ನಮ್ಮ ತಿರಂಗ ಭರವಸೆಯ ಸಂಕೇತ: ಮನೆ ಮೇಲೆ ರಾಷ್ಟ್ರ ಧ್ವಜ ಹಾರಿಸಿ ಎಂದ ಯಶ್!
'ಕೆಜಿಎಫ್ ಚಾಪ್ಟರ್ 2' ರಿಲೀಸ್ ಆದ ಬಳಿಕ ರಾಕಿಂಗ್ ಸ್ಟಾರ್ ಸಿನಿಮಾ ಯಾವುದು ಅನ್ನೋ ಚಿಂತೆ ಅಭಿಮಾನಿಗಳದ್ದು. ಆದರೆ, ಯಶ್ ಮಾತ್ರ 19ನೇ ಸಿನಿಮಾವನ್ನು ಘೋಷಣೆ ಮಾಡುವ ಯಾವುದೇ ಲಕ್ಷಣಗಳೂ ಕಾಣಿಸುತ್ತಿಲ್ಲ. ಹೀಗಾಗಿ ಯಶ್ ನಡೆಯನ್ನು ಅವರ ಅಭಿಮಾನಿಗಳು ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದಾರೆ.
Recommended Video
ಈ ಮಧ್ಯೆ ರಾಕಿಂಗ್ ಸ್ಟಾರ್ ಯಶ್ ತಮ್ಮ ಪತ್ನಿಯೊಂದಿಗೆ ವಿದೇಶ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೇನು ಪ್ರವಾಸ ಮುಗಿಸಿ ಬಂದ ಬಳಿಕನಾದರೂ, ಹೊಸ ಸಿನಿಮಾವನ್ನು ಅನೌನ್ಸ್ ಮಾಡುತ್ತಾರಾ? ಎಂದು ರಾಕಿ ಭಾಯ್ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇಲ್ಲವೇ ಚಿಕ್ಕದೊಂದು ಸುಳಿವನ್ನಾದರೂ ನೀಡಬಹುದು ಎಂದು ಕಾದು ಕೂತಿದ್ದಾರೆ.
ಇದೊಂದು ಚರ್ಚೆ ನಡೆಯುತ್ತಿರುವಾಗಲೇ ಯಶ್ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಷ್ಟ್ರ ಧ್ವಜದ ಬಗ್ಗೆ ಟ್ವೀಟ್ ಮಾಡಿದ್ದು, ಪ್ರತಿಯೊಬ್ಬರು ತಮ್ಮ ಮನೆ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸುವಂತೆ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲೀಗ ಹೈಲೈಟ್ ಆಗುತ್ತಿದೆ.
ಮನೆ ಮೇಲೆ ರಾಷ್ಟ್ರ ಧ್ವಜ ಹಾರಿಸಿ ಎಂದ ಯಶ್!
75ನೇ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ 'ಹರ್ ಘರ್ ಮೆ ತಿರಂಗ' ಎನ್ನುವ ಅಭಿಮಾನಿಯನ್ನು ಹಮ್ಮಿಕೊಂಡಿದೆ. ಈ ಅಭಿಮಾನಕ್ಕೆ ರಾಕಿಂಗ್ ಸ್ಟಾರ್ ಯಶ್ ಕೂಡ ಸಾಥ್ ನೀಡಿದ್ದು, ತಮ್ಮ ಅಭಿಮಾನಿಗಳಿಗೆ ಹಾಗೂ ಜನರಿಗೆ ರಾಷ್ಟ್ರ ಧ್ವಜವನ್ನು ಹಾರಿಸುವಂತೆ ಮನವಿ ಮಾಡಿ ಟ್ವೀಟ್ ಮಾಡಿದ್ದಾರೆ. "ವೈವಿಧ್ಯತೆಯಲ್ಲೂ ಭರವಸೆಯ, ಆಕಾಂಕ್ಷೆ ಮತ್ತು ಏಕತೆಯ ಸಂಕೇತ. ಇದುವೇ ನಮ್ಮ ತಿರಂಗ. ಭಾರತೀಯರ ಹೆಮ್ಮೆ. ಸ್ವಾತಂತ್ರ್ಯದ 75 ವರ್ಷಗಳ ಈ ಸಂದರ್ಭದಲ್ಲಿ, ನಮ್ಮ ರಾಷ್ಟ್ರದ ಗುರುತನ್ನು, ಭಾರತೀಯ ರಾಷ್ಟ್ರಧ್ವಜವನ್ನು ನಮ್ಮ ಮನೆಯ ಮೇಲೆ 13 ರಿಂದ 15 ಆಗಸ್ಟ್ 2022 ರವರೆಗೆ ಹಾರಿಸೋಣ." ಎಂದು ಯಶ್ ಟ್ವೀಟ್ ಮಾಡಿದ್ದಾರೆ.

ಹರ್ ಘರ್ ತಿರಂಗಾ ಅಭಿಯಾನ
75 ವರ್ಷಗಳ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಇಡೀ ದೇಶ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕರೆ ನೀಡಿದೆ. ದೇಶದಲ್ಲಿ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರ ಪ್ರೇಮವನ್ನು ಮೂಡಿಸುವುದು ಮೂಲ ಉದ್ದೇಶದಿಂದ ಮನೆ ಮನೆಯಲ್ಲಿ ರಾಷ್ಟ್ರೀಯ ಧ್ವಜವನ್ನು ಹಾರಿಸುವಂತೆ ಕರೆ ನೀಡಲಾಗಿತ್ತು. ಆಗಸ್ಟ್ 13 ರಿಂದ ಆಗಸ್ಟ್ 15ರವರೆಗೆ ಹರ್ ಘರ್ ತಿರಂಗಾ ಅಭಿಯಾನದಡಿ ದೇಶದ ಮನೆ ಮನೆಗಳಲ್ಲಿ ಹಾಗೂ ಗ್ರಾಮಗಳಲ್ಲಿ ರಾಷ್ಟ್ರೀಯ ಧ್ವಜ ಹಾರಿಸುವಂತೆ ಕೇಳಿಕೊಳ್ಳಲಾಗಿದೆ.

ಯಶ್ ಬರ್ತ್ಡೇಗೆ ಹೊಸ ಸಿನಿಮಾ?
'ಕೆಜಿಎಫ್ 2' ಬಳಿಕ ಯಶ್ ಹೊಸ ಸಿನಿಮಾ ಯಾವಾಗ ಅನೌನ್ಸ್ ಆಗುತ್ತೆ? ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಯಶ್ 19ನೇ ಸಿನಿಮಾ ಈ ವರ್ಷ ಅನೌನ್ಸ್ ಅಗಲ್ಲ ಅನ್ನೋ ಸುದ್ದಿ ಸ್ಯಾಂಡಲ್ವುಡ್ನಲ್ಲಿ ಕೇಳಿಬರುತ್ತಿದೆ. ಯಶ್ ಹುಟ್ಟುಹಬ್ಬಕ್ಕೆ ಗ್ರ್ಯಾಂಡ್ ಆಗಿ 19ನೇ ಸಿನಿಮಾವನ್ನು ಅನೌನ್ಸ್ ಮಾಡುತ್ತಾರೆ ಅನ್ನೋ ಗುಸು ಗುಸು ಎದ್ದಿದೆ. ಆದರೆ, ಈ ಬಗ್ಗೆ ಇನ್ನು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಅಸಲಿಗೆ ಯಶ್ ಯಾರ ಸಿನಿಮಾ ಮಾಡುತ್ತಾರೆ ಎನ್ನುವುದೇ ಇನ್ನೂ ಗೊತ್ತಿಲ್ಲ. ಇದು ವಿಷಯ ಹೊರಬೀಳುವವರೆಗೂ ಯಶ್ 19ನೇ ಸಿನಿಮಾ ಬೂದಿ ಮುಚ್ಚಿದ ಕೆಂಡದಂತೆಯೇ ಇರುತ್ತೆ.

ನರ್ತನ್ ಸಿನಿಮಾ ಪೋಸ್ಟ್ಪೋನ್
ಕಳೆದ ಮೂರು ವರ್ಷಗಳಿಂದ ಯಶ್ 19ನೇ ಸಿನಿಮಾವನ್ನು 'ಮಫ್ತಿ' ಸಿನಿಮಾದ ನಿರ್ದೇಶಕ ನರ್ತನ್ ಮಾಡುತ್ತಾರೆ ಎನ್ನಲಾಗಿತ್ತು. ನರ್ತನ್ ಕೂಡ ಕಥೆಯನ್ನು ಹೆಣೆಯುತ್ತಿದ್ದರು. ಆದರೆ, ಯಶ್ 'ಕೆಜಿಎಫ್ 3' ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ ಎನ್ನುವ ಮಾತು ಒಂದ್ಕಡೆ ಕೇಳಿಬರುತ್ತಿದೆ. ಅದೇ ಇನ್ನೊಂದು ಕಡೆ ತಮಿಳು ನಿರ್ದೇಶಕ ಶಂಕರ್ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ, ಯಶ್ ಮಾತ್ರ ಈ ವದಂತಿಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. 'ಕೆಜಿಎಫ್ 2' ಯಶಸ್ಸಿನ ಅಲೆಯಲ್ಲಿ ತೇಲುತ್ತಿರೋ ರಾಕಿ ಭಾಯ್ ಆದಷ್ಟು ಬೇಗ 19ನೇ ಸಿನಿಮಾ ಅನೌನ್ಸ್ ಮಾಡುವುದು ಒಳ್ಳೆಯದು ಅಭಿಪ್ರಾಯ ವ್ಯಕ್ತವಾಗುತ್ತಿದೆ.


Click it and Unblock the Notifications











