ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ; ಹಿಟ್ & ರನ್ ಆರೋಪ - ಬಿಗ್ ಬಾಸ್ ದಿವ್ಯಾ ಸುರೇಶ್ ಪ್ರತಿಕ್ರಿಯೆ
ತಪ್ಪು ಮಾಡುವುದು ಮನುಷ್ಯನ ಸಹಜ ಗುಣ. ಅದೇ ರೀತಿ ಮಾಡಿದ ತಪ್ಪನ್ನು ಕ್ಷಮಿಸುವುದು ಮತ್ತೊಬ್ಬರ ದೊಡ್ಡ ಗುಣ. ಮಾಡಿದ ತಪ್ಪಿಗೆ ಕ್ಷಮಿಸಿ ಎಂದು ಕೇಳುವುದು ಒಳ್ಳೆಯ ಗುಣ. ಆದರೆ.. ಈಗೀಗ ತಪ್ಪು ಮಾಡಿದರು ಕೂಡ ತಮ್ಮ ತಪ್ಪು ಒಪ್ಪಿಕೊಳ್ಳುವುದಿಲ್ಲ. ಬದಲಿಗೆ ವಿತ್ತಂಡ ವಾದ ಮಾಡುತ್ತಾರೆ. ಮತ್ತೂ ಕೆಲ ಒಮ್ಮೆ ಕೆಲವರು ಮಾಡದ ತಪ್ಪಿಗೆ ಕ್ಷಮೆ ಕೇಳುತ್ತಾರೆ.
ಇನ್ನೂ ಕೆಲ ಒಮ್ಮೆ ತಪ್ಪೇ ಮಾಡಿಲ್ಲವೆಂದರೆ ಕ್ಷಮೆ ಯಾಕೆ ಕೇಳಬೇಕು ಎಂದು ಪ್ರಶ್ನೆ ಮಾಡುತ್ತಾರೆ. ಈ ಸಾಲಿನಲ್ಲಿ ಯಾವ ಸಾಲಿಗೆ ಕನ್ನಡದ ತ್ರಿಪುರ ಸುಂದರಿ, ''ಬಿಗ್ ಬಾಸ್'' ಕನ್ನಡದ 8ನೇ ಸೀಸನ್ ಸ್ಫರ್ಧಿ ದಿವ್ಯಾ ಸುರೇಶ್ ಸೇರುತ್ತಾರೆ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರು ಸದ್ಯ ದಿವ್ಯಾ ಸುರೇಶ್ ತಮ್ಮ ಮೇಲಿನ ''ಹಿಟ್ ಆಂಡ್ ರನ್'' ಆರೋಪಕ್ಕೆ ಸಂಬಂಧಿಸಿದಂತೆ ಪರೋಕ್ಷವಾಗಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಈ ಕುರಿತು ವಿಡಿಯೋ ಹಂಚಿಕೊಂಡಿರುವ ದಿವ್ಯಾ ಸುರೇಶ್ ''ಕಾನೂನಿನ ಮುಂದೆ ಯಾರು ದೊಡ್ಡವರಲ್ಲ.. ಯಾರು ಚಿಕ್ಕವರಲ್ಲ.. ಕಾನೂನಿನ ಮುಂದೆ ನಾವೆಲ್ಲರು ಸಮಾನರು. ತಪ್ಪು ಯಾರೇ ಮಾಡಿರಲಿ.. ಹೇಗೆ ಮಾಡಿರಲಿ.. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು, ಆಗಿಯೇ ಆಗುತ್ತೆ'' ಎಂದು ಹೇಳಿದ್ದಾರೆ. ಸುಮ್ಮನೆ ಹೇಳಬೇಕು ಅನಿಸ್ತು ಅದಕ್ಕೆ ಹೇಳಿದೆ ಎಂದು ಹೇಳಿದ್ದಾರೆ.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಯೂಟ್ಯೂಬ್ನಲ್ಲಿ ಹಾಕಿರುವ ವಿಡಿಯೋಗಳಿಗೆ ಬಂದಿರುವ ಕಾಮೆಂಟ್ಗಳ ಸ್ಕ್ರೀನ್ ಶಾಟ್ ಕೂಡ ಹಂಚಿಕೊಂಡಿರುವ ದಿವ್ಯಾ ಸುರೇಶ್, ಕಾಮೆಂಟ್ ಮಾಡಿರುವ ಪುಣ್ಯಾತ್ಮರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ. ಜನ ಬೆಂಬಲಕ್ಕಿಂತ ಮತ್ತೊಂದು ಬೆಂಬಲ ಬೇರೊಂದು ಇಲ್ಲ ಎಂದು ಹೇಳಿದ್ದಾರೆ.
ದಿವ್ಯಾ ಸುರೇಶ್ ಹಂಚಿಕೊಂಡ ಕಾಮೆಂಟ್ಗಳ ಸ್ಕ್ರೀನ್ ಶಾಟ್ನಲ್ಲಿ ಬಹುತೇಕರು ದಿವ್ಯಾ ಸುರೇಶ್ ಅವರ ಪರ ವಕಾಲತ್ತು ವಹಿಸಿದ್ದು ತಪ್ಪು ಬೈಕ್ ಸವಾರನದ್ದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಯವಿಟ್ಟು ಸಿಸಿಟಿವಿ ದ್ರಶ್ಯಾವಳಿಯನ್ನು ಸರಿಯಾಗಿ ನೋಡಿ ಇಲ್ಲವಾದರೆ ನಿಮ್ಮ ಕಣ್ಣನ್ನು ಪರೀಕ್ಷೆ ಮಾಡಿಕೊಳ್ಳಿ, ಕಲಾವಿದರು ಎನ್ನುವ ಕಾರಣಕ್ಕೆ ಸುಖಾ ಸುಮ್ಮನೆ ಆರೋಪ ಮಾಡಬೇಡಿ ಎಂದು ಹೇಳಿದ್ದಾರೆ.
ಇನ್ನುಳಿದಂತೆ ಅಕ್ಟೋಬರ್ 7ರಂದು ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ತೆರಳಿ ದೂರನ್ನು ದಾಖಲಿಸಿರುವ ಗಾಯಗೊಂಡಿರುವ ಮಹಿಳೆ ಅನಿತಾ ಅವರ ಸಂಬಂಧಿ ಕಿರಣ್ ''ನಮ್ಮ ಸಂಬಂಧಿ ಅನುಷಾಗೆ ಅನಾರೋಗ್ಯ ಕಾರಣ ಅಂದು ರಾತ್ರಿ ಗಿರಿನಗರದ ಆಸ್ಪತ್ರೆಗೆ ಹೋಗುತ್ತಿದ್ದೆವು. ಬೈಕ್ನಲ್ಲಿ ಮಧ್ಯೆ ಅನುಷಾ ಕುತಿದ್ದರೆ, ನಾನು ಬೈಕ್ ಚಲಾಯಿಸುತ್ತಿದ್ದೆ, ಬೈಕ್ ಹಿಂದೆ ಅನಿತಾ ಎಂಬುವವರು ಕುಳಿತಿದ್ದರು. ಈ ವೇಳೆ ಬ್ಯಾಟರಾಯನಪುರದ ಎಂ.ಎಂ.ರಸ್ತೆ ಬಳಿ ನಾಯಿ ಬೊಗಳಿದ್ದಕ್ಕೆ ಸ್ವಲ್ಪ ಬಲಕ್ಕೆ ಬೈಕ್ ತೆಗೆದುಕೊಂಡಾಗ, ಆಗ ಏಕಾಏಕಿ ದಿವ್ಯಾ ಕಾರು, ಮೊದಲಿಗೆ ಅನಿತಾ ಅವರ ಕಾಲಿಗೆ ಗುದ್ದಿತ್ತು. ದಿವ್ಯಾ ಕಾರು ಡಿಕ್ಕಿಯಾದ ರಭಸಕ್ಕೆ ಬೈಕ್ನಲ್ಲಿದ್ದ ಮೂವರು ಬಿದ್ದಿದ್ದೆವು. ಕಾರು ಡಿಕ್ಕಿ ಹೊಡೆದಾಗ ಮಹಿಳೆಯ ಕಾಲಿನ ಮಂಡಿಗೆ ಪೆಟ್ಟಾಗಿತ್ತು. ಇಷ್ಟಾದರೂ ದಿವ್ಯಾ ಸುರೇಶ್, ಕಾರು ನಿಲ್ಲಿಸದೇ ಪರಾರಿಯಾಗಿದ್ದರು. ನಂತರ ಅನಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಕಾಲಿನ ಮಂಡಿ ಚಿಪ್ಪು ಮುರಿದಿರುವುದಾಗಿ ತಿಳಿಸಿ ಚಿಕಿತ್ಸೆ ನೀಡಿದ್ದಾರೆ'' ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ಆ ನಂತರ ಮಾಧ್ಯಮದವರ ಎದುರು ಅಪಘಾತ ನಡೆದ ನಂತರ ಕಾರನ್ನು ನಿಲ್ಲಿಸದ ದಿವ್ಯಾ ಸುರೇಶ್ ಆ ನಂತರ ಒಮ್ಮೆಯೂ ಕೂಡ ತಮ್ಮಿಂದ ಅಪಘಾತಕ್ಕೀಡಾದವರ ಸ್ಥಿತಿ ಹೇಗಿದೆ ಎಂದು ವಿಚಾರಿಸಲಿಲ್ಲ ಎಂದು ಕಿಡಿ ಕಾರಿದ್ದ ಕಿರಣ್, ಶಸ್ತ್ರ ಚಿಕಿತ್ಸೆಗೆ ಈಗಾಗಲೇ ಎರಡು ಲಕ್ಷ ರೂಪಾಯಿ ಖರ್ಚು ಆಗಿದೆ. ದಯವಿಟ್ಟು ನಮಗೆ ಪರಿಹಾರ ಕೊಡಿಸಿ ಎಂದು ಮನವಿಯನ್ನು ಕೂಡ ಮಾಡಿಕೊಂಡಿದ್ದರು.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಗಾಯಾಳು ಮಹಿಳೆ ಅನಿತಾ,ನಾನು ಟೈಲರಿಂಗ್ ಕೆಲಸ ಮಾಡಿ ಜೀವನ ನಡೆಸುತ್ತಿದ್ದೇನೆ. ಪತಿ ಆಟೋ ಓಡಿಸುತ್ತಿದ್ದಾರೆ. ಗುಂಡ್ಲುಪೇಟೆ ಯಿಂದ ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಆಸ್ಪತ್ರೆಯಲ್ಲಿ ತುಂಬಾ ಖರ್ಚಾಗಿದೆ. ಇದಕ್ಕೆ ಸಾಲ ಮಾಡಿದ್ದೇವೆ ಎಂದು ಕಣ್ಣೀರು ಹಾಕಿದ್ದಾರೆ.


Click it and Unblock the Notifications











