ಮಂಸೋರೆ ನಿರ್ದೇಶಕ '19.20.21' ಸಿನಿಮಾದಲ್ಲಿ ವಿಠಲ್ ಮಲೆಕುಡಿಯ ಕಾನೂನು ಹೋರಾಟದ ರೋಚಕ ಕಥೆ!
ಮಂಸೋರೆ ನಿರ್ದೇಶನದ ಸಿನಿಮಾಗಳು ಚರ್ಚೆಗೆ ಒಳಪಡುತ್ತವೆ. ಹಿಂದಿನಿಂದಲೂ ಅವರು ನಿರ್ದೇಶಿಸೋ ಸಿನಿಮಾಗಳು ಪ್ರೇಕ್ಷಕರಿಗೆ ವಿಶೇಷವಾದ ಅನುಭವವನ್ನು ನೀಡುತ್ತವೆ. ಇದಕ್ಕಾಗಿಯೇ ಅವರ ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿ ಕೂಡಲ ಲಭಿಸಿದೆ. ಸದ್ಯ ಮಂಸೋರೆ ನಿರ್ದೇಶಿಸಿರೋ ಬಹು ನಿರೀಕ್ಷಿತ ಹಾಗೂ ನೈಜ ಘಟನೆ ಆಧಾರಿತ ಸಿನಿಮಾ '19.20.21' ನಾಳೆ (ಮಾರ್ಚ್ 3) ರಿಲೀಸ್ ಆಗುತ್ತಿದೆ. ಕರಾವಳಿ ಭಾಗದಲ್ಲಿ ನಡೆದ ನೈಜ ಘಟನೆಯನ್ನು ಆಧಾರಿತ ನಿರ್ಮಿಸಿದ ಸಿನಿಮಾವಿದು.
'19.20.21' ಸಿನಿಮಾ ಸೆಟ್ಟೇರಿದ ದಿನದಿಂದಲೂ ಕಥೆಯ ಬಗ್ಗೆ ಸುಳಿವನ್ನು ಬಿಟ್ಟುಕೊಟ್ಟಿರಲಿಲ್ಲ. ಇನ್ನೇನು ರಿಲೀಸ್ಗೆ ಒಂದು ದಿನ ಬಾಕಿ ಇದೆ ಅನ್ನುವಾಗಲೇ ಸಿನಿಮಾದ ಅಸಲಿ ಗುಟ್ಟನ್ನು ಮಂಸೋರೆ ಬಿಟ್ಟುಕೊಟ್ಟಿದ್ದಾರೆ. 2012 ಮಾರ್ಚ್ 3ರಂದು ನಕ್ಸಲ್ ನಿಗ್ರಹ ಪಡೆಯಿಂದ ಬಂಧಿತರಾದ ವಿಠಲ್ ಮಲೆಕುಡಿಯ ಹಾಗೂ ಅವರ ತಂದೆ ಲಿಂಗಣ್ಣ ಮಲೆಕುಡಿಯ ಕಾನೂನು ಹೋರಾಟ ಮಾಡಿ ಗೆದ್ದ ಕಥೆಯೇ ಈ ಸಿನಿಮಾ. ತಂದೆ-ಮಗ ಇಬ್ಬರೂ ನಕ್ಸಲರೊಂದಿಗೆ ಸಂಪರ್ಕದಲ್ಲಿದ್ದಾರೆಂದು ಬಂಧಿಸಲಾಗಿತ್ತು.

ನಕ್ಸಲ್ ನಿಗ್ರಹ ಪಡೆ ವಿಠಲ್ ಮಲೆಕುಡಿಯಾರನ್ನು ಬಂಧಿಸುವ ವೇಳೆ ಮಂಗಳೂರಿನ ವಿವಿಯಲ್ಲಿ ಪತ್ರಿಕೋಧ್ಯಮ ವಿದ್ಯಾಬ್ಯಾಸ ಮಾಡುತ್ತಿದ್ದರು. ವಿಠಲ್ ಪರೀಕ್ಷೆ ಬರೆಯುವಾಗಲೇ ಪೊಲೀಸರು ಕೈಯಲ್ಲಿದ್ದ ಕೋಳ ಕೂಡ ತೆಗೆದಿರಲಿಲ್ಲ. ಈ ಘಟನೆ ವಿರುದ್ಧ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿತ್ತು. ತಮ್ಮ ಮೇಲೆ ಮಾಡಲಾಗಿದ್ದ ಆರೋಪದ ವಿರುದ್ಧ ಬರೋಬ್ಬರಿ ಹತ್ತು ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದ್ದರು. ಕೊನೆಗೂ ವಿಠಲ್ ಮಲೆಕುಡಿಯಾ ಅವರಿಗೆ 2021ರಲ್ಲಿ ಕೋರ್ಟ್ ನಿರ್ದೋಷಿ ಎಂದು ತೀರ್ಪು ನೀಡಿತ್ತು.
ಇದೇ ವಿಠಲ್ ಮಲೆಕುಡಿಯ ಅವರ ರೋಚಕ ಹೋರಾಟದ ಕಥೆಯನ್ನೇ '19.20.21' ಸಿನಿಮಾ ಮಾಡಲಾಗಿದೆ. ರಾಜ್ಯದ ಆಡಳಿತ ವ್ಯವಸ್ಥೆ ಹಾಗೂ ಅವ್ಯವಸ್ಥೆ ಜೊತೆ ವಿಠಲ್ ಮಲೆಕುಡಿಯಾ ಅವರ ಕಾನೂನು ಹೋರಾಟದ ರೋಚಕ ಕಥೆಯನ್ನು ತೆರೆಮೇಲೆ ತರಲಾಗಿದೆ. ಮಂಸೋರೆ ನಿರ್ದೇಶಿಸಿದ ಈ ಸಿನಿಮಾದಲ್ಲಿ ವಿಠಲ್ ಮಲೆಕುಡಿಯ ಪಾತ್ರದಲ್ಲಿ ರಂಗಭೂಮಿ ಕಲಾವಿದ ಶೃಂಗ ಬಿ.ವಿ ನಟಿಸಿದ್ದಾರೆ.

ಇವರೊಂದಿಗೆ ಬಾಲಾಜಿ ಮನೋಹರ್, ಸಂಪತ್, ಎಂ.ಡಿ ಪಲ್ಲವಿ, ಮಹದೇವ್ ಹಡಪದ್, ಉಗ್ರಂ ಸಂದೀಪ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶಿವು ಬಿ. ಕೆ. ಕುಮಾರ್ ಛಾಯಾಗ್ರಹಣ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಬಿಂದು ಮಾಲಿನಿ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದು, ಸುರೇಶ್ ಆರ್ಮುಗಂ ಸಂಕಲನ, ವೀರೇಂದ್ರ ಮಲ್ಲಣ್ಣ ಮತ್ತು ಅವಿನಾಶ್ ಜಿ ಸಂಭಾಷಣೆ, ಮಂಸೋರೆ ಮತ್ತು ವೀರೇಂದ್ರ ಮಲ್ಲಣ್ಣ ಚಿತ್ರಕಥೆ, ಕಿರಣ್ ಕಾವೇರಪ್ಪ ಸಾಹಿತ್ಯ ಈ ಸಿನಿಮಾಗಿದೆ.


Click it and Unblock the Notifications











