Sanchari Vijay: ಸಂಚಾರಿ ವಿಜಯ್ 'ತಲೆದಂಡ' ನೆನಪಿಸಿದ ಮಲಯಾಳಂ ಸೂಪರ್ಸ್ಟಾರ್ ಮಮ್ಮುಟ್ಟಿ
ವಿಭಿನ್ನ ಹಾಗೂ ಪ್ರಯೋಗಾತ್ಮಕ ಸಿನಿಮಾಗಳ ಮೂಲಕ ಸ್ಯಾಂಡಲ್ವುಡ್ನಲ್ಲಿ ಚಿರಪರಿಚಿತರಾಗಿದ್ದ ನಟ ಸಂಚಾರಿ ವಿಜಯ್. ತನ್ನ ವಿಶಿಷ್ಟ ಅಭಿನಯದಿಂದಲೇ ರಾಷ್ಟ್ರಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದ ಸಂಚಾರಿ ವಿಜಯ್ ಅಪಘಾತದಲ್ಲಿ ಅಗಲಿದ ನೋವು ಇನ್ನು ಹಾಗೇ ಇದೆ. ಈಗ ಇವರೇ ಅಭಿನಯದ ಕೊನೆಯ ಸಿನಿಮಾ 'ತಲೆದಂಡ' ಬಿಡುಗಡೆಗೆ ಸಜ್ಜಾಗಿದೆ. ಏಪ್ರಿಲ್ 1ರಂದು ವಿಜಯ್ ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ.
ವಿಜಯ್ ಅಭಿನಯದ 'ತಲೆದಂಡ' ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಭಾರತದ ಚಿತ್ರೋತ್ಸವಗಳಲ್ಲೂ ಈ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿದೆ. ಇದೇ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ವಿಶೇಷ ಅಂದರೆ, ಮಲಯಾಳಂ ಸೂಪರ್ಸ್ಟಾರ್ ಮಮ್ಮುಟ್ಟಿ ಈ ಸಿನಿಮಾ ಪರ ಅಖಾಡಕ್ಕಿಳಿದಿದ್ದಾರೆ. ದಿವಂಗತ ಸಂಚಾರಿ ವಿಜಯ್ ಹಾಗೂ ಅವರ ಸಿನಿಮಾ ಬಗ್ಗೆ ಹೃದಯಪೂರ್ವಕವಾಗಿ ಬರೆದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಸೂಪರ್ಸ್ಟಾರ್ ಮಮ್ಮುಟ್ಟಿ ಹೇಳಿದ್ದೇನು?
ಸಂಚಾರಿ ವಿಜಯ್ ಪ್ರತಿಭೆ ಕನ್ನಡಿಗರಿಗಷ್ಟೆ ಅಲ್ಲ. ಇಡೀ ಭಾರತೀಯ ಚಿತ್ರರಂಗಕ್ಕೆ ಗೊತ್ತಿದೆ. ವಿಶಿಷ್ಟ ಪಾತ್ರಗಳನ್ನು ಹುಡುಕಿಕೊಂಡು ಹೋಗುತ್ತಿದ್ದ ವಿಜಯ್ ಪ್ರತಿಯೊಂದು ಸಿನಿಮಾವೂ ಜನಮೆಚ್ಚುಗೆ ಗಳಿಸಿತ್ತು. ಕಮರ್ಷಿಯಲ್ ಸಿನಿಮಾಗೆ ಜೋತು ಬೀಳದೆ ಸಮಾಜಿಕ ಸಂದೇಶ ಸಾರುವ ಪಾತ್ರಗಳಲ್ಲಿ ನಟಿಸಿದ್ದರು. ಹೀಗಾಗಿ ಪರಭಾಷೆಯ ಸೂಪರ್ಸ್ಟಾರ್ಗಳೂ ಕೂಡ ವಿಜಯ್ ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಈ ಬಾರಿ ಮಮ್ಮುಟ್ಟಿ ದಿವಂಗತ ಸಂಚಾರಿ ವಿಜಯ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಮಮ್ಮುಟ್ಟಿ ಬರೆದುಕೊಂಡಿದ್ದೇನು?
"ಸಂಚಾರಿ ವಿಜಯ್ ನೆನಪುಗಳನ್ನು ಮೆಲುಕು ಹಾಕುತ್ತಾ ಕುಳಿತಿದ್ದೇನೆ. ಅವರಿಲ್ಲ ಅನ್ನುವುದನ್ನು ನಾನು ನಂಬಲು ಆಗುತ್ತಿಲ್ಲ. ಹೈದರಾಬಾದ್ನಲ್ಲಿ ನಡೆದ ಅವಾರ್ಡ್ ಫಂಕ್ಷನ್ನಲ್ಲಿ ನಾವು ಭೇಟಿಯಾಗಿದ್ದೆವು. ಆಗ ಅವರು ನನ್ನ ಅಭಿಮಾನಿ ಎಂದು ಹೇಳಿದಾಗ ನಾನು ಧನ್ಯವಾಗಿದ್ದೆ. ಅವರ ಮುಂದಿನ ಸಿನಿಮಾವನ್ನು ನೋಡಿ, ಅಭಿಪ್ರಾಯವನ್ನು ತಿಳಿಸುವಂತೆ ಹೇಳಿದ್ದರು. ಅದೇ ಅವರ ಕೊನೆಯ ಸಿನಿಮಾ ಎಂದು ಯಾರಿಗೆ ಗೊತ್ತಿತ್ತು. ಚಿತ್ರಮಂದಿರದಲ್ಲಿ ಅವರ ಸಿನಿಮಾ ನೋಡುವುದರ ಮೂಲಕ ಸವಿ ನೆನಪುಗಳನ್ನು ಸಂಭ್ರಮಿಸೋಣ. ಅವರ ಹಾರ್ಡ್ ವರ್ಕ್ ಹಾಗೂ ಪ್ರತಿಭೆಯನ್ನು ನಾವೆಷ್ಟು ಪ್ರೀತಿಸಿದ್ದೇವೆ ಎನ್ನುವುದನ್ನು ತಿಳಿಯಲು ಅವರು ಕಾಯುತ್ತಿರುತ್ತಾರೆ ಎಂಬ ನಂಬಿಕೆ ನನಗಿದೆ." ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.

ಸಂಚಾರಿ ವಿಜಯ್ ಪಾತ್ರ 'ಕುನ್ನ'
'ತಲೆದಂಡ' ಸಿನಿಮಾ ಕೂಡ ವಿಭಿನ್ನ ಕಥಾಹಂದರದ ಸಿನಿಮಾ. ಪ್ರವೀಣ ಕೃಪಾಕರ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಈ ಭೂಮಿಯನ್ನು ಹೇಗೆಲ್ಲಾ ಬಳಸಿಕೊಳ್ಳುತ್ತಿದ್ದಾರೆ. ಭೂಮಿಯ ಮೇಲೆ ಶೋಷಣೆ ಮಾಡುತ್ತಿದ್ದಾನೆ ಎಂಬ ಎಳೆಯನ್ನಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಈ ಚಿತ್ರದ ಸಂಚಾರಿ ವಿಜಯ್ ಸೋಲಿಗ ಬುಡಕಟ್ಟು ಜನಾಂಗಕ್ಕೆ ಸೇರಿದ 'ಕುನ್ನ' ಎಂಬ ಪಾತ್ರದಲ್ಲಿ ಸಂಚಾರಿ ವಿಜಯ್ ನಟಿಸಿದ್ದಾರೆ. ಇದರಲ್ಲಿ ವಿಜಯ್ ಸವಾಲೆನಿಸುವ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರದಲ್ಲಿ ವಿಜಯ್ ಹುಬ್ಬಲ್ಲಿನ ಹುಡುಗ
ಹುಬ್ಬಲ್ಲಿನ ಹುಡುಗನ ಪಾತ್ರದಲ್ಲಿ ಸಂಚಾರಿ ವಿಜಯ್ ಪ್ರೇಕ್ಷಕರ ಎದುರು ಬರಲಿದ್ದಾರೆ. ವಿಜಯ್ ಸಾಯುವುದಕ್ಕೂ ಮುನ್ನ ಈ ಸಿನಿಮಾದ ಡಬ್ಬಿಂಗ್ ಮುಗಿಸಿದ್ದರು. ಹೀಗಾಗಿ ಮತ್ತೊಂದು ವಿಶಿಷ್ಟ ಸಿನಿಮಾದಲ್ಲಿ ಸಂಚಾರ ವಿಜಯ್ ವಿಶಿಷ್ಟ ಅಭಿನಯ ನೋಡಲು 'ತಲೆದಂಡ' ಸಿದ್ಧವಾಗಿದೆ. ವಿಜಯ್ಗೆ ನಾಯಕಿಯಾಗಿ ಚೈತ್ರಾ ಆಚಾರ್ ನಟಿಸಿದ್ದಾರೆ. ರಂಗಾಯಣ ರಘು ಪತ್ನಿ ಮಂಗಲಾ ಈ ಸಿನಿಮಾದಲ್ಲಿ ವಿಜಯ್ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ.


Click it and Unblock the Notifications











