"ಅಪ್ಪು-ದರ್ಶನ್ ಮನಸ್ಸಲ್ಲಿ ಏನೂ ಇರಲಿಲ್ಲ.. ಡಿ ಬಾಸ್ ಜೊತೆ ಇದ್ದೇ ಇರುತ್ತೇನೆ" ಲೂಸ್ ಮಾದ ಯೋಗಿ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣ ಸದ್ಯಕ್ಕೆ ಮುಗಿಯೋ ಹಾಗೇ ಕಾಣುತ್ತಿಲ್ಲ. ದರ್ಶನ್ ಅಭಿಮಾನಿಗಳು ಹಾಗೂ ಸ್ಯಾಂಡಲ್ವುಡ್ ತಾರೆಯರು ಈ ಕೃತ್ಯ ಎಸಗಿದವನಿಗೆ ಶಿಕ್ಷೆ ಆಗಲೇ ಬೇಕು ಅಂತ ಪಟ್ಟು ಹಿಡಿದು ಕೂತಿದೆ.
ಕಲಾವಿದನ ಮೇಲೆ ಇಂತಹ ಕೃತ್ಯ ನಡೆಯಬಾರದು. ಅದೆಷ್ಟೇ ದ್ವೇಷ ಇದ್ದರೂ ಚಪ್ಪಲಿ ಎಸೆಯೋದು ಅಪರಾಧ ಅನ್ನೋ ಅಭಿಪ್ರಾಯ ಎಲ್ಲರಿಂದಲೂ ವ್ಯಕ್ತವಾಗುತ್ತಲೇ ಇದೆ. ಈ ಕಾರಣಕ್ಕೆ ಕರ್ನಾಟಕದ ಹಲವೆಡೆ ಪ್ರತಿಭಟನೆಗಳು ಕೂಡ ನಡೆಯುತ್ತಿವೆ. ಈ ಕೆಲಸ ಮಾಡಿದವನನ್ನು ಬಂಧಿಸಲೇಬೇಕು ಅಂತ ಪ್ರತಿಭಟನಾಕಾರರು ಪಟ್ಟು ಹಿಡಿದು ಕೂತಿದ್ದಾರೆ.
ಶಿವಣ್ಣ, ಕಿಚ್ಚ ಸುದೀಪ್, ನೆನಪಿರಲಿ ಪ್ರೇಮ್,. ಶ್ರೀಮುರಳಿ, ರಮ್ಯಾ ಸೇರಿದಂತೆ ಹಲವು ತಾರೆಯರು ಈಗಾಗಲೇ ಆಕ್ರೋಶ ಹೊರಹಾಕಿದ್ದಾರೆ. ಈಗ ಲೂಸ್ ಮಾದ ಯೋಗಿ ಕೂಡ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದು, ಇಬ್ಬರೂ ಸ್ಟಾರ್ ನಟರ ಮನಸ್ಸಿನಲ್ಲಿ ಏನೂ ಇರಲಿಲ್ಲ ಎಂದು ಹೇಳಿದ್ದಾರೆ. ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆ ಬಗ್ಗೆ ಯೋಗಿಯ ಹೇಳಿಕೆಯ ಝಲಕ್ ಇಲ್ಲಿದೆ.

'ದರ್ಶನ್-ಅಪ್ಪು ಕ್ಲೋಸ್ ಆಗಿದ್ದರು'
ಲೂಸ್ ಮಾದ ಯೋಗಿ ಸದ್ಯ ತಮ್ಮ ಸಿನಿಮಾ 'ನಾನು ಅದು ಮತ್ತು ಸರೋಜ' ಬಿಡುಗಡೆಯ ಪ್ರಚಾರದಲ್ಲಿ ಇದ್ದಾರೆ. ಈ ವೇಳೆ ಯೋಗಿಗೆ ಹೊಸಪೇಟೆಯಲ್ಲಿ ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಕೆಲವರು ಇರುತ್ತಾರೆ. ಈಗ ದರ್ಶನ್ ಅವರು ಹಾಗೂ ಅಪ್ಪು ಅವರು ಎಷ್ಟು ಕ್ಲೋಸ್ ಆಗಿದ್ದರು ಅನ್ನೋದು ಅಂತಹ ಕೆಲಸ ಮಾಡಿದವರಿಗೆ ಗೊತ್ತಿಲ್ಲ. ಅದೇ ರೀತಿ ದರ್ಶನ್ ಅವರು ಅಣ್ಣಾವ್ರ ಫ್ಯಾಮಿಲಿಗೆ ಅದೆಷ್ಟು ಕ್ಲೋಸ್ ಇದ್ದಾರೆ ಅವರವರಿಗೆ ಗೊತ್ತು." ಎಂದು ಹೇಳಿದ್ದಾರೆ.

'ಈ ಬಗ್ಗೆ ಶಿವಣ್ಣನೂ ಮಾತಾಡಿದ್ದಾರೆ'
"ಮತ್ತೆ ಇಲ್ಲಿ ಫ್ಯಾನ್ಸ್ ಯಾಕೆ ಗಲಾಟೆ ಮಾಡಿಕೊಳ್ಳುತ್ತಾರೆ ಅನ್ನೋದು ಗೊತ್ತಾಗುವುದಿಲ್ಲ. ನಾನು ಎಲ್ಲರಿಗೂ ಹೇಳೋದು ಇಷ್ಟೇನೆ. ನಿಮಗೆ ಒಬ್ಬರು ಹೀರೊ ಇದ್ದೇ ಇರುತ್ತಾರೆ. ನನಗೊಬ್ಬ ಹೀರೊ ಇದ್ದೇ ಇರುತ್ತಾರೆ. ಹಾಗಂತ ನಾನು ನಿಮ್ಮ ಹೀರೊನಾ ತಪ್ಪು ಅಂತ ಹೇಳುವುದಕ್ಕೆ ಆಗೋದಿಲ್ಲ. ಹಾಗಂತ ಅವನು ಮಾಡುತ್ತಿರೋದು ಯಾವುದೂ ಸರಿ ಅಂತ ಹೇಳುವುದಕ್ಕೆ ಆಗುವುದಿಲ್ಲ. ನೀನು ಇಷ್ಟ ಪಡು ಪರ್ವಾಗಿಲ್ಲ. ಇನ್ನೊಬ್ಬರ ಬಗ್ಗೆ ಯಾಕೆ ಕೆಟ್ಟದಾಗಿ ಮಾತಾಡುತ್ತಿದ್ದೀಯಾ? ಈ ಬಗ್ಗೆ ಶಿವಣ್ಣನೂ ಮಾತಾಡಿದ್ದಾರೆ."

'ಮತ್ತೆ ಇಂತಹ ಧೈರ್ಯ ಮಾಡಬಾರದು'
"ಈ ರೀತಿ ಒಬ್ಬರು ಇಬ್ಬರು ಮಾಡೋದರಿಂದ ಏನಾಗುತ್ತೆ. ಯಾರೋ ಮಾಡಿರುತ್ತಾರೆ. ಹೆಸರು ಬರೋದು ದೊಡ್ಡವರಿಗೆನೇ. ಅವರು ಒಳ್ಳೆಯದು ಮಾಡುತ್ತಿದ್ದಾರೋ.. ಕೆಟ್ಟದು ಮಾಡುತ್ತಿದ್ದಾರೋ ಅರ್ಥ ಮಾಡಿಕೊಳ್ಳಬೇಕು. ಇಂತಹವರಿಗೆ ಒಳ್ಳೆ ಶಿಕ್ಷೆ ಆಗಲೇಬೇಕು. ಇಲ್ಲಾ ಅಂದ್ರೆ, ಮುಂದೆ ಮತ್ತೆ ಹೀಗೆ ಮಾಡುವುದಕ್ಕೂ ಹಿಂದೆ-ಮುಂದೆ ನೋಡುವುದಿಲ್ಲ. ಕಾನೂನು ಪ್ರಕಾರ ಏನು ಆಗಬೇಕೋ ಅದು ಆಗಬೇಕು. ಇನ್ನೊಂದು ಸಾರಿ ಈ ರೀತಿ ಮಾಡುವುದಕ್ಕೆ ಯಾರೂ ಧೈರ್ಯ ಮಾಡಬಾರದು."

'ಶಿಕ್ಷೆ ಆಗೋವರೆಗೂ ಫೈಟ್ ಮಾಡೋಣ'
"ನೀವು ಯಾಕೆ ಅಷ್ಟೊಂದು ದ್ವೇಷ ಮಾಡಬೇಕು. ಇಷ್ಟ ಇಲ್ಲ ಅಂದರೆ ಬಿಟ್ಟುಬಿಡಿ. ನನಗೆ ಇಷ್ಟ ಇಲ್ಲ ಅಂತ ಸುಮ್ಮನಾಗಿ. ಅಷ್ಟೊಂದು ದ್ವೇಷ ಇಟ್ಕೊಂಡು ಮೈ ಮೇಲೆ ಎಸೆಯೋದು ಅವೆಲ್ಲ ಭಾರೀ ತಪ್ಪು ಮಾಡೋಕೆ ಹೋಗಬಾರದು. ಸಿಂಪಲ್ ನನಗೆ ಇಷ್ಟ ಇಲ್ವಾ ಗುರು. ಇಷ್ಟ ಇಲ್ಲ ಅಷ್ಟೇ. ಶಿಕ್ಷೆ ಆಗೋವರೆಗೂ ಫೈಟ್ ಮಾಡೋಣ. ಖಂಡಿತವಾಗಿಯೂ ನಾವು ಡಿ ಬಾಸ್ ಜೊತೆ ಇದ್ದೇ ಇರುತ್ತೇವೆ. ನನಗೆ ಇಬ್ಬರೂ ಪರಿಚಯ. ಇಬ್ಬರ ಮನಸ್ಸಲ್ಲೂ ಏನೂ ಇಲ್ಲ. ನೋಡಿರೋದೇ ತಾನೇ ನಾವು. ಸುಮ್ನೆ ಬಿಟ್ಟರೆ ಇನ್ನೂ ಹಲವು ಜನ ಹುಟ್ಟಿಕೊಳ್ಳುತ್ತಾರೆ."


Click it and Unblock the Notifications











