'ಮಾರ್ಟಿನ್' ನಿರ್ಮಾಪಕ-ನಿರ್ದೇಶಕ ಕಿತ್ತಾಟ; ಹೈಕೋರ್ಟ್ ಕೊಟ್ಟ ನಿರ್ದೇಶನವೇನು?
ಆಕ್ಷನ್ ಪ್ರಿನ್ ಧ್ರುವ ಸರ್ಜಾ ಪ್ಯಾನ್ ಇಂಡಿಯಾ ಸಿನಿಮಾ 'ಮಾರ್ಟಿನ್' ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಇಂತಹ ಸಮಯದಲ್ಲಿ ನಿರ್ಮಾಪಕ ಹಾಗೂ ನಿರ್ದೇಶಕರ ಮಧ್ಯೆ ಕಿತ್ತಾಟ ಶುರುವಾಗಿದೆ. ಅದು ಫಿಲ್ಮ್ ಚೇಂಬರ್ ಮೆಟ್ಟಿಲೇರಿತ್ತು. ಅದಲ್ಲೂ ಸಮಸ್ಯೆಗೆ ಉತ್ತರ ಸಿಗದೆ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.
'ಮಾರ್ಟಿನ್' ಕೊನೆಯ ಹಂತದ ಪ್ರಚಾರದಲ್ಲಿ ತೊಡಗಿರುವ ಚಿತ್ರತಂಡ ನಿರ್ದೇಶಕ ಎ ಪಿ ಅರ್ಜುನ್ ಅನ್ನು ಕೈ ಬಿಟ್ಟಿದೆ. ನಿನ್ನೆ (ಅಕ್ಟೋಬರ್ 3) ನಡೆದ ಪತ್ರಿಕಾಗೋಷ್ಠಿಯಲ್ಲಿ ಅರ್ಜುನ್ಗೆ ಆಹ್ವಾನವಿರಲಿಲ್ಲ. ಇಂದು (ಅಕ್ಟೋಬರ್ 4) ಹೈದರಾಬಾದ್ನಲ್ಲಿ ನಡೆದ ಇವೆಂಟ್ನಲ್ಲೂ ಎಪಿ ಅರ್ಜುನ್ ಕಾಣಿಸಿಕೊಳ್ಳಲಿಲ್ಲ.

ನಿರ್ದೇಶಕ ಎಪಿ ಅರ್ಜುನ್ 'ಮಾರ್ಟಿನ್' ನಿರ್ಮಾಪಕ ಉದಯ್ ಮೆಹ್ತಾ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದರು. 'ಮಾರ್ಟಿನ್' ಸಿನಿಮಾದ ನಿರ್ದೇಶಕನಾಗಿರುವ ತನ್ನನ್ನು ಕೈ ಬಿಟ್ಟು ಪ್ರಚಾರ ಮಾಡಲಾಗುತ್ತಿದೆ. ಸಿನಿಮಾ ಪ್ರಚಾರದ ವೇಳೆ ತನ್ನ ಹೆಸರನ್ನು ಕೈ ಬಿಟ್ಟು ಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿ ಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ಹೈಕೋರ್ಟ್ ನಿರ್ಮಾಪಕರಿಗೆ ಕೊಟ್ಟ ನಿರ್ದೇಶನವೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಮಾರ್ಟಿನ್' ನಿರ್ದೇಶಕ ಎ ಪಿ ಅರ್ಜುನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ನ ರಜಾಕಾಲೀನ ವಿಭಾಗೀಯ ಪೀಠ ನಡೆಸಿತು. ನ್ಯಾಯಮೂರ್ತಿಗಳಾದ ಎಸ್. ಆರ್. ಕೃಷ್ಣ ಕುಮಾರ್ ಮತ್ತು ಎಂ. ಜಿ. ಉಮಾ ಇಬ್ಬರೂ 'ಮಾರ್ಟಿನ್' ನಿರ್ಮಾಪಕ ಉದಯ್ ಮೆಹ್ತಾ ಅವರಿಗೆ ಸಿನಿಮಾ ಪ್ರಚಾರದಲ್ಲಿ ಎ. ಪಿ. ಅರ್ಜುನ್ ಹೆಸರು ಕೈ ಬಿಡದಂತೆ ನಿರ್ದೇಶನ ನೀಡಿದೆ.
'ಮಾರ್ಟಿನ್' ಸಿನಿಮಾ ಪ್ರಚಾರದ ಪೋಸ್ಟರ್ ಹಾಗೂ ಇತರ ದಾಖಲೆಗಳಲ್ಲಿ ನಿರ್ದೇಶಕ 'ಎ ಪಿ ಅರ್ಜುನ್ ಫಿಲ್ಮ್' ಎಂಬ ಟ್ಯಾಗ್ ಲೈನ್ ಅನ್ನು ಬಳಸಬೇಕು. ಅಲ್ಲದೆ ನಿರ್ದೇಶಕರನ್ನು ಸಿನಿಮಾದ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲು ಅನುಮತಿ ನೀಡಬೇಕು. ಅಲ್ಲದೆ ಪ್ರಚಾರದ ವೇಳೆ ನಿರ್ದೇಶಕ ಎ.ಪಿ. ಅರ್ಜುನ್ ವಿರುದ್ಧ ಕೆಟ್ಟ ಅಭಿಪ್ರಾಯ ವ್ಯಕ್ತ ಪಡಿಸಬಾರದು ಎಂದು ನಿರ್ಮಾಪಕರಿಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.
ಎ. ಪಿ ಅರ್ಜುನ್ ಪರ ಹಿರಿಯ ವಕೀಲ ಉದಯ್ ಹೊಳ್ಳ ವಾದ ಮಂಡಿಸಿದ್ದರು. ಈ ವೇಳೆ ನಿರ್ದೇಶಕರನ್ನು ಪ್ರಚಾರಕ್ಕೆ ಕರೆಯಬೇಕು. ಸಿನಿಮಾ ನಿರ್ಮಾಣದ ವೇಳೆ ಮಾಡಿಕೊಂಡ ಒಪ್ಪಂದ ಪ್ರಕಾರ ಬಿಡುಗಡೆಗೂ ಮುನ್ನವೇ ಸಂಭಾವನೆಯನ್ನು ನೀಡಬೇಕು. ಸಿನಿಮಾದ ಪೋಸ್ಟರ್ ಸೇರಿದಂತೆ ಪ್ರಚಾರದ ಎಲ್ಲಾ ಸಂದರ್ಭದಲ್ಲೂ ಎ ಪಿ ಅರ್ಜುನ್ ಫಿಲ್ಮ್ ಎಂಬ ಟ್ಯಾಗ್ಲೈನ್ ಅನ್ನು ಬಳಸಬೇಕು ಎಂದು ವಾದಿಸಿದ್ದರು.
'ಮಾರ್ಟಿನ್' ಸಿನಿಮಾದ ಕೊನೆಯ ಹಂತದ ಭರ್ಜರಿ ಪ್ರಚಾರ ಶುರುವಾಗಿದೆ. ಹೈದರಾಬಾದ್ನಲ್ಲಿರುವ ಚಿತ್ರತಂಡ ಹುಬ್ಬಳಿ, ದಾವಣಗೆರೆ ಹಾಗೂ ಮುಂಬೈನಲ್ಲಿ ಕೊನೆಯ ಹಂತದ ಪ್ರಚಾರ ಮಾಡಲಿದೆ. ದಾವಣಗೆರೆಯಲ್ಲಿ ಪ್ರಿ ರಿಲೀಸ್ ಇವೆಂಟ್ ಅನ್ನು ಹಮ್ಮಿಕೊಳ್ಳಲಾಗಿದೆ. ಈ ಆದೇಶದ ಬಳಿಕ ಎ ಪಿ ಅರ್ಜುನ್ ಪ್ರಚಾರದಲ್ಲಿ ಭಾಗಿಯಾಗುತ್ತಾರಾ? ಸದ್ಯಕ್ಕೆ ಕುತೂಹಲ. ಇನ್ನು ಈ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 14ಕ್ಕೆ ಮುಂದೂಡಲಾಗಿದೆ.


Click it and Unblock the Notifications











