ಜೈಲಿನಲ್ಲಿ ದರ್ಶನ್ಗೆ ಅಗತ್ಯ ಸೌಲಭ್ಯ ಸಿಗುತ್ತಿಲ್ಲವೇ? ಕಾನೂನು ಸೇವೆಗಳ ಪ್ರಾಧಿಕಾರ ವರದಿ ಏನಂತಿದೆ?
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಸುಪ್ರೀಂ ಕೋರ್ಟ್ ದರ್ಶನ್ ಜಾಮೀನನ್ನು ರದ್ದು ಮಾಡಿದ ಬಳಿಕ ಮತ್ತೆ ಜೈಲಿನಲ್ಲಿ ಕಾಲ ತಳ್ಳುವಂತಾಗಿದೆ. ಎರಡನೇ ಬಾರ ಜೈಲು ಸೇರಿದ ಬಳಿಕ ದರ್ಶನ್ ತಮಗೆ ಅಗತ್ಯ ಸೌಲಭ್ಯಗಳನ್ನು ನೀಡುತ್ತಿಲ್ಲ. ವಾಕಿಂಗ್ ಮಾಡುವುದಕ್ಕೆ ಬಿಡುವುದಿಲ್ಲ ಎಂಬ ಹಲವು ಆರೋಪಗಳನ್ನು ಮಾಡಿದ್ದರು.
ನ್ಯಾಯಾಧೀಶರ ಮುಂದೆ ದರ್ಶನ್ ಮಾಡಿದ ಆರೋಪಗಳು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿದ್ದವು. ದರ್ಶನ್ ಪರ ವಕೀಲರು ಕೂಡ ನ್ಯಾಯಾಧೀಶರ ಮುಂದೆ ಹಾಸಿಗೆ, ದಿಂಬು ಕೊಡುವುದಕ್ಕೆ ಮನವಿಯನ್ನು ಮಾಡಿಕೊಂಡಿದ್ದರು. ಇನ್ನು ದರ್ಶನ್ ನ್ಯಾಯಾಧೀಶರೇ ಖುದ್ದಾಗಿ ಬಂದು ಪರಿಶೀಲಿಸುವಂತೆ ಬೇಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ 57 ನೇ ಸಿಸಿಹೆಚ್ ಕೋರ್ಟ್ನ ನ್ಯಾಯಾಧೀಶರು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪರೀಶಿಲನೆ ನಡೆಸುವುದಕ್ಕೆ ಹೇಳಿತ್ತು. ಅದು ಈಗ ವರದಿಯನ್ನು ಸಲ್ಲಿಸಿದೆ.

ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಾಧಿಕಾರಿಗಳು ದರ್ಶನ್ಗೆ ಬೇಕಂತಲೇ ಸೌಲಭ್ಯಗಳನ್ನು ನೀಡುತ್ತಿಲ್ಲ. ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪ ಕೂಡ ಕೇಳಿ ಬಂದಿತ್ತು. ಕಾನೂನು ಸೇವೆಗಳ ಪ್ರಾಧಿಕಾರ ವರದಿ ನೀಡಿದ ಬಳಿಕ ಆ ಎಲ್ಲಾ ಆರೋಪಗಳಿಗೂ ತೆರೆ ಬಿದ್ದಂತೆ ಆಗಿದೆ. ಹಾಗಿದ್ದರೆ, ದರ್ಶನ್ ಇಲ್ಲಿವರೆಗೂ ಮಾಡಿದ ಆರೋಪ ನಿಜನಾ? ಸುಳ್ಳಾ? ಈ ವರದಿಯಲ್ಲಿ ಏನೇನಿದೆ? ತಿಳಿಯುವುದಕ್ಕೆ ಮುಂದೆ ಓದಿ.
ನ್ಯಾಯಾಲಯದ ಸೂಚನೆಯಂತೆ ಕಾನೂನು ಸೇವೆಗಳ ಪ್ರಾಧಿಕಾರ ದರ್ಶನ್ ಇರುವ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಪರಿಶೀಲಿಸಿತ್ತು. ದರ್ಶನ್ರನ್ನು ಇರಿಸಿರುವ ಬ್ಯಾರಕ್ನಿಂದ ಹಿಡಿದು ಅವರಿಗೆ ನೀಡುತ್ತಿರುವ ಸೌಲಭ್ಯಗಳು ಹಾಗೂ ಆರೋಗ್ಯದ ಬಗ್ಗೆ ಪರಿಶೀಲನೆ ನಡೆಸಿದೆ. ಹಾಗೇ ಖುದ್ದಾಗಿ ದರ್ಶನ್ ಜೊತೆಗೂ ಚರ್ಚೆ ಮಾಡಿದ್ದಾರೆ. ಇನ್ನೊಂದು ಕಡೆ ಜೈಲಾಧಿಕಾರಿಗಳ ಕಡೆಯಿಂದಲೂ ಮಾಹಿತಿಯನ್ನು ಕಲೆ ಹಾಕಿ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಲಾಗಿದೆ.

ಇನ್ನು ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿರುವ ವರದಿಯ ಟಿವಿ9 ವರದಿ ಮಾಡಿದ್ದು, ಇದರ ಪ್ರಕಾರ ದರ್ಶನ್ ಇರಿಸಿರುವ ಸೆಲ್ನಲ್ಲಿ ಎರಡು ಶೌಚಾಲಯಗಳ ವ್ಯವಸ್ಥೆಯಿದೆ. ಒಂದು ವಿದೇಶಿ, ಇನ್ನೊಂದು ಭಾರತೀಯ ಶೈಲಿಯದ್ದು. ಹಾಗೇ ದರ್ಶನ್ಗೆ ಹೆಚ್ಚುವರಿ ಹಾಸಿಗೆ ದಿಂಬನ್ನು ನೀಡಲಾಗಿಲ್ಲ. ಯಾಕಂದ್ರೆ, ವಿಚಾರಣಾಧೀನ ಕೈದಿಗಳಿಗೆ ಈ ಸೌಲಭ್ಯ ನೀಡುವ ನಿಯಮವಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ದರ್ಶನ್ ನ್ಯಾಯಾಧೀಶರ ಮುಂದೆ ಬಿಸಿಲನ್ನೇ ನೋಡಿಲ್ಲ ಎಂಬ ಆರೋಪ ಮಾಡಿದ್ದರು. ಈ ಬಗ್ಗೆನೂ ವರದಿ ನೀಡಿದೆ. ದರ್ಶನ್ಗೆ ಪ್ರತಿದಿನ ಒಂದು ಗಂಟೆ ವಾಕಿಂಗ್ ಮಾಡುವುದಕ್ಕೆ ಹಾಗೂ ಆಟ ಆಡುವುದಕ್ಕೆ ಅವಕಾಶ ನೀಡಲಾಗಿದೆ. ದರ್ಶನ್ ಇನ್ನೂ ಹೆಚ್ಚು ಸಮಯ ಓಡಾಡಿದರೆ, ಬೇರೆ ಬ್ಯಾರಕ್ನ ಕೈದಿಗಳು ಕಿರುಚುತ್ತಾರೆ. ಅಲ್ಲದೆ ಅಕ್ಕ-ಪಕ್ಕದ ಅಪಾರ್ಟ್ಮೆಂಟ್ನ ಜನರು ಫೋಟೊಗಳನ್ನು ತೆಗೆಯುತ್ತಾರೆಂದು ಜೈಲಾಧಿಕಾರಿಗಳು ವಿವರಣೆ ನೀಡಿದ್ದಾರೆ.
ದರ್ಶನ್ ಟಿವಿ ಕೊಟ್ಟಿಲ್ಲ ಎಂದು ದೂರಿದ್ದರು. ಕೈದಿಗಳಿಗೆ ಟಿವಿ ನೋಡುವುದಕ್ಕೆ ಅವಕಾಶವಿದೆ. ಆದರೆ, ಪ್ರತ್ಯೇಕ ಟಿವಿ ನೀಡುವುದಕ್ಕೆ ಅವಕಾಶವಿಲ್ಲವೆಂದು ವರದಿಯಲ್ಲಿ ಹೇಳಲಾಗಿದೆ. ಇನ್ನು ಕುಟುಂಬಕ್ಕೆ ಕರೆ ಮಾಡಿದ ಸಂದರ್ಭದಲ್ಲಿ ಲೌಡ್ಸ್ಲೀಕರ್ನಲ್ಲಿ ಮಾತಾಡುವಂತೆ ಹೇಳುತ್ತಾರೆ. ಆದರೆ, ಜೈಲಿನ ನಿಯಮದ ಪ್ರಕಾರ ಅಧಿಕಾರಿಗಳು ಕರೆಗಳನ್ನು ಆಲಿಸಬಹುದು ಎಂದು ಹೇಳಿದೆ.
ಇನ್ನು ದರ್ಶನ್ ಕಾಲಿಗೆ ಫಂಗಸ್ ಬಂದಿದೆ ಎಂದಿದ್ದರು. ಆದರೆ, ಚರ್ಮ ರೋಗ ತಜ್ಞೆ ಜ್ಯೋತಿಯವರು ಫಂಗಸ್ ಬಂದಿಲ್ಲ. ಆದರೆ, ಹಿಮ್ಮಡಿ ಒಡೆದಿದ್ದು, ಮೆಡಿಸಿನ್ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದು ವರದಿಯಲ್ಲಿದೆ. ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ ವರದರಾಜ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು, ದರ್ಶನ್ ಅವರ ಬಹುತೇಕ ಆರೋಪಗಳಿಗೆ ತದ್ವಿರುದ್ಧ ವರದಿ ಬಂದಿದೆ. ಬಿಸಿಲಿನಲ್ಲಿ ವಾಕ್ ಮಾಡುವುದಕ್ಕೆ ಪರ್ಯಾಯ ವ್ಯವಸ್ಥೆ ಮಾಡುವ ಅಗತ್ಯವಿದೆ ಅನ್ನೋದು ದರ್ಶನ್ ಪರ ಇರುವ ಏಕೈಕ ವರದಿ.


Click it and Unblock the Notifications











