ಕಿಚ್ಚ ಸುದೀಪ್ ಖಾಸಗಿ ವಿಡಿಯೋ ಲೀಕ್ ಬೆದರಿಕೆ : ನಿರ್ಮಾಪಕನಾ? ಮಾಜಿ ಚಾಲಕನಾ? ಯಾರಿದರ ರೂವಾರಿ?
ಕಿಚ್ಚ ಸುದೀಪ್ ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ಸೂಚಿಸುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಸಿಎಂ ಬಸವರಾಜ ಬೊಮ್ಮಾಯಿಗೆ ಬೆಂಬಲ ಘೋಷಿಸುವ ಮುನ್ನ ಕಿಚ್ಚನಿಗೆ ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಪತ್ರ ಕಳುಹಿಸಿದ್ದರು. ಆ ಪತ್ರದ ಬಗ್ಗೆ ಈಗ ತನಿಖೆ ನಡೆಯುತ್ತಿದೆ.
ರಾಜ್ಯ ರಾಜಕೀಯದಲ್ಲಿ ಚುನಾವಣೆ ರಂಗೇರುತ್ತಿದೆ. ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಲೆಕ್ಕಾಚಾರ ಹಾಕಲಾಗುತ್ತಿದೆ. ಗದ್ದುಗೆ ಏರಲು ರಾಜಕೀಯ ಪಕ್ಷಗಳು ರಣತಂತ್ರ ರೂಪಿಸುತ್ತಿವೆ. ಹಾಗೇ ಸೂಪರ್ಸ್ಟಾರ್ಗಳನ್ನು ಕರೆತಂದು ಪ್ರಚಾರ ಮಾಡಿಸುವುದಕ್ಕೂ ಮುಂದಾಗುತ್ತಿವೆ. ಈ ಹಿನ್ನೆಲೆಯಲ್ಲೇ ನಿನ್ನೆ(ಏಪ್ರಿಲ್ 5) ಸುದೀಪ್ ಸಿಎಂ ಬಸವರಾಜ ಬೊಮ್ಮಾಯಿಗೆ ಬೆಂಬಲ ಸೂಚಿಸಿದ್ದಾರೆ. ಇದೇ ವೇಳೆ ಕಿಚ್ಚನಿಗೆ ಬಂದಿರೋ ಬೆದರಿಕೆ ಪತ್ರದ ಬಗ್ಗೆನೂ ಚರ್ಚೆಯಾಗುತ್ತಿದೆ.

ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸುದೀಪ್ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸುವುದಕ್ಕೂ ಮುನ್ನ ಬೆದರಿಕೆ ಪತ್ರದ ಬಗ್ಗೆ ಸುದ್ದಿ ಹರಿದಾಡಿತ್ತು. " ನೀವು ಬಿಜೆಪಿ ಸೇರಿದರೆ, ನಿಮ್ಮ ಖಾಸಗಿ ವಿಡಿಯೋ ಮತ್ತು ಫೋಟೊಗಳನ್ನು ಜನರ ಮುಂದಿಡುತ್ತೇವೆ" ಎಂದು ಬೆದರಿಕೆಯೊಡ್ಡಲಾಗಿತ್ತು. ಈಗ ಇದೇ ವಿಚಾರವಾಗಿ ಸಿಸಿಬಿ ತನಿಖೆ ನಡೆಸುತ್ತಿದೆ. ಈ ಮಧ್ಯೆ ಇದು ಮಾಜಿ ಕಾರು ಚಾಲಕನ ಕೆಲಸ ಮಾಧ್ಯಮಗಳಲ್ಲಿ ವರದಿಯಾಗಿದೆ. ಹಾಗೇ ನಿರ್ಮಾಪಕನ ಕೆಲಸ ಅಂತಾನೂ ಹೇಳಲಾಗುತ್ತಿದೆ. ಅಸಲಿಗೆ ಬೆದರಿಕೆ ಪತ್ರದ ಹಿಂದಿರುವ ವ್ಯಕ್ತಿ ಯಾರು? ಅಸಲಿ ವಿಷಯ ಏನು? ಅಂತ ತಿಳಿಯಲು ಮುಂದೆ ಓದಿ..
ಬೆದರಿಕೆ ಪತ್ರ ಬಂದಿದ್ದು ಯಾವಾಗ?
ಕಿಚ್ಚನಿಗೆ ಈ ಬೆದರಿಕೆ ಪತ್ರ ನಿನ್ನೆ ಮೊನ್ನೆ ಬಂದಿದ್ದಲ್ಲ. ಮಾರ್ಚ್ 10ರಂದೇ ಬೆದರಿಕೆ ಪತ್ರ ಬಂದಿದೆ ಎನ್ನಲಾಗಿದೆ. ಆದರೆ, ಕಿಚ್ಚನ ಆಪ್ತ ಜಾಕ್ ಮಂಜು ಮಾರ್ಚ್ 29ಕ್ಕೆ ಪುಟ್ಟೇನಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಈ ಬಗ್ಗೆ ಯಾರೂ ಪ್ರತಿಕ್ರಿಯೆ ನೀಡಿರಲಿಲ್ಲ.

ಇನ್ನೇನು ಸುದೀಪ್ ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ಘೋಷಿಸುತ್ತಾರೆ ಅನ್ನೋ ಸುದ್ದಿ ಬಹಿರಂಗವಾಗುತ್ತಿದ್ದಂತೆ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಬೆದರಿಕೆ ಪತ್ರದ ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರ ಮಾಡಲಾಗಿದ್ದು, ತನಿಖೆಯನ್ನು ಚುರುಕುಗೊಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಇದೇ ವೇಳೆ ಬೆದರಿಕೆ ಹಾಕಿದ್ದು ಯಾರು ಅನ್ನೋ ಬಗ್ಗೆನೂ ಚರ್ಚೆಯಾಗುತ್ತಿದೆ.
ಮಾಜಿ ಕಾರು ಚಾಲಕನ ಮೇಲೆ ಅನುಮಾನ?
ಸಿಸಿಬಿ ಅಧಿಕಾರಿಗಳು ಎಲ್ಲಾ ದೃಷ್ಟಿಕೋನದಲ್ಲಿಯೂ ತನಿಖೆ ಆರಂಭಿಸಿದ್ದಾರೆ. ಈ ವೇಳೆ ಸುದೀಪ್ ಹಾಗೂ ಅವರ ತಂಡ ಮಾಜಿ ಕಾರು ಚಾಲಕನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕಿಚ್ಚ ಸುದೀಪ್ ಇತ್ತೀಚೆಗೆ ತನ್ನ ಕಾರು ಚಾಲಕನನ್ನು ಕೆಲಸದಿಂದ ತೆಗೆದು ಹಾಕಿದ್ದರಂತೆ. ಆತನೇ ಈ ಕೆಲಸ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇದರ ಜೊತೆಗೆ ಪ್ರಕರಣ ಸಿಸಿಬಿಗೆ ಕೈ ಸೇರುತ್ತಿದ್ದಂತೆ ಮಾಜಿ ಕಾರು ಚಾಲಕನ ಮೊಬೈಲ್ ಸ್ವಿಚ್ ಆಫ್ ಆಗಿದೆ. ಕಿಚ್ಚನ ಮಾಜಿ ಕಾರಿನ ಚಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಇದು ಚಾಲಕನ ಕೆಲಸನಾ? ಇಲ್ಲಾ ಬೇರೆ ಯಾರಾದರೂ ಕೈ ವಾಡವಿದೆಯಾ? ಅನ್ನೋ ಬಗ್ಗೆ ಚರ್ಚೆನೂ ನಡೆಯುತ್ತಿದೆ.
ನಿರ್ಮಾಪಕನ ಮೇಲೆ ಅನುಮಾನ?
ನಿನ್ನೆ(ಏಪ್ರಿಲ್ 5) ಕಿಚ್ಚ ಸುದೀಪ್ ಕೂಡ ಮಾಧ್ಯಮಗಳ ಮುಂದೆ ಬೆದರಿಕೆ ಪತ್ರ ಬರೆದವರು ಚಿತ್ರರಂಗದವರೇ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ತಂಡ ನಿರ್ಮಾಪಕರೊಬ್ಬರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಸುದೀಪ್ ಇತ್ತೀಚೆಗೆ ಮೂರು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಆ ಮೂರು ಮಂದಿ ತಮಿಳು ಸಿನಿಮಾ ನಿರ್ಮಾಪಕರು ಎಂದು ಹೇಳಲಾಗುತ್ತಿದೆ.
ಈ ಗ್ಯಾಪ್ನಲ್ಲಿಯೇ ಮತ್ತೊಬ್ಬರ ನಿರ್ಮಾಪಕ ಕಿಚ್ಚ ಸುದೀಪ್ ಕಾಲ್ ಶೀಟ್ ಕೇಳಿಕೊಂಡು ಹೋಗಿದ್ದರು. ಆದರೆ, ಕಿಚ್ಚ ಕಾಲ್ ಶೀಟ್ ನೀಡಿರಲಿಲ್ಲ. ಇದೇ ಸಿಟ್ಟಿಗೆ ಹೀಗೆಲ್ಲ ಮಾಡಿರಬಹುದು ಅಂತ ಸ್ಯಾಂಡಲ್ವುಡ್ ಓಡಾಡುತ್ತಿದೆ. ಏನೇ ಇದ್ದರೂ ತನಿಖೆ ಸಿಸಿಬಿ ಮೆಟ್ಟಿಲೇರಿದ್ದು, ಮಹತ್ವದ ಸುಳಿವು ಸಿಕ್ಕಿದೆ ಎನ್ನಲಾಗುತ್ತಿದೆ. ಎಲ್ಲದಕ್ಕೂ ತನಿಖೆ ಬಳಿಕವೇ ಉತ್ತರ ಸಿಗಲಿದೆ.


Click it and Unblock the Notifications











