Operation Sindoor: 'ಆಪರೇಷನ್ ಸಿಂಧೂರ' ಒಂದು ಪ್ರತಿಜ್ಞೆ-ಕಿಚ್ಚ, ರಕ್ತ ಕುದಿಯುತ್ತೆ ಎಂದ ಶಿವಣ್ಣ
ಪಹಲ್ಗಾಮ್ನಲ್ಲಿ 26 ಅಮಾಯಕ ಪ್ರವಾಸಿಗರ ಮೇಲೆ ನಡೆಸಿದ ಹೇಯ ಕೃತ್ಯಕ್ಕೆ ಭಾರತ ತಕ್ಕ ಉತ್ತರ ಕೊಟ್ಟಿದೆ. ಭಯೋತ್ಪಾದಕರ ತಾಣಗಳನ್ನು ದ್ವಂಸ ಮಾಡಿದೆ. ಉಗ್ರರ ಕೃತ್ಯದ ಬಳಿಕ ತಕ್ಕ ಉತ್ತರ ನೀಡುವುದಾಗಿ ಭಾರತ ಪ್ರತಿಕ್ರಿಯೆ ನೀಡಿತ್ತು. ಅದರಂತೆ ಪಾಕಿಸ್ತಾನಕ್ಕೆ 'ಆಪರೇಷನ್ ಸಿಂಧೂರ್' ಮೂಲಕ ಭಾರತ ಖಡಕ್ ತಿರುಗೇಟು ಕೊಟ್ಟಿದೆ. ಉಗ್ರರ ತಾಣಗಳನ್ನು ಹುಡುಕಿ ನಾಶ ಮಾಡಿದೆ.
ಭಾರತದ ನೌಕಾ ಪಡೆ, ವಾಯುಪಡೆ ಹಾಗೂ ಸೇನೆ ಮೂರೂ ಜಂಟಿಯಾಗಿ 'ಆಪರೇಷನ್ ಸಿಂಧೂರ್' ಮೂಲಕ ಪಾಕಿಸ್ತಾನಕ್ಕೆ ಶಾಕ್ ಕೊಟ್ಟಿದೆ. ಭಯೋತ್ಪಾದಕರನ್ನು ಪೋಷಿಸುತ್ತಿದ್ದ ಪಾಕ್ಗೆ ಮತ್ತೆ ಬಿಸಿ ಮುಟ್ಟಿದೆ. ಉಗ್ರರಿಗೆ ಆಶ್ರಯ ಕೊಟ್ಟಿದ್ದ ಪಾಕಿಸ್ತಾನದ ಒಟ್ಟು 9 ಸ್ಥಳಗಳನ್ನು ಗುರುತಿಸಿ ನೆಲಸಮ ಮಾಡಿದೆ. ಈ ಕಾರ್ಯಾಚರಣೆಯಲ್ಲಿ ಒಟ್ಟು 70 ರಿಂದ 80 ಮಂದಿ ಉಗ್ರರ ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಭಾರತದ ಈ ದಿಟ್ಟ ಕಾರ್ಯಾಚರಣೆ ಬಗ್ಗೆ ಸ್ಯಾಂಡಲ್ವುಡ್ ಸೂಪರ್ಸ್ಟಾರ್ ಕಿಚ್ಚ ಸುದೀಪ್ ಸೇರಿದಂತೆ ಹಲವು ತಾರೆಯರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಭಾರತದ ದಿಟ್ಟತನದ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ. ಭಾರತದ ನಡೆಯನ್ನು, ವಾಯುಪಡೆ, ನೌಕಾಪಡೆ ಹಾಗೂ ಸೇನೆಯ ದಿಟ್ಟತನವನ್ನು ಪ್ರಶಂಸಿಸುತ್ತಿದ್ದಾರೆ. ಹಾಗಿದ್ದರೆ, ಕಿಚ್ಚ ಸುದೀಪ್ ಸೇರಿದಂತೆ ಯಾರೆಲ್ಲ ಏನು ಹೇಳಿದ್ದಾರೆ ನೋಡುವುದಾರೇ.
ಆಪರೇಷನ್ ಸಿಂಧೂರ ಒಂದು ಪ್ರತಿಜ್ಞೆ- ಕಿಚ್ಚ ಸುದೀಪ್
"ನಾನು ಒಬ್ಬ ಭಾರತೀಯನಾಗಿ.. ಈ ಪವಿತ್ರ ಮಣ್ಣಿನ ಒಬ್ಬ ಮಗನಾಗಿ, ಪಹಲ್ಗಾಮ್ನಲ್ಲಿ ನಡೆದ ಘಟನೆ ನನಗೆ ನೋವು ಕೊಟ್ಟಿತ್ತು. ಇಂದು ನನಗೆ ಆ ಕೃತ್ಯಕ್ಕೆ ನ್ಯಾಯ ಸಿಕ್ಕಿದ ಅನುಭವ ಆಗಿದೆ."

"ಆಪರೇಷನ್ ಸಿಂಧೂರ್: ಇದು ಕೇವಲ ಒಂದು ಮಿಷನ್ ಅಲ್ಲ. ಆದರೆ, ಇದೊಂದು ಪವಿತ್ರ ಪ್ರತಿಜ್ಞೆ. ಕೆಲವು ದಿನಗಳಿಂದ ಭಾರತದ ಸಿಂಧೂರವು ಕಲೆಗಳಿಂದ ಕೂಡಿತ್ತು. ನಮ್ಮ ಯೋಧರು ಸಿಂಧೂರದ ಗೌರವವನ್ನು ಬೆಂಕಿ ಮತ್ತು ನಿಖರತೆಯಿಂದ ಮತ್ತೆ ಮರುಸ್ಥಾಪಿಸಿದ್ದಾರೆ. ನಮ್ಮ ಯೋಧರಿಗೆ ನನ್ನದೊಂದು ಸಲಾಂ. ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಕ್ಷಣಾ ಮುಖಂಡರು ಈ ವಿಚಾರವಾಗಿ ಗಟ್ಟಿಯಾಗಿ, ಧೃಡವಾಗಿ, ಧೈರ್ಯವಾಗಿ ನಿಂತಿದ್ದಕ್ಕೆ ಧನ್ಯವಾದಗಳು. ಹಾಗೇ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರ ತೀಕ್ಷ್ಣವಾದ, ಗೌರವಯುತವಾದ ಮಾಹಿತಿಗೆ ಸಲ್ಯೂಟ್ ಮಾಡುತ್ತೇನೆ. ಭಾರತ ಮರೆಯುವುದೂ ಇಲ್ಲ. ಭಾರತ ಕ್ಷಮಿಸುವುದೂ ಇಲ್ಲ." ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.
"ಎಂತಹವರ ರಕ್ತನೂ ಕುದಿಯುತ್ತೆ"-ಶಿವರಾಜ್ಕುಮಾರ್
ಆಪರೇಷನ್ ಸಿಂಧೂರ ಬಗ್ಗೆ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಕೂಡ ಪ್ರತಿಕ್ರಿಯಿಸಿದ್ದಾರೆ. ಅವರದ್ದೇ ಗೀತಾ ಪಿಕ್ಚರ್ಸ್ ಸಂಸ್ಥೆ ನಿರ್ಮಿಸುತ್ತಿರುವ 'ಪಬ್ಬಾರ್' ಸಿನಿಮಾದ ವೇಳೆ ಕೇಂದ್ರ ಸರ್ಕಾರದ ನಡೆಯನ್ನು ಮೆಚ್ಚಿಕೊಂಡಿದ್ದಾರೆ. "ಆಪರೇಷನ್ ಸಿಂಧೂರ ಮೂಲಕ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮ ಸರಿಯಾಗಿದೆ. ಪೆಹಲ್ಗಾಮ್ನಲ್ಲಿ ಕೃತ್ಯವನ್ನು ನೋಡಿದ್ಮೇಲೆ ಎಂತಹವರ ರಕ್ತನೂ ಕುದಿಯುತ್ತೆ. ಇಂತಹ ಘಟನೆ ಯಾರ ಜೀವನದಲ್ಲಿ ನಡೆದರೂ ಅದು ಅನ್ಯಾಯವೇ. ಮನುಷ್ಯನ ಜೀವ ತೆಗೆಯೋದು ಅಷ್ಟು ಸುಲಭ ಅಲ್ಲ. ಜೀವ ಎನ್ನುವುದೇ ಒಂದು ಗಿಫ್ಟ್. ಅದನ್ನು ಯಾರೋ ಹೊಡೆದು ಹಾಕಿದರೇ? ಕೇಂದ್ರ ಸರ್ಕಾರ ಏನೇ ನಿರ್ಧಾರ ಕೈಗೊಂಡರೂ ಅದು ಸರಿಯಾಗಿಯೇ ಇರುತ್ತೆ ಎನ್ನುವ ನಂಬಿಕೆಯಿದೆ" ಎಂದು ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.


Click it and Unblock the Notifications











