Karnataka Bandh: "ಕನ್ನಡಿಗರಿಗೆ ತಾಳ್ಮೆ ಇದೆ.. ಪರೀಕ್ಷೆ ಮಾಡ್ಬೇಡಿ.. ಎಲ್ಲಾ ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತೆ" ಪೂಜಾ ಗಾಂಧಿ
ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದನ್ನು ಖಂಡಿಸಿ ರೈತರು ಹಾಗೂ ಕನ್ನಡ ಪರ ಸಂಘಟನೆಗಳು ಬೀದಿಗೆ ಇಳಿದಿವೆ. ಇಂದು (ಸೆಪ್ಟೆಂಬರ್ 29) ಕರ್ನಾಟಕ ಬಂದ್ ಕರೆ ನೀಡಿವೆ. ಈ ಬಂದ್ಗೆ ಬಹುತೇಕ ಎಲ್ಲಾ ಸಂಘಟನೆಗಳು ಹಾಗೂ ಸಂಘ ಸಂಸ್ಥೆಗಳು ಬೆಂಬಲವನ್ನು ವ್ಯಕ್ತಪಡಿಸಿವೆ. ಅಂತೆಯೇ ಕನ್ನಡ ಚಿತ್ರರಂಗ ಕೂಡ ಬೆಂಬಲ ಸೂಚಿಸಿತ್ತು.
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಇಡೀ ಕನ್ನಡ ಚಿತ್ರರಂಗ ಬೆಂಬಲ ವ್ಯಕ್ತಪಡಿಸಿದೆ. ಅಲ್ಲದೆ ಪ್ರತಿಭಟನೆಯಲ್ಲಿ ಭಾಗಿಯಾಗಿದೆ. ಹಿರಿಯ ನಟ ಶ್ರೀನಾಥ್, ಉಮಾಶ್ರೀ, ಲೂಸ್ ಮಾದ ಯೋಗಿ, ಅನಿರುದ್ದ್, ಪೂಜಾ ಗಾಂಧಿ, ಪದ್ಮಾ ವಾಸಂತಿ, ಸುಂದರ್ ರಾಜ್, ರೂಪಿಕಾ, ರವಿ ಚೇತನ್, ಶ್ರೀನಿವಾಸ್ ಮೂರ್ತಿ, ನವೀನ್ ಕೃಷ್ಣ, ಲಹರಿ ವೇಲು, ಧರ್ಮ ಕೀರ್ತಿ ರಾಜ್, ಅನು ಪ್ರಭಾಕರ್, ರಘು ಮುಖರ್ಜಿ, ಚಿಕ್ಕಣ್ಣ, ಗಣೇಶ್ ರಾವ್ ಕೇಸರ್ಕರ್, ಸುಂದರ್ ರಾಜ್, ಅಭಿನಯ, ಪ್ರಮಿಳಾ ಜೋಷಾಯಿ ಸೇರಿದಂತೆ ಹಲವು ಭಾಗವಹಿಸಿದ್ದಾರೆ.

ಈ ವೇಳೆ ಪೂಜಾಗಾಂಧಿ ಕಾವೇರಿ ಸಮಸ್ಯೆ ಜೊತೆ ಜೊತೆಗೆ ಮೇಕೆದಾಟು ಯೋಜನೆ ಬಗ್ಗೆನೂ ಪ್ರಸ್ತಾಪ ಮಾಡಿದ್ದರು. ಪೂಜಾ ಗಾಂಧಿಯ ಮಾತುಗಳು ಎಲ್ಲರ ಗಮನ ಸೆಳೆದಿತ್ತು. ಮತ್ತಷ್ಟು ಸ್ವಚ್ಚವಾಗಿ ಕನ್ನಡದಲ್ಲಿಯೇ ಮಾತಾಡಿದ್ದು ಇನ್ನಷ್ಟು ಹುರುಷು ತಂದಿತ್ತು. ಇದೇ ಸಂದರ್ಭದಲ್ಲಿ ಪರಮೇಶ್ವರ ಭಟ್ಟರ ಕವಿತೆಯನ್ನು ಹೇಳಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಕಿವಿ ಮಾತನ್ನು ಹೇಳಿದ್ದಾರೆ. ಅದರ ಝಲಕ್ ಇಲ್ಲಿದೆ.
"ಕನ್ನಡಿಗರಿಗೆ ಸಹನೆಯಿದೆ ಪರೀಕ್ಷೆ ಮಾಡಬೇಡಿ"
ಪೂಜಾಗಾಂಧಿ ಕನ್ನಡಗರಿಗೆ ಸಹನೆಯಿದೆ. ಅದನ್ನು ಪರೀಕ್ಷೆ ಮಾಡಬೇಡಿ ಅಂತ ಕಿಡಿಕಾರಿದ್ದಾರೆ. "ನಮ್ಮ ಕನ್ನಡಿಗರಿಗೆ ತುಂಬಾನೇ ಸಹನೆ ಇದೆ. ತಾಳ್ಮೆಯಿಂದ ಇದ್ದೀವಿ. ತಾಯಿ ಭುವನೇಶ್ವರಿಗೆ ಪ್ರಾರ್ಥನೆ ಮಾಡುತ್ತೇನೆ. ಇನ್ಮುಂದೆ ಆದರೂ ಒಳ್ಳೆ ಮಳೆ ಬರಲಿ. ಕೆಆರ್ಎಸ್ ಮತ್ತು ಮೆಟ್ಟೂರು ಡ್ಯಾಂ ತುಂಬಲಿ. ಎರಡೂ ರಾಜ್ಯದ ರೈತರಿಗೆ ಒಳ್ಳೆಯದಾಗಲಿ ಅಂತ ಹೇಳುವುದಕ್ಕೆ ಇಷ್ಟ ಪಡುತ್ತೇನೆ. ಕರ್ನಾಟಕದವರಿಗೆ ಖಂಡಿತವಾಗಿಯೂ ಸಹನೆಯಿದೆ. ಆದರೆ, ಅದನ್ನು ಪರೀಕ್ಷೆ ಮಾಡಬೇಡಿ" ಎಂದು ಗುಡುಗಿದ್ದಾರೆ.

"ರಾಜ್ಯ-ಕೇಂದ್ರ ಸರ್ಕಾರ ಅಸೂಯೆ ಬಿಡಬೇಕು"
"ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರ,ಕೇಂದ್ರ ಸರ್ಕಾರ ಎಲ್ಲರೂ ಅಹಂ ಹಾಗೂ ಅಸೂಯೆಯನ್ನು ಬಿಟ್ಟು ಮೇಕೆದಾಟು ಯೋಜನೆ ಯಾಕಿಷ್ಟು ಮುಖ್ಯ ಇದೆ ಅಂತ ಚರ್ಚೆ ಮಾಡಬೇಕು. ನಮ್ಮ ರಾಜ್ಯದ ರೈತರಿಗೆ ಏನಾದರೂ ಆಗಲಿ, ತಮಿಳುನಾಡು ರೈತರು ಆರಾಮಾಗಿರಬೇಕು ಅಂದರೆ, ಅದನ್ನು ಒಪ್ಪಿಕೊಳ್ಳಲ್ಲ. ತಮಿಳುನಾಡಿಗೆ ಒಂದು ಹನಿ ನೀರು ಬಿಡದೆ ಇರೋ ಹಾಗೆ ಮಾಡುವುದಕ್ಕೆ ನಮಗೆ ಧೈರ್ಯವಿದೆ. ಶಕ್ತಿಯಿದೆ." ಎಂದಿದ್ದಾರೆ.
"ಎಲ್ಲಾ ಸಮಸ್ಯೆ ಪರಿಹಾರ ಇದ್ದೇ ಇರುತ್ತೆ"
"ಪರಮೇಶ್ವರ ಭಟ್ಟರ ಒಂದು ಕವಿತೆ ನನಗೆ ನೆನಪಿಗೆ ಬರುತ್ತಿದೆ. ಬೆಳ್ಳಿಯ ಬಾಗಿಲು ಚಿನ್ನದ ದೇಗುಲ. ಒಳಗಡೆ ಬಹುಮುತ್ತು ರತ್ನ. ಬೀಗದ ಕೈ ತಂದು ಬಾಗಿಲನು ತೆಗೆಯಲು ಒಮ್ಮೆ ಮಾಡು ಪ್ರಯತ್ನ. ಯಾಕೆ ಅಂದರೆ, ಎಂತಹ ಖಜಾನೆಗೂ ಒಂದು ಬೀಗದ ಕೈ ಇದ್ದೇ ಇರುತ್ತೆ. ಅದೇ ರೀತಿ ಎಲ್ಲಾ ಸಮಸ್ಯೆಗೂ ಒಂದು ಪರಿಹಾರ ಇದ್ದೇ ಇರುತ್ತೆ. ಆ ಪರಿಹಾರವನ್ನು ಹುಡುಕಬೇಕು. ಪ್ರಪಂಚದಲ್ಲಿ ಎಲ್ಲರೂ ಚೆನ್ನಾಗಿರಬೇಕು. ನಮ್ಮ ನೀರು ನಮ್ಮದೇ ಹಕ್ಕು ಅಂತ ಹೇಳುತ್ತೇನೆ." ಎಂದು ಪೂಜಾ ಗಾಂಧಿ ಪ್ರತಿಭಟನಾ ಸಭೆಯಲ್ಲಿ ಗುಡುಗಿದ್ದಾರೆ.


Click it and Unblock the Notifications











