'ಮನದ ಕಡಲು' ಸಿನಿಮಾಗಿಂತ ಪರ ಭಾಷೆ ಸಿನಿಮಾ ಮನ್ನಣೆ; ಲೂಸಿಫರ್, ಸಿಕಂದರ್, ವೀರ ಧೀರ ಸೂರನ್ಗೆ ಹೆಚ್ಚು ಸ್ಕ್ರೀನ್
ಕನ್ನಡ ಚಿತ್ರರಂಗದ ಪರಿಸ್ಥಿತಿ ಹೇಗಿದೆ ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. ವಾರಕ್ಕೆ ಐದಾರು ಸಿನಿಮಾ ರಿಲೀಸ್ ಆದರೂ ಒಂದೇ ಒಂದು ಸಿನಿಮಾ ಬಾಕ್ಸಾಫೀಸ್ನಲ್ಲಿ ಸದ್ದು ಮಾಡುತ್ತಿಲ್ಲ. ಈ ಮಧ್ಯೆ ಪರಭಾಷೆಯ ಸಿನಿಮಾಗಳ ಹಾವಳಿ ಬೇರೆ. ಕನ್ನಡಿಗರು ಪ್ಯಾನ್ ಇಂಡಿಯಾ ಗುಂಗಿನಿಂದ ಹೊರಬಂದು ಹೊಸ ಸಿನಿಮಾಗಳನ್ನು ನೋಡುಬಹುದು ಎನ್ನುವಾಗಲೇ ಪರಭಾಷೆಯ ಸಿನಿಮಾಗಳು ಥಿಯೇಟರ್ಗಳನ್ನು ಆಕ್ರಮಿಸಿಕೊಳ್ಳುತ್ತವೆ.
ಇತ್ತೀಚೆಗೆ ಅಲ್ಲು ಅರ್ಜುನ್ ನಟನೆಯ 'ಪುಷ್ಪ 2' ಸಿನಿಮಾ ಬಿಡುಗಡೆಯಾದರೂ ಇದೇ ರೀತಿ ಆಗಿತ್ತು. ಕನ್ನಡ ಚಿತ್ರಗಳಿಗೆ ಅಂತಿದ್ದ ಪ್ರಮುಖ ಚಿತ್ರಮಂದಿರಗಳು ಪರಭಾಷೆಯ ಸಿನಿಮಾಗಳ ಹಿಂದೆ ಬಿದ್ದಿದ್ದವು. ಒಂದೇ ಏರಿಯಾದಲ್ಲಿ ಮೂರು ಚಿತ್ರಮಂದಿರಗಳಲ್ಲಿ 'ಪುಷ್ಪ 2' ಸಿನಿಮಾವೇ ಪ್ರದರ್ಶನ ಕಂಡಿತ್ತು. ಈ ವಾರ ಕೂಡ ಕರ್ನಾಟಕದ ಪ್ರದರ್ಶಕರು ಕನ್ನಡ ಸಿನಿಮಾಗಿಂತ ಬೇರೆ ಭಾಷೆಯ ಸಿನಿಮಾಗಳಿಗೆ ಮಣೆ ಹಾಕಿದಂತೆ ಇದೆ.

ಈ ವಾರ ಯೋಗರಾಜ್ ಭಟ್ ನಿರ್ದೇಶಿಸಿ, 'ಮುಂಗಾರು ಮಳೆ' ನಿರ್ಮಾಪಕರು ನಿರ್ಮಿಸಿರುವ 'ಮನದ ಕಡಲು' ಸಿನಿಮಾ ರಿಲೀಸ್ ಆಗುತ್ತಿದೆ. ಇದರ ಜೊತೆಗೆ ಮಲಯಾಳಂ ಸೂಪರ್ಸ್ಟಾರ್ ಮೋಹನ್ಲಾಲ್ ನಟನೆಯ 'ಲೂಸಿಫರ್ 2', ಸಲ್ಮಾನ್ಖಾನ್ ನಟನೆಯ 'ಸಿಕಂದರ್', ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ಸಿನಿಮಾ 'ವೀರ ಧೀರ ಸೂರನ್', ತೆಲುಗು ನಟ ನಿತಿನ್ ಅಭಿನಯದ 'ರಾಬಿನ್ ಹುಡ್' ಹಾಗೂ 'ಮ್ಯಾಡ್ 2' ಸಿನಿಮಾಗಳು ರಿಲೀಸ್ ಆಗುತ್ತಿವೆ. 'ರಾಬಿನ್ ಹುಡ್' ಹಾಗೂ 'ಮ್ಯಾಡ್ 2' ಬಿಟ್ಟರೆ, ಉಳಿದ ಎಲ್ಲಾ ಸಿನಿಮಾಗಳಿಗೆ 'ಮನದ ಕಡಲು' ಸಿನಿಮಾಗಿಂತ ಹೆಚ್ಚು ಸ್ಕ್ರೀನ್ಗಳು ಸಿಕ್ಕಿವೆ ಎಂಬ ಚರ್ಚೆ ಶುರುವಾಗಿದೆ. ಹಾಗಿದ್ದರೆ, ಕರ್ನಾಟಕದಲ್ಲಿ ಯಾವ ಸಿನಿಮಾಗೆ ಎಷ್ಟೆಷ್ಟು ಸ್ಕ್ರೀನ್ಗಳು ಸಿಕ್ಕಿವೆ ಅನ್ನೋದನ್ನು ತಿಳಿಯಲು ಮುಂದೆ ಓದಿ.
ಕರ್ನಾಟಕದಲ್ಲಿಯೇ ಕನ್ನಡ ಸಿನಿಮಾಗಳಿಗೆ ಥಿಯೇಟರ್ ಸಿಗಲ್ಲ ಅನ್ನೋದು ಹಳೆ ವಿಷಯ. ಬಹುತೇಕ ಹೊಸಬರ ಸಿನಿಮಾಗಳಿಗೆ ಇಂತಹ ಸಮಸ್ಯೆಯನ್ನು ಎದುರಾಗುತ್ತಲೇ ಇರುತ್ತೆ. ಆದರೆ, 'ಮನದ ಕಡಲು' ಯೋಗರಾಜ್ ಭಟ್ ಅಂತಹ ನಿರ್ದೇಶಕರ ಸಿನಿಮಾ. 'ಮುಂಗಾರು ಮಳೆ' ಅಂತಹ ಎವರ್ಗ್ರೀನ್ ಸಿನಿಮಾವನ್ನು ನಿರ್ಮಾಣ ಮಾಡಿದ ಸಿನಿಮಾ. ಯುಗಾದಿ ಹಬ್ಬದ ವೇಳೆ ರಿಲೀಸ್ ಆಗುತ್ತಿರುವುದರಿಂದ ಪರಭಾಷೆಯ ಸಿನಿಮಾಗಳಿಗೆ ಹೆಚ್ಚು ಸ್ಕ್ರೀನ್ಗಳನ್ನು ಕೊಡಬೇಕಿತ್ತು ಎನ್ನುವ ಚರ್ಚೆಯನ್ನು ಸಿನಿಮಾ ಮಂದಿ ಮಾಡುತ್ತಿದ್ದಾರೆ.

ಸ್ಯಾಂಡಲ್ವುಡ್ ಮೂಲಗಳು ಮಾಹಿತಿ ನೀಡಿರುವ ಪ್ರಕಾರ ಯೋಗರಾಜ್ ಭಟ್ ನಿರ್ದೇಶನದ 'ಮನದ ಕಡಲು' ಸಿನಿಮಾ ಮೊದಲ ದಿನ ಕರ್ನಾಟಕದಲ್ಲಿ 500ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ರಿಲೀಸ್ ಆಗುತ್ತಿದೆ. ಈ ಬಾರಿ ಯೋಗರಾಜ್ ಭಟ್ ಹೊಸ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ. ಮತ್ತೊಂದು ಮುಂಗಾರು ಮಳೆಯನ್ನು ಸೃಷ್ಟಿ ಮಾಡುವ ಉತ್ಸಾಹದಲ್ಲಿ ಇದ್ದಾರೆ. ಈಗಾಗಲೇ ಹರಿಕೃಷ್ಣ ಅವರ ಹಾಡುಗಳು ಹಿಟ್ ಆಗಿವೆ. ರಾಕಿಂಗ್ ಸ್ಟಾರ್ ಯಶ್ ಟ್ರೈಲರ್ ಲಾಂಚ್ ಮಾಡಿದ್ದಾರೆ. ಇಷ್ಟು ಸದ್ದು ಮಾಡುತ್ತಿರುವ ಸಿನಿಮಾಗೆ 500 ಸ್ಕ್ರೀನ್ಗಳು ಎಂದು ಹೇಳಾಗುತ್ತಿದೆ. ಈ ಸಂಬಂಧ ಚಿತ್ರತಂಡ ಅಸಮಧಾನ ಹೊರಹಾಕಿದೆ ಅನ್ನೋ ಸುದ್ದಿ ಓಡಾಡುತ್ತಿದೆ. ಆದರೆ, ಈ ಬಗ್ಗೆ ಇದೂವರೆಗೂ ಚಿತ್ರತಂಡ ಬಹಿರಂಗವಾಗಿ ಅಸಮಧಾನವನ್ನು ಹೊರ ಹಾಕಿಲ್ಲ.
ಇನ್ನು ಮಲಯಾಳಂ ಸಿನಿಮಾ 'ಲೂಸಿಫರ್ 2' ಗೆ ಕರ್ನಾಟಕದಲ್ಲಿ ಮೊದಲ ದಿನ 846ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ರಿಲೀಸ್ ಆಗುತ್ತಿದೆ ಎನ್ನಲಾಗಿದೆ. ಮಲಯಾಳಂ ಸೂಪರ್ಸ್ಟಾರ್ ಮೋಹನ್ಲಾಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಪೃಥ್ವಿರಾಜ್ ಸುಕುಮಾರನ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ಬಂದು 'ಲೂಸಿಫರ್ ಪಾರ್ಟ್ 1' ಬಾಕ್ಸಾಫೀಸ್ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಹೀಗಾಗಿ 'ಲೂಸಿಫರ್ 2' ಅನ್ನು ಪ್ಯಾನ್ ಇಂಡಿಯಾ ರಿಲೀಸ್ ಮಾಡುತ್ತಿದ್ದಾರೆ.

ಹೀಗಾಗಿ ದೇಶಾದ್ಯಂತ ಗ್ರ್ಯಾಂಡ್ ರಿಲೀಸ್ ಮಾಡುವುದಕ್ಕೆ 'ಲೂಸಿಫರ್ 2' ಟೀಮ್ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇನ್ನು ಕರ್ನಾಟಕದಲ್ಲಿ ಮೋಹನ್ಲಾಲ್ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ವಿತರಣೆ ಮಾಡುತ್ತಿದೆ. ಹೀಗಾಗಿ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಸ್ಕ್ರೀನ್ಗಳಲ್ಲಿ ಮಲಯಾಳಂ ಸಿನಿಮಾ ರಿಲೀಸ್ ಆಗುತ್ತಿದೆ. ಇಲ್ಲಿವರೆಗೂ ತೆಲುಗು, ತಮಿಳು, ಹಿಂದಿ ಭಾಷೆಯ ಸಿನಿಮಾಗಳು ಥಿಯೇಟರ್ಗಳನ್ನು ಕಸಿದುಕೊಳ್ಳುತ್ತಿದ್ದವು. ಈಗ ಆಸಾಲಿಗೆ ಮಲಯಾಳಂ ಸಿನಿಮಾ ಕೂಡ ಸೇರಿಕೊಂಡಿದೆ.
ಹಾಗೇ ಈ ವಾರ ರಿಲೀಸ್ ಆಗುತ್ತಿರುವ ಮತ್ತೊಂದು ಬಿಗ್ ಬಜೆಟ್ ಸಿನಿಮಾ 'ಸಿಕಂದರ್'. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ ನಟಿಸಿರುವ ಸಿನಿಮಾವಿದು. ಈದ್ ವೇಳೆ ರಿಲೀಸ್ ಆಗುತ್ತಿರುವ ಈ ಸಿನಿಮಾ ಕರ್ನಾಟಕದಲ್ಲಿ ಮೊದಲ ದಿನ 900ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ಬಿಡುಗಡೆಯಾಗಲಿದೆ. ನಂತರದ ದಿನಗಳಲ್ಲಿ 500 ರಿಂದ 600 ಸ್ಕ್ರೀನ್ಗಳನ್ನು ಕಸಿದುಕೊಳ್ಳಬಹುದು ಎನ್ನಲಾಗಿದೆ.
ಇದೇ ವಾರ ರಿಲೀಸ್ ಆಗುತ್ತಿರುವ ಮತ್ತೊಂದು ಪರಭಾಷೆಯ ಸ್ಟಾರ್ ಸಿನಿಮಾ 'ವೀರ ಧೀರ ಸೂರನ್'. ತಮಿಳಿನ ಸ್ಟಾರ್ ನಟ ವಿಕ್ರಮ್ ನಟಿಸಿರುವ ಈ ಸಿನಿಮಾ ಪ್ರದರ್ಶನ ಮಾಡುವುದಕ್ಕೆ ಕರ್ನಾಟಕ ಥಿಯೇಟರ್ ಮಾಲೀಕರು ಮುಗಿಬಿದ್ದಿದ್ದಾರೆ ಎನ್ನಲಾಗಿದೆ. ಈ ಸಿನಿಮಾ ಕೂಡ ಸುಮಾರು 600 ಸ್ಕ್ರೀನ್ಗಳಲ್ಲಿ ಮೊದಲ ದಿನ ರಿಲೀಸ್ ಆಗುತ್ತಿದೆ. ಸೋಮವಾರದ ಬಳಿಕ 400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಹಾಗಂತ ಇಷ್ಟೇ ಸಿನಿಮಾಗಳಲ್ಲ ತೆಲುಗಿನಲ್ಲೂ ಎರಡು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ತೆಲುಗಿನ ಸ್ಟಾರ್ ನಟ ನಿತಿನ್ ಹಾಗೂ ಶ್ರೀಲೀಲಾ ನಟಿಸಿರುವ 'ರಾಬಿನ್ ಹುಡ್' ಸಿನಿಮಾ ಕೂಡ ಇದೇ ವಾರ ಬಿಡುಗಡೆಯಾಗುತ್ತಿದೆ. ಕರ್ನಾಟಕದಲ್ಲಿ ಮೊದಲ ಮೂರು ದಿನಗಳು ಈ ಸಿನಿಮಾ 300ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ರಿಲೀಸ್ ಆಗುತ್ತಿದೆ. ನಂತರ ದಿನಗಳಲ್ಲಿ 200ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ಪ್ರಸಾರ ಆಗಲಿದೆ.
ಕನ್ನಡದ ಸಿನಿಮಾಗಳು ಐಪಿಎಲ್ಗೆ ಹೆದರಿ ಸಿನಿಮಾ ಬಿಡುಗಡೆಯನ್ನೇ ಮುಂದಕ್ಕೆ ಹಾಕಿದೆ. ಇಂತಹ ಸಂದರ್ಭದಲ್ಲಿ ಪರಭಾಷೆಯ ಸಿನಿಮಾಗಳು ಒಂದರ ಹಿಂದೊಂದು ಸಿನಿಮಾಗಳು ದೊಡ್ಡ ಪ್ರಮಾಣದಲ್ಲಿ ಬಿಡುಗಡೆಯಾಗುತ್ತಿವೆ ಎನ್ನಲಾಗಿದೆ. ಇದರೊಂದಿಗೆ ಮತ್ತೊಂದು ಸಿನಿಮಾ 'ಮ್ಯಾಡ್ 2' ಕೂಡ 300ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ರಿಲೀಸ್ ಆಗುತ್ತಿದೆ ಎನ್ನಲಾಗಿದೆ. ಇದು ಕೂಡ ಸೋಮವಾರದ ಬಳಿಕ 200 ಸ್ಕ್ರೀನ್ಗಳಲ್ಲಿ ಪ್ರಸಾರ ಆಗಲಿದೆ.
ಇಷ್ಟು ಸಿನಿಮಾಗಳ ಮಧ್ಯೆ ಯೋಗರಾಜ್ ಭಟ್ ನಿರ್ದೇಶಿಸಿದ 'ಮನದ ಕಡಲು' ಸಿನಿಮಾ ರಿಲೀಸ್ ಆಗುತ್ತಿದೆ. ಮಲಯಾಳಂ,ತೆಲುಗು, ತಮಿಳಿನ ಸಿನಿಮಾಗಳ ಮಧ್ಯೆ ಭಟ್ಟರ ಸಿನಿಮಾಗೆ ಇದೂವರೆಗೂ ಸಿಕ್ಕಿದ್ದು 500 ಸ್ಕ್ರೀನ್ ಎನ್ನಲಾಗಿದ್ದು, ಎರಡನೇ ದಿನದಿಂದ 300+ ಸ್ಕ್ರೀನ್ಗಳಲ್ಲಿ ಪ್ರದರ್ಶನ ಕಾಣಲಿದೆ. ಯುಗಾದಿ ಹಬ್ಬದ ಈ ಸಮಯದಲ್ಲಿ ಪರಭಾಷೆಯ ಸಿನಿಮಾಗಳಿಗೆ ಹೋಲಿಸಿದರೆ ಭಟ್ರ ಚಿತ್ರಕ್ಕೆ ಕಡಿಮೆ ಸ್ಕ್ರೀನ್ ಸಿಕ್ಕಂತಾಗಿದೆ. ಪ್ರದರ್ಶಕರು ಕನ್ನಡ ಸಿನಿಮಾಗಳ ಕಡೆಗೆ ಹೆಚ್ಚು ಆಸಕ್ತಿಯನ್ನು ತೋರುತ್ತಿಲ್ಲ. ಹೀಗಾಗಿ ಕಡಿಮೆ ಸ್ಕ್ರೀನ್ಗಳು ಸಿಗುತ್ತಿವೆ ಎಂದು ಗಾಂಧಿನಗರದ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. 'ಮನದ ಕಡಲು' ಗೆದ್ದರೆ, ಕನ್ನಡಕ್ಕೆ ಹೊಸ ಪ್ರತಿಭೆಗಳು ಸಿಕ್ಕಂತಾಗುತ್ತೆ. ಸಮುಖ, ರಶಿಕಾ ಶೆಟ್ಟಿ ಹಾಗೂ ಅಂಜಲಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಂಗಾಯಣ ರಘು, ದತ್ತಣ್ಣರಂತಹ ಹಿರಿಯ ಕಲಾವಿದರು ಕೂಡ ನಟಿಸಿದ್ದಾರೆ.
ಇನ್ನು 'ಮನದ ಕಡಲು' ತಂಡಕ್ಕೆ ಕಡಿಮೆ ಸ್ಟ್ರೀನ್ಗಳು ಸಿಕ್ಕಿದೆ ಅಂತ ಸಿನಿಮಾ ಮಂದಿ ಚರ್ಚೆ ಮಾಡುತ್ತಿದ್ದಾರೆ. ಆದರೆ, ಈ ಬಗ್ಗೆ ನಿರ್ಮಾಪಕರು ಇದೂವರೆಗೂ ಯಾವುದೇ ಹೇಳಿಕೆ ಕೊಟ್ಟಿಲ್ಲ. ಇದು ಕೇವಲ ಗಾಂಧಿನಗರದಲ್ಲಿ ಚರ್ಚೆಯಾಗುತ್ತಿರುವ ಸುದ್ದಿ.


Click it and Unblock the Notifications











