ದರ್ಶನ್ ಜಾಮೀನು ರದ್ದು ಮಾಡುವಂತೆ ಲಿಖಿತ ವಾದ ಸಲ್ಲಿಸಿದ ಸರ್ಕಾರ; ವಾದದಲ್ಲಿ ಏನೇನಿದೆ?
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ಅವರ ಗ್ಯಾಂಗ್ನ ಜಾಮೀನು ರದ್ದು ಮಾಡುವಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಕೆಲವು ದಿನಗಳಿಂದ ಸುಪ್ರೀಂ ಕೋರ್ಟ್ನಲ್ಲಿ ರಾಜ್ಯ ಸರ್ಕಾರದ ಪರ ಹಾಗೂ ದರ್ಶನ್ ಪರ ವಕೀಲರು ವಾದ-ಪ್ರತಿವಾದವನ್ನು ಮಂಡಿಸಿದ್ದರು. ಇಬ್ಬರ ವಾದ-ಪ್ರತಿವಾದವನ್ನು ಆಲಿಸಿದ ಬಳಿಕ ನ್ಯಾಯಾಧೀಶರು ಇಬ್ಬರಿಗೂ ಮೂರು ಪುಟಗಳ ಲಿಖಿತ ವಾದವನ್ನ ಸಲ್ಲಿಸುವಂತೆ ಸೂಚಿಸಿದ್ದರು. ಈ ಬೆನ್ನಲ್ಲೇ ರಾಜ್ಯ ಸರ್ಕಾರ ಹೆಚ್ಚುವರಿ ಅಫಿಡವಿಟ್ ಅನ್ನು ಸಲ್ಲಿಸಿದೆ.
ದರ್ಶನ್ಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದು ಮಾಡುವುದಕ್ಕೆ ಸೂಕ್ತ ಕಾರಣಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಿದೆ. ಈ ಅಫಿಡವಿಟ್ನಲ್ಲಿ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಗಳನ್ನು ಹಾಗೂ ಆರೋಪಿಗಳ ಪಾತ್ರವನ್ನು ಸ್ಪಷ್ಟವಾಗಿ ಬಿಂಬಿಸಲಾಗಿದೆ.

ರಾಜ್ಯ ಸರ್ಕಾರದ ಪರ ವಕೀಲರು ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಲಿಖಿತ ಅಫಿಡವಿಟ್ನಲ್ಲಿ ಸೂಕ್ತ ಕಾರಣಗಳನ್ನು ನೀಡಿದ್ದಷ್ಟೇ ಅಲ್ಲದೆ, ಹೈಕೋರ್ಟ್ ತೀರ್ಪು ದಾಖಲೆಗಳಿಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಲಾಗಿದೆ. ಅಲ್ಲದೆ ದರ್ಶನ್ ನೀಡಿದ್ದ ಜಾಮೀನನನ್ನು ಯಾವ ಕಾರಣಕ್ಕೆ ರದ್ದು ಮಾಡಬೇಕೆಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಅಫಿಡವೆಟ್ ಸಲ್ಲಿಸಿದೆ. ಅದರ ಸಾರಾಂಶ ಇಲ್ಲಿದೆ.
ಐವರು ಪ್ರತ್ಯಕ್ಷ ಸಾಕ್ಷಿಗಳು
ಸುಪ್ರೀಂ ಕೋರ್ಟ್ಗೆ ರಾಜ್ಯ ಸರ್ಜಾರ ಸಲ್ಲಿಸಿದ ಅರ್ಜಿಯಲ್ಲಿ ಐವರು ಪ್ರತ್ಯಕ್ಷ ಸಾಕ್ಷಿಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಅಪಹರಿಸಿ, ಪಟ್ಟಣಗೆರೆ ಶೆಡ್ಗೆ ಕರೆತರುವುದನ್ನು ಈ ಐವರು ಸಾಕ್ಷಿಗಳು ನೋಡಿದ್ದಾರೆ. ಅಲ್ಲದೇ ರೇಣುಕಾಸ್ವಾಮಿ ಕೊಲೆ ನಡೆದ ಸ್ಥಳಕ್ಕೆ ಆರೋಪಿಗಳು ಬಂದಿದ್ದನ್ನು ಈ ಸಾಕ್ಷಿಗಳು ಕಂಡಿದ್ದಾರೆಂದು ರಾಜ್ಯ ಸರ್ಕಾರ ಹೇಳಿದೆ.
ಪಾದರಕ್ಷೆಗಳಲ್ಲಿನ ಮಣ್ಣಿನ ಮಾದರಿ
ರೇಣುಕಾಸ್ವಾಮಿ ಹತ್ಯೆ ನಡೆದ ಸ್ಥಳದಲ್ಲಿ ಮಣ್ಣಿನ ಮಾದರಿಯನ್ನು ಸಂಗ್ರಹಿಸಲಾಗಿದೆ. ಇದರಲ್ಲಿ 2ನೇ ಆರೋಪಿ ದರ್ಶನ್, ನಾಲ್ಕನೇ ಆರೋಪಿ ರಾಘವೇಂದ್ರ, 5ನೇ ಆರೋಪಿ ನಂದೀಶ್ ಹಾಗೂ 11ನೇ ಆರೋಪಿ ನಾಗರಾಜು ಅವರ ಪಾದರಕ್ಷೆಗಳ ಮಣ್ಣಿನ ಮಾದರಿ ಹೊಂದಾಣಿಕೆಯಾಗುತ್ತವೆಂದು ವಿಧಿ ವಿಜ್ಞಾನ ವರದಿಗಳು ಸ್ಪಷ್ಪಪಡಿಸಿವೆ. ಈ ಮೂಲಕ ಎಲ್ಲಾ ಆರೋಪಿಗಳು ಘಟನಾ ಸ್ಥಳದಲ್ಲಿ ಇದ್ದಿದ್ದನ್ನು ವೈಜ್ಞಾನಿಕವಾಗಿ ಸಾಬೀತು ಮಾಡಲಾಗಿದೆ.
ರಕ್ತದ ಮಾದರಿ ಪತ್ತೆ
ರೇಣುಕಾಸ್ವಾಮಿ ರಕ್ತದ ಕಲೆಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳು ಧರಿಸಿದ್ದ ಬಟ್ಟೆಯ ಮೇಲೆ ಪತ್ತೆಯಾಗಿದೆಯೆಂದು ಡಿಎನ್ಎ ವಿಶ್ಲೇಷಣೆಯಲ್ಲಿ ಗೊತ್ತಾಗಿದೆ. ಹೀಗಾಗಿ ಆರೋಪಿಗಳು ಕೊಲೆಯಲ್ಲಿ ನೇರವಾಗಿ ಭಾಗಿಯಾಗಿದ್ದನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.

ಪವಿತ್ರಾ ಗೌಡ-ದರ್ಶನ್ ಭಾಗಿ
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಪವಿತ್ರಾ ಗೌಡ ಹಾಗೂ ಎರಡನೇ ಆರೋಪಿ ದರ್ಶನ್ ಅವರೂ ಭಾಗಿಯಾಗಿದ್ದಾರೆ. ಇದು ತನಿಖೆಯಲ್ಲಿ ಗೊತ್ತಾಗಿದ್ದು, ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದೆ ಈ ಹತ್ಯೆಗೆ ಕಾರಣ ಎಂದು ಅಫಿಡವಿಟ್ನಲ್ಲಿ ಹೇಳಲಾಗಿದೆ.
ಹೈಕೋರ್ಟ್ ಈ ಸಾಕ್ಷ್ಯಗಳನ್ನು ಪರಿಗಣಿಸಿಲ್ಲ
ರಾಜ್ಯ ಸರ್ಕಾರ ಹೈಕೋರ್ಟ್ ನೀಡಿದ ತೀರ್ಪಿನಲ್ಲಿರುವ ದೋಷಗಳ ಬಗ್ಗೆ ಅಫಿಡವಿಟ್ನಲ್ಲಿ ಪ್ರಸ್ತಾಪ ಮಾಡಲಾಗಿದೆ. ಇದರಲ್ಲಿ ಹತ್ಯೆ ಮಾಡುವುದಕ್ಕೆ ಬಳಸಿದ ಆಯುಧಗಳು ಮಾರಕವಲ್ಲ ಎಂದು ಹೇಳಿದೆ. ಆದರೆ, ರೇಣುಕಾಸ್ವಾಮಿ ದೇಹದ ಮೇಲಿದ್ದ 15ಕ್ಕೂ ಹೆಚ್ಚು ಗಂಭೀರ ಗಾಯಗಳೇ ಇದಕ್ಕೆ ಸಾಕ್ಷಿ. ಹಾಗೇ ಪ್ರಮುಖ ಸಾಕ್ಷಿ ಪುನೀತ್ ಹೇಳಿಕೆ ತಡವಾಗಿ ದಾಖಲು ಮಾಡಿದ್ದಕ್ಕೆ ಸೂಕ್ತ ಕಾರಣವನ್ನು ನೀಡಿದೆ. ಜೊತೆಗೆ ಎಲೆಕ್ಟ್ರಾನಿಕ್ ಮತ್ತು ಸಿಡಿಆರ್ ಎವಿಡೆನ್ಸ್ ಅನ್ನು ಹೈಕೋರ್ಟ್ ಪರಿಗಣಿಸಿಲ್ಲ ಎಂದು ಹೇಳಿದೆ.
ದರ್ಶನ್ಗೆ ಅಪರಾಧ ಹಿನ್ನೆಲೆಯಿದೆ
ಎಲ್ಲಕ್ಕಿಂತ ಮುಖ್ಯವಾಗಿ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್ಗೆ ಅಪರಾಧ ಹಿನ್ನೆಲೆಯಿದೆ. ಬೆನ್ನು ನೋವಿನ ಕಾರಣವೊಡ್ಡಿ ಜಾಮೀನು ಪಡೆದಿದ್ದರು. ಜಾಮೀನು ಪಡೆದ ಮರು ದಿನವೇ ಸಿನಿಮಾ ಪ್ರದರ್ಶನದಲ್ಲಿ ಭಾಗಿಯಾಗಿದ್ದರು. ಇದು ಅನುಮಾನ ಮೂಡಿಸುವಂತಿದೆ ಎಂದು ಸರ್ಕಾರ ವಾದಿಸಿದೆ. ಪ್ರಬಲವಾದ ಸಾಕ್ಷ್ಯಾಧಾರಗಳನ್ನು ಇಟ್ಟುಕೊಂಡು ರಾಜ್ಯ ಸರ್ಕಾರವು ದರ್ಶನ್ ಜಾಮೀನನ್ನು ರದ್ದು ಮಾಡಬೇಕೆಂದು ಪಟ್ಟು ಹಿಡಿದಿದೆ.


Click it and Unblock the Notifications











