ವೇದಿಕೆ ಅಣ್ಣಾವ್ರಿಗೆ ಅವಮಾನ ವಿವಾದ: ಫಿಲ್ಮ್ ಚೇಂಬರ್ ಪತ್ರಕ್ಕೆ ಮುನಿರತ್ನ ತಿರುಗೇಟು..ಅಧ್ಯಕ್ಷರಿಗೆ ಹಕ್ಕಿನ ಪ್ರಶ್ನೆ
ಇತ್ತೀಚೆಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿರುದ್ಧ ತಿರುಗಿಬಿದ್ದಿದ್ದರು. ವೇದಿಕೆ ಮೇಲೆ ಡಿಕೆಶಿಯನ್ನು ಅಣುಕಿಸಿ ಮಾತಾಡಿದ್ದರು. ಸ್ಟೇಜ್ ಮೇಲೆ ಇಬ್ಬರು ವ್ಯಕ್ತಿಗಳನ್ನು ನಿಲ್ಲಿಸಿ, ಅವರಿಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮುಖವಾಡವನ್ನು ಹಾಕಿಸಿ ಅಣುಕಿಸಿದ್ದರು.
ಈ ವೇಳೆ ಡಿಕೆ ಶಿವಕುಮಾರ್ ಅವರಿಗೆ ಕಮಿಷನ್ ಕುಮಾರ ಅಂತ ಬೋರ್ಡ್ ಕೂಡ ಹಾಕಿದ್ದರು. ಡಿಕೆಶಿಯನ್ನು ಜರಿಯುವ ಭರಾಟೆಯಲ್ಲಿ ರಾಜಕುಮಾರ್ ಅವರ ಹೆಸರನ್ನು ಬಳಸಿದ್ದರು. ಆ ಮೂಲಕ ಡಿಕೆ ಶಿವಕುಮಾರ್ ಅವರನ್ನು ಕೆಣಕಿದ್ದರು. ಅದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಈ ಹೇಳಿಕೆ ವಿರುದ್ಧ ಅಣ್ಣಾವ್ರ ಅಭಿಮಾನಿಗಳು ತಿರುಗಿಬಿದ್ದಿದ್ದರು. ಅವರ ಕ್ಷೇತ್ರದ ಕೆಲವೆಡೆ ಪ್ರತಿಭಟನೆಗಳನ್ನು ಮಾಡಿದ್ದರು.

ಅಣ್ಣಾವ್ರ ಅಭಿಮಾನಿಗಳು ಫಿಲ್ಮ್ ಚೇಂಬರ್ ಅನ್ನು ಮುತ್ತಿಗೆ ಹಾಕಿದ್ದರು. ರಾಜ್ಕುಮಾರ್ ಬಗ್ಗೆ ಮಾತಾಡಿದ್ದಕ್ಕೆ ಮುನಿರತ್ನ ಅವರ ಸದಸ್ಯತ್ವವನ್ನು 24 ಗಂಟೆಯೊಳಗೆ ರದ್ದುಗೊಳಿಸಬೇಕು ಎಂದು ಆಕ್ರೋಶ ಹೊರ ಹಾಕಿ, ಮನವಿ ಪತ್ರ ನೀಡಿದ್ದರು. ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಶಾಸಕ ಮುನಿರತ್ನ ಅವರಿಗೆ ಪತ್ರವನ್ನು ಬರೆದಿತ್ತು. ಅದಕ್ಕೆ ಆಕ್ರೋಶಗೊಂಡಿರುವ ಮುನಿರತ್ನ ಫಿಲ್ಮ್ ಚೇಂಬರ್ ಅಧ್ಯಕ್ಷರಿಗೆ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.
ಶಾಸಕ ಮುನಿರತ್ನ ಬರೆದ ಪತ್ರದಲ್ಲಿ ಏನಿದೆ ಅಂತ ನೋಡುವುದಕ್ಕೂ ಮುನ್ನ ಅಣ್ಣಾವ್ರ ಬಗ್ಗೆ ಮುನಿರತ್ನ ವೇದಿಕೆ ಮೇಲೆ ಹೇಳಿದ್ದೇನು ಅನ್ನೋದನ್ನು ನೋಡೋಣ. "ಇನ್ನು ಎಷ್ಟು ಬೇಕು ನಿಮಗೆ. ಮಾಲ್ಗಳು ಸಾಲುತ್ತಿಲ್ಲ. ಭೂಮಿಗಳು ಸಾಲುತ್ತಿಲ್ಲ. ಇನ್ನು ಏನಕ್ಕೆ ಇಷ್ಟೊಂದು ದುಡ್ಡಿನ ಸಂಪಾದನೆ. ಏನು ಬರೆದುಕೊಂಡಿದ್ದೀರಿ ನೀವು.(ಕತ್ತಿಗೆ ಹಾಕಿದ ಫಲಕವನ್ನು ನೋಡಿ) ನಾನು ಕಮಿಷನ್ ಕುಮಾರ ಅಂತ ಬರೆದುಕೊಂಡಿದ್ದೀರಿ. ಕಮಿಷನ್ನಲ್ಲಿ ರಾಜಕುಮಾರ ಅಂತ ಬರೆದುಕೊಳ್ಳಿ. ಏನು ಬರೆದುಕೊಳ್ಳಬೇಕು? ಕಮಿಷನ್ ಪಡೆಯುವುದರಲ್ಲಿ ನಾನು ರಾಜಕುಮಾರ ಅಂತ ಬರೆದುಕೊಳ್ಳಬೇಕು. ಕನ್ನಡಕ್ಕೆ ಒಬ್ಬರನೇ ರಾಜಕುಮಾರ ಅವರನ್ನು ಮೀಸುವಂತಹ ರಾಜಕುಮಾರ ಭ್ರಷ್ಟಾಚಾರದಲ್ಲಿ ನಾನೇ ಅಂತ ಬರೆದುಕೊಳ್ಳಬೇಕು ಅಷ್ಟೇನೆ. ಇನ್ನೇನಾದ್ರೂ ಇವತ್ತು ಇಲ್ಲಿ ಮಾತಾಡಿದ್ದೀನಿ ಅಂತ ದಯವಿಟ್ಟು ನನ್ನ ಮೇಲೆ ಯಾವುದೂ ರೇಪ್ ಕೇಸ್ ಹಾಕಬೇಡ್ರಿ." ಎಂದು ಮುನಿರತ್ನ ವೇದಿಕೆ ಹೇಳಿದ್ದರು. ಇದಕ್ಕೆ ವಿರುದ್ಧವಾಗಿ ರಾಜ್ಕುಮಾರ್ ಅಭಿಮಾನಿಗಳು ಬೀದಿಗಿಳಿದು ಪ್ರತಿಭಟನೆ ಮಾಡಿದ್ದರು.

ಅಣ್ಣಾವ್ರ ಅಭಿಮಾನಿಗಳು ಫಿಲ್ಮ್ ಚೇಂಬರ್ಗೆ ಪತ್ರ ನೀಡಿದ್ದರು. ಅದಕ್ಕೆ ಸ್ಪಂದಿಸಿದ ವಾಣಿಜ್ಯ ಮಂಡಳಿ ಅಧ್ಯಕ್ಷರು ನರಸಿಂಹಲು ಶಾಸಕ ಮುನಿರತ್ನಗೆ ಉತ್ತರಿಸುವಂತೆ ಪತ್ರ ಬರೆದಿದ್ದರು. ಇದೇ ತಿಂಗಳು ಅಂದರೆ, ಮಾರ್ಚ್ 8, 2025ರಂದು ಪತ್ರ ಬರೆದಿದ್ದರು. ಅದಕ್ಕೆ ಮುನಿರತ್ನ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
"ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಇರುವ ಅಧಿಕಾರವೇನು? ನಿಮಗೆ ಇರುವ ಹಕ್ಕುಗಳೇನು? ಚಲನಚಿತ್ರ ವಾಣಿಜ್ಯ ಮಂಡಳಿ ಕನ್ನಡ ಚಿತ್ರಗಳಿಗೆ ಸಂಬಂಧಪಟ್ಟ ವಾಣಿಜ್ಯ ಮಂಡಳಿಯಾಗಿರುತ್ತೆ. ವಾಣಿಜ್ಯ ಮಂಡಳಿ ವ್ಯಾಪ್ತಿಗೆ ಬರುವ ನಿರ್ಮಾಪಕರು, ವಿತರಕರು ಹಾಗೂ ಚಿತ್ರಮಂದಿರದ ಮಾಲೀಕರು ಇವರುಗಳಿಗೆ ತೊಂದರೆಯಾದಲ್ಲಿ ಸ್ಪಂದಿಸುವುದು ಹಾಗೂ ಕನ್ನಡ ಚಿತ್ರರಂಗದ ಏಳಿಗೆಗೋಸ್ಕರ ಶ್ರಮಿಸುವುದು. ಕನ್ನಡ ಚಿತ್ರರಂಗಕ್ಕೆ ಮತ್ತು ನೆಲ, ಜಲ, ಭಾಷೆಗೆ ಧಕ್ಕೆಯಾದಲ್ಲಿ ಕೂಡಲೇ ತುರ್ತು ಸಭೆ ಕರೆಯುವುದು ವಾಣಿಜ್ಯ ಮಂಡಳಿಯ ಅಧಿಕಾರಕ್ಕೆ ಬರುತ್ತೆ" ಎಂದು ಅಧ್ಯಕ್ಷ ನರಸಿಂಹಲು ಅವರಿಗೆ ಪತ್ರದಲ್ಲಿ ತಿಳಿಸಿದ್ದಾರೆ.
"ಒಂದು ರಾಜಕೀಯ ಪಕ್ಷದ ಏಜೆಂಟ್ಗಳಾಗಿ ಕೆಲಸ ನಿರ್ವಹಿಸುವುದಕ್ಕೆ ನಿಮ್ಮನ್ನು ವಾಣಿಜ್ಯ ಮಂಡಳಿಯು ಸೃಷ್ಟಿಸಿರುವುದಿಲ್ಲ. ಸಭೆ ಕರಿಯುವ ಮುನ್ನ ಪರಿಜ್ಞಾನವಿರಬೇಕು. ಪರಿಜ್ಞಾನವಿಲ್ಲದೆ, ನೈಜತೆ ತಿಳಿಯದೆ ತುರ್ತು ಸಭೆ ಕರೆದಿರುವುದು ನಿಮ್ಮ ಬೇಜವಾಬ್ದಾರಿತನ ಎದ್ದು ಕಾಣುತ್ತೆ. ವಾಣಿಜ್ಯ ಮಂಡಳಿಗೆ ಇರತಕ್ಕಂತಹ ಅಧಿಕಾರವನ್ನು ದುರ್ಬಳಕೆ ಮಾಡುತ್ತಿದ್ದೀರಿ" ಎಂದು ಇದೇ ಪತ್ರದ ಮೂಲಕ ತಿರುಗೇಟು ಕೊಟ್ಟಿದ್ದಾರೆ.


Click it and Unblock the Notifications











