ಅಪ್ಪು ಕಟ್ಟಾ ಅಭಿಮಾನಿಗಳಿಂದ ಗುಲಾಬಿ ಹಿಡಿದು ಬರಿಗಾಲಿನಲ್ಲಿ ಪಾದಯಾತ್ರೆ: ಶಿವಣ್ಣನಿಂದ ಚಾಲನೆ
ಇದುವರೆಗೂ ಪುನೀತ್ ಅಭಿಮಾನಿಗಳಿಗೆ ಅಂತ ಒಂದು ಬೃಹತ್ ಕಾರ್ಯಕ್ರಮವನ್ನು ಯಾರು ಆಯೋಜನೆ ಮಾಡಿಲ್ಲ. ಚಿತ್ರರಂಗದ ಗಣ್ಯರಿಗೆ ಅಂತ ಪುನೀತ್ ನಮನ ಅನ್ನುವ ಕಾರ್ಯಕ್ರಮವನ್ನು ಆಯೋಜಿಸಿದ್ದು ಬಿಟ್ಟರೆ, ಅಪ್ಪು ಫ್ಯಾನ್ಸ್ಗೆ ಅಂತ ಫಿಲ್ಮ್ ಚೇಂಬರ್ ಇನ್ನೂ ಕಾರ್ಯಕ್ರಮ ಆಯೋಜನೆ ಮಾಡುವುದರಲ್ಲೇ ಇದೆ. ಹಾಗಂತ ಪುನೀತ್ ಫ್ಯಾನ್ಸ್ ಸುಮ್ಮನೆ ಕೂತಿಲ್ಲ. ತಾವೇ ಮುಂದೆ ಬಂದು ತಮ್ಮ ನೆಚ್ಚಿನ ನಟ ಪುನೀತ್ ರಾಜ್ಕುಮಾರ್ಗೆ ನಮನ ಸಲ್ಲಿಸಲು ಮುಂದಿದಾಗಿದ್ದಾರೆ.
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಬೃಹತ್ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಿಕೊಂಡಿದ್ದಾರೆ. ಇದೇ ಭಾನುವಾರ (ಡಿಸೆಂಬರ್ 12) ದಂದು ಬರಿಗಾಲಲ್ಲಿ ಅಪ್ಪು ಸಮಾಧಿಗೆ ಪಾದಯಾತ್ರೆ ಮಾಡಲು ನಿರ್ಧರಿಸಿದ್ದಾರೆ. ಸುಮಾರು 6 ಲಕ್ಷ ರೂಪಾಯಿಯನ್ನು ಖರ್ಚು ಎರಡು ಅಭಿಮಾನಿ ಸಂಘ ಖರ್ಚು ಮಾಡುತ್ತಿದೆ. ದೊಡ್ಮನೆ ಹುಡುಗರು ಕರ್ನಾಟಕ ಮತ್ತು ಯುವ ರಾಜ್ಕುಮಾರ್ ಸೇನೆ ಕರ್ನಾಟಕ ಎರಡು ಟೀಮ್ನವರು ಸೇರಿಕೊಂಡು ಈ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದ್ದಾರೆ.
ಬೆಂಗಳೂರಿನ ವಿಜಯನಗರದ ಹೌಸಿಂಗ್ ಬೋರ್ಡ್ ಮೇಲು ಸೇತುವೆಯಿಂದ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜ್ಕುಮಾರ್ ಸಮಾಧಿ ಇರುವ ಸ್ಥಳದವರೆಗೂ ಬರಿಗಾಲಿನಲ್ಲಿ ಅಪ್ಪು ಅಭಿಮಾನಿಗಳು ಪಾದಯಾತ್ರೆ ಮಾಡಲಿದ್ದಾರೆ. ಹೌಸಿಂಗ್ ಬೋರ್ಡ್ನಲ್ಲಿ ಸುಮಾರು 5 ಸಾವಿರ ಅಪ್ಪು ಅಭಿಮಾನಿಗಳು ಸೇರುವ ನಿರೀಕ್ಷೆಯಿದ್ದು, ಈ ಪಾದಯಾತ್ರೆಗೆ ಶಿವಣ್ಣ, ರಾಘಣ್ಣ ಚಾಲನೆ ನೀಡಲಿದ್ದಾರೆ. ಇಲ್ಲೊಂದು ವೇದಿಕೆ ನಿರ್ಮಾಣ ಮಾಡಿ ಅಪ್ಪು ನಟಿಸಿದ ಅಷ್ಟೂ ಸಿನಿಮಾಗಳ ಭಾವ ಚಿತ್ರಗಳನ್ನು ವೇದಿಕೆ ಮಾಡಲಾಗಿದೆ. ಬಾಗಲಕೋಟೆಯಿಂದ 15 ರಿಂದ 20 ಕುಟುಂಬದವರು ಬರುತ್ತಿದ್ದಾರೆ. ಅವರಿಗೆಲ್ಲರಿಗೂ ಅಭಿಮಾನಿಗಳೇ ವ್ಯವಸ್ಥೆ ಮಾಡಿದ್ದಾರೆ. ಎರಡು ಆಂಬುಲೆನ್ಸ್ ಕೂಡ ವ್ಯವಸ್ಥೆ ಮಾಡಿದ್ದು, ಅಭಿಮಾನಿಗಳೇ ಸೇರಿಕೊಂಡು ಇದು ಪುಣ್ಯಕ್ಷೇತ್ರ ಅಂತ ಘೋಷಣೆ ಮಾಡುತ್ತಿರುವುದಾಗಿ ಕಾರ್ಯಕ್ರಮದ ಆಯೋಜಕರೊಬ್ಬರಾದ ಪ್ರಿನ್ಸ್ ಮನು ಫಿಲ್ಮಿ ಬೀಟ್ಗೆ ತಿಳಿಸಿದ್ದಾರೆ.

ಅಪ್ಪುಗಾಗಿ ಅಭಿಮಾನಿಗಳಿಂದ ಬರಿಗಾಲಲ್ಲಿ ಪಾದಯಾತ್ರೆ
"ಹೊರಗಡೆ ಇರುವ ಅಭಿಮಾನಿಗಳಿಗೆ ಯಾರೂ ಕಾರ್ಯಕ್ರಮ ಆಯೋಜನೆ ಮಾಡಿರಲಿಲ್ಲ. ಅದಕ್ಕೆ ಅಭಿಮಾನಿಗಳಿಗೆ ಮುಕ್ತ ಆಹ್ವಾನ ಕೊಟ್ಟಿದ್ದೀವಿ. ಜಿಲ್ಲೆಗಳಿಂದ ಎಷ್ಟು ಅಭಿಮಾನಿಗಳು ಬರಲು ಸಾಧ್ಯವೋ ಅಷ್ಟು ಮಂದಿ ಬನ್ನಿ ಅಂತ ಹೇಳಿದ್ದೇವೆ. ಎಷ್ಟೇ ಅಭಿಮಾನಿಗಳು ಬಂದರೂ ಅವರು ಉಳಿದುಕೊಳ್ಳಲು ಶನಿವಾರ ರಾತ್ರಿ 3 ಛತ್ರಗಳನ್ನು ಬುಕ್ ಮಾಡಿದ್ದೇವೆ. ಉಳಿದುಕೊಳ್ಳಲು ವ್ಯವಸ್ಥೆ. ಕಾಫಿ, ತಿಂಡಿ ವ್ಯವಸ್ಥೆ ಎಲ್ಲವನ್ನೂ ಮಾಡಿದ್ದೇವೆ." ಎನ್ನುತ್ತಾರೆ ಪ್ರಿನ್ಸ್ ಮನು.

ಪಾದಯಾತ್ರೆಗೆ ಶಿವಣ್ಣ-ರಾಘಣ್ಣ ಚಾಲನೆ
"ಶಿವಣ್ಣ ವೇದ ಶೂಟಿಂಗ್ನಲ್ಲಿ ಇದ್ದಾರೆ. ಬರ್ತೀನಿ ಅಂತ ಹೇಳಿದ್ದಾರೆ. ರಾಘಣ್ಣ ಬರುತ್ತೇನೆ ಅಂತ ಹೇಳಿದ್ದಾರೆ. ಯುವ ರಾಜ್ಕುಮಾರ್, ಧೀರೇನ್ ರಾಮ್ ಕುಮಾರ್ ಬರುತ್ತಾರೆ. ಲಕ್ಷ್ಮಿ ಅಮ್ಮವರು ಬರುತ್ತಾರೆ. ಎಲ್ಲರಿಗೂ ಆಹ್ವಾನ ಕೊಟ್ಟದ್ದೇವೆ. ಇವರೆಲ್ಲರೂ ಬಂದು ಪುಷ್ಪ ನಮನ ಸಲ್ಲಿಸಿ ಹೊರಡುತ್ತಾರೆ. ಆಮೇಲೆ ನಾವು ಹೌಸಿಂಗ್ ಬೋರ್ಡ್ನಿಂದ ಬರಿಗಾಲಲ್ಲಿ ಚಪ್ಪಲಿ ಬಿಟ್ಟು ಪುಣ್ಯಭೂಮಿಗೆ ಒಂದು ಗುಲಾಬಿ ಹೂವು ಹಿಡಿದು ಪುಷ್ಪ ನಮನ ಸಲ್ಲಿಸಲಿದ್ದೇವೆ." ಅಂತ ಪ್ರಿನ್ಸ್ ಮನು ಫಿಲ್ಮಿ ಬೀಟ್ಗೆ ಮಾಹಿತಿ ನೀಡಿದ್ದಾರೆ.

5 ಸಾವಿರಕ್ಕೂ ಅಧಿಕ ಮಂದಿ ಸೇರುವ ಸಾಧ್ಯತೆ
"5 ಸಾವಿರ ಜನರ ಎಕ್ಸ್ಪೆಕ್ಟೇಷನ್ ಇದೆ. ರಾಜ್ಯದ ವಿವಿಧ ಜಿಲ್ಲೆಯಿಂದ ಈಗಾಲೇ ಸಾಕಷ್ಟು ಮಂದಿ ಹೊರಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಯಾರ ಬಳಿನೂ ಒಂದೇ ಒಂದು ರೂಪಾಯಿ ಧನ ಸಹಾಯ ಕೇಳಿಲ್ಲ. ನಾವೇ ಅಭಿಮಾನಿಗಳು ಹಣ ಹೊಂದಿಸಿಕೊಂಡು ಈ ಕಾರ್ಯಕ್ರಮ ಮಾಡಿದ್ದೇವೆ. ಯಾವ ಕಾರ್ಪೊರೇಟರ್, ಶಾಸಕರು, ಯಾರ ಮನೆಯಿಂದಲೂ ಕೇಳಿಲ್ಲ. ಗೋಪಾಲಯ್ಯ ಅವರಿಂದ ಒಂದು ಛತ್ರವನ್ನು ಬಿಡಿಸಿಕೊಂಡಿದ್ದೇವೆ ಅಷ್ಟೇ." ಪ್ರಿನ್ಸ್ ಮನು ತಿಳಿಸಿದ್ದಾರೆ.

ಅಪ್ಪು ಅಭಿಮಾನಿಗಳಿಂದ ನೇತ್ರದಾನ
"ಭಾನುವಾರ ಪಾದಯಾತ್ರೆ ಬರಲಿರುವ ಎಲ್ಲಾ ಅಭಿಮಾನಿಗಳೂ ನೇತ್ರದಾನಕ್ಕೆ ಸಹಿ ಮಾಡಲಿದ್ದಾರೆ. ಬಳಿಕ ಶಿವಣ್ಣ ಅವರ ಮೂಲಕ ಇದನ್ನು ಪುಣ್ಯಕ್ಷೇತ್ರ ಅಂತ ಘೋಷಣೆ ಮಾಡಬೇಕು ಅಂತ ಕೇಳಿಕೊಂಡಿದ್ದೇವೆ. ಅಧಿಕೃತವಾಗಿ ಪುನೀತ್ ರಾಜ್ಕುಮಾರ್ ಅವರ ಧ್ವಜ ಬಿಡುಗಡೆ ಮಾಡುತ್ತಿದ್ದೇವೆ. ಮುಂದಿನ ಎಲ್ಲಾ ಕಾರ್ಯಕ್ರಮಗಳಿಗೂ ಆ ಧ್ವಜವನ್ನು ನೋಡಬಹುದು." ಎನ್ನುತ್ತಾರೆ ಪ್ರಿನ್ಸ್ ಮನು.


Click it and Unblock the Notifications











