ಕಿಚ್ಚ ಸುದೀಪ್ ಉಪಮುಖ್ಯಮಂತ್ರಿ ಡಿಕೆಶಿ ಭೇಟಿ ಮಾಡಿದ್ದು ಈ ಕಾರಣಕ್ಕೆ; ಏನದು?
ಸ್ಯಾಂಡಲ್ವುಡ್ ಸೂಪರ್ಸ್ಟಾರ್ ಕಿಚ್ಚ ಸುದೀಪ್ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಅವರ 'ಮ್ಯಾಕ್ಸ್' ಸಿನಿಮಾ ಬಾಕ್ಸಾಫೀಸ್ನಲ್ಲಿ ದಾಖಲೆ ಕಲೆಕ್ಷನ್ ಮಾಡಿತ್ತು. ಎರಡೂವರೆ ವರ್ಷದ ಬಳಿಕ ತೆರೆಕಂಡ ಸಿನಿಮಾ ಗೆದ್ದಿರುವ ಖುಷಿಯಲ್ಲಿ ಕಿಚ್ಚ ಸುದೀಪ್ ಇದ್ದಾರೆ. ಇದರ ಜೊತೆಗೆ ಸುದೀಪ್ ಬಿಗ್ ಬಾಸ್ ಅನ್ನೂ ಯಶಸ್ವಿಯಾಗಿ ಮುಗಿಸಿದ್ದಾರೆ. 'ಮ್ಯಾಕ್ಸ್' ಹಾಗೂ 'ಬಿಗ್ ಬಾಸ್' ಎರಡೂ ಸೂಪರ್ ಸಕ್ಸಸ್ ಆದ ಅಲೆಯಲ್ಲಿ ತೇಲಾಡಿತ್ತಿದ್ದಾರೆ.
ಇದೇ ಖುಷಿಯಲ್ಲಿ ಸಿಸಿಎಲ್ ಸೀಸನ್ 11ರಲ್ಲೂ ಭಾಗಿಯಾಗುತ್ತಿದ್ದಾರೆ. ಫೆಬ್ರವರಿ 8ರಿಂದ ಆರಂಭ ಆಗುತ್ತಿರುವ ಸಿಸಿಎಲ್ 2025 ಟೂರ್ನಿಯಲ್ಲಿ ಕಿಚ್ಚ ಸುದೀಪ್ ಕರ್ನಾಟಕ ಬುಲ್ಡೋಜರ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅದಕ್ಕೆ ಬೇಕಿರೋ ತಯಾರಿ ಕಳೆದ ಎರಡು ವಾರಗಳಿಂದ ನಡೆಯುತ್ತಿದೆ. ಈ ಬಾರಿ ಕಪ್ ಗೆಲ್ಲಲೇ ಬೇಕು ಅಂತ ಪಣತೊಟ್ಟು ನಿಂತಿದ್ದಾರೆ. ಇದೇ ಬೆನ್ನಲ್ಲೇ ಸುದೀಪ್ ದಿಢೀರನೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮನೆಗೆ ಕಿಚ್ಚ ಸುದೀಪ್ ಬಂದು ಹೋಗುತ್ತಿದ್ದಂತೆ ಕುತೂಹಲ ಕೆರಳಿಸಿತ್ತು. ಮತ್ತೆ ಸುದೀಪ್ ಏನಾದರೂ ರಾಜಕೀಯದ ಕಡೆಗೆ ಮುಖ ಮಾಡುತ್ತಿದ್ದಾರಾ? ಅನ್ನೋ ಅನುಮಾನಗಳು ಮೂಡಿದ್ದವು. ಅಷ್ಟಕ್ಕೂ ಸುದೀಪ್ ತಮ್ಮನ್ನು ಭೇಟಿ ಮಾಡಿದ್ದು ಯಾಕೆ ಅನ್ನೋದನ್ನು ಸ್ವತ: ಡಿಕೆ ಶಿವಕುಮಾರ್ ಅವರೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅದೇನು ಅಂತ ನೋಡುವುದಾರೆ.
ಸುದೀಪ್ ತಮ್ಮ ಮನೆಗೆ ಬಂದು ಹೋದ ಮೇಲೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ರಾಜಕೀಯ ಉದ್ದೇಶದಿಂದ ಭೇಟಿ ಮಾಡಿಲ್ಲ. ವೈಯಕ್ತಿಕ ಕಾರಣಗಳಿಂದ ಅವರನ್ನು ಭೇಟಿ ಮಾಡಿದ್ದಾಗಿ ಹೇಳಿದ್ದಾರೆ. "ಸುದೀಪ್ ಅವರದ್ದು ಏನೋ ವೈಯಕ್ತಿಕ ಸಮಸ್ಯೆಗಳು ಇರುತ್ತದೆ. ಇದೊಂದು ಸೌಜನ್ಯ ಭೇಟಿ. ಶೂಟಿಂಗ್ಗೆ ಸಂಬಂಧಿಸಿದಂತೆ ಯಾವುದೋ ಜಾಗದ ಸಲುವಾಗಿ ಬಂದಿದ್ದಾರಷ್ಟೇ. ಬೇರೆ ಏನೂ ಇಲ್ಲ. ರಾಜಕೀಯ ಅಂತಹದ್ದೇನು ಇಲ್ಲ. ನಾನೇನು ಪಾಲಿಟಿಕ್ಸ್ ಮಾಡಲಿ. ಒಬ್ಬ ಸ್ನೇಹಿತನಾಗಿ ಬಂದಿದ್ದರು. ಸಮಸ್ಯೆಯಿತ್ತು. ಅದನ್ನು ಹೇಳುತ್ತೇನೆ ಅಂತ ಹೇಳಿದ್ದೇನೆ ಅಷ್ಟೇ." ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ರಾಜಕೀಯ ಮುಖಂಡರ ಜೊತೆ ಕಿಚ್ಚ ಸುದೀಪ್ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಆಗಾಗ ರಾಜಕೀಯ ಮುಖಂಡರನ್ನು ಭೇಟಿನೂ ಮಾಡುತ್ತಿರುತ್ತಾರೆ. ಕೆಲವು ದಿನಗಳ ಹಿಂದಷ್ಟೇ ಕಿಚ್ಚ ಸುದೀಪ್ ರಾಜಕೀಯಕ್ಕೆ ಪ್ರವೇಶ ಮಾಡುತ್ತಾರೆ ಅನ್ನೋ ಸುದ್ದಿನೂ ಹಬ್ಬಿತ್ತು. ಈ ಕಾರಣಕ್ಕೆ ಏನಾದರೂ ಭೇಟಿಯಾಗಿದ್ದಾರಾ? ಅಂತ ಕೆಲವರು ಅನುಮಾನವನ್ನು ವ್ಯಕ್ತಪಡಿಸಿದ್ದರು. ಆದರೆ, ಸುದ್ದಿ ಹಬ್ಬಿದ್ದಾಗಲೇ ರಾಜಕೀಯ ಪ್ರವೇಶ ಮಾಡುವುದಿಲ್ಲ ಎಂದು ಕಿಚ್ಚ ಸುದೀಪ್ ಹೇಳಿಕೆ ಕೊಟ್ಟಿದ್ದರು.
ಇನ್ನು ಕಿಚ್ಚ ಸುದೀಪ್ ಜೊತೆ ನಿರ್ದೇಶಕ ಅನುಪ್ ಭಂಡಾರಿ ಹಾಗೂ ಕಲಾ ನಿರ್ದೇಶಕ ಶಿವಕುಮಾರ್ ಕೂಡ ಡಿಕೆ ಶಿವಕುಮಾರ್ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಇದು ಸಿನಿಮಾಗೆ ಸಂಬಂಧಿಸಿದ ವಿಚಾರ ಅನ್ನೋದು ಕನ್ಫರ್ಮ್. ಕಿಚ್ಚ ಸುದೀಪ್ ಇನ್ನೇನು ಕೆಲವೇ ದಿನಗಳಲ್ಲಿ 'ಬಿಲ್ಲ ರಂಗ ಭಾಷಾ' ಸಿನಿಮಾವನ್ನು ಆರಂಭ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಅನುಪ್ ಭಂಡಾರಿ ನಿರ್ದೇಶನ ಮಾಡುತ್ತಿದ್ದಾರೆ. ಇದೇ ಸಿನಿಮಾಗಾಗಿ ಸೆಟ್ಟು ಹಾಕುವ ವಿಚಾರವಾಗಿ ಕೆಲವು ಅನುಮತಿಗಳನ್ನು ಪಡೆದುಕೊಳ್ಳುವುದಕ್ಕೆ ಡಿಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿದ್ದರು ಅನ್ನೋದು ಸದ್ಯ ಹರಿದಾಡುತ್ತಿರುವ ಸುದ್ದಿ.
ಸದ್ಯ ಕಿಚ್ಚ ಸುದೀಪ್ ಸಿಸಿಎಲ್ 2025 ಕಡೆಗೂ ಗಮನ ಹರಿಸುತ್ತಿದ್ದಾರೆ. ಕರ್ನಾಟಕ ಬುಲ್ಡೋಜರ್ ತಂಡದ ನಾಯಕನಾಗಿ ತಂಡವನ್ನು ಮುನ್ನೆಡೆಸಲಿದ್ದಾರೆ. ಇದೇ ಫೆಬ್ರವರಿ 8ರಿಂದ ಪಂದ್ಯ ಆರಂಭ ಆಗಲಿದ್ದು, ತೆಲುಗು ವಾರಿಯರ್ ಜೊತೆಯಲ್ಲಿ ಮೊದಲ ಪಂದ್ಯವನ್ನು ಕಿಚ್ಚ ಸುದೀಪ್ ತಂಡ ಆಡಲಿದೆ.


Click it and Unblock the Notifications










