ಸಿಎಂ ಪರ ಸುದೀಪ್ ಪ್ರಚಾರ: ಶಿಗ್ಗಾಂವಿ ತೆರಳುವ ಮುನ್ನ ಕಿಚ್ಚ ಹೇಳಿದ್ದೇನು? ಪ್ರಚಾರದ ಹೈಲೈಟ್ ಏನು?
ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕಾವು ಹೆಚ್ಚಾಗುತ್ತಲೇ ಇದೆ. ಎಲ್ಲಾ ಪಕ್ಷದ ಅಭ್ಯರ್ಥಿಗಳು ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇಷ್ಟು ಟಿಕೆಟ್ ಗೊಂದಲ, ಬಂಡಾಯ ಅಂತ ಎದ್ದಿರೋ ಗದ್ದಲದ ನಡುವೆಯೇ ಟಿಕೆಟ್ ಸಿಕ್ಕವರು ನಾಮಪತ್ರ ಸಲ್ಲಿಕೆಗೂ ಮುಂದಾಗುತ್ತಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಇಂದು (ಏಪ್ರಿಲ್ 19) ನಾಮಪತ್ರವನ್ನು ಸಲ್ಲಿಕೆ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಕಿಚ್ಚ ಸುದೀಪ್ ಸಿಎಂ ಬಸವರಾಜ ಬೊಮ್ಮಾಯಿಗೆ ಬೆಂಬಲ ಸೂಚಿಸಲು ಶಿಗ್ಗಾಂವಿಗೆ ಆಗಮಿಸುತ್ತಿದ್ದಾರೆ. ಸುದೀಪ್ ಆಗಮನದಿಂದ ಬೊಮ್ಮಾಯಿಗೆ ದೊಡ್ಡ ಬಲವೇ ಸಿಗಲಿದೆ.

ಸಿಎಂ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಸಿದ ಬಳಿಕ ಬೃಹತ್ ಪ್ರಚಾರದಲ್ಲಿ ಕಿಚ್ಚ ಸುದೀಪ್ ಭಾಗಿಯಾಗುತ್ತಿದ್ದಾರೆ. ಶಿಗ್ಗಾಂವಿಗೆ ತೆರಳುವ ಮುನ್ನ ಕಿಚ್ಚ ಸುದೀಪ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ "ಪ್ರಚಾರ ಮಾಡುವುದು ನನಗೆ ಹೊಸತೇನೂ ಅಲ್ಲ" ಎಂದು ಹೇಳಿದ್ದಾರೆ.
ದೊಡ್ಡ ಮಟ್ಟದ ಪ್ರಚಾರಕ್ಕೆ ಇಳಿದಿದ್ದೇನೆ ಅಷ್ಟೇ
ಈ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಮಾಡುತ್ತೇನೆ ಎಂದು ಕಿಚ್ಚ ಸುದೀಪ್ ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ಸುದೀಪ್ ಅವರ ಈ ನಿರ್ಧಾರವನ್ನು ಕೆಲವರು ವಿರೋಧಿಸಿದ್ದರು. ಟೀಕೆಗಳ ಕೇಳಿಬಂದರೂ ಸುದೀಪ್ ಇಂದಿನಿಂದ ಬಸರಾಜ್ ಬೊಮ್ಮಾಯಿ ಹಾಗೂ ಅವರು ಸೂಚಿಸಿದ ಕ್ಷೇತ್ರಗಳಿಗೆ ಪ್ರಚಾರ ಮಾಡಲಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.
" ಪ್ರಚಾರ ಮಾಡೋದು ನನಗೆ ಹೊಸತೇನಲ್ಲ. ಯಾಕಂದ್ರೆ, ಮೊದಲಿನಿಂದಲೂ ಸ್ನೇಹಿತರಿಗೋಸ್ಕರ ಪ್ರಚಾರ ಮಾಡಿದ್ದೇನೆ. ಈ ಸ್ವಲ್ಪ ದೊಡ್ಡ ಮಟ್ಟಕ್ಕೆ ಕ್ಯಾಂಪೇನ್ಗೆ ಇಳಿದಿದ್ದೇನೆ, ಬೇರೆ ಏನೂ ಇಲ್ಲ. ಇದು ನನಗೆ ಹೊಸತಲ್ಲ. ಈ ಹಿಂದೆ ಕೂಡ ಮಾಡಿದ್ದೇನೆ. ಮೊದಲು ನಾನು ಶಿಗ್ಗಾಂವಿಯಿಂದ ಶುರು ಮಾಡುತ್ತಿದ್ದೇನೆ. ಎಲ್ಲಾ ಒಳ್ಳೆಯದಾಗುತ್ತೆ ಎಂದು ಭಾವಿಸಿದ್ದೇನೆ." ಎಂದು ಸುದೀಪ್ ಹೇಳಿದ್ದಾರೆ.

ರೋಡ್ ಶೋದಲ್ಲಿ ಕಿಚ್ಚ ಸುದೀಪ್ ಭಾಗಿ
"ರೋಡ್ ಶೋ ಎಲ್ಲಾನೂ ಇದೆ. ಅವರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ನಾನೀಗ ಅದರ ಬಗ್ಗೆ ಹೇಳುವುದಕ್ಕೆ ಹೋಗುವುದಿಲ್ಲ. ಅವರಾಗಿಯೇ ಎಲ್ಲಾ ಹೇಳುತ್ತಾರೆ. ಅದನ್ನು ನಾನು ವ್ಯಕ್ತಪಡಿಸಿದ್ರೆ ತಪ್ಪಾಗುತ್ತೆ." ಎಂದು ಸುದೀಪ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಶಿಗ್ಗಾಂವಿಯ ಪ್ರಮುಖ ರಸ್ತೆಗಳಲ್ಲಿ ಕಿಚ್ಚ ಸುದೀಪ್ ರೋಡ್ ಶೋ ಮಾಡಲಿದ್ದಾರೆ. ಸುಮಾರು 1 ಗಂಟೆ 15 ನಿಮಿಷಗಳ ಕಾಲ ರೋಡ್ ಶೋ ನಡೆಯುತ್ತೆ ಎನ್ನಲಾಗಿದೆ. ಬೆಳಗ್ಗೆ 11 ಗಂಟೆಯಿಂದಲೇ ಸಿಎಂ ಬೊಮ್ಮಾಯಿ ಪರ ಬೃಹತ್ ರೋಡ್ ಶೋದಲ್ಲಿ ಕಿಚ್ಚ ಸುದೀಪ್ ಭಾಗಿಯಾಗಲಿದ್ದಾರೆ. ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೂಡ ಜೊತೆಯಾಗಲಿದ್ದಾರೆ. ಈ ಬೃಹತ್ ರೋಡ್ ಶೋ ನಗರದ ಚೆನ್ನಮ್ಮ ವೃತ್ತ, ಹಳೆ ಬಸ್ ನಿಲ್ದಾಣದಿಂದ ತಾಲೂಕು ಕ್ರೀಡಾಂಗಣವರೆಗೆ 2 ಕಿ.ಮೀ ರೋಡ್ ಶೋ ನಡೆಯದೆ.
ಮೇ 7ರವರೆಗೂ ಕ್ಯಾಂಪೇನ್
ಕಿಚ್ಚ ಸುದೀಪ್ ಸಿಎಂ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಕೆ ಆದ ಬಳಿಕ ಮೊದಲ ಬಾರಿಗೆ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಇಂದಿನಿಂದ (ಏಪ್ರಿಲ್ 19) ಶುರುವಾದ ಕ್ಯಾಂಪೇನ್ ಮೇ 7ನೇ ತಾರೀಕಿನವರೆಗೂ ನಡೆಯಲಿದೆ.
" ಒಂದು ಲಿಸ್ಟ್ ಹಾಕಿಕೊಂಡಿದ್ದಾರೆ. ಮೇ 7ನೇ ತಾರೀಕಿನವರೆಗೂ ಇರುತ್ತೆ ಅಂತ ಅಂದ್ಕೊಂಡಿದ್ದೇನೆ. ಅವತ್ತು ಕೊನೇ ದಿನ. ಅಲ್ಲಿವರೆಗೂ ಇರುತ್ತೆ ಅಂತ ಅಂದ್ಕೊಂಡಿದ್ದೇನೆ. ಕಲಾವಿದರು ಅಂದ್ಕೊಂಡ್ಮೇಲೆ ಎಲ್ಲರೂ ಪ್ರಚಾರ ಮಾಡುತ್ತಾರೆ. ಒಂದು ಪಕ್ಷ ಅಂತಲ್ಲ. ಎಲ್ಲಾ ಪಕ್ಷದಿಂದಲೂ ಬರುತ್ತೆ. ಅದು ತಪ್ಪೂ ಅಲ್ಲ. ಪ್ರತಿ ವರ್ಷನೂ ಬರುತ್ತಲೇ ಇರುತ್ತೆ. ಈ ವರ್ಷ ಈ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಅದಕ್ಕೆ ಕಾರಣವೇನು ಅಂತಾನೂ ಹೇಳಿದ್ದೇನೆ. ಅದರ ಪ್ರಕಾರ ಹೋಗುತ್ತೇನೆ." ಎಂದು ಕಿಚ್ಚ ಸುದೀಪ್ ಶಿಗ್ಗಾಂವಿಗೆ ತೆರೆಳವು ಮುನ್ನ ಪ್ರತಿಕ್ರಿಯೆ ನೀಡಿದ್ದಾರೆ.


Click it and Unblock the Notifications











