ದರ್ಶನ್ ಹುಟ್ಟುಹಬ್ಬಕ್ಕೆ 'ಮೆಜೆಸ್ಟಿಕ್' ಚಿತ್ರ ಬಿಡುಗಡೆ ಮಾಡಲು ನಿರ್ಮಾಪಕ ಸಜ್ಜು: ಸಿನಿಮಾಗೆ ಹೊಸ ರೂಪ
ದರ್ಶನ್ ಅಭಿಮಾನಿಗಳಿಗೆ ಇಂದು( ಫೆ 8) ಹಬ್ಬದ ಸಂಭ್ರಮ. ದರ್ಶನ್ ಮೊದಲ ಬಾರಿ ನಾಯಕನಾಗಿ ಥಿಯೇಟರ್ಗೆ ಎಂಟ್ರಿಕೊಟ್ಟಿದ್ದ 'ಮೆಜೆಸ್ಟಿಕ್' ಸಿನಿಮಾಗೆ 20 ವರ್ಷ ತುಂಬಿದೆ. ಮೊದಲ ಸಿನಿಮಾದಲ್ಲಿಯೇ ಇಷ್ಟೊಂದು ಅದ್ಭುತ ಯಶಸ್ಸು ಸಿಗಬಹುದೆಂದು ಬಹುಶ: ದರ್ಶನ್ ಕೂಡ ಊಹಿಸಿರಲು ಸಾಧ್ಯವಿಲ್ಲ. ಆದರೆ, ಸಿನಿಮಾ ಅಂದುಕೊಂಡ ಲೆಕ್ಕಾಚಾರವನ್ನೆಲ್ಲಾ ತಲೆಕೆಳಗೆ ಮಾಡಿತ್ತು. ಥಿಯೇಟರ್ಗಳಲ್ಲಿ ಈ ಸಿನಿಮಾ 100 ದಿನ ಯಶಸ್ವಿಯಾಗಿ ಪೂರೈಸಿತ್ತು.
'ಮೆಜೆಸ್ಟಿಕ್' ಸಿನಿಮಾ ಬಾರದೆ ಹೋಗಿದ್ದರೆ, ಬಹುಶ: ಕನ್ನಡಕ್ಕೊಬ್ಬ ಸೂಪರ್ಸ್ಟಾರ್ ಸಿಗುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. 20 ವರ್ಷದ ಹಿಂದೆ ಮೆಜೆಸ್ಟಿಕ್ ಎನ್ನುವ ಸ್ಮಾಲ್ ಬಜೆಟ್ ಸಿನಿಮಾವೊಂದು ದರ್ಶನ್ ಎಂಬ ಸೂಪರ್ಸ್ಟಾರ್ ಅನ್ನು ಹುಟ್ಟಾಕಿತ್ತು. ಇಂತಹ ಅದ್ಭುತ ಸಂಭ್ರಮವನ್ನು ದರ್ಶನ್ ಹುಟ್ಟುಹಬ್ಬದೊಂದಿಗೆ ಕಳೆಯಲು ನಿರ್ಮಾಪಕ ಎಂ ಜಿ ರಾಮಮೂರ್ತಿ ನಿರ್ಧರಿಸಿದ್ದಾರೆ. ಒಂದು ಯೋಜನೆಗಳನ್ನು ಹಾಕಿಕೊಂಡಿದ್ದಾರೆ.

'ಮೆಜೆಸ್ಟಿಕ್' ಮರು ಬಿಡುಗಡೆ
ಸ್ಯಾಂಡಲ್ವುಡ್ನಲ್ಲಿ ಹೀರೋ ಆಗಲು ದರ್ಶನ್ ಸಿಕ್ಕಾಪಟ್ಟೆ ಸರ್ಕಸ್ ಮಾಡಿದ್ದರು. ಕೊನೆಗೂ ಸಿಕ್ಕ ಒಂದು ಅವಕಾಶ ಸಿಕ್ಕಿತ್ತು. ಅದೇ ಅವಕಾಶ ಸಂಪೂರ್ಣವಾಗಿ ಬಳಸಿಕೊಂಡ ದರ್ಶನ್ ಇಂದು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈ ಸಿನಿಮಾ 20 ವರ್ಷ ಪೂರೈಸಿದ ಈ ಸಂದರ್ಭದಲ್ಲಿ ಮತ್ತೆ ಮೆಜೆಸ್ಟಿಕ್ ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ನಿರ್ಮಾಪಕ ಎಂ ಜಿ ರಾಮಮೂರ್ತಿ ಈಗಾಗಲೇ ಸಿನಿಮಾ ಮರು ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ದರ್ಶನ್ ಹುಟ್ಟುಹಬ್ಬಕ್ಕೆ 'ಮೆಜೆಸ್ಟಿಕ್'
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ಇನ್ನು ಕೇವಲ 8 ದಿನಗಳು ಬಾಕಿಯಿವೆ. ಆ ದಿನ ಹಬ್ಬ ಆಚರಿಸಲು ದರ್ಶನ್ ಅಭಿಮಾನಿಗಳು ಕಾದು ಕೂತಿದ್ದಾರೆ. ಇದೇ ದಿನ 'ಮೆಜಿಸ್ಟಿಕ್' ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. 20 ವರ್ಷದ ಸಿನಿಮಾವನ್ನು ಮತ್ತೆ ಹೊಸದಾಗಿ ಕಲರಿಂಗ್ ಮಾಡಲಾಗಿದೆ. ಸೌಂಡ್ ಕರೆಕ್ಷನ್ ಮಾಡಲಾಗಿದೆ. ಹೊಸ ತಂತ್ರಜ್ಞಾನವನ್ನು ಅಳಪಡಿಸಿ, ಸಿನಿಮಾವನ್ನು ದರ್ಶನ್ ಅಭಿಮಾನಿಗಳಿಗಾಗಿ ಬಿಡುಗಡೆ ಮಾಡಲಿದ್ದೇವೆ." ಎಂದು ನಿರ್ಮಾಪಕ ಎಂ ಜಿ ರಾಮಮೂರ್ತಿ ಫಿಲ್ಮಿ ಬೀಟ್ಗೆ ತಿಳಿಸಿದ್ದಾರೆ.

ಎಷ್ಟು ಚಿತ್ರಮಂದಿರಗಳಲ್ಲಿ ರಿಲೀಸ್
ದರ್ಶನ್ ಅಭಿನಯದ 'ಮೆಜೆಸ್ಟಿಕ್' ಸಿನಿಮಾ ಎಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತೆ ಅನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಯಾಕೆಂದರೆ, ಈಗಾಗಲೇ ಈ ವಾರ 6 ಸಿನಿಮಾ, ಮುಂದಿನ ವಾರ ಮೂರು ಸಿನಿಮಾ ಅನೌನ್ಸ್ ಆಗಿದೆ. ಇವುಗಳ ಮಧ್ಯೆ 'ಮೆಜೆಸ್ಟಿಕ್' ಸಿನಿಮಾ ಹೊಸದಾಗಿ ಸೇರ್ಪಡೆಯಾಗಿದೆ. " ಈಗ ಸಿನಿಮಾ ಮರು ಬಿಡುಗಡೆ ಮಾಡಬೇಕು ಅಂತ ನಿರ್ಧಾರ ಮಾಡಿದ್ದೇವೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಎಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬೇಕು ಅಂತ ನಿರ್ಧರಿಸುತ್ತೇವೆ. ಈಗ ತಾನೇ ಥಿಯೇಟರ್ಗಳು ಓಪನ್ ಆಗಿವೆ. ಹೀಗಾಗಿ ಎಲ್ಲವನ್ನೂ ನೋಡಿಕೊಂಡು ಎಷ್ಟು ಥಿಯೇಟರ್ಗಳಲ್ಲಿ ರಿಲೀಸ್ ಮಾಡಬೇಕು ಅಂತ ನಿರ್ಧಾರ ಮಾಡಲಿದ್ದೇವೆ." ಎಂದು ಮೆಜೆಸ್ಟಿಕ್ ಸಿನಿಮಾದ ನಿರ್ಮಾಪಕ ಎಂ ಜಿ ರಾಮಮೂರ್ತಿ ಮಾಹಿತಿ ನೀಡಿದ್ದಾರೆ.

20 ವರ್ಷದ ಸಂಭ್ರಮದ ಬಗ್ಗೆ ದರ್ಶನ್ ಹೇಳಿದ್ದೇನು?
ಪಿ.ಎನ್. ಸತ್ಯ ಮೆಜೆಸ್ಟಿಕ್ ಸಿನಿಮಾವನ್ನು ನಿರ್ದೇಶಿಸಿದ್ದರು. ಎಂ.ಜಿ. ರಾಮಮೂರ್ತಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ದರ್ಶನ್ ಇವರಿಬ್ಬರನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಹೀಗಾಗಿ ದರ್ಶನ್ ಟ್ವೀಟ್ ಮೂಲಕ ಅಭಿಮಾನಿಗಳಿಗೆ ಹಾಗೂ ಮೆಜೆಸ್ಟಿಕ್ ಕಾರಣಕರ್ತರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. "ನಿಮ್ಮೆಲ್ಲರ ಮನದಂಗಳಕ್ಕೆ ದಾಸನಾಗಿ ಇಟ್ಟ ಮೊದಲ ಹೆಜ್ಜೆ 'ಮೆಜೆಸ್ಟಿಕ್' ಬಿಡುಗಡೆಯಾಗಿ ಇಂದಿಗೆ ಎರಡು ದಶಕಗಳು ಕಳೆದಿವೆ. ಇಂತ ಒಳ್ಳೆ ಬುನಾದಿಯನ್ನು ನೀಡಿದ ಚಿತ್ರಕ್ಕೆ ಶ್ರಮಿಸಿದ ನಿರ್ದೇಶಕ, ನಿರ್ಮಾಪಕರು ಹಾಗೂ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ವಂದನೆಗಳು. ನಿಮ್ಮ ಪ್ರೀತಿಗೆ ನಾ ಸದಾ ಚಿರಋಣಿ." ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.


Click it and Unblock the Notifications











