ಇತ್ತೀಚೆಗೆ ಕೊನೆಯುಸಿರೆಳೆದ ಕೆಜಿಎಫ್ ತಾತಾನ ಕೊನೆಯ ಸಿನಿಮಾ 'ನ್ಯಾನೋ ನಾರಾಯಣಪ್ಪ'ಗೆ ಸೆನ್ಸಾರ್ !
'ಕೆಜಿಎಫ್' ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಹಲವು ಪಾತ್ರಗಳು ಫೇಮಸ್ ಆಗಿದ್ದವು. ಅದರಲ್ಲೊಂದು ತಾತಾನ ಪಾತ್ರ. ಈ ರೋಲ್ ಚಿಕ್ಕದಾಗಿದ್ದರೂ, ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಇದೇ ತಾತಾ ನಾಯಕನಾಗಿ ನಟಿಸಿರುವ ಸಿನಿಮಾ ಈಗ ಬಿಡುಗಡೆ ಸಜ್ಜಾಗಿದೆ.
ಕೆಜಿಎಫ್ ತಾತ ಅಂತಲೇ ಫೇಮಸ್ ಆಗಿದ್ದ ಕೃಷ್ಣಜೀ ರಾವ್ ಇತ್ತೀಚೆಗೆ ವಯೋ ಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದರು. ಇವರು ಹೀರೊ ಆಗಿ ನಟಿಸಿದ ಕೊನೆಯ ಸಿನಿಮಾ 'ನ್ಯಾನೋ ನಾರಾಯಣಪ್ಪ' ಸೆನ್ಸಾರ್ ಆಗಿದ್ದು, ಬಿಡುಗಡೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

'ಕೆಮಿಸ್ಟ್ರಿ ಆಫ್ ಕರಿಯಪ್ಪ', 'ಕ್ರಿಟಿಕಲ್ ಕೀರ್ತನೆಗಳು' ಅಂತ ವಿಭಿನ್ನ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿರುವ ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇವರ ನಿರ್ದೇಶನದ ಮತ್ತೊಂದು ಹೊಸ ಸಿನಿಮಾ 'ನ್ಯಾನೋ ನಾರಾಯಣಪ್ಪ'. ಕೃಷ್ಣಾಜಿ ರಾವ್ ಲೀಡ್ ರೋಲ್ ನಲ್ಲಿ ನಟಿಸಿರುವ ಈ ಸಿನಿಮಾದ ಟ್ರೈಲರ್ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಈ ಸಿನಿಮಾವೀಗ ಥಿಯೇಟರ್ಗೆ ಬರಲು ಸಜ್ಜಾಗಿದೆ.
'ನ್ಯಾನೋ ನಾರಾಯಣಪ್ಪ' ಸಿನಿಮಾ ಬಿಡುಗಡೆಯಾಗೋಕೆ ಸಕಲ ಸಿದ್ಧತೆಗಳನ್ನೂ ಮಾಡಿಕೊಟ್ಟುದೆ. ಆದರೆ, ಇದೇ ಸಂದರ್ಭದಲ್ಲಿ ಇಡೀ ಚಿತ್ರತಂಡಕ್ಕೆ ಬೇಸರ ಆವರಿಸಿಕೊಂಡಿದೆ. ಇಡೀ ಸಿನಿಮಾದ ಜೀವಾಳವೇ ಆಗಿದ್ದ 'ಕೆಜಿಎಫ್ ತಾತಾ' ಖ್ಯಾತಿಯ ಕೃಷ್ಣಾಜಿ ರಾವ್ ಇತ್ತೀಚೆಗೆ ವಯೋ ಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದರು. ಈಗ ಸಿನಿಮಾ ಬಿಡುಗಡೆ ಸಮಯದಲ್ಲಿ ಅವರಿಲ್ಲದ ನೋವು ಇಡೀ ಚಿತ್ರತಂಡವನ್ನು ಆವರಿಸಿಕೊಂಡಿದೆ.

"ಕೆಜಿಎಫ್ ನಂತರ ಮುಖ್ಯ ಪಾತ್ರಧಾರಿಯಾಗಿ ನಟಿಸಿದ ಸಿನಿಮಾ 'ನ್ಯಾನೋ ನಾರಾಯಣಪ್ಪ'. ತುಂಬಾ ಲವಲವಿಕೆಯಿಂದ ಈ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ರು. ಚಿತ್ರದಲ್ಲಿ ಅವರ ನಟನೆ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಪ್ರತಿಬಾರಿ ಕರೆ ಮಾಡಿದಾಗಲು ಸಿನಿಮಾ ಯಾವಾಗ ಬಿಡುಗಡೆಯಾಗುತ್ತೆ ಎಂದು ಕೇಳುತ್ತಿದ್ರು. ಆದರೆ, ಇಂದು ಅವರು ನಮ್ಮೊಂದಿಗಿಲ್ಲ" ಎಂದು ನಿರ್ದೇಶಕ ಕುಮಾರ್ ಬೇಸರ ತೋಡಿಕೊಂಡಿದ್ದಾರೆ.
ಅಂದ್ಹಾಗೆ 'ನ್ಯಾನೋ ನಾರಾಯಣಪ್ಪ' ಸಿನಿಮಾಗೆ ಸೆನ್ಸಾರ್ ಮಂಡಳಿ 'ಯು' ಸರ್ಟಿಫಿಕೇಟ್ ನೀಡಿದೆ. ಹೀಗಾಗಿ ಸಿನಿಮಾ ಬಿಡುಗಡೆಗೆ ಚಿತ್ರತಂಡ ಸಂಪೂರ್ಣ ತಯಾರಿಯನ್ನೂ ನಡೆಸಿದೆ. 'ನ್ಯಾನೋ ನಾರಾಯಣಪ್ಪ' ಸಿನಿಮಾವನ್ನು ಫೆಬ್ರವರಿಯಲ್ಲಿ ರಿಲೀಸ್ ಮಾಡಲಿದೆ. ನಿರ್ದೇಶಕ ಕುಮಾರ್ ಕಾಮಿಡಿಗೆ ಮೊದಲ ಆದ್ಯತೆ ನೀಡುತ್ತಾರೆ. ಈ ಸಿನಿಮಾದಲ್ಲೂ ಕೂಡ ಕಾಮಿಡಿ ಇದ್ದು, ಇದರೊಂದಿಗೆ ಒಂದಿಷ್ಟು ಭಾವನಾತ್ಮಕ ಅಂಶಗಳನ್ನೂ ಸಿನಿಮಾದಲ್ಲಿ ತೋರಿಸಲಾಗಿದೆ. ಈ ಚಿತ್ರದಲ್ಲಿದೆ. ಕಾಕ್ರೋಚ್ ಸುಧಿ, ಗಿರೀಶ್ ಶಿವಣ್ಣ, ಪ್ರಶಾಂತ್ ಸಿದ್ದಿ, ಅಕ್ಷತ ಕುಕ್ಕಿ, ಅಪೂರ್ವ ನಟಿಸಿದ್ದಾರೆ.
ನಿರ್ದೇಶನದ ಜೊತೆಗೆ ನಿರ್ಮಾಣ ಜವಾಬ್ದಾರಿಯನ್ನು ನಿರ್ದೇಶಕ ಕುಮಾರ್ ನಿರ್ವಹಿಸಿದ್ದು, ಶಿವಶಂಕರ ಛಾಯಾಗ್ರಾಹಣ, ಆಕಾಶ್ ಪರ್ವ ಸಂಗೀತ, ದೀಪು ಮತ್ತು ಸಿದ್ದಾರ್ಥ್ ನಾಯಕ ಸಂಕಲನ ಚಿತ್ರಕ್ಕಿದೆ. ಫೆಬ್ರವರಿಯಲ್ಲಿ ಪ್ರೇಕ್ಷಕರನ್ನು ರಂಜಿಸಲು ಸಿನಿಮಾ ಥಿಯೇಟರ್ಗೆ ಲಗ್ಗೆ ಇಡಲಿದೆ.


Click it and Unblock the Notifications











