Karnataka Budget 2026; ಬಜೆಟ್ನಲ್ಲಿ ಸಿನಿಮಾರಂಗಕ್ಕೆ ಸಿಕ್ಕಿದ್ದೇನು? ಸಿಂಗ್ ವಿಂಡೋ ಪ್ಲಾಟ್ಫಾರ್ಮ್ನಿಂದೇನು ಪ್ರಯೋಜನ?
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ 17ನೇ ಬಾರಿ ಬಜೆಟ್ ಮಂಡನೆ ಮಾಡಿ ದಾಖಲೆ ಬರೆದಿದ್ದಾರೆ. ಇಂದು (ಮಾರ್ಚ್ 6) ಕರ್ನಾಟಕದ ಬಜೆಟ್ ಮಂಡನೆಯಾಗಿದ್ದು, ಹಲವು ಕ್ಷೇತ್ರಗಳಿಗೆ ಬಜೆಟ್ ಅನ್ನು ಮೀಸಲಿಡಲಾಗಿದೆ. ಎಂದಿನಂತೆ ಈ ಬಾರಿಗೆ ಸಿಂಎ ಸಿದ್ಧರಾಮಯ್ಯ ಅವರ ಬಜೆಟ್ಗೆ ಪರ-ವಿರೋಧ ಚರ್ಚೆಗಳು ವ್ಯಕ್ತವಾಗುತ್ತಿವೆ. ಶಿಕ್ಷಣ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ, ನಗರಾಭಿವೃದ್ಧಿ, ವಿವಿಧ ಯೋಜನೆಗಳಿಗೆ ಹಣವನ್ನು ಮೀಸಲಿಡಲಾಗಿದೆ.
ಇದರೊಂದಿಗೆ ಕನ್ನಡ ಚಿತ್ರರಂಗಕ್ಕೂ ಕೆಲವು ಅಗತ್ಯ ಬೇಡಿಕೆಗಳಿಗೆ ಕರ್ನಾಟಕ ಸರ್ಕಾರ ಸ್ಪಂದಿಸಿದೆ. ಕನ್ನಡ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ನಿರ್ಮಾಣ ಆಗುತ್ತಿದ್ದರೂ, ಒಳಗೆ ನಷ್ಟದಲ್ಲಿದೆ. ಹಲವು ನಿರ್ಮಾಪಕರು ಸಿನಿಮಾವನ್ನು ನಿರ್ಮಾಣ ಮಾಡಿ ಕೈ ಸುಟ್ಟುಕೊಳ್ಳುತ್ತಿದ್ದಾರೆ. ಹೀಗಾಗಿ ದಿನದಿಂದ ದಿನಕ್ಕೆ ಸೊರಗುತ್ತಿದೆ. ಈ ಕಾರಣಕ್ಕೆ ಚಿತ್ರರಂಗವನ್ನು ಉಳಿಸುವುದಕ್ಕೆ ಕೆಲವು ಸೌಲಭ್ಯಗಳನ್ನು ನೀಡುವಂತೆ ಬೇಡಿಕೆಯನ್ನು ಸಿದ್ಧರಾಯಮ್ಮ ಮುಂದೆ ಫಿಲ್ಮ್ ಚೇಂಬರ್ ಇಟ್ಟಿತ್ತು.

ಈ ಬೇಡಿಕೆಗಳಿಗೆ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಸ್ಪಂದಿಸಿದ್ದಾರೆ. ಸಿಂಗಲ್ ವಿಂಡೋ ಆನ್ಲೈನ್ ಡಿಜಿಟಲ್ ಪ್ಲಾಟ್ಫಾರ್ಮ್, ಡಿಜಿಟಲ್ ಮ್ಯಾಪ್, ಸಬ್ಸಿಡಿ, ಮೈಸೂರಿನಲ್ಲಿ ಫಿಲ್ಮ್ ಸಿಟಿ, ಕನ್ನಡದ ಜನಪ್ರಿಯ ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್ ಮ್ಯೂಸಿಯಂ ಸೇರಿದಂತೆ ಹಲವು ವಿಷಯಗಳ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪ ಮಾಡಲಾಗಿದೆ. ಈ ಬಗ್ಗೆ ಚಿತ್ರರಂಗ ಏನು ಹೇಳುತ್ತೆ? ಫಿಲ್ಮ್ ಚೇಂಬರ್ ಉಪಾಧ್ಯಾಕ್ಷ ಫಿಲ್ಮಿಬೀಟ್ ಕನ್ನಡಗೆ ಪ್ರತಿಕ್ರಿಯಿಸಿದ್ದು, ಸಿದ್ಧರಾಮಯ್ಯ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ, ಬಜೆಟ್ನಲ್ಲಿ ಏನೇನು ಪ್ರಸ್ತಾಪ ಮಾಡಲಾಯ್ತು? ಕೆ. ಮಂಜು ಹೇಳಿದ್ದೇನು? ತಿಳಿಯುವುದಕ್ಕೆ ಮುಂದೆ ಓದಿ.
ಸಿಂಗಲ್ ಆನ್ಲೈನ್ ಡಿಜಿಟಲ್ ಪ್ಲ್ಯಾಟ್ ಫಾರ್ಮ್
ಒಂದು ಸಿನಿಮಾ ಮಾಡಬೇಕಾದರೆ, ಸಾಕಷ್ಟು ಅನುಮತಿಗಳನ್ನು ಸರ್ಕಾರದಿಂದ ತೆಗೆದುಕೊಳ್ಳಬೇಕಾಗುತ್ತೆ. ಅದಕ್ಕೆ ಬೇರೆ ಬೇರೆ ಇಲಾಖೆಗಳಿಗೆ ಅಲೆದಾಡಬೇಕಿತ್ತು. ಆದ್ರೀಗ ಈ ಕಷ್ಟಗಳನ್ನು ನಿವಾರಣೆ ಮಾಡುವುದಕ್ಕೆ ಸರ್ಕಾರ ಬಜೆಟ್ನಲ್ಲಿ ಸಿಂಗಲ್ ಆನ್ಲೈನ್ ಡಿಜಿಟಲ್ ಪ್ಲ್ಯಾಟ್ ಫಾರ್ಮ್ ಅನ್ನು ಘೋಷಿಸಿದೆ. ಈ ಮೂಲಕ ಎಲ್ಲಾ ಅಗತ್ಯ ಪರ್ಮಿಷನ್ಗಳು ಒಂದೇ ವೇದಿಕೆಯಲ್ಲಿ ಸಿಗಲಿದೆ.
ಡಿಜಿಟಲ್ ಮ್ಯಾಪ್
'ಕರ್ನಾಟಕ ಫಿಲ್ಮ್ ಲೊಕೇಶನ್ ಡಿಜಿಟಲ್ ಮ್ಯಾಪ್' ಅನ್ನು ಒಂದು ಕೋಟಿ ವೆಚ್ಚದಲ್ಲಿ ಡೆವೆಲಪ್ ಮಾಡಲಾಗುತ್ತಿದೆ. ಇದು ರಾಜ್ಯದಲ್ಲಿ ಎಲ್ಲಿರುವ ಟೂರಿಸಂ ಪ್ಲೇಸ್ಗಳು, ಅದರ ಐತಿಹಾಸಿಕ ಹಿನ್ನೆಲೆ, ಸಿನಿಮಾ ಶೂಟ್ ಮಾಡಬಹುದಾದು ಎನ್ನುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತೆ.
ಏನಂತಾರೆ ಕೆ.ಮಂಜು?
"ಸಿಂಗಲ್ ವಿಂಡೋ ಸೀಟ್ ಬೇಗನೇ ಕಾರ್ಯಗತಕ್ಕೆ ಬರುವಂತೆ ಮಾಡಬೇಕು. ಇದರಿಂದ ನಿರ್ಮಾಪಕರಿಗೆ ತುಂಬಾನೇ ಒಳ್ಳೆಯದಾಗುತ್ತೆ. ನಾವು ಪರ್ಮಿಷನ್ಗಾಗಿ ತುಂಬಾನೇ ಕಷ್ಟ ಬೀಳಬೇಕಾಗಿತ್ತು. ಸಿಂಗಲ್ ವಿಂಡೋ ಸಿಸ್ಟಮ್ ಮಾಡಿದ್ದರಿಂದ ಮುಂದಿನ ದಿನಗಳಲ್ಲಿ ನಿರ್ಮಾಪಕರಿಗೆ ತುಂಬಾನೇ ಒಳ್ಳೆಯದಾಗುತ್ತೆ. ಒಮ್ಮೆ ಪರ್ಮಿಷನ್ ತೆಗೆದುಕೊಂಡರೆ ಶೂಟಿಂಗ್ ಮುಗಿಯುವವರೆಗೂ ತಲೆ ನೋವು ಇರುವುದಿಲ್ಲ" ಎಂದು ಫಿಲ್ಮ್ ಚೇಂಬರ್ ಉಪಾಧ್ಯಕ್ಷ ಕೆ. ಮಂಜು ಅಭಿಪ್ರಾಯ ಪಟ್ಟಿದ್ದಾರೆ.

ಸಬ್ಸಿಡಿಗೆ ₹20 ಕೋಟಿ.. ಪುಟ್ಟಣ್ಣ ಮ್ಯೂಸಿಯಂ
ಕಳೆದ ಕೆಲವು ದಿನಗಳಿಂದ ಕನ್ನಡ ಚಿತ್ರರಂಗದಲ್ಲಿ ಆತಂಕವಿತ್ತು. ಸರ್ಕಾರ ಸಬ್ಸಿಡಿಯನ್ನು ನಿಲ್ಲಿಸುತ್ತೆ ಎಂದು ಹೇಳಲಾಗಿತ್ತು. ಆ ಬಳಿಕ ಚಿತ್ರರಂಗ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಮನವಿ ಮಾಡಿಕೊಂಡಿತ್ತು. ಅದರ ಪರಿಣಾಮ ಸಬ್ಸಿಡಿ ಮುಂದುವರೆಸಿದ್ದು, ₹20 ಕೋಟಿಯನ್ನು ಎತ್ತಿಟ್ಟಿದೆ. ಹಾಗೇ ಕನ್ನಡದ ಲೆಜೆಂಡರಿ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಜನಿಸಿದ ಮನೆಯನ್ನು ಮ್ಯೂಸಿಯಲ್ ಮಾಡುವುದಕ್ಕೂ ಅನುಮತಿ ನೀಡಲಾಗಿದೆ.
ಚಿತ್ರನಗರಿಗೆ ₹500 ಕೋಟಿ ಸಾಲಲ್ಲ
"ಚಿತ್ರನಗರಿಗೆ 500 ಕೋಟಿ ರೂಪಾಯಿ ಎತ್ತಿಟ್ಟಿದ್ದಾರೆ. ಇನ್ನೂ 500 ಕೋಟಿ ರೂಪಾಯಿಯನ್ನು ಎತ್ತಿಟ್ಟು ಗುದ್ಲಿ ಪೂಜೆ ಮಾಡುವ ಕೆಲಸ ಆಗಬೇಕು. ಇವತ್ತು ಸಿನಿಮಾ ಮಾಡುವುದಕ್ಕೆ ಸಮಸ್ಯೆ ಆಗುತ್ತಿದೆ. ಆದಷ್ಟು ಬೇಗ ಕಾರ್ಯಗತ ಆಗಬೇಕು ಅಂತ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ಸಬ್ಸಡಿ ನಿಲ್ಲಿಸಬೇಕು ಅಂತ ಸಾಕಷ್ಟು ಮಂದಿ ಪ್ರಯತ್ನ ಪಟ್ಟಿದ್ದರು. ವಾಣಿಜ್ಯ ಮಂಡಳಿಯಿಂದ ನಿಲ್ಲಿಸಬಾರದು ಎಂದು ಮನವಿ ಮಾಡಿದ್ವಿ. ಅದಕ್ಕೆ ಸಿದ್ಧರಾಮಯ್ಯ ಇರುವವರೆಗೂ ಸಬ್ಸಿಡಿ ನಿಲ್ಲಿಸುವುದಿಲ್ಲ ಎಂದು ಭರವಸೆ ಕೊಟ್ಟಿದ್ದಾರೆ" ಎಂದು ಕೆ.ಮಂಜು ಹೇಳಿದ್ದಾರೆ.


Click it and Unblock the Notifications











