'ಪೆಪೆ' ಟ್ರೈಲರ್ ನೋಡಿ "ಫೈನಲಿ ವಿನಯ್ ನೀವು ಗಂಡಸಾಗಿದ್ದೀರ" ಎಂದಿದ್ದೇಕೆ ಕಿಚ್ಚ ಸುದೀಪ್?
ನಿನ್ನೆ (ಆಗಸ್ಟ್ 18) ತಾನೇ ವಿನಯ್ ರಾಜ್ಕುಮಾರ್ ಅಭಿನಯದ 'ಪೆಪೆ' ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಪೆಪೆ ಟ್ರೈಲರ್ಗೆ ಒಳ್ಳೆಯ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. ಕಿಚ್ಚ ಸುದೀಪ್ ವಿಶೇಷ ಅತಿಥಿಯಾಗಿ ಈ ಸಿನಿಮಾದ ಟ್ರೈಲರ್ ಲಾಂಚ್ ಮಾಡಿದ್ದರು. ಈ ವೇಳೆ ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿಯ ಬಗ್ಗೆ ಖಡಕ್ ಆಗಿ ಮಾತಾಡಿದ್ದಾರೆ.
ಕಿಚ್ಚ ಸುದೀಪ್ಗೆ 'ಪೆಪೆ' ಸಿನಿಮಾದ ಟ್ರೈಲರ್ ಅನ್ನು ವಿನಯ್ ರಾಜ್ಕುಮಾರ್ ಒಂದು ದಿನ ಮುನ್ನವೇ ತೋರಿಸಿದದರು. ವಿನಯ್ ರಾಜ್ಕುಮಾರ್ ರಗಡ್ ಲುಕ್ ಕಿಚ್ಚ ಸುದೀಪ್ಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಈ ಕಾರಣಕ್ಕೆ ವೇದಿಕೆ ಮೇಲೆ ವಿನಯ್ ರಾಜ್ಕುಮಾರ್ರನ್ನು ಸುದೀಪ್ ಹಾಡಿ ಹೊಗಳಿದ್ದಾರೆ. 'ಪೆಪೆ' ಟ್ರೈಲರ್ ನೋಡಿ, "ವಿನಯ್ ಫೈನಲಿ ಯು ಆರ್ ಬಿಕಮ್ ಎ ಮ್ಯಾನ್" ಎಂದು ಹೇಳಿದ್ದಾರೆ. ಅಷ್ಟಕ್ಕೂ ಕಿಚ್ಚ ಹೇಳಿದ ಈ ಮಾತಿನ ಅರ್ಥವೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಪೆಪೆ' ಟ್ರೈಲರ್ ಹಾಗೂ ವಿನಯ್ ಬಗ್ಗೆ ಮಾತಾಡುವುದಕ್ಕೂ ಮುನ್ನ ಕನ್ನಡ ಚಿತ್ರರಂಗ ಸೋಲಿನ ಬಗ್ಗೆ ಖಡಕ್ ಆಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಚಿತ್ರರಂಗ ಆಲದ ಮರವಾಗಿ ಬೆಳೆದು ನಿಂತಿದೆ. ಈ ಸಂದರ್ಭದಲ್ಲಿ ಚಿತ್ರರಂಗ ಬಿದ್ದು ಹೋಯ್ತು ಅಂತ ಹೇಳಬಾರದು ಎಂದಿದ್ದಾರೆ. " ಕನ್ನಡ ಚಿತ್ರರಂಗ ಬಹಳ ವರ್ಷಗಳ ಹಿಂದೆ ಒಂದು ಸಸಿ ಅಂತ ಇತ್ತು. ಅದು ಆಲದ ಮರ ಆಗಿ ಬೆಳೆದು ನಿಂತಿದೆ. ಈ ವೇಳೆ ನೀವು ಇವತ್ತಿಗೆ ಬಿದ್ದು ಹೋಯ್ತು. ಸೋತು ಹೋಯ್ತು. ಗೆಲ್ಲಿಸಿ, ಮತ್ತೆ ಗಾಳಿ ಬಂದಿದೆ ಅಂತ ಹೇಳುವುದಲ್ಲ. ನಾವು ಅರ್ಥ ಮಾಡಿಕೊಳ್ಳಬೇಕಿರುವುದು ಏನಂದ್ರೆ, ಎಲ್ಲಾ ಚಿತ್ರರಂಗನೂ ನಮ್ಮ ಲೈಫ್ಗೆ ಡಿಫ್ರೆಂಟ್ ಏನೂ ಅಲ್ಲ. ಸೋಲುವುದೇ ಗೆಲ್ಲುವುದಕ್ಕೆ." ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಇದೂವರೆಗೂ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳು ಸೋತಿವೆ. ಕನ್ನಡ ಚಿತ್ರರಂಗ ಆರಂಭ ಆಗಿ ಇಲ್ಲಿವರೆಗೂ 70 ವರ್ಷ ಆಗಿದೆ. ಸಾಷ್ಟು ಸಿನಿಮಾಗಳು ಸೋತಿದೆ. ಗೆಲುವಿಗಿಂತ ಜಾಸ್ತಿ ಸೋತಿವೆ. ಎಷ್ಟೋ ಸಿನಿಮಾಗಳು ಗೆದ್ದಿದ್ದು, ಕನ್ನಡ ಚಿತ್ರರಂಗ ಎಷ್ಟು ದೃಢವಾಗಿ ನಿಂತಿದೆ. ನಾವು ನಿಂತುಕೊಂಡು ಕನ್ನಡ ಸಿನಿಮಾವನ್ನು ಗೆಲ್ಲಿಸಿ, ಗೆಲ್ಲಿಸಿ ಅಂತ ಹೇಳುವುದೇ ಮೊದಲನೇ ತಪ್ಪು ಎಂದು ಸುದೀಪ್ ಇದೇ ವೇದಿಕೆ ಮೇಲೆ ಅಭಿಪ್ರಾಯ ಪಟ್ಟಿದ್ದಾರೆ.
ಸಿನಿಮಾವನ್ನು ಇಷ್ಟ ಪಟ್ಟು ಅಹಂನಿಂದ ಮಾಡಿ. ಆ ಸಿನಿಮಾ ನೋಡುವುದಕ್ಕೆ ಆಗದೇ ಇರೋರು ನೋಡುವುದ ಬೇಡ. ಕನ್ನಡ ಚಿತ್ರರಂಗ ಹಾಗೂ ಕರ್ನಾಟಕ ದೊಡ್ಡದು ಎಂದಿದ್ದಾರೆ. "ನನ್ನ ಜನರನ್ನು ನನ್ನ ಭಾಷೆಯನ್ನು ನಂಬಿ ನಿಮ್ಮ ಅಹಂನಲ್ಲಿ ನೀವು ಕೆಲಸ ಮಾಡಿ. ನೋಡಕ್ಕೆ ಆಗದೆ ಇರೋರು ನೋಡುವುದು ಬೇಡ. ನೋಡುವವರಿಗೋಸ್ಕರ ಮಾಡಿ. ಮನೆಯಲ್ಲಿ ಚೆನ್ನಾಗಿ ಅಡುಗೆ ಮಾಡಲ್ವ. ಹಾಗಂತ ಹೋಟೆಲ್ನಲ್ಲಿ ಊಟ ಮಾಡಿಲ್ವಾ? ನೀವು. ಹೋಟೆಲ್ನಲ್ಲಿ ಊಟ ಮಾಡಿದ ಮಾತ್ರಕ್ಕೆ ಮನೆಗೆ ಬಂದಿಲ್ವಾ. ಕನ್ನಡ ಚಿತ್ರರಂಗ ದೊಡ್ಡದು. ಕರ್ನಾಟಕ ದೊಡ್ಡದು." ಎಂದಿದ್ದಾರೆ.

ಇದೇ ಸಂದರ್ಭದಲ್ಲಿ 'ಪೆಪೆ' ಟ್ರೈಲರ್ ಕಿಚ್ಚ ಸುದೀಪ್ಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಅದರಲ್ಲೂ ವಿನಯ್ ರಾಜ್ಕುಮಾರ್ ಮ್ಯಾನ್ಲೀ ಲುಕ್ ನೋಡಿ ಥ್ರಿಲ್ ಆಗಿದ್ದಾರೆ. ಈ ಕಾರಣಕ್ಕೆ ನೀವೊಬ್ಬ ಗಂಡಸಾಗಿ ಕಾಣಿಸುತ್ತಿದ್ದೀರ ಎಂದು ಸುದೀಪ್ ಅಭಿಪ್ರಾಯ ಪಟ್ಟಿದ್ದಾರೆ. "ವಿನಯ್ ಅವರು ನನಗೆ ಪೆಪೆ ಸಿನಿಮಾ ಟ್ರೈಲರ್ ತೋರಿಸಿದಾಗ ನಾನು ನಿಂತುಕೊಂಡು ಚಪ್ಪಾಳೆ ತಟ್ಟಿದ್ದೇನೆ. ನಾನು ಟ್ರೈಲರ್ ಲಾಂಚ್ ಮಾಡುವಾಗ ನಾನೊಬ್ಬ ಸುದೀಪ್ ಅನ್ನುವುದಕ್ಕಿಂತ ಪ್ರೇಕ್ಷಕನಾಗಿ ನನಗೆ ಆ ಟ್ರೈಲರ್ ಇಷ್ಟ ಆದರೆ, ಅದಕ್ಕಿಂತ ಬೇರೆ ಖುಷಿನೇ ಇಲ್ಲ. ನಾನು ಒಬ್ಬ ಪ್ರೇಕ್ಷಕ ಅಲ್ವಾ? ನನಗೂ ಸಿನಿಮಾ ನೋಡಬೇಕು ಅಂತ ಆಸೆ ಇರುತ್ತೆ. ನಾನು ವಿನಯ್ ಅವರಿಗೆ ಒಂದು ಮಾತು ಹೇಳಿದೆ. ಫೈನಲಿ ನೀವೊಬ್ಬರು ಗಂಡಸಾಗಿ ಕಾಣಿಸುತ್ತಿದ್ದೀರ ಅಂತ. ಒಬ್ಬ ಚಾಕಲೇಟ್ ಹುಡುಗ ಪ್ರೀತಿ, ಲವ್ ಸ್ಟೋರಿ ಮಾಡುತ್ತಿದ್ದರು. ಯಾವಾಗ ಒಬ್ಬ ಗಂಡಸಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಾನೋ ಆವಾಗ ಒಬ್ಬ ಹೀರೊ ಜರ್ನಿ ಶುರುವಾಗುತ್ತೆ" ಎಂದು ಸುದೀಪ್ ಹೇಳಿದ್ದಾರೆ.


Click it and Unblock the Notifications











