'ಇರುವುದೆಲ್ಲವ ಬಿಟ್ಟು...': ಚಿರು ಸಾವಿನ ಬೆನ್ನಲ್ಲೇ ಹೃದಯ ಕಲಕುವ ಘಟನೆ ಹಂಚಿಕೊಂಡ ಕವಿರಾಜ್
ಚಿರಂಜೀವಿ ಸರ್ಜಾ ಇನ್ನಿಲ್ಲ ಎಂಬ ಸುದ್ದಿ ಸಿಡಿಲಿನಂತೆ ಎಗರಿದೆ. ಬಹುಶಃ ಆಘಾತದಿಂದ ಚಿತ್ರರಂಗ ಚೇತರಿಸಿಕೊಳ್ಳಲು ಹಲವು ದಿನಗಳೇ ಬೇಕಾಗಬಹುದು. ಏಕೆಂದರೆ ಚಿರಂಜೀವಿ ಅವರದು ಸಾಯುವ ವಯಸ್ಸಲ್ಲ. ಆರೋಗ್ಯವಂತರಾಗಿ ಎಲ್ಲರೊಂದಿಗೆ ಮಾತನಾಡುತ್ತಾ, ತಮಾಷೆ ಮಾಡಿಕೊಂಡು ಕಾಲ ಕಳೆಯುತ್ತಿದ್ದ ಚಿರು, ತಮ್ಮ ಹೆಸರಿಗೆ ತದ್ವಿರುದ್ಧವಾಗಿ ಎಲ್ಲರನ್ನೂ ನೋವಿನಂಚಿನಲ್ಲಿ ದೂಡಿ ಹೊರಟುಹೋದರು.
Recommended Video
ಅವರ ಸಾವಿನ ಸಂಗತಿಯನ್ನು ನಂಬಲು ಇನ್ನೂ ಯಾರೂ ತಯಾರಿಲ್ಲ. ಚಿರಂಜೀವಿ ಎಲ್ಲರೊಂದಿಗೆ ಯಾವ ಅಹಂ ಇಲ್ಲದೆ ಬೆರೆಯುತ್ತಿದ್ದ ವ್ಯಕ್ತಿ. ಅವರು ಎಲ್ಲರನ್ನೂ ಪ್ರೀತಿಸುತ್ತಿದ್ದರು. ಹಾಗೆಯೇ ಚಿತ್ರರಂಗ ಕೂಡ. ಅದರಲ್ಲಿಯೂ ಮೇಘನಾ ಗರ್ಭಿಣಿ ಎಂಬ ಸಂಗತಿ ಎಲ್ಲರ ನೋವನ್ನು ದುಪ್ಪಟ್ಟುಗೊಳಿಸಿದೆ.
ಸದಾ ಖುಷಿಯಲ್ಲಿರಬೇಕಾದ ಸಂದರ್ಭದಲ್ಲಿ ಅವರು ಈ ಆಘಾತವನ್ನು ಹೇಗೆ ಸಹಿಸಿಕೊಳ್ಳುತ್ತಾರೆ ಎನ್ನುವುದನ್ನು ಊಹಿಸಲೂ ಸಾಧ್ಯವಾಗುತ್ತಿಲ್ಲ. ಇದರ ಬಗ್ಗೆ ಚಿತ್ರ ಸಾಹಿತಿ ಕವಿರಾಜ್ ಬರೆದಿರುವ ಬರಹವೊಂದು ಮನಕಲಕುತ್ತದೆ. ಮುಂದೆ ಓದಿ..

ಇರುವುದೆಲ್ಲವ ಬಿಟ್ಟು...
Extreme ಕಾಕತಾಳೀಯಗಳು ಹೇಗಿರುತ್ತವೆ ನೋಡಿ.
ಚಿರು ಸಾವಿನ ನೋವು, ಆಘಾತ ಮರೆಯಲು ಈಗಷ್ಟೇ ನ್ಯೂಸ್ ಚಾನಲ್ ಬಿಟ್ಟು ಬೇರೆ ನೋಡೋಣ ಅಂತಾ TV 9 ಇಂದ ಒಂದೇ ಒಂದು ಚಾನೆಲ್ ಹಿಂದೆ ಸ್ರ್ಕೋಲ್ ಮಾಡಿದೆ. ತಕ್ಷಣ ಕಲರ್ಸ್ ಕನ್ನಡದಲ್ಲಿ 'ಗರ್ಭಿಣಿ' ಮೇಘನಾ ರಾಜ್ ಹಾಸ್ಪಿಟಲ್ ಒಂದರ ಬಾಗಿಲು ದೂಡಿ ಒಬ್ಬರೇ ಅಳುತ್ತಾ ಹೊರಬರುತ್ತಿದ್ದರು. ಅರೆ ಕ್ಷಣ ಅದೂ ನ್ಯೂಸ್ ಲೈವಾ ? ಅಂತಾ ಕನ್ಫ್ಯೂಸೇ ಆಗಿಬಿಟ್ಟೆ. 'ಇರುವುದೆಲ್ಲವ ಬಿಟ್ಟು' ಸಿನಿಮಾ ಬರ್ತಾ ಇತ್ತು ಅಲ್ಲಿ. ನಂತರ ಅಳುತ್ತಲೇ ಆಕೆ ಒಬ್ಬರೆ ಕಾರು ಡ್ರೈವ್ ಮಾಡಿಕೊಂಡು ಹೋಗುತ್ತಾರೆ. ಹಾಡು ಶುರುವಾಗುತ್ತದೆ. ಹಾಡಲ್ಲಿ ಒಂದು ಸಾಲು "ಇರುವುದೆಲ್ಲವ ಬಿಟ್ಟು ಹೊರಟೆ". ಈ ತಾಯೀ ಹೇಗೆ ದುಃಖ ಸಹಿಸುತ್ತಾರೆ ??? ಎಂದು ಬರೆದುಕೊಂಡಿದ್ದಾರೆ ಕವಿರಾಜ್.

ನಮ್ಮ ನೆನಪಲ್ಲಿ ಚಿರಂಜೀವಿ
ಎಲ್ಲೇ ಸಿಕ್ಕರೂ ಒಂಚೂರು ಹಮ್ಮುಬಿಮ್ಮು, ಕೃತಕತೆ ಇಲ್ಲದ ಇಷ್ಟಗಲ ಸ್ವಚ್ಚಂದ ನಗು.. "ಹಾ....ಯ್ ಸರ್" ಎನ್ನುತ್ತಾ ಒಂದು ಆತ್ಮೀಯ ಅಪ್ಪುಗೆ, ಇದೇ ನೀವೆಂದರೆ ನನಗೆ ನೆನಪು ಬರೋದು. ನಿಶ್ಚಯಿಸಿಬಿಟ್ಟಿದ್ದೇನೆ. ಸಾವಿನ ಬಗ್ಗೆ ಇನ್ನು ಮಾತಾಡುವುದಿಲ್ಲ. Death...my foot.. ನಿಮಗಿಟ್ಟ ಹೆಸರು ವ್ಯರ್ಥವಾಗುವುದಿಲ್ಲ. ನೀವು ನಮ್ಮ ನೆನಪಿನಲ್ಲಿ 'ಚಿರಂಜೀವಿ'ಯೇ ಎಂದು ಕವಿರಾಜ್ ಮತ್ತೊಂದು ಪೋಸ್ಟ್ನಲ್ಲಿ ಬರೆದಿದ್ದಾರೆ.

ಒಪ್ಪಿಕೊಳ್ಳಲಾಗುತ್ತಿಲ್ಲ
ನಂಬಲಾಗುತ್ತಿಲ್ಲ...
ಸುದ್ದಿ ಸುಳ್ಳಾಗಬಾರದೇ ಅಂತಲೇ ಮನಸ್ಸು ಚೀರುತ್ತಿದೆ...
ಭೇಟಿ ಆದಾಗಲೆಲ್ಲಾ 'ಮೇಡಂ ನಂಗೊಂದು ಸಿನಿಮಾ ಯಾವಾಗ ಮಾಡ್ತಿರಾ... ' ಎನ್ನುತ್ತಿದ್ದ ಚಿರಂಜೀವಿ ಇನ್ನು ನೆನಪು ಮಾತ್ರ ಎನ್ನುವುದನ್ನು ಒಪ್ಪಿಕೊಳ್ಳಲಾಗುತ್ತಿಲ್ಲ... ಛೆ... ಈ ಸಾವು ನ್ಯಾಯವೇ... ಎಂದು ನಿರ್ದೇಶಕಿ ಸುಮನ್ ಕಿತ್ತೂರು ನೋವು ಹಂಚಿಕೊಂಡಿದ್ದಾರೆ.

ಇಷ್ಟು ಬೇಗ ಏಕೆ ಅಗಲಿದಿರಿ?
ತೀವ್ರ ಆಘಾತ ಮತ್ತು ದುಃಖವಾಗುತ್ತಿದೆ. ಇಷ್ಟು ಬೇಗ ನಮ್ಮನ್ನು ಏಕೆ ಅಗಲಿದಿರಿ? ವಿಷಲ್ ಮತ್ತು ಆಟಗಾರ ಪ್ರದರ್ಶನದ ವೇಳೆ ಅವರೊಂದಿಗೆ ಕೆಲಸ ಮಾಡಿದ ಅಪರೂಪದ ನೆನಪುಗಳಿವೆ. ಆತ ಇನ್ನಿಲ್ಲ ಎಂದು ನಂಬಲು ಈಗಲೂ ಸಾಧ್ಯವಾಗುತ್ತಿಲ್ಲ. ಜೊತೆಗೆ ಕಳೆದ ಗಳಿಗೆಗಳು ಸದಾ ನೆನಪಿನಲ್ಲಿ ಉಳಿಯುತ್ತವೆ... ಎಂದು ನಿರ್ದೇಶಕ ಕೆಎಂ ಚೈತನ್ಯ ತಿಳಿಸಿದ್ದಾರೆ.


Click it and Unblock the Notifications











