"ಉಪೇಂದ್ರ ಅವರು ಬಹಳ ದೊಡ್ಡವರು"; ಕಿಚ್ಚ ಸುದೀಪ್
2024ರ ಕೊನೆಯಲ್ಲಿ ಕನ್ನಡ ಇಬ್ಬರು ಸೂಪರ್ಸ್ಟಾರ್ಗಳ ಸಿನಿಮಾ ರಿಲೀಸ್ ಆಗಿತ್ತು. ಅದುವೇ ರಿಯಲ್ ಸ್ಟಾರ್ ಉಪೇಂದ್ರ ನಟನೆಯ 'ಯುಐ'. ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್'. ಈ ಎರಡೂ ಸಿನಿಮಾಗಳೂ ಕೇವಲ ಐದು ದಿನಗಳ ಅಂತರದಲ್ಲಿ ರಿಲೀಸ್ ಆಗಿತ್ತು. ಆಗ ಚಿತ್ರರಂಗ ಹಾಗೂ ಅಭಿಮಾನಿಗಳು ಈ ಸನ್ನಿವೇಶವನ್ನು ಬೇರೆಯದ್ದೇ ರೀತಿಯಲ್ಲಿ ನೋಡಿದ್ದು ಇದೆ.
ಸ್ಯಾಂಡಲ್ವುಡ್ನಲ್ಲಿ ಸಕ್ಸಸ್ ಸಿಗದೆ ಒದ್ದಾಡುತ್ತಿದ್ದಾಗ ಎರಡೂ ಸಿನಿಮಾಗಳು ಹೀಗೆ ಒಟ್ಟಿಗೆ ರಿಲೀಸ್ ಆಗುವುದು ಬೇಕಿತ್ತೇ? ಅಂತ ಮಾತಾಡಿಕೊಂಡಿದ್ದೂ ಇದೆ. ಇಬ್ಬರ ನಡುವೆ ಬಾಕ್ಸಾಫೀಸ್ ಆಗುತ್ತೆ? ಇಬ್ಬರೂ ಕಾಂಪಿಟೇಷನ್ ಮೇಲೆ ಸಿನಿಮಾ ರಿಲೀಸ್ ಮಾಡಿದ್ದಾರೆ. ಹೀಗೆ ನೂರೆಂಟು ಚರ್ಚೆಗಳು ಆಗಿದ್ದವು. ಅಸಲಿಗೆ ಉಪೇಂದ್ರ ಅವರಿಗೆ 'ಯುಐ' ಗೆಲ್ಲೋದು ಮುಖ್ಯ ಆಗಿತ್ತು. ಹಾಗೇ ಕಿಚ್ಚನಿಗೆ 'ಮ್ಯಾಕ್ಸ್' ಗೆಲ್ಲೋದೂ ಅಷ್ಟೇ ಮುಖ್ಯ ಆಗಿತ್ತು.

'ಯುಐ' ಮತ್ತು 'ಮ್ಯಾಕ್ಸ್' ಐದು ದಿನಗಳ ಅಂತರದಲ್ಲಿ ರಿಲೀಸ್ ಆಗಿದ್ದರಿಂದ ಪೈಪೋಟಿಗೆ ಬಿದ್ದು 'ಮ್ಯಾಕ್ಸ್' ಬಿಡುಗಡೆ ಮಾಡಿದ್ದಾರೆ ಅನ್ನೋ ಮಾತು ಕೇಳಿ ಬಂದಿತ್ತು. ಅದಕ್ಕೆ ಕಿಚ್ಚ ಸುದೀಪ್ ಹಾಗೂ ಉಪೇಂದ್ರ ಸಾಕಷ್ಟು ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಇಬ್ಬರ ನಡುವೆ ಪೈಪೋಟಿ ಏನೂ ಇಲ್ಲ ಅನ್ನೋದನ್ನು ಸಾರಿ ಹೇಳಿದ್ದಾರೆ. ಇತ್ತೀಚೆಗೆ ಸುದೀಪ್ ನೀಡಿದ ಸಂದರ್ಶನದಲ್ಲಿ ಮತ್ತೆ ಉಪ್ಪಿ ಬಗ್ಗೆ ಮನಸ್ಸು ಬಿಚ್ಚಿ ಮಾತಾಡಿದ್ದಾರೆ.
"ಉಪೇಂದ್ರ ಅವರು ದೊಡ್ಡವರು. ರವಿ ಸರ್ ಆಗಲಿ, ಉಪ್ಪಿ ಸರ್ ಆಗಲಿ ಇವರನ್ನೆಲ್ಲ ನಾವು ಮರೆಯುವ ಹಾಗಿಲ್ಲ. ಕನ್ನಡ ಚಿತ್ರರಂಗಕ್ಕೆ ಬಹಳಷ್ಟು ಕೊಡುಗೆ ಕೊಟ್ಟಿದ್ದಾರೆ. ನಮ್ಮ ಕನ್ನಡ ಚಿತ್ರರಂಗ ಬೆಳೆಯುವುದಕ್ಕೆ ಅವರ ಕೊಡುಗೆ ತುಂಬಾನೇ ಇದೆ. ತಂತ್ರಜ್ಞರಾಗಿ ಇವರೆಲ್ಲರೂ ಬಹಳ ದೊಡ್ಡ ಶಕ್ತಿ. ಅವರು ನನ್ನ ಕರೆದು ಸಿನಿಮಾ ತೋರಿಸುತ್ತಾರೆ ಅಂದರೆ, ಖುಷಿ ಖುಷಿಯಾಗಿ ಹೋಗುತ್ತೇನೆ." ಎಂದು ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಸುದೀಪ್ ಹೇಳಿದ್ದಾರೆ.

'ಮ್ಯಾಕ್ಸ್' ರಿಲೀಸ್ಗೆ ಇನ್ನೊಂದು ದಿನ ಬಾಕಿಯಿದೆ ಅನ್ನುವಾಗ ಉಪೇಂದ್ರ 'ಯುಐ' ಸೆಲೆಬ್ರಿಟಿ ಶೋ ಇಟ್ಟುಕೊಂಡಿದ್ದರು. ಅದಕ್ಕೆ ಕಿಚ್ಚನಿಗೆ ಸ್ವತ: ಉಪೇಂದ್ರ ಅವರು ಆಹ್ವಾನ ಕೊಟ್ಟಿದ್ದರು. ಅದಕ್ಕೆ ಸುದೀಪ್ ಕೂಡ ಹೋಗಿ 'ಯುವ' ಸಿನಿಮಾ ನೋಡಿ ಬಂದಿದ್ದರು. ಆ ಬಗ್ಗೆನೂ ಸುದೀಪ್ ಮಾತಾಡಿದ್ದಾರೆ. ಹಾಗೇ ಐದು ದಿನಗಳ ಅಂತರದಲ್ಲಿ ಸಿನಿಮಾ ರಿಲೀಸ್ ಮಾಡಿದ್ದೇಕೆ? ಅನ್ನೋ ಗುಟ್ಟನ್ನೂ ಬಿಟ್ಟುಕೊಟ್ಟಿದ್ದಾರೆ.
"ನಾನು ಕರೆದ ಕೂಡಲೇ ಹಿಂದೆ ಮುಂದೆ ನೋಡಲಿಲ್ಲ. ಅದೊಂದು ಚಿಕ್ಕ ಕೆಲಸ. ನಾವು ಅವರ ಸಿನಿಮಾ ನೋಡಿಕೊಂಡು ಬೆಳೆದಿದ್ದೇವೆ. ಚಪ್ಪಾಳೆ ತಟ್ಟಿದ್ದೀವಿ. ಶಿಳ್ಳೆ ಹಾಕಿದ್ದೇವೆ. ಟಿಕೆಟ್ ಕೊಟ್ಟು ಸಿನಿಮಾ ನೋಡಿದ್ದೇವೆ ಅಂದ್ಮೇಲೆ.. ಇವೆಲ್ಲ ಮಾಡಲೇಬೇಕು. ಅವರು ಎಷ್ಟೋ ವರ್ಷ ಆದ್ಮೇಲೆ ನಿರ್ದೇಶನ ಮಾಡಿದ್ದಾರೆ. ಅನಿವಾರ್ಯ ಕಾರಣದಿಂದ 5 ದಿನಗಳ ಅಂತರ ಬರಬೇಕಾಯ್ತು. ಕಾಂಪಿಟೇಷನ್ ಇಟ್ಕೊಂಡು ರಿಲೀಸ್ ಮಾಡಬೇಕು ಅನ್ನೋದೆಲ್ಲ ನನ್ನ ಮನಸ್ಸಿನಲ್ಲಿ ಇಲ್ಲ. ಇವರು ಸರಿಯಾಗಿ ರಿಲೀಸ್ ಮಾಡಿದರೆ ಏನೂ ಆಗುತ್ತಿರಲಿಲ್ಲ. ಅವರೂ ಸರಿಯಾಗಿ ರಿಲೀಸ್ ಮಾಡಿದರೆ ಏನೂ ಆಗುತ್ತಿರಲಿಲ್ಲ. ಇವೆಲ್ಲ ಅಡಚಣೆಗಳು ಆಗುತ್ತವೆ." ಎಂದಿದ್ದಾರೆ ಸುದೀಪ್.
ಮತ್ತೆ ಬಾಸಿಸಂ ಕೇಕ್ ಬಗ್ಗೆ, ದರ್ಶನ್ಗೆ ಟಾಂಗ್ ಕೊಟ್ಟರು ಅನ್ನುವ ಬಗ್ಗೆನೂ ಮಾತಾಡಿದ್ದಾರೆ. "ದರ್ಶನ್ ಬಗ್ಗೆ ಮಾತಾಡಿಕೊಂಡು, ಅವರ ಕಾಲೆಳೆದುಕೊಂಡು ನನಗೆ ಏನು ಸಿಗಬೇಕಾಗಿದೆ. ಅವರು ತೊಂದರೆಯಲ್ಲಿ ನೋವಲ್ಲಿ ಇರಬೇಕಾದರೆ, ಏನು ಹೇಳಿದೆ. ಅವರ ಮನೆಯಲ್ಲೂ ಒಬ್ಬ ಮಗ ಇದ್ದಾನೆ. ಬೇಡ ಮಾತಾಡಬೇಡಿ ಅಂತ ಹೇಳಿದೆ. ಅಭಿಮಾನಿಗಳು ನೋವಿನಲ್ಲಿ ಇದ್ದಾರೆ. ಇದೆಲ್ಲ ಹೇಳಬೇಕಾದರೆ ನಾನ್ಯಾಕೆ ಟಾಂಟ್ ಕೊಡಲಿ. ಇಲ್ಲಿ ಯಾರು ಯಾರಿಗೆ ಹೆದರಬೇಕು. ನಾನು ದರ್ಶನ್ ಅಂತಲ್ಲ. ಯಾರನ್ನ ಅಭಿಮಾನಿಗಳು ಕಮ್ಮಿಯಿಟ್ಟಿದ್ದಾರೆ. ಇಲ್ಲಿ ಗೌರವ ಕೊಡುವುದನ್ನು ಕಲಿಯಬೇಕು. ಪರಸ್ಪರ ಒಬ್ಬರಿಗೊಬ್ಬರು ಗೌರವ ಕೊಡಬೇಕು." ಎಂದಿದ್ದಾರೆ.


Click it and Unblock the Notifications











