ಬಜೆಟ್ ಬಳಿಕ ಸಿಎಂ, ಡಿಸಿಎಂ ಭೇಟಿಯಾದ ಫಿಲ್ಮ್ ಚೇಂಬರ್ ಸದಸ್ಯರು:ಸಹಾಯ ಧನ,ಟಿಕೆಟ್ ಬೆಲೆ ಕುರಿತು ಮನವಿ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕರ್ನಾಟಕ ಚಲಚಿತ್ರರಂಗ ಮತ್ತೆ ಆಕ್ಟೀವ್ ಆಗಿದೆ. ಈಗಾಗಲೇ ಚಿತ್ರರಂಗದ ಮುಖಂಡರು ಹಲವು ಬಾರಿ ಸಿಎಂ ಸಿದ್ಧರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ, ವಿವಿಧ ವಿಷಯ ಹಾಗೂ ಕುಂದು ಕೊರತೆಗಳ ಬಗ್ಗೆ ಚರ್ಚೆ ಮಾಡಿದ್ದರು.
ಸಿಎಂ ಸಿದ್ಧರಾಮಯ್ಯ ಬಜೆಟ್ನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿ ಸಿನಿಮಾ ಮಂದಿಗೆ ಹೊಸ ಭರವಸೆ ಮೂಡಿಸಿದ್ದರು. ಈ ಬೆನ್ನಲೇ ಇಂದು (ಜುಲೈ 11) ಫಿಲ್ಮ್ ಚೇಂಬರ್ ಅಧ್ಯಕ್ಷ ಭಾಮಾ ಹರೀಶ್, ಗೌರವ ಕಾರ್ಯದರ್ಶಿ ಸುಂದರ್ ರಾಜ್ ಸೇರಿದಂತೆ ಸದಸ್ಯರು ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿದ್ದ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮಾಡಿದ್ದಾರೆ.

ಏಕರೂಪದ ಟಿಕೆಟ್ ದರ ನಿಗದಿಗೆ ಮನವಿ
ಕರ್ನಾಟಕ ರಾಜ್ಯದ ಎಲ್ಲಾ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್ಗೆ ಏಕರೂಪದ ಟಿಕೆಟ್ ದರವನ್ನು ನಿಗದಿ ಪಡಿಸಬೇಕು ಎಂದು ಮನವಿ ಮಾಡಿದ್ದಾರೆ. ಪ್ರಸ್ತುತ ಒಂದೊಂದು ಚಿತ್ರಮಂದಿರದಲ್ಲಿ ಒಂದೊಂದು ಟಿಕೆಟ್ ದರವಿದ್ದು, ಸಿಂಗಲ್ ಸ್ಕ್ರೀನ್ ಥಿಯೇಟರ್ಗಳಲ್ಲಿ 150 ರೂ. ಹಾಗೂ ಮಲ್ಟಿಪ್ಲೆಕ್ಸ್ನಲ್ಲಿ 250 ರೂ. ನಿಗದಿ ಪಡಿಸಬೇಕು ಎಂದು ಮನವಿ ಮಾಡಲಾಗಿದೆ.
ಅಲ್ಲದೆ ಕನ್ನಡ ಚಿತ್ರೋದ್ಯಮವನ್ನು ಕೈಗಾರಿಕಾ ಇಲಾಖೆ ಎಂದು ಪರಿಗಣಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ. ಚಿತ್ರರಂಗದ ಉದ್ಯಮಗಳನ್ನು ಸಹ ಕೈಗಾರಿಕಾ ಉದ್ಯಮ ಎಂದು ಪರಿಗಣಿಸಿ ಹಾಗೆಯೇ ವ್ಯವಹರಿಸುವಂತೆ ಬದಲಾವಣೆ ಮಾಡಬೇಕು ಎಂದು ಕೇಳಿಕೊಳ್ಳಲಾಗಿದೆ.

ಪ್ರೊಜೆಕ್ಟರ್ ಖರೀದಿ ಸಹಾಯ ಧನ
ನಿರ್ಮಾಪಕರು ಸಿನಿಮಾವನ್ನು ಪಕ್ಕದ ರಾಜ್ಯದಲ್ಲಿ ಪ್ರದರ್ಶನ ಮಾಡಲು ಡಿಜಿಟಲ್ ಡಿಸಿಪಿಯನ್ನು ಪಡೆಯಬೇಕಾಗಿದೆ. ಇದು ಕಷ್ಟಕರವಾಗಿದೆ. ಈಗಾಗಲೇ ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿ ಪ್ರೊಜೆಕ್ಟರ್ ಥಿಯೇಟರ್ ಅಳವಡಿಸಲಾಗಿದೆ. ಹೀಗಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹಯೋಗದೊಂದಿಗೆ ಡಿಜಿಟಲ್ ಡಿಸಿಪಿ ಯಂತ್ರೋಪಕರಣವನ್ನು ಅಳವಡಿಸಲು 20 ಕೋಟಿ ಬಿಡುಗಡೆ ಬಿಡುಗಡೆ ಮಾಡಬೇಕೆಂದು ಕೇಳಿದ್ದಾರೆ.
ಅಲ್ಲದೆ ರಾಜ್ಯದ ಹಲವು ಚಿತ್ರಮಂದಿರಗಳು ಬಾಡಿಗೆ ಆಧಾರದಲ್ಲಿ ಪ್ರೊಜೆಕ್ಟರ್ಗಳನ್ನು ಬಳಸುತ್ತಿವೆ. ವಿದೇಶದ ಸರ್ವಿಸ್ ಪ್ರೊವೈಡರ್ಗಳಿಂದ ಪಡೆಯಬೇಕಿದೆ. ಹೀಗಾಗಿ ಹೊಸ ಪ್ರೊಜೆಕ್ಟರ್ಗಳ ಖರೀದಿಗೆ ಸುಮಾರು 40 ರಿಂದ 50 ಲಕ್ಷ ರೂ. ತಗುಲುತ್ತಿದೆ. ಹೀಗಾಗಿ ಪ್ರೊಜೆಕ್ಷನ್ ಖರೀದಿಗೆ 15 ಲಕ್ಷ ರೂ. ಪ್ರೋತ್ಸಾಹ ಧನ ನೀಡುವಂತೆ ಕೇಳಲಾಗಿದೆ.
ಡಿಕೆ ಶಿವಕುಮಾರ್ ಭೇಟಿ
ಇಂದು (ಜುಲೈ 11) ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲಾಗಿದೆ. ರಾಜ್ಯ ಚಿತ್ರಮಂದಿರಗಳ ಮಾಲೀಕರ ಸಂಘಕ್ಕೆ ನಿವೇಶನ ನೀಡುವಂತೆ ಡಿಕೆ ಶಿವಕುಮಾರ್ ಬಳಿ ಮನವಿ ಮಾಡಿಕೊಳ್ಳಲಾಗಿದೆ.
ಇತ್ತೀಚೆಗೆ ಸಿಂಗಲ್ ಸ್ಕ್ರೀನ್ಗಳು ಉತ್ಸಾಹವನ್ನು ಕಳೆದುಕೊಳ್ಳುತ್ತಿವೆ. ಹೀಗಾಗಿ ಚಿತ್ರಮಂದಿರದ ಮಾಲೀಕರ ಕುಂದುಕೊರತೆ ಹಾಗೂ ಕ್ಷೇಮವನ್ನು ವಿಚಾರಿಸಲು, ಬೇರೆ ಊರುಗಳಿಂದ ಬಂದರೆ ತಂಗಲು ನಿವೇಶನ ಬೇಕಿದೆ. ಹೀಗಾಗಿ ಬಿಡಿಎ ಅಥವಾ ಬಿಬಿಎಂಪಿಗೆ ನಿವೇಶನ ನೀಡಲು ನಿರ್ದೇಶಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ, ನಿವೇಶನದ ಸರ್ಕಾರಿ ಬೆಲೆಯನ್ನು ಪ್ರದರ್ಶಕರ ಸಂಘ ಭರಿಸುತ್ತೆ ಎಂದು ಹೇಳಿದ್ದಾರೆ.


Click it and Unblock the Notifications











