Ranya Rao Case: ದುಬೈನಿಂದ 14 ಕೆಜಿ ಅಕ್ರಮ ಚಿನ್ನ: ಮಾಣಿಕ್ಯ ನಟಿಗೆ 14 ದಿನಗಳ ನ್ಯಾಯಾಂಗ ಬಂಧನ!
ಕಿಚ್ಚ ಸುದೀಪ್ ನಟಿಸಿದ ಸೂಪರ್ ಹಿಟ್ ಸಿನಿಮಾ 'ಮಾಣಿಕ್ಯ'ದಲ್ಲಿ ನಟಿಸಿದ್ದ ರನ್ಯಾ ರಾವ್ ಪರಪ್ಪ ಅಗ್ರಹಾರ ಜೈಲು ಸೇರಿದ್ದಾರೆ. ಅಕ್ರಮವಾಗಿ ಚಿನ್ನ ಸಾಗಿಸಿದ ಆರೋಪದ ಮೇಲೆ ನಟಿ ರನ್ಯಾರನ್ನು ಬಂಧಿಸಲಾಗಿತ್ತು. ಈ ಪ್ರಕರಣದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿ ಮಾಣಿಕ್ಯ ನಟಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ನ್ಯಾಯಾಧೀಶರು ವಿಚಾರಣೆ ನಡೆಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ರನ್ಯಾ ದುಬೈನಿಂದ ಅಕ್ರಮವಾಗಿ ಚಿನ್ನವನ್ನು ತಂದಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ಈ ಸಂಬಂಧ ಇವರನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್ಐ ಅಧಿಕಾರಿಗಳು ಬಂಧಿಸಿದ್ದರು. ಈ ವೇಳೆ ದೊಡ್ಡ ಪ್ರಮಾಣದಲ್ಲಿ ಚಿನ್ನ ಪತ್ತೆಯಾಗಿತ್ತು. ಹೀಗಾಗಿ ಅವರನ್ನು ವಿಚಾರಣೆ ನಡೆಸಿ, ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು.

ರನ್ಯಾ ರಾವ್ ಕಿಚ್ಚ ಸುದೀಪ್ ನಟನೆಯ 'ಮಾಣಿಕ್ಯ' ಸಿನಿಮಾದಲ್ಲಿ ನಟಿಸಿದ್ದರು. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಪಟಾಕಿ' ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಆದರೆ, ಕನ್ನಡದಲ್ಲಿ 'ಮಾಣಿಕ್ಯ','ಪಟಾಕಿ' ಸಿನಿಮಾಗಳು ಬಿಟ್ಟರೆ ಉಳಿದ ಸಿನಿಮಾ ಅಷ್ಟೊಂದು ಯಶಸ್ಸು ತಂದುಕೊಟ್ಟಿರಲಿಲ್ಲ. ಇತ್ತೀಚೆಗೆ ಯಾವುದೇ ಕನ್ನಡ ಸಿನಿಮಾದಲ್ಲಿ ಈ ನಟಿ ಕಾಣಿಸಿಕೊಂಡಿರಲಿಲ್ಲ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ನಟಿ ರನ್ಯಾರನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ರನ್ಯಾ ರಾವ್ ಬ್ಯುಸಿನೆಸ್ ವಿಚಾರವಾಗಿ ದುಬೈಗೆ ಹೋಗಿದ್ದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಹೊಂದಿದ್ದ ಡಿಆರ್ಐ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಕಾದು ಕೂತಿದ್ದರು. ನಿನ್ನೆ (ಮಾರ್ಚ್ 3) ರಾತ್ರಿ ಸರಿ ಸುಮಾರು 7.30ಕ್ಕೆ ಬೆಂಗಳೂರಿಗೆ ಲ್ಯಾಂಡ್ ಆಗುತ್ತಿದ್ದಂತೆ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ವಶಕ್ಕೆ ಪಡೆದು ನಾಗಾವರದ ಕಚೇರಿಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದರು.

'ಮಾಣಿಕ್ಯ' ಸಿನಿಮಾದ ನಟಿ ರನ್ಯಾ ರಾವ್ ಮೂಲತ: ಚಿಕ್ಕಮಗಳೂರು ಜಿಲ್ಲೆಯವರು. ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅವರ 2ನೇ ಪತ್ನಿಯ ಮೊದಲ ಗಂಡನ ಮಗಳಾಗಿದ್ದು, ವಿದ್ಯಾಭ್ಯಾಸದ ಬಳಿಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈಗ ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ರನ್ಯಾ ಸಿಕ್ಕಿಬಿದ್ದಿದ್ದು ಅಚ್ಚರಿ ಮೂಡಿಸಿದೆ. ರನ್ಯಾ ಚಿನ್ನದ ಬಿಲ್ಲೆಗಳನ್ನು ದೇಹದೊಳಗೆ ಅಡಗಿಸಿಟ್ಟಕೊಂಡು ಬಂದಿದ್ದರು ಎಂದು ವರದಿಯಾಗಿವೆ. ಆದರೆ, ಇಷ್ಟೊಂದು ಚಿನ್ನವನ್ನು ಕಳ್ಳ ಸಾಗಣೆ ಮಾಡುವ ಅಗತ್ಯವೇನಿತ್ತು? ಅಷ್ಟೊಂದು ಚಿನ್ನ ಸಿಕ್ಕಿದ್ದು ಹೇಗೆ? ಇಂತಹ ಒಂದಿಷ್ಟು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಗಬೇಕಿದೆ.
ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ನಟಿ ರನ್ಯಾ ರಾವ್ ವಿಚಾರಣೆ ಮಾಡಿದ ಬಳಿಕ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದ್ದಾರೆ. ಈ ಸಂಬಂಧ 14 ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿಕೊಡಲಾಗಿದೆ. ಇನ್ನು ಚಿಕ್ಕ ಕಳ್ಳ ಸಾಗಣೆ ಆರೋಪ ಹೊತ್ತಿರುವ ನಟಿ ನಾಳೆ (ಮಾರ್ಚ್ 5) ಜಾಮೀನು ಅರ್ಜಿಯನ್ನು ಸಲ್ಲಿಸುವ ಸಾಧ್ಯತೆಯಿದೆ.
ಇನ್ನು ರನ್ಯಾ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿರುವಾಗಲೇ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಅಲ್ಲಿಯೂ ಹೆಚ್ಚು ಯಶಸ್ಸು ಸಿಗಲ್ಲಿಲ್ಲ. ಹೀಗಾಗಿ ಇತ್ತೀಚೆಗೆ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಒಂದಿಷ್ಟು ದಿನ ಸೈಲೆಂಟ್ ಆಗಿದ್ದ ನಟಿ ರನ್ಯಾ ರಾವ್ ಈಗ ದಿಢೀರನೇ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಮುನ್ನೆಲೆಗೆ ಬಂದಿದ್ದಾರೆ. ಸದ್ಯ ಆರೋಪಿಯಾಗಿರುವ ರನ್ಯಾ ಅವರ ವಿಚಾರಣೆ ನಡೆಯುತ್ತಿದ್ದು, ಆರೋಪ ಸಾಬೀತಾದರೆ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ.


Click it and Unblock the Notifications











