ಅಣ್ಣನನ್ನು ಕಳೆದುಕೊಂಡಿದ್ದೇ ಅರ್ಜುನ್ ಜನ್ಯ '45' ಸಿನಿಮಾ ಮಾಡೋಕೆ ಕಾರಣ; ಅಂತಹದ್ದೇನಾಗಿತ್ತು?
ಹೊಸ ವರ್ಷಕ್ಕೂ ಮುನ್ನ ಕನ್ನಡದಲ್ಲಿ ಎರಡು ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗಿವೆ. ಅದರಲ್ಲೊಂದು '45'. ಅರ್ಜುನ್ ಜನ್ಯ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಈ ಸಿನಿಮಾ ಈಗಾಗಲೇ ತೆರೆಕಂಡಿದೆ. ಸಿನಿಮಾ ನೋಡಿ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಯ ಈ ಸಿನಿಮಾ ಪ್ರೇಕ್ಷಕರನ್ನು ಆಕರ್ಷಿಸಿದೆ.
'45' ಕನ್ನಡ ಚಿತ್ರರಂಗದ ಮಟ್ಟಿಗೆ ವಿಶಿಷ್ಠ ಪ್ರಯತ್ನ. ಗರುಡ ಪುರಾಣವನ್ನು ಇಟ್ಟುಕೊಂಡು ಅರ್ಜುನ್ ಜನ್ಯ ಈ ಸಿನಿಮಾದ ಕಥೆಯನ್ನು ಹೆಣೆದಿದ್ದಾರೆ. ಹೀಗಾಗಿ ಇದು ಆರ್ಡಿನರಿ ಸಿನಿಮಾ ಅಲ್ಲ. ಇಲ್ಲೊಂದು ವಿಭಿನ್ನ ಪ್ರಯೋಗ ಮಾಡಿದ್ದಾರೆ. ಇದು ಪ್ರೇಕ್ಷಕರಿಗೆ ಇಷ್ಟ ಆಗುತ್ತಿದೆ. ಅಷ್ಟಕ್ಕೂ ಚೊಚ್ಚಲ ಸಿನಿಮಾದಲ್ಲಿಯೇ ಅರ್ಜುನ್ ಜನ್ಯ ಯಾಕೆ ಇಂತಹ ಪ್ರಯತ್ನಕ್ಕೆ ಮುಂದಾದರು ಅನ್ನೋದು ಈಗ ರಿವೀಲ್ ಆಗಿದೆ.

ಸಿನಿಮಾ ಬಿಡುಗಡೆ ಬಳಿಕ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿರೋದು ಅರ್ಜುನ್ ಜನ್ಯಗೆ ಖುಷಿಕೊಟ್ಟಿದೆ. ಇದನ್ನು ಕಣ್ತುಂಬಿಕೊಂಡ ಬಳಿಕ ಅರ್ಜುನ್ ಜನ್ಯ '45' ಸಿನಿಮಾ ಮಾಡುವುದಕ್ಕೆ ಅಸಲಿ ಕಾರಣವೇನು? ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಅವರ ಅಣ್ಣನ ಅಗಲಿಕೆ ಹಾಗೂ ಗರುಡ ಪುರಾಣವೇ '45' ಸಿನಿಮಾದ ಉಗಮಕ್ಕೆ ಕಾರಣ ಎಂದು ಅರ್ಜುನ್ ಜನ್ಯ ರಿವೀಲ್ ಮಾಡಿದ್ದಾರೆ. ಅಷ್ಟಕ್ಕೂ ಏನು ಹೇಳಿದ್ದಾರೆಂದು ನೋಡುವುದಾರೇ,
'45' ಹುಟ್ಟಿಗೆ ಎರಡು ಕಾರಣಗಳನ್ನು ತಿಳಿಸುವುದಕ್ಕೂ ಮುನ್ನ ಅಭಿಮಾನಿಯೊಬ್ಬರು ಸಿನಿಮಾ ನೋಡಿ ಪೊಲೀಸ್ ಕಂಪ್ಲೆಂಟ್ ಕೊಡುವುದಾಗಿ ಹೇಳಿದ್ದರು. ಆ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಿನಿಮಾದ ಬಳಿಕ ಅಭಿಮಾನಿಯೊಬ್ಬರು ಹೀಗಂದಿದ್ದರು. "ಸಿನಿಮಾ ಮಾತ್ರ ಮಸ್ತ್ ಆಗಿದೆ. ಈ ಕಡೆ ಶಿವಣ್ಣ.. ಆ ಕಡೆ ಉಪೇಂದ್ರ.. ಇಬ್ಬರು ಗುಮ್ತಾರೆ ಗುಮ್ತಾರೆ.. ಮಧ್ಯದಲ್ಲಿ ರಾಜ್ ಬಿ ಶೆಟ್ಟಿ ಸಿಕ್ಕಾಕಿಕೊಂಡಿದ್ದಾರೆ. ಈಗ ಹೋಗಿ ಅರ್ಜುನ್ ಜನ್ಯಗೆ ಪೊಲೀಸ್ ಕಂಪ್ಲೇಂಟ್ ಕೊಡುತ್ತೇನೆ." ಎಂದು ಅಭಿಮಾನಿ ಹೇಳಿದ್ದಾರೆ.
ಈ ವಿಡಿಯೋಗೆ ಅರ್ಜುನ್ ಜನ್ಯ ಪ್ರತಿಕ್ರಿಯೆ ಹೀಗಿದೆ. "ಆ ವಿಡಿಯೋ ನೋಡಿದೆ. ಬಹಳ ಕ್ಯೂಟ್ ಆಗಿ ಹೇಳಿದ್ದಾರೆ. ಬಹಳ ಸತ್ಯವಾಗಿ ಹೇಳಿದ್ದಾರೆ. ಆ ಜವಾಬ್ದಾರಿ ಇತ್ತು ನನಗೆ. ಮೂವರು ದೊಡ್ಡ ನಟರು. ನಮಗೆ ಇಷ್ಟ ಬಂದ ಹಾಗೆ ಮಾಡುವುದಕ್ಕೆ ಆಗುವುದಿಲ್ಲ. ಬ್ಯಾಲೆನ್ಸ್ ಮಾಡಿ ಸಿನಿಮಾ ಮಾಡಿದ್ದನ್ನು ಅವರು ಕಂಡಿದ್ದಾರೆ ಅಂದರೆ ಖುಷಿ ಆಗುತ್ತೆ." ಎಂದು ಅರ್ಜುನ್ ಜನ್ಯ ಹೇಳಿದ್ದಾರೆ.

ಹಾಗೇ ಅರ್ಜುನ್ ಜನ್ಯ ತನ್ನ ಅಣ್ಣನನ್ನು ಕಳೆದುಕೊಂಡಾಗ '45' ಸಿನಿಮಾ ಹುಟ್ಟಿಕೊಂಡಿತ್ತೆಂದು ಹೇಳಿದ್ದಾರೆ. "ನಮ್ಮ ಅಣ್ಣನನ್ನು ಕಳೆದುಕೊಂಡಾಗ ನನ್ನ ಕೈಯಲ್ಲಿ ಗರುಡ ಪುರಾಣದ ಶಾಸ್ತ್ರಗಳನ್ನು ಮಾಡಿದ್ದರು. ಆ ಶಾಸ್ತ್ರಗಳು ನನ್ನನ್ನು ತುಂಬಾನೇ ಕಾಡುವುದಕ್ಕೆ ಶುರು ಮಾಡಿದ್ದವು. ನಮ್ಮ ಅಣ್ಣ ನನಗೆ ತುಂಬಾನೇ ಹತ್ತಿರದಲ್ಲಿ ಇದ್ದರು. ಅವರ ಪಯಣ ಮುಂದಕ್ಕೆ ಏನಿದೆ ಅದು ತುಂಬಾನೇ ಚೆನ್ನಾಗಿ ಸಾಗಬೇಕು. ನಮ್ಮ ಜೊತೆಯಲ್ಲಿ ಇದ್ದಾಗ ನಮ್ಮಿಂದ ಏನೇ ಲೋಪ ದೋಷಗಳು ಆಗಿದ್ದರೂ, ಅವರು ಅಗಲಿದಾಗ ಎಷ್ಟು ಅತ್ತೇವು ಅನ್ನೋದು ಮುಖ್ಯ ಅಲ್ಲ. ಅವರು ಬದುಕಿದ್ದಾಗ ಎಷ್ಟು ಚೆನ್ನಾಗಿ ನೋಡಿ ಕೊಂಡ್ವಿ ಅನ್ನೋದು ಮುಖ್ಯ. ಇದೆಲ್ಲವೂ ನಾವು ಗರುಡ ಪುರಾಣದ ಕಾರ್ಯಗಳನ್ನು ಮಾಡುವಾಗ ಗೊತ್ತಾಯ್ತು. ಅದು ಜನರಿಗೆ ಗೊತ್ತಾಗಲಿ. ಇಂದಿನ ಯುವಕರಿಗೆ ಗೊತ್ತಿಲ್ಲ. ಆ ಶಾಸ್ತ್ರ ತುಂಬಾನೇ ಮುಖ್ಯ. ಅದನ್ನು ಫಾಲೋ ಮಾಡಬೇಕು." ಎಂದು ಅರ್ಜುನ್ ಜನ್ಯ ಹೇಳಿದ್ದಾರೆ.
ಹಾಗೇ '45' ಸಿನಿಮಾ ಮಾಡುವುದಕ್ಕೆ ಮೂರರಿಂದ ನಾಲ್ಕು ವರ್ಷ ಫ್ಯಾಮಿಲಿಯಿಂದ ದೂರ ಉಳಿದಿದ್ದು, ಅವರ ಸಹಕಾರವನ್ನು ನೆನೆದಿದ್ದಾರೆ. "ಮೂರುವರೆ ನಾಲ್ಕು ವರ್ಷಗಳಿಂದ ಕುಟುಂಬದಿಂದ ತುಂಬಾನೇ ದೂರದಲ್ಲಿ ಇದ್ದೇನೆ. ಅವರೇನು ಕಂಪ್ಲೇಂಟ್ ಮಾಡಿಲ್ಲ. ಸಿನಿಮಾ ಮಾಡಲಿ ಅಂತ ಬಿಟ್ಟು ಬಿಟ್ಟಿದ್ದರು. ನನ್ನ ಮಗಳು ಫಿಲ್ಮ್ ನೋಡಿ ಬಹಳನೇ ಖುಷಿ ಪಟ್ಟರು." ಎಂದು ಅರ್ಜುನ್ ಜನ್ಯ ಹೇಳಿದ್ದಾರೆ.


Click it and Unblock the Notifications











