'ಅಜಯ್ ನಮಗೆ ಸಹಾಯ ಮಾಡಲಿಲ್ಲ': ಗಾಯಾಳು ಆರೋಪಕ್ಕೆ ನಟನ ಪ್ರತಿಕ್ರಿಯೆ
ಸ್ಯಾಂಡಲ್ವುಡ್ ಕೃಷ್ಣ ಎಂದೇ ಖ್ಯಾತರಾಗಿರುವ ನಟ ಅಜಯ್ ರಾವ್ ನಾಯಕ ನಟನಾಗಿ ನಟಿಸುತ್ತಿರುವ 'ಲವ್ ಯು ರಚ್ಚು' ಸಿನಿಮಾದ ಚಿತ್ರೀಕರಣದ ವೇಳೆ ನಡೆದ ಅವಘಡದಲ್ಲಿ ಒಬ್ಬ ವ್ಯಕ್ತಿ ಮೃತನಾಗಿದ್ದು ಮತ್ತೊಬ್ಬರು ಗಾಯಾಳುವಾಗಿದ್ದಾರೆ.
Recommended Video
ಬಿಡದಿ ಸಮೀಪದ ಜೋಗಿಪಾಳ್ಯ ಗ್ರಾಮದಲ್ಲಿ ಅಜಯ್ ರಾವ್, ರಚಿತಾ ರಾಮ್ ನಟಿಸುತ್ತಿರುವ 'ಲವ್ ಯು ರಚ್ಚು' ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಫೈಟ್ ದೃಶ್ಯವೊಂದರ ಚಿತ್ರೀಕರಣ ನಡೆಯುವ ವೇಳೆ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಸಾಹಸ ಕಲಾವಿದ ಅಜಯ್ ರಾವ್ ಮೃತಪಟ್ಟಿದ್ದಾರೆ. ಮತ್ತೊಬ್ಬ ಸಾಹಸ ಕಲಾವಿದ ರಂಜಿತ್ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಾಳು ರಂಜಿತ್ ಇಂದು ಕೆಲವು ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದು ಘಟನೆ ನಡೆದಿದ್ದು ಹೇಗೆ ಎಂದು ವಿವರಣೆ ನೀಡಿದ್ದಾರೆ. ಘಟನೆ ಬಗ್ಗೆ ಮಾತನಾಡುತ್ತಾ, ''ಅವಘಡ ಸಂಭವಿಸಿದಾಗ ನಟ ಅಜಯ್ ರಾವ್ ಹತ್ತಿರದಲ್ಲೇ ಇದ್ದರು ಆದರೆ ಅವರು ಸಹಾಯಕ್ಕೆ ಬರಲಿಲ್ಲ'' ಎಂಬ ಗಂಭೀರ ಆರೋಪ ಮಾಡಿದ್ದಾರೆ. ಗಾಯಾಳು ರಂಜಿತ್ ಆರೋಪಕ್ಕೆ ಸಾವಧಾನದ ಪ್ರತಿಕ್ರಿಯೆಯನ್ನು ನಟ ಅಜಯ್ ರಾವ್ ನೀಡಿದ್ದಾರೆ.

ರಂಜಿತ್ ಹೇಳಿಕೆಗೆ ಅಜಯ್ ರಾವ್ ಪ್ರತಿಕ್ರಿಯೆ: ಅಜಯ್ ರಾವ್
''ರಂಜಿತ್ ಈಗ ಐಸಿಯುವಿನಲ್ಲಿದ್ದಾರೆ. ಅವರಿಗೆ ದೊಡ್ಡ ಮಟ್ಟದ ಗಾಯವಾಗಿರುವ ಕಾರಣದಿಂದಲೇ ಅವರನ್ನು ಐಸಿಯುವಿನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಅಷ್ಟು ದೊಡ್ಡ ಮಟ್ಟದ ಗಾಯವಾದಾಗ ಯಾರು ಎಲ್ಲಿದ್ದರು ಎಂಬುದನ್ನು ಅವರು ಹೇಗೆ ಗಮನಿಸಲು ಸಾಧ್ಯ? ಆದರೆ ರಂಜಿತ್ ನನ್ನ ಮೇಲೆ ಆರೋಪ ಮಾಡಿರುವುದಕ್ಕೆ ನನಗೆ ಬೇಸರವಿಲ್ಲ. ಆದರೆ ರಂಜಿತ್ ಅನ್ನು ಪ್ರಚೋದಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ'' ಎಂದಿದ್ದಾರೆ ನಟ ಅಜಯ್ ರಾವ್.

ಮೆಟಲ್ ರೋಪ್ ಬಳಸಿದ್ದು ಘಟನೆಗೆ ಮುಖ್ಯ ಕಾರಣ: ಅಜಯ್ ರಾವ್
ಘಟನೆ ಸಂಭವಿಸಲು ಮುಖ್ಯ ಕಾರಣ ಮೆಟಲ್ ರೋಪ್ ಬಳಸಿದ್ದು. ಫೈಟರ್ ವಿವೇಕ್ ರೋಪ್ ಎಳೆಯುವಾಗ ಈ ದುರ್ಘಟನೆ ಸಂಭವಿಸಿದೆ. ಆಗ ಚಿತ್ರೀಕರಣವಾಗುತ್ತಿದ್ದ ದೃಶ್ಯದಲ್ಲಿ ನಾನಿರಲಿಲ್ಲ. ಹಾಗಾಗಿ ಚಿತ್ರೀಕರಣ ಸ್ಥಳದಿಂದ ಸುಮಾರು 200 ಮೀಟರ್ ದೂರದಲ್ಲಿದ್ದೆ. ಘಟನೆ ನಡೆದಾಗ ದೊಡ್ಡದಾಗಿ ಶಬ್ದ ಕೇಳಿಸಿತು. ಆಗ ಸ್ಥಳಕ್ಕೆ ಧಾವಿಸಿ ಬಂದೆ. ಅಷ್ಟರಲ್ಲಿ ದುರ್ಘಟನೆ ಘಟಿಸಿ ಆಗಿತ್ತು'' ಎಂದಿದ್ದಾರೆ ಅಜಯ್ ರಾವ್. ನಟ ಅಜಯ್ ರಾವ್ ನಿನ್ನೆಯೂ ಇದೇ ಮಾತನ್ನು ಹೇಳಿದ್ದರು. ಅಜಯ್ ರಾವ್ ಇಂದು ಮೃತ ವಿವೇಕ್ರ ಅಂತಿಮ ದರ್ಶನ ಮಾಡಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.

ಫೈಟ್ ಮಾಸ್ಟರ್ ವಿನೋದ್ ಪರನಿಂತ ರಂಜಿತ್
ಆದರೆ ಗಾಯಾಳು ರಂಜಿತ್ ಹೇಳಿರುವಂತೆ ಅಜಯ್ ರಾವ್ ಘಟನೆ ನಡೆದ ಸ್ಥಳದಲ್ಲಿಯೇ ಇದ್ದರು. ಮುಂದುವರೆದು ಮಾತನಾಡಿರುವ ರಂಜಿತ್, ದುರ್ಘಟನೆ ನಡೆಯುವಲ್ಲಿ ಫೈಟ್ ಮಾಸ್ಟರ್ ವಿನೋದ್ ಪಾತ್ರವಿಲ್ಲ ಬದಲಿಗೆ ಕ್ರೇನ್ ಡ್ರೈವರ್ನ ಅಜಾಗರೂಕತೆಯಿಂದಲೇ ಈ ಘಟನೆ ನಡೆದಿದೆ. ಮೊದಲೇ ಆತ ಕ್ರೇನ್ ಅನ್ನು ಮರಕ್ಕೆ ತಾಗಿಸಿದ ಆಗಲೇ ನಾವು ಎಚ್ಚರಿಕೆ ನೀಡಿದೆವು ಆದರೆ ನಂತರ ಆತ ಕ್ರೇನ್ ಅನ್ನು ವಿದ್ಯುತ್ ವೈರ್ಗೆ ತಾಗಿಸಿದ ಹಾಗಾಗಿ ಈ ದುರ್ಘಟನೆ ಸಂಭವಿಸಿತು'' ಎಂದಿದ್ದಾರೆ. ಫೈಟ್ ಮಾಸ್ಟರ್ ವಿನೋದ್ ಪರವಾಗಿ ಮಾತನಾಡಿರುವ ರಂಜಿತ್, ''ವಿನೋದ್ ಜೊತೆಗೆ ನಾನು ಬಹಳ ವರ್ಷಗಳಿಂದಲೂ ಕೆಲಸ ಮಾಡುತ್ತಿದ್ದೇನೆ. ಅವರು ಬಹಳ ಮುಂಜಾಗೃತೆ ವಹಿಸುತ್ತಾರೆ'' ಎಂದಿದ್ದಾರೆ.

ಮೂವರನ್ನು ಬಂಧಿಸಿರುವ ಪೊಲೀಸರು
ಘಟನೆ ಕುರಿತು ಬಿಡದಿ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡು ಸಿನಿಮಾ ನಿರ್ದೇಶಕ ಶಂಕರ್ ರಾಜ್, ಫೈಟ್ ಮಾಸ್ಟರ್ ವಿನೋದ್, ಕ್ರೇನ್ ಆಪರೇಟರ್ ಮಹದೇವ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಮೂವರಿಗೂ 14 ದಿನದ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನು ನಿರ್ಮಾಪಕ ಗುರು ದೇಶಪಾಂಡೆ, ಮ್ಯಾನೇಜರ್ ಫರ್ನಾಂಡೀಸ್ ಮೇಲೂ ಎಫ್ಐಆರ್ ದಾಖಲಿಸಲಾಗಿದ್ದು ಇವರಿಬ್ಬರೂ ಸದ್ಯಕ್ಕೆ ಪತ್ತೆ ಆಗಿಲ್ಲ. ಜಮೀನು ಮಾಲೀಕ ಪಟ್ಟರಾಜು ವಿರುದ್ಧ ಯಾವುದೇ ಪ್ರಕರಣವನ್ನು ಪೊಲೀಸರು ದಾಖಲಿಸಿಲ್ಲ. ಅಜ್ಞಾತ ಸ್ಥಳದಲ್ಲಿರುವ ನಿರ್ಮಾಪಕ ಗುರು ದೇಶಪಾಂಡೆ ಮೃತ ವಿವೇಕ್ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿದ್ದಾರೆ.


Click it and Unblock the Notifications











