ಫಾಲ್ಕೆ ಪ್ರಶಸ್ತಿ ವಿಜೇತ ನಿರ್ಮಾಪಕ ರಾಮಾನಾಯ್ಡು ವಿಧಿವಶ
ಭಾರತೀಯ ಚಿತ್ರರಂಗದ ಖ್ಯಾತ ನಿರ್ಮಾಪಕ ದಗ್ಗುಬಾಟಿ ರಾಮನಾಯ್ಡು ಅವರು ಹೈದರಾಬಾದಿನ ಸ್ವಗೃಹದಲ್ಲಿ ಬುಧವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ಅವರು ಕೆಲಕಾಲದಿಂದ ಬಹು ಅಂಗಾಂಗ ವೈಫಲ್ಯ ಅನುಭವಿಸುತ್ತಿದ್ದರು. ತೆಲುಗಿನ ಸೂಪರ್ ಸ್ಟಾರ್ ವಿಕ್ಟರಿ ವೆಂಕಟೇಶ್ ಅವರ ತಂದೆ ರಾಮಾನಾಯ್ಡು ಅವರು ಚಿತ್ರರಂಗದಲ್ಲಿ ಬಹುದೊಡ್ಡ ಹೆಸರು.
ಇಬ್ಬರು ಪುತ್ರರು ಓರ್ವ ಪುತ್ರಿಯನ್ನು ರಾಮನಾಯ್ಡು ಅವರು ಅಗಲಿದ್ದಾರೆ. ಚಿತ್ರರಂಗಕ್ಕೆ ಇವರು ನೀಡಿದ ಕೊಡುಗೆ ಪರಿಗಣಿಸಿ ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ, ನಂದಿ ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿತ್ತು. ಅದರೆ, ಅದಕ್ಕಿಂತ ಹೆಚ್ಚಾಗಿ ದಗ್ಗುಬಾಟಿ ಕುಟುಂಬವನ್ನು ಚಿತ್ರರಂಗದ ಏಳಿಗೆಗಾಗಿ ಇವರು ತೊಡಗುವಂತೆ ಮಾಡಿದ್ದು ಅನುಕರಣೀಯ. [ನಿರ್ಮಾಪಕ ರಾಮಾನಾಯ್ಡು ಅವರಿಗೆ ಕ್ಯಾನ್ಸರ್?]

ಕೃಷಿಕ ಕುಟುಂಬದಲ್ಲಿ ಹುಟ್ಟಿದ ರಾಮಾನಾಯ್ಡು ಅವರು ತಮ್ಮ ನಿರ್ಮಾಣ ಸಂಸ್ಥೆ ಸುರೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸುಮಾರು 150 ಚಿತ್ರಕ್ಕೂ ಅಧಿಕ ಚಿತ್ರಗಳನ್ನು ನಿರ್ಮಿಸಿದರು. ತೆಲುಗು, ಕನ್ನಡ, ತಮಿಳು, ಹಿಂದಿ, ಒರಿಯಾ, ಇಂಗ್ಲೀಷ್ ಸೇರಿದಂತೆ ಅನೇಕ ಭಾಷೆಗಳಲ್ಲಿ ಚಿತ್ರಗಳನ್ನು ನಿರ್ಮಿಸಿದ್ದರು.13 ಭಾಷೆಗಳಲ್ಲಿ ಚಿತ್ರ ನಿರ್ಮಾಣ ಮಾಡಿದ ರಾಮಾನಾಯ್ಡು ಅವರು ಗಿನ್ನಿಸ್ ದಾಖಲೆಗೂ ಪಾತ್ರರಾಗಿದ್ದರು.
ಭಾರತದ ಮೂರನೇ ಅತ್ಯುನ್ನತ ನಾಗರೀಕ ಪ್ರಶಸ್ತಿ ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಜೀವಮಾನ ಸಾಧನೆಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಅವರನ್ನು ಹುಡುಕಿಕೊಂಡು ಬಂದಿತ್ತು. 1999-2004ರಲ್ಲಿ ಗುಂಟೂರು ಜಿಲ್ಲೆಯ ಬಾಪಟ್ಲ ಕ್ಷೇತ್ರದಿಂದ ತೆಲುಗುದೇಶಂ ಪಾರ್ಟಿ ಟಿಕೆಟ್ ಪಡೆದು ಲೋಕಸಭೆಗೆ ಸ್ಪರ್ಧಿಸಿ ಗೆದ್ದಿದ್ದರು. ಆದರೆ, ನಂತರ ಲೋಕಸಭೆಗೆ ಸ್ಪರ್ಧಿಸಿ ಸೋಲು ಕಂಡಿದ್ದರು.
ಕನ್ನಡದಲ್ಲಿ ನವಕೋಟಿ ನಾರಾಯಣ (1964), ತವರುಮನೆ ಉಡುಗೊರೆ (1991) ಹಾಗೂ ಮದುವೆ ಆಗೋಣ ಬಾ (2001) ಮೂರು ಚಿತ್ರಗಳನ್ನು ನಿರ್ಮಿಸಿದ್ದರು. 2015ರಲ್ಲಿ ತೆಲುಗಿನಲ್ಲಿ ತೆರೆ ಕಂಡ ಪವನ್ ಕಲ್ಯಾಣ್ ದಗ್ಗುಬಾಟಿ ವೆಂಕಟೇಶ್ ಅಭಿನಯದ ಗೋಪಾಲ ಗೋಪಾಲ ಇವರು ನಿರ್ಮಿಸಿದ ಕೊನೆ ಚಿತ್ರವಾಗಿದೆ.


Click it and Unblock the Notifications











