಯಾರು ಒತ್ತಡದಿಂದ ಬರಬಾರದು. ಅವರು ಕರೆದರೆ ಬರುತ್ತಾರೆ. ಹಾಗಂತ ಅಡ್ವಾಂಟೆಜ್ ತೆಗೆದುಕೊಳ್ಳುವುದಕ್ಕೆ ಹೋಗಬಾರದು. ನಮ್ಮ ನಟರಿಗೆ ಒಂದು ಸ್ಪೇಸ್ ಕೊಡಬೇಕು. ಒಂದು ನಂಟಸ್ಥನ ಬೆಳೆಸಿಕೊಂಡಿದ್ದೇವೆ. ಆ ಪ್ರೀತಿ ವಿಶ್ವಾಸ ಹಾಗೇ ಬೆಳೆಸಿಕೊಂಡು ಹೋಗುತ್ತೇವೆ." ಎಂದು ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ದಿವಂಗತ ಮಾಜಿ ಮುಖ್ಯ ಮಂತ್ರಿ ಬಂಗಾರಪ್ಪನವರ ಮಕ್ಕಳನ್ನು ಒಂದು ಮಾಡುವಂತೆ ಪ್ರಶ್ನೆ ಮಾಡಲಾಗಿತ್ತು. ಮಧು ಬಂಗಾರಪ್ಪ ಹಾಗೂ ಕುಮಾರ್ ಬಂಗಾರಪ್ಪ ಇಬ್ಬರಿಗೂ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುತ್ತಿಲ್ಲ. ಹೀಗಾಗಿ ಇಬ್ಬರನ್ನೂ ಒಂದು ಮಾಡಬಹುದಲ್ಲ ಅಂತ ಪ್ರಶ್ನೆ ಮಾಡಲಾಗಿತ್ತು.
"ನೋಡಿ ಒಂದು ಮಾಡುವುದಕ್ಕೆ ನಾನ್ಯಾರು? ಅದಾಗೇ ಒಂದಾಗಬೇಕು ಹೊರತು ನಾನೇನು ಮಾಡುವುದಕ್ಕೆ ಆಗುವುದಿಲ್ಲ. ನಾನು ಅವರ ಅಳಿಯ, ಮಗ ಅಲ್ಲ." ಎಂದು ಶಿವರಾಜ್ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಗೀತಾ ಶಿವರಾಜ್ಕುಮಾರ್ ಅವರ ಚುನಾವಣಾ ಪ್ರಚಾರದ ಪ್ಲಾನ್ ಏನಿದೆ? ಅನ್ನುವುದನ್ನು ಶಿವಣ್ಣ ಬಿಚ್ಟಿಟ್ಟಿದ್ದಾರೆ. "ನನ್ನ ಶೂಟಿಂಗ್ ನೋಡಿಕೊಳ್ಳಬೇಕು. ಹಾಗೇ ಪ್ರಚಾರಕ್ಕೂ ಬರಬೇಕು. ಗೀತಾ ಅವರದ್ದು ಏನೇನು ಕಾರ್ಯಕ್ರಮವಿದೆ ಅದನ್ನು ನೋಡಿಕೊಂಡು ಮಾಡಬೇಕು. ನಾನು ಗೀತಾ ಹಿಂದೆ ಇದ್ದು ಜಾಸ್ತಿ ಸಪೋರ್ಟ್ ಮಾಡಬೇಕು ಅಲ್ವಾ?" ಎಂದು ಶಿವಣ್ಣ ಪ್ರಚಾರ ಹೋಗುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.


Click it and Unblock the Notifications











