'ಮಾಸ್ತಿ ಗುಡಿ' ದುರಂತ: ನಿರ್ಮಾಪಕ ಸುಂದರ್ ಗೌಡ ಎ-1 ಆರೋಪಿ.!
ದುನಿಯಾ ವಿಜಯ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ 'ಮಾಸ್ತಿ ಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಗಾಗಿ ಹೆಲಿಕಾಫ್ಟರ್ ನಿಂದ ಹಾರುವ ರೋಚಕ ದೃಶ್ಯದಲ್ಲಿ ಪಾಲ್ಗೊಂಡು, ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮುಳುಗಿ ಖಳನಟರಾದ ಅನಿಲ್ ಮತ್ತು ಉದಯ್ ದುರಂತಸಾವಿಗೀಡಾಗಿದ್ದಾರೆ. ['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]
'ಮಾಸ್ತಿ ಗುಡಿ' ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಿತ್ರತಂಡದ ವಿರುದ್ಧ ತಾವರೆಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಎಫ್.ಐ.ಆರ್ ಹಾಕಿದ್ದಾರೆ.

ಜಾಮೀನು ರಹಿತ ಪ್ರಕರಣ
ಅನಿಲ್ ಮತ್ತು ರಾಘವ್ ಉದಯ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ತಿಗುಡಿ ಚಿತ್ರ ತಂಡದ ಐವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಐಪಿಸಿ ಸೆಕ್ಷನ್ 304(A) ಹಾಗೂ 308 ಅನ್ವಯ ಕೇಸು ದಾಖಲಾಗಿದೆ. ಈ ಐವರನ್ನು ಬಂಧಿಸಿ ತನಿಖೆ ನಡೆಸುವ ಸಾಧ್ಯತೆಗಳಿವೆ. [ಅನಿಲ್, ಉದಯ್ ಕೊನೆಯ ಮಾತಲ್ಲಿ ಸಾವಿನ ಮುನ್ಸೂಚನೆಯ ಸುಳಿವು.!]

ಎ-1 ಆರೋಪಿ ನಿರ್ಮಾಪಕ, ಎ-2 ಆರೋಪಿ ನಿರ್ದೇಶಕ
'ಮಾಸ್ತಿ ಗುಡಿ' ಚಿತ್ರದ ನಿರ್ಮಾಪಕ ಸುಂದರ್ ಗೌಡ ಅವರನ್ನು ಎ-1 ಆರೋಪಿಯಾಗಿ, ನಿರ್ದೇಶಕ ನಾಗಶೇಖರ್ ಅವರು ಎ-2 ಆರೋಪಿ, ಸಹ ನಿರ್ದೇಶಕ ಎ-3 ಆರೋಪಿ, ಸಾಹಸ ನಿರ್ದೇಶಕ ರವಿವರ್ಮ ಅವರನ್ನು ಎ-4 ಆರೋಪಿಯನ್ನಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಾಹಸ ಸಹ ನಿರ್ದೇಶಕ ಎ-5 ಆರೋಪಿಯಾಗಿದ್ದು, ಚಿತ್ರದ ನಾಯಕ ನಟ ದುನಿಯಾ ವಿಜಯ್ ವಿರುದ್ಧವೂ ಕ್ರಿಮಿನಲ್ ಕೇಸ್ ದಾಖಲಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ['ಮಾಸ್ತಿಗುಡಿ' ಸಾಹಸ ನಿರ್ದೇಶಕ ರವಿವರ್ಮಗೆ ಜಗ್ಗೇಶ್ ಛೀಮಾರಿ]

ದುರ್ಘಟನೆಯ ಹಿನ್ನಲೆ
ನಿನ್ನೆ (ನವೆಂಬರ್ 7) ಮಧ್ಯಾಹ್ನ ರಾಮನಗರ ಜಿಲ್ಲೆ ತಾವೆರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗುತ್ತಿತ್ತು. ಹೆಲಿಕಾಪ್ಟರ್ ನಿಂದ ನೀರಿಗೆ ಹಾರಿ ನಾಯಕನಿಂದ ತಪ್ಪಿಸಿಕೊಳ್ಳುವ ಸನ್ನಿವೇಶದಲ್ಲಿ ಇಬ್ಬರು ನಟರು ನೀರುಪಾಲಾಗಿದ್ದರು. [ದುರಂತ ಸಾವಿಗೀಡಾದ ಅನಿಲ್ ಯಾರು.? ನಿಜ ಬದುಕಿನ ಕಥೆ ಇಲ್ಲಿದೆ...]

ಇನ್ನೂ ಮೃತದೇಹ ಸಿಕ್ಕಿಲ್ಲ
ದುರ್ಘಟನೆ ಸಂಭವಿಸಿ 21 ಗಂಟೆಗಳು ಕಳೆದಿದ್ದರೂ, ಇಬ್ಬರು ನಟರ ಮೃತದೇಹ ಇನ್ನೂ ಪತ್ತೆ ಆಗಿಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್.ಡಿ.ಆರ್.ಎಫ್), ಸ್ಥಳೀಯ ನುರಿತ ಈಜುಪಟುಗಳು, ಸ್ಕೂಬಾ ಡೈವರ್ ಗಳು, ರೋಬೋ ವಿಷನ್ ಕ್ಯಾಮರಾವುಳ್ಳ ತಂಡ ಮೃತದೇಹಗಳಿಗಾಗಿ ಶೋಧಕಾರ್ಯ ನಡೆಸುತ್ತಿದೆ.

ವಿಡಿಯೋ ನೋಡಿ....
'ಮಾಸ್ತಿ ಗುಡಿ' ಚಿತ್ರೀಕರಣದ ವೇಳೆ ಆದ ಅವಘಡದ ವಿಡಿಯೋ ಇಲ್ಲಿದೆ ನೋಡಿ....


Click it and Unblock the Notifications











