"ಬೆಂಗಳೂರಿನ ಕೆಲವು ಮಾಲ್ಗಳಲ್ಲಷ್ಟೆ ಸಿನಿಮಾವಿದೆ.. ಕೊನೆಯ ಪ್ರಯತ್ನದಲ್ಲಿದ್ದೀನಿ"; 'ಕೆರೆಬೇಟೆ' ಹೀರೊ ಭಾವುಕ
ಅಪ್ಪಟ ಮಲೆನಾಡು ಭಾಗದ ಸಿನಿಮಾ 'ಕೆರೆಬೇಟೆ' ಮೂರು ವಾರಗಳ ಹಿಂದಷ್ಟೇ ಬಿಡುಗಡೆಯಾಗಿತ್ತು. ಸಿನಿಮಾಗೆ ಫಸ್ಟ್ ಡೇ ಫಸ್ಟ್ ಶೋನೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 'ಕೆರೆಬೇಟೆ' ಸಿನಿಮಾದ ಕೊನೆಯ 20 ನಿಮಿಷಗಳ ಬಗ್ಗೆ ಪ್ರೇಕ್ಷಕರು ಹೊಗಳಿದ್ದರು. ಮಲೆನಾಡಿನ ಭಾಗದ ಪ್ರಕೃತಿ ಸೌಂದರ್ಯ, ಭಾಷೆ ಎಲ್ಲವೂ ಇಷ್ಟ ಆಗಿತ್ತು.
'ಕೆರೆಬೇಟೆ' ಅನ್ನೋದು ಮಲೆನಾಡಿನ ಭಾಗದ ಒಂದು ಸಂಪ್ರದಾಯ ಕ್ರೀಡೆ. ಬೇಸಿಗೆಯಲ್ಲಿ ಊರಿನ ಜನರೆಲ್ಲರೂ ಸೇರಿಕೊಂಡು ಒಟ್ಟಿಗೆ ಕೂಣಿ, ಬಲೆ ಹಿಡಿದು ಕೆರೆಗೆ ಇಳಿಯುತ್ತಾರೆ. ಪೈಪೋಟಿಗೆಗೆ ಬಿದ್ದು ಮೀನು ಹಿಡಿಯುವುದಕ್ಕೆ ಮುಂದಾಗುತ್ತಾರೆ. ಎಲ್ಲರಿಗಿಂತ ಹೆಚ್ಚು ಮೀನು ಹಿಡಿಯಬೇಕೆಂಬ ಹುರುಷು, ಧಾವಂತ ಎರಡೂ ಪ್ರತಿಯೊಬ್ಬರಲ್ಲೂ ಇರುತ್ತೆ. ಇದನ್ನೇ ಹಿನ್ನೆಲೆಯಾಗಿಟ್ಟು ಕಥೆ ಹೆಣೆಯಲಾಗಿತ್ತು.

ಕನ್ನಡ ಚಿತ್ರರಂಗಕ್ಕೆ 'ಕೆರೆಬೇಟೆ' ವಿಶಿಷ್ಟ ಸಿನಿಮಾ. ಕಳೆದ ಮಾರ್ಚ್ 15 ರಂದು ಬಿಡುಗಡೆ ಮಾಡಲಾಗಿತ್ತು. ಆದರೆ, ಈ ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದ್ದರೂ ಥಿಯೇಟರ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಜನರು ಸಿನಿಮಾ ನೋಡಿಲ್ಲ. ನಿರೀಕ್ಷಿಸಿದ ಮಟ್ಟಕ್ಕೆ ಸಿನಿಮಾ ಗೆದ್ದಿಲ್ಲ. ಹೀಗಾಗಿ ಈ ಸಿನಿಮಾ ಹೀರೊ ಹಾಗೂ ನಿರ್ಮಾಪಕ ಕೊನೆಯ ಪ್ರಯತ್ನ ಮಾಡುತ್ತಿದ್ದೇನೆ. ಸಿನಿಮಾ ಗೆಲ್ಲಿಸಿ ಅಂತ ವಿಡಿಯೋ ಮಾಡಿ ಹತಾಶೆಯ ನುಡಿಗಳನ್ನಾಡಿದ್ದಾರೆ.
ಸಿನಿಮಾ ರಿಲೀಸ್ ಆಗಿ 3 ವಾರ ಆಯ್ತು
'ಕೆರೆಬೇಟೆ' ಸಿನಿಮಾ ಟ್ರೈಲರ್ ಹಾಗೂ ಹಾಡುಗಳು ಗಮನ ಸೆಳೆದಿದ್ದವು. ಈ ಸಿನಿಮಾ ಗೆದ್ದರೆ, ಬಾಕ್ಸಾಫೀಸ್ನಲ್ಲಿ ಚಿಂದಿ ಉಡಾಯಿಸುತ್ತೆ ಎಂದು ನಿರೀಕ್ಷೆ ಮಾಡಲಾಗಿತ್ತು. ಮೊದಲ ದಿನ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. "ನಮ್ಮ ಕೆರೆಬೇಟೆ ರಿಲೀಸ್ ಆಗಿ ಮೂರು ವಾರಗಳಿಗೂ ಹೆಚ್ಚಾಗುತ್ತಾ ಬಂದಿದೆ. ಸಿನಿಮಾ ಬಗ್ಗೆ ತುಂಬಾ ಒಳ್ಳೆಯ ಮಾತುಗಳು ಕೇಳಿ ಬಂದಿದ್ದವು. ಅದು ನಾನು ಹೇಳುತ್ತಿರೋದಲ್ಲ. ಕನ್ನಡ ಚಿತ್ರರಂಗದ ಹೆಸರಾಂತ ನಟರು, ನಿರ್ದೇಶಕರು, ಸಿನಿಮಾ ನೋಡಿದ ಪತ್ರಕರ್ತರು, ಪ್ರೇಕ್ಷಕರು ಹೇಳುತ್ತಿದ್ದಾರೆ. ಆದರೂ, ನಾವು ನಿರೀಕ್ಷೆ ಮಾಡಿದಷ್ಟು ಜನರಿಗೆ ರೀಚ್ ಆಗಿಲ್ಲ ಅನ್ನುವ ಕೊರಗು ಇದೆ. " ಎಂದು ಹೀರೊ ಗೌರಿಶಂಕರ್ ಹೇಳಿಕೊಂಡಿದ್ದಾರೆ.

"ಕೊನೆಯ ಪ್ರಯತ್ನದಲ್ಲಿ ನಾನಿದ್ದೀನಿ"
ಗೌರಿ ಶಂಕರ್ ನಟಿಸಿದ 'ಕೆರೆಬೇಟೆ' ಸಿನಿಮಾ ಮೂರು ವಾರಗಳನ್ನು ಪೂರೈಸಿ ಕೊನೆಯ ಹಂತದಲ್ಲಿದೆ. ಹೀಗಾಗಿ ಸಿನಿಮಾ ಉಳಿಸಿಕೊಳ್ಳುವ ಶತ ಪ್ರಯತ್ನವನ್ನು ನಟ, ನಿರ್ಮಾಪಕ ಗೌರಿ ಶಂಕರ್ ಕೊನೆಯ ಪ್ರಯತ್ನ ಮಾಡುತ್ತಿದ್ದಾರೆ. "ತುಂಬಾ ಒಳ್ಳೆಯ ಸಿನಿಮಾ ಮಾಡಿದಾಗ ಆ ಸಿನಿಮಾ ಜನಕ್ಕೆ ರೀಚ್ ಆಗದೆ, ಥಿಯೇಟರ್ನಲ್ಲಿ ಜನ ಬಂದು ಸಿನಿಮಾ ನೋಡದೆ, ಹಾಗೆ ಕಣ್ಮರೆಯಾಗುತ್ತೆ ಅನ್ನೋದನ್ನು ನೆನಪು ಮಾಡಿಕೊಂಡರೆ ತುಂಬಾನೇ ಬೇಜಾರಾಗುತ್ತೆ. ಆ ಒಂದು ಕೊನೆಯ ಪ್ರಯತ್ನದಲ್ಲಿ ನಾನಿದ್ದೀನಿ." ಎಂದು ಭಾವುಕರಾಗಿದ್ದಾರೆ.
"ಕೆಲವೇ ಮಾಲ್ಗಳಲ್ಲಿ ಸಿನಿಮಾವಿದೆ"
"ಬೆಂಗಳೂರಿನ ಕೆಲವೇ ಕೆಲವು ಮಾಲ್ಗಳಲ್ಲಿ ನಮ್ಮ ಸಿನಿಮಾವಿದೆ. ಅಂದರೆ, ತುಂಬಾ ಶೋಗಳಿಲ್ಲ. ಕೆಲವೇ ಕೆಲವು ಶೋಗಳಿದ್ದಾವೆ. ಕೆಲವೇ ಕೆಲವು ಉದಾಹರಣಗಳಿವೆ. ಎರಡು ಮೂರು ವಾರ ಕೆಲವೇ ಕೆಲವು ಶೋಗಳಿದ್ದು, ಅದು ನೂರಾರು ಶೋಗಳಾದ ಉದಾಹರಣೆಯಿದೆ. ನಮ್ಮ ಸಿನಿಮಾಗೆ ಒಂದೊಳ್ಳೆ ಪ್ರಯತ್ನ ಬಂದಿದ್ದರಿಂದ ಆ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇನೆ." ಎಂದು ಗೌರಿ ಶಂಕರ್ ಹೇಳಿದ್ದಾರೆ.
"ಕನ್ನಡ ಸಿನಿಮಾ ಅಂದರೆ ತಾತ್ಸಾರ"
"ನಮ್ಮಲ್ಲೇ ಕೆಲವರಿಗೆ ಕನ್ನಡ ಸಿನಿಮಾ ಅಂದರೆ ತಾತ್ಸಾರ. ಇದೇ ಸಿನಿಮಾ ತಮಿಳು, ತೆಲುಗು, ಮಲಯಾಳಂನಲ್ಲಿ ನೋಡಿದ್ದೀವಿ ಅಂತ ಹೇಳಿಕೊಳ್ಳುವ ಖುಷಿ ಕನ್ನಡ ಸಿನಿಮಾ ನೋಡಿದ್ದೀವಿ ಅಂತ ಹೇಳಿಕೊಳ್ಳುವುದಕ್ಕೆ ಮುಜುಗರವೋ ಏನೋ ಗೊತ್ತಿಲ್ಲ. ಒಮ್ಮೆ ಸಿನಿಮಾ ನೋಡಿ, ಯಾವ ತರಹ ಸಿನಿಮಾ ಮಾಡಿದ್ದೀವಿ ಅಂತ." ಎಂದು ರವಿಶಂಕರ್ ಎಮೋಷನಲ್.


Click it and Unblock the Notifications











