"ನನ್ನನ್ನು ಹೆತ್ತಾಗ ಯಾರೂ ತಿರುಗಿ ನೋಡಿಲ್ಲ.. ಹಾರ್ಟ್ ಅಟ್ಯಾಕ್ ಆದಾಗ ಮಾತಾಡಿದ್ದು ಇಬ್ಬರೇ"– ನಟ ವಿನೋದ್ ರಾಜ್
ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಹಾಗೂ ವಿನೋದ್ ರಾಜ್ ಬಗ್ಗೆ ನಿರ್ದೇಶಕ ಹಾಗೂ ಲೇಖಕ ಪ್ರಕಾಶ್ ರಾಜ್ ಮೇಹು ಗಂಭೀರ ಆರೋಪ ಮಾಡಿದ್ದರು. ವಿನೋದ್ ರಾಜ್ ಮದುವೆ ಆಗಿದ್ದಾರೆಂದು ಫ್ಯಾಮಿಲಿ ಫೋಟೊವನ್ನು ರಿಲೀಸ್ ಮಾಡಿದ್ದರು. ಇದು ಇಬ್ಬರ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿತ್ತು.
ಹಿರಿಯ ನಟಿ ಲೀಲಾವತಿ ಹಾಗೂ ವಿನೋದ್ ರಾಜ್ ಇಬ್ಬರೂ ಸಿನಿವುಡ್ ಯೂಟ್ಯೂಬ್ ಚಾನೆಲ್ಗೆ ಪ್ರತಿಕ್ರಿಯೆ ನೀಡಿದ್ದು, ಪ್ರಕಾಶ್ ರಾಜ್ ಮೇಹು ವಿರುದ್ಧ ಕಿಡಿಕಾರಿದ್ದಾರೆ. ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ವಿನೋದ್ ರಾಜ್, ತಾನು ಹುಟ್ಟಿದ ಸಮಯದಲ್ಲಿ ಯಾರೂ ತಿರುಗಿಯೂ ನೋಡಿಲ್ಲ ಎಂದು ಹೇಳಿದ್ದಾರೆ.

ಸಿನಿವುಡ್ಗೆ ನೀಡಿದ ಸಂದರ್ಶನದಲ್ಲಿ ತಾಯಿ ಲೀಲಾವತಿಯವರಿಗೆ ನೀಡಬೇಕಿದ್ದ ಗೌರವ, ಅವರಿಗಾದ ನೋವಿನ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಹಾರ್ಟ್ ಅಟ್ಯಾಕ್ ಆದಾಗ ಪ್ರತಿಕ್ರಿಯಿಸಿದವರು ಯಾರು? ಚಿಕ್ಕಪುಟ್ಟ ಪಾತ್ರಗಳಿಗೆ ಸಿಗುತ್ತಿದ್ದ ಸಂಭಾವನೆ ಹೇಗಿತ್ತು? ಅನ್ನೋದನ್ನು ಹೊರಹಾಕಿದ್ದಾರೆ.
"ನನಗೆ ನನ್ನ ತಾಯಿ ಮುಖ್ಯ.. ಅದು ತಪ್ಪಾ?"
ವಿನೋದ್ ರಾಜ್ ಮದುವೆ ಆಗಿರುವ ಗುಟ್ಟನ್ನು ಎಲ್ಲೂ ಬಿಟ್ಟುಕೊಟ್ಟಿರಲಿಲ್ಲ. ಆ ವಿಷಯನ್ನು ಫೋಟೊ ಹಾಗೂ ದಾಖಲೆಗಳ ಸಮೇತ ಪ್ರಕಾಶ್ ರಾಜ್ ಮೇಹು ಇತ್ತೀಚೆಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ. ಜೊತೆ ಹಿರಿಯ ನಟ ಲೀಲಾವತಿ ತನ್ನನ್ನು ಹೇಗೆ ಸಾಕಿದ್ರು? ಅನ್ನೋದನ್ನು ಹೇಳಿದ್ದಾರೆ.
"ನನ್ನ ತಾಯಿ ಹೇಗೆ ಸಾಕಿದ್ರು ಅಂದ್ರೆ, ನನ್ನನ್ನು ನೋಡ್ತಾ ನೋಡ್ತಾನೇ ನೋವನ್ನು ಮರೆತಿದ್ದಾರೆ. ನನ್ನ ತಾಯಿ ಇಷ್ಟು ವರ್ಷ ನನ್ನನ್ನು ಬೆಳೆಸಿದ್ದು, ಸುಸ್ತಾಗಿದ್ದಾರೆ ಅಂತ ಅವರನ್ನು ಬಿಟ್ಟು ಹೋಗುವುದಕ್ಕೆ ಆಗುವುದಿಲ್ಲ. ಅವರವರ ಮಕ್ಕಳಿಗೆ ಅವರವರ ತಾಯಿ, ನನಗೆ ನನ್ನ ತಾಯಿ ಅಷ್ಟೇ. ಅದು ತಪ್ಪಾ? ನೂರು ಜನ ಮಕ್ಕಳು ಸೇರಿ ಒಬ್ಬ ತಾಯಿಯನ್ನು ಸಾಕಲ್ಲ ಅಂತಾರೆ. ಈ ಒಬ್ಬ ಮಗ ತಾಯಿಯನ್ನು ಪ್ರೀತಿಯಿಂದ ನೋಡಿಕೊಂಡಿದ್ದಾನೆ. ಯಾರಿಗೋ ಮೋಸ ಮಾಡಿಲ್ಲ. ದ್ರೋಹ ಮಾಡಿಲ್ಲ. ಸಮಾನತೆಯಿಂದ ನೋಡಿಕೊಂಡಿದ್ದಾನೆ. ತಾಯಿ ಮಾತನ್ನು ಮೀರದ ಮಗ ಆಗಿದ್ದೇನೆ." ಎಂದು ವಿನೋದ್ ರಾಜ್ ಹೇಳಿದ್ದಾರೆ.

"ನನಗೆ ಜಾಹೀರಾತು ಬೇಡ"
ತನಗೆ ಮದುವೆ ಆಗಿದೆ ಅನ್ನೋದನ್ನು ಹೇಳಿಕೊಳ್ಳುವ ಅಗತ್ಯವಿಲ್ಲ ಎಂದು ವಿನೋದ್ ರಾಜ್ ಹೇಳಿದ್ದಾರೆ. ಮನೆಯವರೆಲ್ಲರೂ ಒಪ್ಪಿದ್ದಾರೆ. ಅಷ್ಟು ಸಾಕು. ಎಲ್ಲರೂ ನೆಮ್ಮದಿಯಾಗಿಯೇ ಇದ್ದೇವೆ ಎಂದು ವಿನೋದ್ ರಾಜ್ ಯೂಟ್ಯೂಬ್ ಚಾನೆಲ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
"ನಾನು ಒಪ್ಪಿಕೊಂಡಿದ್ದೇನೆ. ಅವರು ಒಪ್ಪಿಕೊಂಡಿದ್ದಾರೆ. ಇಬ್ಬರೂ ನೆಮ್ಮದಿಯಾಗಿದ್ದೇವೆ. ಅಮ್ಮ ಒಪ್ಪಿಕೊಂಡಿದ್ದಾರೆ. ನನಗೆ ಈ ಬಗ್ಗೆ ಜಾಹೀರಾತು ಬೇಡ. ನಮ್ಮ ಆತ್ಮೀಯರೆಲ್ಲರಿಗೂ ಗೊತ್ತು. ಅವರು ಡಂಗೂರ ಸಾರಿದರೇ? ಇಲ್ವಲ್ಲ." ಎಂದು ಹೇಳಿದ್ದಾರೆ. ಅಲ್ಲದೆ ಸಮಾಜ ತನ್ನನ್ನು ಹೇಗೆ ನಡೆಸಿಕೊಂಡಿದೆ ಅನ್ನೋದನ್ನೂ ವಿನೋದ್ ರಾಜ್ ನೊಂದು ಮಾತಾಡಿದ್ದಾರೆ.
"ನನ್ನನ್ನು ಹೆತ್ತಾಗ ಯಾರೂ ತಿರುಗಿಯೂ ನೋಡಿಲ್ಲ"
"ನನ್ನ ತಾಯಿ ನನ್ನನ್ನು ಹೆತ್ತಾಗ ಯಾರೂ ಬಂದು ತಿರುಗಿನೂ ನೋಡಿಲ್ಲ. ನನ್ನ ತಾಯಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆದಾಗ ಮೂಸಿ ಕೂಡ ನೋಡಿಲ್ಲ. ನನಗೆ ಹಾರ್ಟ್ ಅಟ್ಯಾಕ್ ಆದಾಗ ಒಬ್ಬರು ಶ್ರೀನಿವಾಸ್ ಮೂರ್ತಿ ಕಲಾವಿದರು. ಇನ್ನೊಬ್ಬರು ಎಸ್ ನಾರಾಯಣ್ ಕಲಾವಿದರು ಎರಡೇ ಜನ ನಮ್ಮೊಂದಿಗೆ ಮಾತಾಡಿದ್ದಾರೆ. ಇನ್ಯಾರು ನಮ್ಮೊಂದಿಗೆ ಮಾತಾಡಿಲ್ಲ. ಅದಕ್ಕೆ ನಮಗೆ ಯಾರ ಮೇಲೂ ಕೋಪವಿಲ್ಲ." ಎಂದು ವಿನೋದ್ ರಾಜ್ ಹೇಳಿದ್ದಾರೆ.
"ಅವತ್ತಿನ ಪರಿಸ್ಥಿತಿಯಲ್ಲಿ ನನಗೆ ಸಿನಿಮಾವಿಲ್ಲ. ಇರೋದೇ ಚಿಕ್ಕ ಚಿಕ್ಕ ಪಾತ್ರ ಶ್ರೀಮಂಜುನಾಥ, ಒಂದೇ ಮಾತರಂನಲ್ಲೆಲ್ಲಾ ಚಿಕ್ಕ ಚಿಕ್ಕ ಪಾತ್ರ. ಸ್ನೇಹಲೋಕದಲ್ಲಿ ಡ್ಯಾನ್ಸ್ ಮಾಡಿದ್ದಕ್ಕೆ ಎಷ್ಟು ದುಡ್ಡು ಕೊಟ್ಟಿರಬಹುದು? ಕಷ್ಟದಲ್ಲಿ ಇದ್ದುಕೊಂಡು ಜೀವನ ಮಾಡಿಕೊಂಡು ಹೋಗಿದ್ದೇವೆ. ಯಾರಿಗಾದರೂ ತೊಂದರೆ ಕೊಟ್ಟಿದ್ದೇವಾ?" ಎಂದು ತಮ್ಮನ್ನು ತಮ್ಮಷ್ಟಕ್ಕೆ ಇರಲು ಬಿಡು ಎಂದು ವಿನೋದ್ ರಾಜ್ ಹೇಳಿದ್ದಾರೆ.


Click it and Unblock the Notifications











