ಮಹಾಕುಂಭ ಮೇಳದಲ್ಲಿ ನಾಗೇಂದ್ರ ಪ್ರಸಾದ್-ಜನಾರ್ಧನ ರೆಡ್ಡಿ ಮುಖಾಮುಖಿ
ಕಳೆದ ಕೆಲವು ದಿನಗಳಿಂದ ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. 144 ವರ್ಷಕ್ಕೆ ನಡುಯುವ ಈ ಮಹಾಕುಂಭ ಮೇಳಕ್ಕೆ ಕೋಟ್ಯಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಭಕ್ತರ ಜೊತೆಗೆ ಸಾಧು ಸಂತರು, ನಾಗ ಸಾಧುಗಳು ಸೇರಿದಂತೆ ಹಲವರು ಪ್ರಯಾಗ್ರಾಜ್ನಲ್ಲಿಯೇ ಬೀಡು ಬಿಟ್ಟಿದ್ದಾರೆ.
ಉತ್ತರ ಪ್ರದೇಶದಲ್ಲಿ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ವೇಳೆ ಮಾಘಿ ಪೂರ್ಣಿಮೆ ದಿನ ಕೂಡ ಕೋಟ್ಯಾಂತರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಭಕ್ತಿ ಸಾಗರದಲ್ಲಿ ಮುಳುಗಿದ್ದಾರೆ. ಈಗ ಕನ್ನಡ ಚಿತ್ರರಂಗ ಸಿನಿ ಸಾಹಿತಿ ಡಾ.ನಾಗೇಂದ್ರ ಪ್ರಸಾದ್ ಹಾಗೂ ಗಾಲಿ ಜನಾರ್ಧನ ರೆಡ್ಡಿ ಕೂಡ ಮಹಾಕುಂಭದಲ್ಲಿ ಭಾಗಿಯಾಗಿದ್ದಾರೆ.

ಕಾಕತಾಳೀಯವೆಂಬಕ್ಕೆ ಸಿನಿ ಸಾಹಿತಿ ನಾಗೇಂದ್ರ ಪ್ರಸಾದ್ ಹಾಗೂ ಗಾಲಿ ಜನಾರ್ಧನ ರೆಡ್ಡಿ ಇಬ್ಬರೂ ಪ್ರಯಾಗ್ರಾಜ್ನಲ್ಲಿ ಭೇಟಿಯಾಗಿದ್ದಾರೆ. ಜೊತೆಗೆ ಇಬ್ಬರೂ ಸೇರಿ ಒಂದು ವಿಡಿಯೋವನ್ನೂ ಮಾಡಿದ್ದಾರೆ. ಈ ವಿಡಿಯೋದಲ್ಲಿ ನಾಗೇಂದ್ರ ಪ್ರಸಾದ್ ಹಾಗೂ ಜನಾರ್ಧನ ರೆಡ್ಡಿ ಇಬ್ಬರೂ ಅಚಾನಕ್ ಆಗಿ ಬೇಡಿ ಆಗಿದ್ದರ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಏನಿದೆ ಅಂತ ತಿಳಿಯಲು ಮುಂದೆ ಓದಿ.
ಡಾ. ನಾಗೇಂದ್ರ ಪ್ರಸಾದ್ ಹಾಗೂ ಜನಾರ್ಧನ ರೆಡ್ಡಿ ಇಬ್ಬರೂ ಮೊದಲೇ ಚಿರಪರಿಚಿತರು. ಜನಾರ್ಧನ ರೆಡ್ಡಿ ರಾಜಕೀಯಕ್ಕೆ ಕಾಲಿಡುವುದಕ್ಕೂ ಮುನ್ನ ನಾಗೇಂದ್ರ ಪ್ರಸಾದ್ಗೆ ಪರಿಚಯವಿದೆ. ಈಗ ಮಹಾಕುಂಭ ಮೇಳದ ಸಂದರ್ಭದಲ್ಲಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲು ತೆರಳಿದ್ದರು. ಈ ವೇಳೆ ನಾಗೇಂದ್ರ ಪ್ರಸಾದ್ಗೆ ಅಚಾನಕ್ ಆಗಿ ಗಾಲಿ ಜನಾರ್ಧನ ರೆಡ್ಡಿ ಕಾಣಿಸಿದ್ದಾರೆ. ಹಾಗೇ ಅವರೊಂದಿಗೆ ವಿಡಿಯೋ ಮಾಡಿ ಖುಷಿಯನ್ನು ಹಂಚಿಕೊಂಡಿದ್ದಾರೆ.
"ಇವತ್ತು ಪ್ರಯಾಗ್ ರಾಜ್ನಲ್ಲಿ ನಾನು ಸ್ನಾನ ಮಾಡಿಕೊಂಡು ಬರುತ್ತಿದ್ದೆ ಆಗ ಸಿಕ್ಕಿದ್ದು ಯಾರು ಅಂತ ನೋಡಿ. ಅವರಿಗೆ ಆರಂಭದಲ್ಲಿ ರಾಜಕಾರಣದಲ್ಲಿ ಆಸಕ್ತಿ ಇರಲಿಲ್ಲ. ಶ್ರೀರಾಮುಲು ಅವರನ್ನು, ಸೋಮಶೇಖರ ರೆಡ್ಡಿಯವರನ್ನು ರಾಜಕಾರಣಿ ಮಾಡಬೇಕು ಅಂತ ಅವರು ದೂರವೇ ಉಳಿದಿದ್ದರು. ನೇರ ರಾಜಕೀಯದಲ್ಲಿ ಇರಲಿಲ್ಲ. ಆ ದಿನಗಳಿಂದ ನನಗೆ ಗೊತ್ತು." ಎಂದು ಪ್ರಯಾಗ್ ರಾಜ್ನಲ್ಲಿಯೇ ಜನಾರ್ಧನ್ ರೆಡ್ಡಿ ಪಕ್ಕದಲ್ಲಿ ನಿಂತು ನಾಗೇಂದ್ರ ಪ್ರಸಾದ್ ವಿಡಿಯೋ ಮಾಡಿದ್ದಾರೆ.
ಹಾಗೇ ಜನಾರ್ಧನ ರೆಡ್ಡಿ ದಿಢೀರನೇ ಕಾಣಿಸಿಕೊಂಡಿದ್ದರ ಬಗ್ಗೆ ಮಾತಾಡಿದ್ದಾರೆ "ಇವತ್ತು ಅಚಾನಕ್ ಆಗಿ ಇಲ್ಲಿ ಸಿಕ್ಕಿದರು. ಬಹಳ ಸಂತೋಷ ಆಯ್ತು. ಅವರ ಶ್ರೀಮತಿಯವರು, ಅಳಿಯ ಎಲ್ಲರೂ ಇದ್ದಾರೆ. ಅವರು ಸಾಮಾನ್ಯ ಜನರೊಂದಿಗೆ ಹೋಗುತ್ತಿರುವುದನ್ನು ನೋಡುವುದಕ್ಕೆ ತುಂಬಾನೇ ಖುಷಿ ಆಗುತ್ತೆ. ಬೇರೆ ನೆಲದಲ್ಲಿ ನಮ್ಮವರು ಸಿಕ್ಕಾಗ ಆಗುವ ಖುಷಿಯೇ ಬೇರೆ." ಎಂದು ನಾಗೇಂದ್ರ ಪ್ರಸಾದ್ ಅವರು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಇನ್ನೊಂದು ಕಡೆ ಗಾಲಿ ಜನಾರ್ಧನ ರೆಡ್ಡಿ ಕೂಡ ನಾಗೇಂದ್ರ ಪ್ರಸಾದ್ ಅವರನ್ನು ಸರಸ್ವತಿ ಪುತ್ರ ಎಂದು ಕರೆದಿದ್ದಾರೆ. "ನಾಗೇಂದ್ರ ಪ್ರಸಾದ್ ಅಂದರೇನೆ ಒಳ್ಳೆಯ ಬರಹಗಾರರು. ಸರಸ್ವತಿ ಪುತ್ರ ಅಂತಾನೇ ನಾನು ಭಾವಿಸುವುದು. ಅಂತಹ ಸರಸ್ವತಿ ಪುತ್ರರನ್ನು ಗಂಗಾ ಯಮುನಾ ತ್ರಿವೇಣಿ ಸಂಗಮದ ದಿವಸ, ಮಹಾಕುಂಭ ಮೇಳದಲ್ಲಿ ಭೇಟಿಯಾಗಿದ್ದೇವೆ. ವಿಶೇಷವಾಗಿ ಲಕ್ಷಾಂತರ ಜನರು ಭಕ್ತಿ ಪರವಶರಾಗಿ ಮುಳುಗಿದ್ದರು. ಅಂತವರ ಮಧ್ಯೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಕುಟುಂಬದವರ ಜೊತೆ ನಾನು ಹೋಗುತ್ತಿದ್ದೆ. ಅದರಲ್ಲಿ ಇನ್ನೂ ಸಾಮಾನ್ಯರಲ್ಲಿ ಸಾಮಾನ್ಯನಾಗಿ ನಮ್ಮ ನಾಗೇಂದ್ರ ಪ್ರಸಾದ್ ಕಂಡಿದ್ದು ನನಗೆ ನಿಜಕ್ಕೂ ಬಹಳ ಖುಷಿ ಆಯ್ತು. ಆ ತಾಯಿ ಸರಸ್ವತಿ ಆಶೀರ್ವಾದದಿಂದ ಲಕ್ಷ್ಮಿ ಪುತ್ರರೂ ಆಗಿ ಕನ್ನಡ ಚಿತ್ರರಂಗದಲ್ಲಿ ಶಾಶ್ವತವಾಗಿ ಇರಬೇಕು" ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ.


Click it and Unblock the Notifications











