ಕಿಚ್ಚನ ಆರೋಗ್ಯಕ್ಕಾಗಿ ಹರಕೆ: ಅಭಿಮಾನಿಗಳಿಂದ ಉರುಳು ಸೇವೆ
ಯಾರದ್ದೇ ಅಭಿಮಾನಿಗಳಿರಲಿ, ತಮ್ಮ ನೆಚ್ಚಿನ ನಟನ ಸುಖವನ್ನೇ ಬಯಸುತ್ತಾರೆ. ಬಾಕ್ಸಾಫೀಸ್ನಲ್ಲಿ ಸಿನಿಮಾ ಸೂಪರ್ ಹಿಟ್ ಆಗಬೇಕು. ಶತ ದಿನೋತ್ಸವವನ್ನು ಆಚರಿಸಬೇಕು ಅಂತ ಎದುರು ನೋಡುತ್ತಾರೆ. ತಾವು ಇಷ್ಟಪಡುವ ನಟನಿಗೆ ಸದಾ ಯಶಸ್ಸು ಸಿಗಬೇಕೆಂದು ಬಯಸುತ್ತಾರೆ. ಹೀಗಾಗಿ ಕೆಲವೊಮ್ಮೆ ದೇವರ ಮೊರೆ ಹೋಗುವುದೂ ಉಂಟು. ಇಂತಹ ಸಾಕಷ್ಟು ಸನ್ನಿವೇಶಗಳನ್ನು ಕನ್ನಡ ಚಿತ್ರರಂಗದಲ್ಲಿ ನಡೆದಿವೆ.
ಸೂಪರ್ಸ್ಟಾರ್ಗಳಿಗೆ ಸಣ್ಣ ಜ್ವರ ಬಂತು ಅಂದರೂ ಅಷ್ಟೇ. ವಿಶ್ವದ ಮೂಲೆ ಮೂಲೆಯಲ್ಲಿರುವ ಅಭಿಮಾನಿಗಳು ಹರಕೆ ಹೊತ್ತುಕೊಳ್ಳುತ್ತಾರೆ. ತಾವೇ ಸ್ವಯಂ ಪ್ರೇರಿತರಾಗಿ ದೇವಸ್ಥಾನಗಳಿಗೆ ಹೋಗಿ ಹರಕೆಯನ್ನು ತೀರಿಸುತ್ತಾರೆ. ಈಗ ಕಿಚ್ಚ ಅಭಿಮಾನಿಗಳು ಕೂಡ ದೂರದ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿ ಹೊತ್ತುಕೊಂಡಿದ್ದ ಹರಕೆ ತೀರಿಸಿ ಬಂದಿದ್ದಾರೆ. ಹಾಗಿದ್ದರೆ ಕಿಚ್ಚನ ಅಭಿಮಾನಿಗಳು ಹರಕೆ ತೀರಿಸಲು ಉರುಳು ಸೇವೆ ಮಾಡಿದ್ದು ಏಕೆ? ಮಾಹಿತಿಗಾಗಿ ಮುಂದೆ ಓದಿ.
ಮಲೆ ಮಹಾದೇಶ್ವರ ಬೆಟ್ಟದಲ್ಲಿ ಕಿಚ್ಚನ ಅಭಿಮಾನಿಗಳ ಉರುಳು ಸೇವೆ
ಕಿಚ್ಚ ಸುದೀಪ್ ಅಭಿಮಾನಿಗಳು ಏಕಾಏಕಿಯಾಗಿ ಮಲೆ ಮಹದೇಶ್ವರ ಬೆಟ್ಟದ ಕಡೆ ಪಯಣ ಬೆಳೆಸಿದ್ದರು. ಇಷ್ಟು ದಿನ ಸೈಲೆಂಟಾಗಿದ್ದ ಅಭಿಮಾನಿಗಳು ದಿಢೀರನೇ ಬೆಟ್ಟ ಏರಿದ್ದೇಕೆ? ಮಹದೇಶ್ವರನ ದರ್ಶನ ಪಡೆದಿದ್ದು ಏಕೆ? ಅನ್ನುವ ಪ್ರಶ್ನೆ ಎದ್ದಿತ್ತು. ಅಲ್ಲದೆ ಬೆಟ್ಟದ ಮೇಲೆ ಸುದೀಪ್ ಫ್ಯಾನ್ಸ್ ಮಹದೇಶ್ವರನ ಮುಂದೆ ಉರುಳು ಸೇವೆ ಬೇರೆ ಮಾಡಿದ್ದರು. ಇದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಸುದೀಪ್ ಅನಾರೋಗ್ಯ ವೇಳೆ ಮಾಡಿದ ಹರಕೆ ತೀರಿಸಿದ ಫ್ಯಾನ್ಸ್
ಕೊರೊನಾ ಎರಡನೇ ಅಲೆ ಎದ್ದಾಗ, ಕಿಚ್ಚ ಸುದೀಪ್ ಅನಾರೋಗ್ಯಕ್ಕೀಡಾಗಿದ್ದರು. ಕೊರೊನಾ ಸೋಂಕಿ ಕಿಚ್ಚನಿಗೂ ತಲುಗಿದ್ದರಿಂದ ಅಭಿಮಾನಿಗಳು ಆತಂಕದಲ್ಲಿದ್ದರು. ವೈದ್ಯರ ಆರೈಕೆ ಹಾಗೂ ಅಭಿಮಾನಿಗಳ ಹಾರೈಕೆಯಿಂದ ಕಿಚ್ಚ ಸುದೀಪ್ ಬಹುಬೇಗನೇ ಗುಣ ಮುಖರಾಗಿದ್ದರು. ಕೊರೊನಾ ದಿಂದ ಚೇತರಿಕೊಂಡು ಮತ್ತೆ ಸಿನಿಮಾದ ಶೂಟಿಂಗ್ಗೆ ಮರಳಿದ್ದರು. ಆ ವೇಳೆ ಕಿಚ್ಚನ ಕೆಲವು ಅಭಿಮಾನಿಗಳು ಮಲೆ ಮಹಾದೇಶ್ವರ ಬೆಟ್ಟಕ್ಕೆ ಬಂದು ಉರುಳು ಸೇವೆ ಮಾಡುತ್ತೇವೆಂದು ಹರಕೆ ಹೊತ್ತುಕೊಂಡಿದ್ದರು. ಅದೇ ಹರಕೆಯನ್ನು ಇಂದು ( ನವೆಂಬರ್ 9) ತೀರಿಸಿಬಂದಿದ್ದಾರೆ.
ಅಭಿಮಾನಿಗಳಿಗೆ ಕೈ ಮುಗಿದ ಕಿಚ್ಚ ಸುದೀಪ್
ಟಿ.ನರಸೀಪುರದ ಕಿಚ್ಚ ಸುದೀಪ್ ಅಭಿಮಾನಿಗಳು ಉರುಳು ಸೇವೆ ಮಾಡಿ ಹರಕೆ ತೀರಿಸಿದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಕಿಚ್ಚ ಸುದೀಪ್ಗೂ ಟ್ಯಾಗ್ ಮಾಡಿದ್ದರು. ಈ ವಿಡಿಯೋ ನೋಡಿದ ಕೂಡಲೇ ಕಿಚ್ಚ ಅಭಿಮಾನಿಗಳ ಕಾಳಜಿಗೆ ಕೈ ಮುಗಿಯುವ ಚಿಹ್ನೆ ತೋರಿಸಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅಭಿಮಾನಿಗಳ ತೋರುವ ಪ್ರೀತಿಗೆ ಸ್ವತಃ ಕಿಚ್ಚ ಸುದೀಪ್ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡುತ್ತಾರೆ.
ವಿಕ್ರಾಂತ್ ರೋಣಗಾಗಿ ಎದುರು ನೋಡುತ್ತಿರುವ ಫ್ಯಾನ್ಸ್
ಕಿಚ್ಚ ಸುದೀಪ್ ನಟಿಸಿದ ಕೋಟಿಗೊಬ್ಬ 3 ಸಿನಿಮಾ ಕೆಲವು ದಿನಗಳ ಹಿಂದಷ್ಟೇ ತೆರೆಕಂಡು, ಯಶಸ್ವಿ ಪ್ರದರ್ಶನ ಕಂಡಿವೆ. ದಸರಾ ಹಬ್ಬಕ್ಕೆ ತೆರೆಕಂಡಿದ್ದ ಸಿನಿಮಾಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಬಾಕ್ಸಾಫೀಸ್ನಲ್ಲೂ 40 ಕೋಟಿಗೂ ಅಧಿಕ ಹಣ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಈಗ ಅಭಿಮಾನಿಗಳು ಬಹು ನಿರೀಕ್ಷೆಯ ಸಿನಿಮಾ ವಿಕ್ರಾಂತ್ ರೋಣಗಾಗಿ ಕಾದು ಕೂತಿದ್ದಾರೆ. ಅನೂಪ್ ಭಂಡಾರಿ ನಿರ್ದೇಶಿಸಿರುವ ವಿಕ್ರಾಂತ್ ರೋಣ ಈಗಾಗಲೇ ಶೂಟಿಂಗ್ ಮುಗಿಸಿರುವ ತಂಡ ಪೋಸ್ಟ್ ಪ್ರೊಡಕ್ಷನ್ನಲ್ಲಿ ಬ್ಯುಸಿಯಾಗಿದೆ. ಕನ್ನಡ ಸೇರಿದಂತೆ 5ಕ್ಕೂ ಹೆಚ್ಚು ಭಾಷೆಗಳಲ್ಲಿ ರಿಲೀಸ್ ಆಗಲಿರುವ ಕಿಚ್ಚನ ಪ್ಯಾನ್ ಇಂಡಿಯಾ ಸಿನಿಮಾ ಈಗಾಗಲೇ ಭರ್ಜರಿ ಪ್ರಚಾರವನ್ನು ಗಿಟ್ಟಿಸಿಕೊಂಡಿದ್ದು, ಯಾವಾಗ ಬಿಡುಗಡೆ ಮಾಡುತ್ತಾರೋ ಅಂತ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.


Click it and Unblock the Notifications











