"ನಮ್ಮಪ್ಪಂಗೆ ಇಲ್ಲಿನ ಹುಡುಗಿನೇ ಇಷ್ಟ ಆಗಿದ್ರು, ನಮ್ಮ ಅಮ್ಮ ತುಂಬಾ ಚೆನ್ನಾಗಿ ತುಳು ಮಾತಾಡ್ತಾರೆ": ನಟ ಕಿಚ್ಚ ಸುದೀಪ್
ಮಂಗಳೂರು: ಸ್ಯಾಂಡಲ್ವುಡ್ ಬಾದ್ಷಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರೆಸ್ಟ್ ಆಯೋಜಿಸಿದ್ದ, ಯಕ್ಷ ಧ್ರುವ ಪಟ್ಲ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ
ಈ ಕಾರ್ಯಕ್ರಮದಲ್ಲಿ ತುಳುನಾಡಿನ ಬಗ್ಗೆ ಮಾತಾಡಿದ್ದಾರೆ. ತಮ್ಮ ತಾಯಿ ಕೂಡ ತುಳುನಾಡಿನವರೇ. ಅವರು ತುಂಬಾ ಚೆನ್ನಾಗಿ ತುಳು ಮಾತಾಡುತ್ತಾರೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಇತ್ತೀಚೆಗೆ ಕನ್ನಡ ಚಿತ್ರರಂಗಕ್ಕೆ ತುಳು ಚಿತ್ರರಂಗದವರು ಹೆಚ್ಚಾಗಿ ಬರುತ್ತಿರುವವರ ಬಗ್ಗೆನೂ ಮಾತಾಡಿದ್ದಾರೆ. ಕಿಚ್ಚನ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಕಾರ್ಯಕ್ರಮದ ವೇದಿಕೆಯಲ್ಲಿ ಮಾತಾಡುತ್ತಿದ್ದ ಕಿಚ್ಚ ಸುದೀಪ್ ತಮಗಿರುವ ತುಳುನಾಡಿನ ಕನೆಕ್ಷನ್ ಬಗ್ಗೆ ಮಾತಾಡಿದ್ದಾರೆ. ಅವರ ತಾಯಿ ತುಳುನಾಡಿನವರಾಗಿದ್ದು, ಅವರು ತುಂಬಾ ಚೆನ್ನಾಗಿ ತುಳು ಮಾತಾಡುತ್ತಾರೆ. ಆದರೆ, ತಮಗೆ ಮಾತ್ರ ಎರಡೇ ಎರಡು ತುಳು ಪದಗಳನ್ನು ಹೇಳಿಕೊಟ್ಟಿದ್ದಾರಷ್ಟೇ ಎಂದು ಹೇಳಿಕೊಂಡಿದ್ದಾರೆ.
"ನನ್ನ ತಾಯಿ ತುಂಬಾ ಚೆನ್ನಾಗಿ ತುಳು ಮಾತಾಡುತ್ತಾರೆ. ಒಂದು ದಿನ ಅವರನ್ನು ಕಳಿಸಿಕೊಡುತ್ತೇನೆ ಕೇಳಿ. ನನಗೆ ಬೇರೆ ಏನೂ ಹೇಳಿಕೊಟ್ಟಿಲ್ಲ. ಎಂಚಿನ ಮಾರಾರ್ರೆ, ಉಣಸಾಂಡ ಇಷ್ಟೇ ಹೇಳಿಕೊಟ್ಟಿದ್ದಾರೆ. ಯಾಕಂದ್ರೆ ಬಂದಿರುವ ಅತಿಥಿಗಳೊಂದಿಗೆ ಮಾತಾಡುವುದಕ್ಕೆ ಇಷ್ಟನ್ನು ಹೇಳಿಕೊಟ್ಟಿದ್ದರು." ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ನಮ್ಮ ತುಳುನಾಡಿಗೆ ಬಂದಿದ್ದರೆ ಅಂತ ಹೇಳುತ್ತಾ ನಮ್ಮನ್ನು ಹೊರಗಿನವರನ್ನಾಗಿ ಮಾಡುತ್ತಿದ್ದಾರೆ ಎಂದು ತಮಾಷೆಯಾಗಿ ಆಯೋಜಕರ ಕಾಲೆಳೆದಿದ್ದರು. "ಇವರು ಆವಾಗಿಂದ ನಮ್ಮ ತುಳುನಾಡಿಗೆ ನಮ್ಮ ತುಳುನಾಡಿಗೆ ಅಂತ ನಮ್ಮನ್ನು ಹೊರಗಿನವರನ್ನಾಗಿ ಮಾಡುತ್ತಿದ್ದಾರೆ. ತುಳುನಾಡು ನಮ್ಮ ಕರ್ನಾಟಕದಲ್ಲಿದೆ. ಕರ್ನಾಟಕ ನಮ್ಮ ಹೃದಯದಲ್ಲಿ ಇದೆ ತಾನೇ. ಒಂದು ಮಾತು ಮಧ್ಯದಲ್ಲಿ ಹೇಳಿದ್ರು. ನಾನು ಅರ್ಧ ಈ ಕಡೆಯವರು ಅಂತ. ನೋಡಿ ನಮ್ಮಪ್ಪಂಗೆ ಕರ್ನಾಟಕದಲ್ಲೆಲ್ಲ ಸುತ್ತಾಡಿ, ಇಲ್ಲಿನ ಹುಡುಗಿನೇ ಇಷ್ಟ ಆಗಿದ್ದಾರೆ." ಎಂದು ತಮಾಷೆಯಾಗಿ ಜನರನ್ನು ಉದ್ದೇಶಿಸಿ ಮಾತಾಡಿದ್ದಾರೆ.
ಇದರೊಂದಿಗೆ ಕನ್ನಡ ಚಿತ್ರರಂಗಕ್ಕೆ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿಯಿಂದ ಹಿಡಿದು ಕರಾವಳಿ ಭಾಗದ ನಟರು ಆಗಮಿಸುತ್ತಿರುವ ಬಗ್ಗೆ ಹೆಸರು ಎತ್ತದೆ ಮಾತಾಡಿದ್ದಾರೆ. "ಇತ್ತೀಚೆಗೆ ನಮ್ಮ ಕನ್ನಡ ಚಿತ್ರರಂಗಕ್ಕೆ ನಿಮ್ಮವರು ತುಂಬಾ ಜನ ಬಂದ್ಬಿಟ್ಟು, ಕನ್ನಡ ಯಾವುದು? ತುಳು ಯಾವುದು? ಅಂತ ಗೊತ್ತಾಗುತ್ತಿಲ್ಲ ಈಗ. ಎಲ್ಲೋ ಒಂದು ಕಡೆ ನಾನು ಈ ಕಡೆಗೆ ಬಂದಾಗಲೆಲ್ಲ, ಮಂಗಳೂರು, ಉಡುಪಿಯಲ್ಲೆಲ್ಲ ತುಳು ಚಿತ್ರರಂಗ ಅಂತ ಕೇಳುತ್ತಿದ್ದೆವು. ಅದು ಕೂಡ ಅಲ್ಲಿಗೆ ಬಂದು, ಅಲ್ಲೂ ಕೂಡ ಎಲ್ಲದೂ ನಮ್ಮದು ಎಂದು ನಿಮ್ಮಗಳಿಗೆ ನಿಮ್ಮ ಕಲೆಗೆ ನಾನು ಇಲ್ಲಿ ನಿಂತುಕೊಂಡು ಅಭಿನಂದಿಸುತ್ತೇನೆ." ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಹಾಗೇ, "ಅಭಿನಯ ಚಕ್ರವರ್ತಿ ಅಂತ ಕರೀತಿರಿ, ಬಾದ್ಷಾ ಅಂತ ಕರೀತಿರಿ. ನಾವೂ ಹೊರಗಡೆ ಹೋದಾಗಲೇ ಗೊತ್ತಾಗೋದು, ನಾವಿನ್ನೂ ಎಷ್ಟು ಚಿಕ್ಕವರು ಅಂದ್ವಿಟ್ಟು. ನಾವು ಅದೃಷ್ಟಶಾಲಿಗಳು ಚಿತ್ರರಂಗದಲ್ಲಿ ಒಂದು ಸ್ಥಾನ ಸಿಕ್ಕಿತು. ಏನೋ ಹೆಸರು ಮಾಡಿದ್ವಿ. ನಿಜವಾಗಲೂ ಹೇಳುತ್ತೇನೆ. ಈ ಕಲಾವಿದರ ಮಧ್ಯೆ ನಾವು ತುಂಬಾನೇ ಚಿಕ್ಕವರು. ಅದೃಷ್ಟ ಚೆನ್ನಾಗಿ ಇತ್ತುಅಷ್ಟೇನೆ." ಎಂದು ಕಿಚ್ಚ ಸುದೀಪ್ ಹೇಳಿಕೊಂಡಿದ್ದಾರೆ.


Click it and Unblock the Notifications











