ಸಾಗರದ ಕೆಳದಿ ಅರಸರ ಕಲ್ಯಾಣಿಯನ್ನು ಜೀರ್ಣೋದ್ಧಾರ ಮಾಡಿದ ಯಶ್ 'ಯಶೋಮಾರ್ಗ'
'ಕೆಜಿಎಫ್ 2' ವಿಶ್ವದ ಮೂಲೆ ಮೂಲೆಯಲ್ಲೂ ಸದ್ದು ಮಾಡಿ, ಕನ್ನಡ ಚಿತ್ರರಂಗ ಹಿರಿಮೆಯನ್ನು ಹೆಚ್ಚಿಸಿದೆ. ಸದ್ಯ ಯಶ್ ಕೂಡ ಮೆಗಾ ಯಶಸ್ಸಿನ ಖುಷಿಯಲ್ಲಿದ್ದಾರೆ. ಈ ಮಧ್ಯೆ ಯಶ್ ಹೊಸ ಸಿನಿಮಾದ ಬಗ್ಗೆನೂ ಗಮನ ಹರಿಸಿದ್ದಾರೆ. ಈ ಮಧ್ಯೆ ಕೇವಲ ಸಿನಿಮಾದಿಂದಷ್ಟೇ ಅಲ್ಲ. ಸಾಮಾಜಿಕ ಕೆಲಸದಿಂದಲೂ ಯಶ್ ಸುದ್ದಿಯಲ್ಲಿದ್ದಾರೆ.
ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗುವುದಕ್ಕಿಂತಲೂ ಮುನ್ನವೇ ಸಮಾಜಮುಖಿ ಕೆಲಸಗಳಲ್ಲಿ ಭಾಗಿಯಾಗಿದ್ದರು. ರಾಜ್ಯದ ಗ್ರಾಮಗಳಲ್ಲಿ ಕೆಲವು ಸಾಮಾಜಿಕ ಕೆಲಸಗಳನ್ನು ತಮ್ಮ ಯಶೋಮಾರ್ಗದ ಮೂಲಕ ಮಾಡಿದ್ದರು. ಕುಡಿಯುವ ನೀರಿನ ವ್ಯವಸ್ಥೆ, ಕೆರೆ ಹೂಳೆತ್ತುವ ಕೆಲಸವನ್ನು ಯಶೋಮಾರ್ಗ ಮಾಡಿತ್ತು. ಈಗ ಮತ್ತೊಂದು ಒಳ್ಳೆಯ ಕೆಲಸ ಮಾಡಿ ಮುಗಿಸಿದೆ ಯಶೋಮಾರ್ಗ.
ಒಂದ್ಕಡೆ ಯಶ್ ಅಭಿನಯದ 'ಕೆಜಿಎಫ್ 2' ಸಿನಿಮಾ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸುತ್ತಿದ್ದರೆ, ಇನ್ನೊಂದ್ಕಡೆ ಯಶ್ ಅವರ 'ಯಶೋಮಾರ್ಗ' ಐತಿಹಾಸಿಕ ಹಿನ್ನೆಲೆ ಇರುವ ಪುರಾತನ ಕಲ್ಯಾಣಿಯನ್ನು ಜೀರ್ಣೋದ್ಧಾರ ಮಾಡಿದೆ. ಈ ಕಲ್ಯಾಣಿಗೆ ಐತಿಹಾಸಿಕ ಹಿನ್ನೆಲೆಯಿತ್ತು. ಯಶ್ ಮಾಡಿದ ಈ ಒಳ್ಳೆ ಕೆಲಸಕ್ಕೆ ಜನರು ಮೆಚ್ಚುಗೆ ಸೂಚಿಸಿದ್ದಾರೆ.

ಯಶೋಮಾರ್ಗದಿಂದ ಕಲ್ಯಾಣಿ ಜೀರ್ಣೋದ್ಧಾರ
ಕೆಲವು ವರ್ಷಗಳ ಹಿಂದೆ ಕೆರೆ ಹೂಳೆತ್ತುವ ಮೂಲಕ ಒಂದೊಳ್ಳೆ ಕೆಲಸಕ್ಕೆ ಕೈ ಹಾಕಿದ್ದ 'ಯಶೋಮಾರ್ಗ'ಕ್ಕೆ ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದ ಐತಿಹಾಸಿ ಹಿನ್ನೆಲೆಯುಳ್ಳ ಪುರಾತನ ಕಲ್ಯಾಣಿಯನ್ನು ಜೀರ್ಣೋದ್ಧಾರ ಮಾಡಲಾಗಿದೆ. ಕೆಳದಿ ಅರಸ ಕಾಲದಲ್ಲಿ ಈ ಕಲ್ಯಾಣಿ ನಿರ್ಮಾಣ ಆಗಿತ್ತು. ಈ ಐತಿಹಾಸಿಕ ಸ್ಥಳ ಪ್ರವಾಸಿಗರ ಅಚ್ಚು ಮೆಚ್ಚಿನ ಸ್ಥಳವಾಗಿತ್ತು. ಇದೇ ಕಲ್ಯಾಣಿಯನ್ನು ಯಶ್ ಯಶೋಮಾರ್ಗ ಜೀರ್ಣೊದ್ದಾರ ಮಾಡಿದ್ದಾರೆ.

ಮಹಂತಿ ಮಠದ ಕಲ್ಯಾಣಿ ಜೀರ್ಣೋದ್ಧಾರ
ಯಶ್ ಅವರ 'ಯಶೋಮಾರ್ಗ' ಜೀರ್ಣೋದ್ಧಾರ ಮಾಡಿರುವ ಕಲ್ಯಾಣಿಗೆ 15ನೇ ಶತಮಾನದಲ್ಲಿ ಕಟ್ಟಿಸಿದ್ದು ಎನ್ನಲಾಗಿದೆ. ಕೆಳದಿಯ ಅರಸ ರಾಜ ವೆಂಕಟಪ್ಪ ನಾಯಕ ಈ ಕಲ್ಯಾಣಿಯನ್ನು ಕಟ್ಟಿಸಿದ್ದರು. ಇವರ ಕಾಲದಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಕಲ್ಯಾಣಿಯನ್ನು ನಿರ್ಮಾಣಗೊಂಡಿತ್ತು ಎಂದು ಇತಿಹಾಸ ಹೇಳುತ್ತಿದೆ. ಇದರಲ್ಲಿ ಸಾಗರ ತಾಲೂಕಿನ ಆನಂದಪುರದ ಮಲಂದೂರು ಗ್ರಾಮದ ಮಹಂತಿ ಮಠ ಅಥವಾ ಚಂಪಕ ಸರಸಿಯ ಕಲ್ಯಾಣಿ ಕೂಡ ಒಂದು. ಇದೇ ಕಲ್ಯಾಣಿ ಈಗ ಜೀರ್ಣೋದ್ಧಾರಗೊಂಡಿದೆ.

20 ಮಂದಿಯಿಂದ ಕಲ್ಯಾಣಿ ಜೀರ್ಣೋದ್ಧಾರ
ಪರಿಸರವಾದಿ ಶಿವನಂದ ಕಳವೆ ಅವರ ಮಾರ್ಗದರ್ಶನದಲ್ಲಿ ಈ ಕೆಲಸವನ್ನು ಯಶೋಮಾರ್ಗ ಮಾಡಿದೆ. ಸುಮಾರು 20 ಮಂದಿ ಕೆಲಸಗಾರರು ಈ ಕಲ್ಯಾಣಿಯನ್ನು ಜೀರ್ಣೋದ್ಧಾರ ಮಾಡಿದ್ದಾರೆ. ಇದರೊಂದಿಗೆ ಕಲ್ಯಾಣಿಯ ಬಳಿಕ ದೇವಾಲಯವನ್ನು ಶುಚಿಗೊಳಿಸಿದ್ದಾರೆ. ಪಾಳುಬಿದ್ದಿದ್ದ ಕಲ್ಯಾಣಿ ಹಾಗೂ ಅದರ ಇತಿಹಾಸವನ್ನು ತಿಳಿಸಿದಾಗ ಯಶ್ ಕಲ್ಯಾಣಿಯ ಜೀರ್ಣೋದ್ಧಾರ ಮಾಡಲು ಮುಂದಾಗಿದ್ದರು ಎಂದು ಶಿವಾನಂದ ಕಳವೆ ಮಾಧ್ಯಮಗಳಿಗೆ ಹೇಳಿದ್ದಾರೆ.

ಕಳೆದ ವರ್ಷವೇ ಕಾಮಗಾರಿ ಆರಂಭ
ಅಂದ್ಹಾಗೆ, ಈ ಕೆಲಸ ಇತ್ತೀಚೆಗೆ ಶುರುವಾಗಿದ್ದಲ್ಲ. ಕಳೆದ ವರ್ಷವೇ ಕಲ್ಯಾಣ ಪುನಶ್ವೇತನಗೊಳಿಸುವ ಕೆಲಸ ಆರಂಭ ಆಗಿತ್ತು. ಈ ವೇಳೆ ಪರಿಸರವಾದ ಶಿವಾನಂದ ಕಳವೆಯವರು ಈ ಕಲ್ಯಾಣಿಯ ಗೋಡೆಯನ್ನು ಮಣ್ಣಿನಿಂದಲೇ ಕಟ್ಟಬೇಕು ಎಂದು ಒತ್ತಾಯಿಸಿದ್ದರು. ಅದರಂತೆಯೇ ಮಣ್ಣಿನಿಂದಲೇ ಗೋಡೆಯನ್ನು ಕಟ್ಟಿ ಹೊಸರೂಪವನ್ನು ನೀಡಲಾಗಿದೆ.


Click it and Unblock the Notifications











