ಅಪ್ಪು ಅನ್ನಸಂತರ್ಪಣೆ ದಿನಂದು ನೇತ್ರದಾನ ಮಾಡಿದ ಅಭಿಮಾನಿಗಳ ಸಂಖ್ಯೆ ಎಷ್ಟು?
ನಟ ಪುನೀತ್ ರಾಜ್ಕುಮಾರ್ ಅಪಾರ ಅಭಿಮಾನಿಗಳನ್ನು ಅಗಲಿ 15 ದಿನಗಳಾಗಿವೆ. ಪುನೀತ್ ರಾಜ್ಕುಮಾರ್ ಅಗಲಿದ ದಿನದಿಂದ ಇಲ್ಲಿವರೆಗೂ ಅಪ್ಪು ಹೆಸರಿನಲ್ಲಿ ಒಂದಲ್ಲಾ ಒಂದು ಸಾಮಾಜಿಕ ಕಾರ್ಯಗಳು ನಡೆಯುತ್ತಲೇ ಇವೆ. ಅಪ್ಪು ನಿಧನದ ನೋವಿನಲ್ಲಿರುವ ಅಭಿಮಾನಿಗಳು ತಾವೇ ಸ್ವಯಂ ಪ್ರೇರಿತರಾಗಿ ನೇತ್ರದಾನ, ರಕ್ತದಾನ, ಅನ್ನಸಂತರ್ಪಣೆಯಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
Recommended Video
ಪುನೀತ್ ರಾಜ್ಕುಮಾರ್ ನೇತ್ರದಾನದಿಂದ ರಾಜ್ಯದ ಮೂಲೆ ಮೂಲೆಯಲ್ಲಿರುವ ಅಭಿಮಾನಿಗಳಿಗೆ ಪ್ರೇರಣೆ ಸಿಕ್ಕಿದೆ. ತೆರೆ ಮರೆಯಲ್ಲಿದ್ದುಕೊಂಡೇ ಅಸಹಾಯಕರಿಗೆ ಸಹಾಯ ಹಸ್ತ ಚಾಚಿದ್ದ ಅಪ್ಪುನೇ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ಹೀಗಾಗಿ ಅಪ್ಪು ನೇತ್ರದಾನದ ಬಳಿಕ ನೇತ್ರದಾನಕ್ಕೆ ಸಹಿ ಮಾಡಿದವರ ಸಂಖ್ಯೆ ದೊಡ್ಡದೇ ಇದೆ. ಅದರಲ್ಲೂ 12ನೇ ದಿನ ಪ್ಯಾಲೇಸ್ ಗ್ರೌಂಡ್ನಲ್ಲಿ ನಡೆದ ಅನ್ನ ಸಂತರ್ಪಣೆ ದಿನದಂದು ದಾಖಲೆ ಮಟ್ಟದಲ್ಲಿ ಪುನೀತ್ ಫ್ಯಾನ್ಸ್ ನೇತ್ರದಾನಕ್ಕೆ ಸಹಿ ಹಾಕಿದ್ದಾರೆ.
ಅನ್ನಸಂತರ್ಪಣೆ ದಿನ ನೇತ್ರದಾನಕ್ಕೆ ಸಹಿ ಹಾಕಿದ್ದೆಷ್ಟು ಮಂದಿ?
ಪುನೀತ್ ರಾಜ್ಕುಮಾರ್ ಫ್ಯಾನ್ ಫಾಲೋವಿಂಗ್ ಎಷ್ಟರ ಮಟ್ಟಿಗೆ ಇದೆ ಅನ್ನುವುದು ಕಳೆದ 15 ದಿನಗಳಿಂದ ಸಾಭೀತಾಗಿದೆ. ಪ್ರತಿದಿನ ಪುನೀತ್ ಸಮಾಧಿ ನೋಡಲು ಬರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಪ್ಪು ಗಳಿಸಿದ್ದ ಅಪಾರ ಅಭಿಮಾನಕ್ಕಾಗಿ ದೊಡ್ಮನೆ ಕುಟುಂಬ ಪ್ಯಾಲೇಸ್ ಗ್ರೌಂಡ್ನಲ್ಲಿ ಅನ್ನಸಂತರ್ಪಣೆ ಕಾರ್ಯವನ್ನು 12ನೇ ದಿನ ಇಟ್ಟುಕೊಂಡಿತ್ತು. ಈ ಪುಣ್ಯಸ್ಮರಣೆಯಂದು ಸುಮಾರು 40 ಸಾವಿರ ಮಂದಿ ರಾಜ್ಯ ಮೂಲೆ ಮೂಲೆಗಳಿಂದ ಆಗಮಿಸಿದ್ದರು. ಈ ವೇಳೆ ಪುನೀತ್ ರಾಜ್ಕುಮಾರ್ ಆಸೆಯಂತೆಯೇ ನೇತ್ರದಾನ ಹಾಗೂ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ದಾಖಲೆ ಮಟ್ಟದಲ್ಲಿ ನೇತ್ರದಾನಕ್ಕೆ ಸಹಿ ಮಾಡಿದ್ದಾರೆ.

"ಅರಮನೆ ಮೈದಾನದಲ್ಲಿ ನಡೆದ ಅನ್ನಸಂತರ್ಪಣೆ ವೇಳೆ ಪುನೀತ್ ಅಭಿಮಾನಿಗಳು ದಾಖಲೆ ಮಟ್ಟದಲ್ಲಿ ನೇತ್ರದಾನಕ್ಕೆ ಸಹಿ ಹಾಕಿದ್ದಾರೆ. ಇದೊಂದೇ ದಿನ ಸುಮಾರು 3100 ಮಂದಿ ಪ್ಯಾಲೇಸ್ ಗ್ರೌಂಡ್ನಲ್ಲಿ ನೇತ್ರದಾನಕ್ಕೆ ಸಹಿಹಾಕಿದ್ದಾರೆ. ಅಲ್ಲದೆ ಕರ್ನಾಟಕದಾದ್ಯಂತ 4000 ಮಂದಿ ಈ ಒಂದು ದಿನದ ನೇತ್ರದಾನಕ್ಕೆ ಸಹಿ ಮಾಡಿದ್ದಾರೆ." ಎಂದು ಫಿಲ್ಮಿ ಬೀಟ್ಗೆ ಅಪ್ಪು ಬ್ರಿಗೆಡ್ ಸಂಘದ ಅಧ್ಯಕ್ಷ, ಮುರಳಿಧರ್ ಮಾಹಿತಿ ನೀಡಿದ್ದಾರೆ.

ಇದೂವರೆಗೂ 7000 ಮಂದಿ ನೇತ್ರದಾನಕ್ಕೆ ಸಹಿ
ಪುನೀತ್ ಅಗಲಿದ ದಿನದಿಂದ ನೇತ್ರದಾನಕ್ಕೆ ಸಹಿ ಮಾಡುವವರ ಸಂಖ್ಯೆ ಏನು ಕಮ್ಮಿಯಾಗಿಲ್ಲ. ಪ್ರತಿ ದಿನ ಸರಾಸರಿ ಸಾವಿರ ಮಂದಿ ನೇತ್ರದಾನಕ್ಕೆ ಸಹಿ ಹಾಕುತ್ತಿದ್ದಾರೆ. ಅಲ್ಲದೆ ಇದೂವರೆಗೂ 7 ಸಾವಿರ ಮಂದಿ ನೇತ್ರದಾನಕ್ಕೆ ಸಹಿ ಮಾಡಿದ್ದಾರೆ ಅನ್ನುವ ಮಾಹಿತಿ ಸಿಕ್ಕಿದೆ. ಅಪಾರ ಪ್ರಮಾಣದಲ್ಲಿ ಪ್ರತಿಕ್ರಿಯೆ ಸಿಗಲು ನಮ್ಮ ಅಪ್ಪು ಬಾಸ್ ಕಾರಣ. ಅವರು ಮಾಡಿದಷ್ಟು ಸಮಾಜಮುಖಿ ಕೆಲಸಗಳನ್ನು ಮತ್ಯಾರೂ ಮಾಡಿಲ್ಲ. ಅವರ ನೆನಪಲ್ಲೇ ನಾವೂ ಉತ್ತಮ ಕೆಲಸ ಮಾಡುತ್ತೇವೆ." ಅಂತಾರೆ ಅಪ್ಪು ಬ್ರಿಗೆಡ್ ಸಂಘದ ಅಧ್ಯಕ್ಷ, ಮುರಳಿಧರ್.

35ಕ್ಕೂ ಅಧಿಕ ಸ್ಥಳಗಳಿಗೆ ಪುನೀತ್ ಹೆಸರು ನಾಮಕರಣ
"ಕೇವಲ ನೇತ್ರದಾನ, ರಕ್ತದಾನ ಅಷ್ಟೇ ಅಲ್ಲ. ಕರ್ನಾಟಕದಾದ್ಯಂತ ಅಪ್ಪು ಅಗಲಿದ ನೋವಿನಲ್ಲಿ ರಸ್ತೆಗಳಿಗೆ, ವೃತ್ತಗಳಿಗೆ, ಬಸ್ ನಿಲ್ದಾಣಗಳಿಗೆ ಪುನೀತ್ ರಾಜ್ಕುಮಾರ್ ಹೆಸರನ್ನು ನಾಮಕರಣ ಮಾಡಲಾಗುತ್ತಿದೆ. ಇಲ್ಲಿವರೆಗೂ 35ಕ್ಕೂ ಅಧಿಕ ಸ್ಥಳಗಳಿಗೆ ಅಪ್ಪು ಹೆಸರಿಡಲಾಗಿದ್ದು, ಇನ್ನು ಹೆಚ್ಚಾಗುವ ಸಾಧ್ಯತೆಯಿದೆ. ನಮಗೆ ಬಂದಿರುವ ಮಾಹಿತಿ ಪ್ರಕಾರ, ಅಣ್ಣಾವ್ರಿಗಿಂತಲೂ ಹೆಚ್ಚ ಪುತ್ಥಳಿಗಳನ್ನು ಅಭಿಮಾನಿಗಳು ನಿರ್ಮಿಸಿದ್ದಾರೆ. ಇದು ಪುನೀತ್ ರಾಜ್ಕುಮಾರ್ ಸಂಪಾದನೆ. ದಶಕ, ದಶಕಗಳು ಕಳೆದರೂ ಈ ಕೆಲಸವನ್ನು ಮರೆಯಲು ಸಾದ್ಯವೇ ಇಲ್ಲ." ಅಂತಾರೆ ಮುರಳಿಧರ್.


Click it and Unblock the Notifications











