"2018ನಿಂದ ಸಿನಿಮಾನೇ ಮಾಡದೆ,ಈಗೊಂದು ಹಿಟ್ ಕೊಟ್ಟು ಕೂತಿದ್ದಾರೆ": ಕಿಚ್ಚ ಹೇಳಿದ ಆ ಕಲಾವಿದ ಯಾರು?
ಕಿಚ್ಚ ಸುದೀಪ್ ನೇರೆ ನುಡಿಯ ನಟ. ಸರಿ ಅನಿಸಿದ್ದನ್ನು ಪ್ರಬುದ್ಧವಾಗಿ ಯಾರಿಗೆ ಅರ್ಥ ಆಗಬೇಕೋ ಅವರಿಗೆ ಹೇಳುವ ಸೂಪರ್ಸ್ಟಾರ್. 'ವಿಕ್ರಾಂತ್ ರೋಣ' ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿಯೂ ಹೊರಹೊಮ್ಮಿದ್ದಾರೆ. ಹೀಗಾಗಿ ಈಗ ಭಾರತೀಯ ಚಿತ್ರರಂಗವನ್ನು ಹೋಲಿಕೆ ಮಾಡಿ ಮಾತಾಡಬೇಕಾಗುತ್ತೆ.
ಇತ್ತೀಚೆಗೆ ಕೆಸಿಸಿ ಕ್ರಿಕೆಟ್ ಪಂದ್ಯಾವಳಿ ಬಗ್ಗೆ ಮಾತಾಡುವ ವೇಳೆ ಪತ್ರಕರ್ತರು ಸಿನಿಮಾ ತಡವಾಗುತ್ತಿರುವ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ವೇಳೆ ಸುದೀಪ್ ಬಾಲಿವುಡ್ನ ಸೂಪರ್ಸ್ಟಾರ್ ನಟನ ಸೋಲು ಹಾಗೂ ಯಶಸ್ಸನ್ನು ಮುಂದಿಟ್ಟುಕೊಂಡು ಪರೋಕ್ಷವಾಗಿ ಮಾತಾಡಿದ್ದಾರೆ.
ಅಸಲಿಗೆ ಕಿಚ್ಚ ಸುದೀಪ್ ಸೂಪರ್ಸ್ಟಾರ್ ಹೆಸರನ್ನು ನೇರವಾಗಿ ತೆಗೆದುಕೊಳ್ಳದೆ ಎಲ್ಲರಿಗೂ ಅರ್ಥ ಆಗುವಂತಹ ಉದಾಹರಣೆ ಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಮೇಲ್ನೋಟಕ್ಕೆ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಬಗ್ಗೆ ಮಾತಾಡಿದ್ದಾರೆ ಅನ್ನೋದು ಅವರು ಆಡಿದ ಮಾತುಗಳಲ್ಲಿ ಅರ್ಥ ಮಾಡಿಕೊಳ್ಳಬಹುದು. ಸುದೀಪ್ ನುಡಿದ ಮಾತುಗಳ ಝಲಕ್ ಇಲ್ಲಿದೆ.

ಸಿನಿಮಾ ಯಾಕೆ ತಡವಾಗುತ್ತಿದೆ?
"ನಿರೀಕ್ಷೆಯಲ್ಲಿ ಇದ್ದಾರೆ ಅನ್ನೋದು ಒಳ್ಳೆಯದು. ಆ ಅರ್ಜೆಂಟ್ನಲ್ಲಿ ಕೆಟ್ಟ ಸಿನಿಮಾ ಕೊಟ್ಟು ಬಿಟ್ಟೆ ಅಂದ್ಕೊಳ್ಳಿ, ಎಲ್ಲೆಲ್ಲಿಂದ ಉಗೀತಾರೆ ಗೊತ್ತಾ ನಮಗೆ. ನನಗೆ ಸಿನಿಮಾ ಅನೌನ್ಸ್ಮೆಂಟ್ನಿಂದ ಇಂಡಸ್ಟ್ರಿ ಒಳಗೆ ಸ್ನೇಹಿತರಿದ್ದಾರೆ. ನಾವಿಲ್ಲಿ ಕಥೆ ಬರೆಯುತ್ತಿದ್ದರೆ, ಅವರು ಅಲ್ಲಿ ನಮ್ಮ ಬಗ್ಗೆ ಕಥೆ ಬರೆಯುತ್ತಿರುತ್ತಾರೆ. ಬೆಳಗ್ಗೆ ಆದರೆ, ಎದ್ದೇಳುವುದೇ ನಾವ್ಯಾಕಾದರೂ ಹುಟ್ಟಿದ್ದೇವೋ ಅಂತ ಫೀಲಿಂಗ್ ಬರೋದಕ್ಕೆ ಅವರು ಎದ್ದೇಳುವುದು. ನಮ್ಮ ಲೈಫ್ನಲ್ಲಿ ಎರಡೆರಡು ಪ್ಯಾರಲಲ್ ಟ್ರ್ಯಾಕ್ ಇದೆ. ಒಂದೊಳ್ಳೆ ಸಿನಿಮಾ ಮಾಡಬೇಕು ಅಂದ್ರೆ, ಈಗ ಟೈಮ್ ಬೇಕಾಗುತ್ತೆ." ಎಂದು ಸುದೀಪ್ ತಮ್ಮ ಮುಂದಿನ ಸಿನಿಮಾ ಯಾಕೆ ತಡವಾಗುತ್ತಿದೆ ಅನ್ನೋ ಬಗ್ಗೆ ಹೇಳಿದ್ದಾರೆ.

ಶಾರುಖ್ ಖಾನ್ ಹೊಗಳಿದ್ರಾ, ತೆಗಳಿದ್ರಾ?
"ಒಬ್ಬರು ಕಲಾವಿದರು, ಒಂದು ಆರೇಳು ವರ್ಷ ಆವರೇಜ್, ಫ್ಲಾಪ್ ಕೊಟ್ಕೊಂಡು 2018ನಿಂದ ಸಿನಿಮಾನೇ ಮಾಡದೆ, ಈಗೊಂದು ಸಿನಿಮಾ ಮಾಡಿ ಮುಖದ ಮೇಲೆ ತಲೆಮೇಲೊಂದು ಕೊಟ್ಟು ಕೂತಿದ್ದಾರೆ ಇಂಡಿಯನ್ ಇಂಡಸ್ಟ್ರಿಗೆ. ಯಾವತರ ಸಿನಿಮಾ ಹೋಗ್ತಿದೆ. ಇಲ್ಲೇನು ಮುಖ್ಯ ಅಂದ್ರೆ, ಒಂದು ಸಿನಿಮಾ ಮಾಡಬೇಕಾದರೆ ಇವತ್ತೊಂದು ಜವಾಬ್ದಾರಿ ಇರುತ್ತೆ. ಚೆನ್ನಾಗಿ ಮಾಡೋಣ. ಹಠದಲ್ಲಿ ಮಾಡೋಣ." ಎಂದು ಶಾರುಖ್ ಖಾನ್ ಸಿನಿಮಾ ಸಕ್ಸಸ್ ಹಾಗೂ ಸೋಲುಗಳನ್ನು ಇಟ್ಕೊಂಡು ತಮ್ಮ ಸಿನಿಮಾ ತಡವಾಗುತ್ತಿರೋದ್ಯಾಕೆ? ಅನ್ನೋದನ್ನು ವಿವರಿಸಿದ್ದಾರೆ.

ಪ್ರತಿದಿನ ಸಿನಿಮಾಗೆ ಸಮಯ ಕೊಡುತ್ತಿದ್ದೇವೆ
" ಸಿನಿಮಾ ಪ್ರಿಪರೇಷನ್ ಅಂತೂ ಸತ್ಯವಾಗಲೂ ನಡೆಯುತ್ತಿದೆ. ಮೊದಲು ಕೆಸಿಸಿ ಮುಗೀಲಿ. ಪ್ರತಿದಿನ ಅದಕ್ಕೆ ಸಮಯ ಕೊಡುತ್ತಲೇ ಇದ್ದೇವೆ. ಕೊಡ್ತಾ ಇಲ್ಲಾ ಅಂತಲ್ಲ. ಈಗ ಇದಕ್ಕೆ ಕೈ ಹಾಕಿದ್ದೀವಿ. ಕನ್ನಡ ಚಲನಚಿತ್ರ ಕಪ್ನಲ್ಲಿ ಕನ್ನಡ ಅನ್ನೋದೊಂದು ಬರುತ್ತೆ. ಕನ್ನಡ ಅಂತ ಬಂದಿರೋ ಕಡೆ ಗೌರವ ಕೀರ್ತಿ ಎಲ್ಲನೂ ಇದೆ. ಇದು ನಮ್ಮೊಬ್ಬರಿಗೆ ಮಾತ್ರ ಅಲ್ಲ. ಚಿತ್ರರಂಗಕ್ಕೂ ಇದೆ. ಇಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿಲ್ಲ ಅಂದ್ರೆ, ನಾಳೆ ಪ್ರಶ್ನೆಗಳು ಉದ್ಬವ ಆಗುತ್ತವೆ. ಅದಕ್ಕೆ ಉತ್ತರ ಕೊಡುವುದಕ್ಕೆ ಆಗುವುದಿಲ್ಲ." ಎಂದಿದ್ದಾರೆ ಕಿಚ್ಚ ಸುದೀಪ್.

ಸುದೀಪ್ ಹೊಸ ಸಿನಿಮಾ ಯಾವುದು?
'ವಿಕ್ರಾಂತ್ ರೋಣ' ಬಳಿಕ ಕಿಚ್ಚ ಸುದೀಪ್ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿಲ್ಲ. ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾವನ್ನೇ ಮಾಡಬೇಕಿರೋದ್ರಿಂದ ಒಳ್ಳೆ ಸಿನಿಮಾ ಮಾಡುವ ಪ್ರಯತ್ನದಲ್ಲಿದ್ದಾರೆ. ಮೂಲಗಳ ಪ್ರಕಾರ, ತಮಿಳು ನಿರ್ಮಾಣ ಸಂಸ್ಥೆ ಜೊತೆ ಸುದೀಪ್ ಸಿನಿಮಾ ಮಾಡುತ್ತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಆದರೆ ಇನ್ನೂ ಸುದೀಪ್ ಸಿನಿಮಾ ಅನೌನ್ಸ್ ಮಾಡುವ ಆಲೋಚನೆಯಲ್ಲಿಲ್ಲ.


Click it and Unblock the Notifications











