ಫಿಲ್ಮ್ ಚೇಂಬರ್ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ ಸಾರಾ ಗೋವಿಂದು, ಭಾ ಮಾ ಹರೀಶ್ ಪೈಪೋಟಿ
ಕಳೆದ ಕೆಲವು ತಿಂಗಳಿನಿಂದ ಕರ್ನಾಟಕ ಚಲನ ಚಿತ್ರವಾಣಿಜ್ಯ ಮಂಡಳಿಗೆ ಚುನಾವಣೆ ನಡೆಸುವಂತೆ ಒತ್ತಡ ಬರುತ್ತಲೇ ಇತ್ತು. ಕೊರೊನಾ ಕಾರಣದಿಂದ ಫಿಲ್ಮ್ ಚೇಂಬರ್ಗೆ ಚುನಾವಣೆ ನಡೆದಿರಲಿಲ್ಲ. ಸರ್ಕಾರ ಕೂಡ ಚುನಾವಣೆ ನಡೆಸದಂತೆ ಆದೇಶ ಹೊರಡಿಸಿತ್ತು.
ಈಗ ನಿರ್ಬಂಧ ತೆರೆವುಗೊಂಡ ಬಳಿಕವೂ ಫಿಲ್ಮ್ ಚೇಂಬರ್ ಚುನಾವಣಿಗೆ ಮುಂದಾಗಿಲ್ಲವೆಂದು ಸದಸ್ಯರು ಆಕ್ರೋಶ ಹೊರಹಾಕಿದ್ದರು. ಈ ಬೆನ್ನಲ್ಲೇ ಇದೇ ಮೇ 28ಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಯಲಿದೆ. ಇದಕ್ಕಾಗಿ ನಾಮ ಪತ್ರಸಲ್ಲಿಕೆ ಪ್ರಕ್ರಿಯೆ ಆರಂಭ ಆಗಿದೆ.
ಮೇ 28ಕ್ಕೆ ಚುನಾವಣೆ: ಸಾರಾ ಗೋವಿಂದು ನಾಮಪತ್ರ ಸಲ್ಲಿಕೆ
ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಗೆ ಕೆಲವು ವರ್ಷಗಳ ಬಳಿಕ ಚುನಾವಣೆ ನಡೆಯುತ್ತಿದೆ. ಕೊರೊನಾ ಕಾರಣದಿಂದ ಜೈ ರಾಜ್ ಅಧ್ಯಕ್ಷರಾಗಿ ಮುಂದುವರೆದಿದ್ದರು. ಆದ್ರೀಗ ಚಟುವಟಿಕೆಗಳು ಯತಾಸ್ಥಿತಿಗೆ ಮರಳಿರುವುದರಿಂದ ಚುನಾವಣೆ ನಡೆಸಲು ಮುಂದಾಗಿದೆ. ಈ ಸಂಬಂಧ ಫಿಲಂ ಚೇಂಬರ್ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭ ಆಗಿದೆ. ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಿರ್ಮಾಪಕ ಸಾರಾ ಗೋವಿಂದು ನಾಮ ಪತ್ರ ಸಲ್ಲಿಸಿದ್ದಾರೆ.

ಈಗಾಗೇ ಸಾರಾ ಗೋವಿಂದು ಫಿಲ್ಮ್ ಚೇಂಬರ್ನಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಇನ್ನೊಂದು ಬಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಇವರ ತಂಡದಲ್ಲಿ ಕರಿಸುಬ್ಬು ನಿರ್ಮಾಪಕರ ವಲಯದ ಉಪಾಧ್ಯಕ್ಷ ಸ್ಥಾನಕ್ಕೆ, ವಿತರಕರ ವಲಯದ ಉಪಾಧ್ಯಕ್ಷ ಸ್ಥಾನಕ್ಕೆ ಪಿ.ಎಸ್.ಜ್ಞಾನೇಶ್ವರ ಐತಾಳ್, ಪ್ರದರ್ಶಕರ ಉಪಾಧ್ಯಕ್ಷ ಸ್ಥಾನಕ್ಕೆ ಜಿ.ಪಿ.ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ. ಎಂ.ಎನ್.ಕುಮಾರ್ ವಿತರಕರ ವಲಯದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ, ಪ್ರದರ್ಶಕರ ವಲಯದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಎಲ್.ಸಿ.ಕುಶಾಲ್ ಹಾಗೂ ಗೌರವ ಖಜಾಂಚಿ ಸ್ಥಾನಕ್ಕೆ ಬಿ.ಕೆ.ಜಯಸಿಂಹ ಮುಸರಿ ನಾಮಪತ್ರ ಸಲ್ಲಿಸಿದ್ದಾರೆ.
ಸಾರಾ ಗೋವಿಂದು ತಂಡಕ್ಕೆ ಭಾ ಮಾ ಹರೀಶ್ ಫೈಟ್
ಫಿಲ್ಮ್ ಚೇಂಬರ್ ಚುನಾವಣೆ ನಡೆಸುತ್ತಿಲ್ಲ ಎಂದು ಆರೋಪ ಮಾಡಿದವರಲ್ಲಿ ನಿರ್ಮಾಪಕ ಭಾ ಮಾ ಹರೀಶ್ ಕೂಡ ಒಬ್ಬರಾಗಿದ್ದರು. ಈ ಬಾರಿ ಭಾ ಮಾ ಹರೀಶ್ ಕೂಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ.

ಎರಡು ವರ್ಷಕ್ಕೊಮ್ಮೆ ವಾಣಿಜ್ಯ ಮಂಡಳಿ ಚುನಾವಣೆ ನಡೆಯಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಚುನಾವಣೆ ಮುಂದೂಡಲಾಗಿತ್ತು. ಈ ಕಾರಣಕ್ಕೆ ಅಧ್ಯಕ್ಷರ ಸ್ಥಾನದಲ್ಲಿ ಜೈರಾಜ್ ಅವರೇ ಮುಂದುವರಿದಿದ್ದರು. ಈಗ ಮುಂದಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆಗಾಗಿ ಮತ್ತೆ ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕೆ ಭಾ.ಮ.ಹರೀಶ್ ಹಿರಿಯ ನಿರ್ಮಾಪಕ ಸಾರಾ ಗೋವಿಂದು ಜೊತೆ ಪೈಪೋಟಿ ನಡೆಸಲಿದ್ದಾರೆ. ಮೇ 28ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ.


Click it and Unblock the Notifications











