"ಸಿಟ್ಟನ್ನು ಸ್ಕ್ರಿಪ್ಟ್ ಮಾಡಬೇಕು, ದ್ವೇಷನಾ ಕ್ಯಾರೆಕ್ಟರ್ ಮಾಡ್ಬೇಕು, ನಿಜ ಜೀವನದಲ್ಲಿ ತರಬಾರದು"; ಹಂಸಲೇಖ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಜೈಲು ಸೇರಿದ್ದಾರೆ. ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ ಪರ ಚಿತ್ರರಂಗದ ಒಬ್ಬೊಬ್ಬರೇ ಕಲಾವಿದರು ಮುಂದೆ ಒಂದು ಮಾತಾಡುತ್ತಿದ್ದಾರೆ. ರಚಿತಾ ರಾಮ್, ರಕ್ಷಿತಾ, ಪ್ರೇಮ್ ಸೇರಿದಂತೆ ಸಾಕಷ್ಟು ಮಂದಿ ದರ್ಶನ್ ಪರ ನಿಂತಿದ್ದಾರೆ. ಈಗ ನಾದ ಬ್ರಹ್ಮ ಹಂಸಲೇಖ ಕೂಡ ದರ್ಶನ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದರ್ಶನ್ ಜೈಲು ಸೇರಿರುವ ಬಗ್ಗೆ ಮಂಡ್ಯದಲ್ಲಿ ನಾದಬ್ರಹ್ಮ ಹಂಸಲೇಖ ಪ್ರತಿಕ್ರಿಯಿಸಿದ್ದಾರೆ. ದರ್ಶನ್ ತನ್ನ ಮಗು ಇದ್ದಂತೆ. ತಂದೆಗೆ ಎಷ್ಟು ನೋವಾಗುತ್ತೋ ಅಷ್ಟೇ ನೋವು ನನಗೂ ಆಗಿದೆ ಎಂದು ಹೇಳಿದ್ದಾರೆ. ಹಂಸಲೇಖ ಹೇಳಿದ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಇದೇ ಸಂದರ್ಭದಲ್ಲಿ ಹಂಸಲೇಖ ಕಲಾವಿದರಿಗೆ ಸಲಹೆಯನ್ನೂ ನೀಡಿದ್ದಾರೆ. ಸಿಟ್ಟು, ಕೋಪದ ಉದಾಹರಣೆ ಇಟ್ಟುಕೊಂಡು ಕಲಾವಿದರಿಗೆ ಜೀವನದ ಪಾಠ ಮಾಡಿದ್ದಾರೆ. ದರ್ಶನ್ ಪ್ರಕರಣದ ಬಗ್ಗೆ ಹಂಸಲೇಖ ಮಾತುಗಳ ಝಲಕ್ ಇಲ್ಲಿದೆ.
ಸಿಟ್ಟು ಸ್ಕ್ರಿಪ್ಟ್.. ದ್ವೇಷ ಕ್ಯಾರೆಕ್ಟರ್
ಸಿನಿಮಾ ಕಲಾವಿದರು ಸಿಟ್ಟು ಹಾಗೂ ಕೋಪವನ್ನು ಜೀವನದಲ್ಲಿ ರೂಢಿಸಿಕೊಳ್ಳಬಾರದು ಎಂದು ಹಂಸಲೇಖ ಸಲಹೆ ನೀಡಿದ್ದಾರೆ. "ನಾವು ಯೋಚನೆ ಮಾಡಬೇಕು. ಅದರಲ್ಲೂ ನಾನು ಸಿನಿಮಾ ಕಲಾವಿದರು. ನಾನು ಸಿಟ್ಟನ್ನು ಸ್ಕ್ರಿಪ್ಟ್ ಮಾಡಬೇಕು. ದ್ವೇಷ ಇದೆಯಲ್ಲ ಅದನ್ನು ಕ್ಯಾರೆಕ್ಟರ್ ಮಾಡಬೇಕು. ಸಿಟ್ಟು ಅಂದರೆ ಅದೊಂದು ಸ್ಕ್ರಿಪ್ಟ್ ಕಣಯ್ಯ. ದ್ವೇಷ ಅಂದರೆ ಅದು ಕ್ಯಾರೆಕ್ಟರ್ ಅಯ್ಯ. ಆತರ ಸಿನಿಮಾದಲ್ಲಿ ತೋರಿಸಬೇಕಷ್ಟೆ. ನಿಜ ಜೀವನದಲ್ಲಿ ಸ್ಕ್ರಿಪ್ಟ್ ತರಬಾರದು. ನಿಜ ಜೀವನದಲ್ಲಿ ಕ್ಯಾರೆಕ್ಟರ್ ಅನ್ನು ತರಬಾರದು. ಇದು ಕಲಾವಿದರ ಕರ್ತವ್ಯ." ಎಂದು ಹಂಸಲೇಖ ಹೇಳಿದ್ದಾರೆ.

"ದರ್ಶನ್ ನನ್ನ ಮಗು"
ಇದೇ ವೇಳೆ ದರ್ಶನ್ ನನ್ನ ಮಗು ಅಂತ ಹಂಸಲೇಖ ಹೇಳಿಕೊಂಡಿದ್ದಾರೆ. "ದರ್ಶನ್ ನನ್ನ ಮಗು ಅಂತೀನಿ. ಆ ಮಗು ತಪ್ಪು ಮಾಡಿದ್ದರೆ, ತಂದೆ ಎಷ್ಟು ನೋವು ತಿಂತಾನೋ ಅಷ್ಟೇ ನಾನು ನೋವು ತಿನ್ನುತ್ತೀನಿ. ಆ ಮಗು ಕೂಡ ಅಷ್ಟೇ ನೋವು ತಿನ್ನುತ್ತಿರುತ್ತೆ. ನಾವು ಆತ ಕೊಟ್ಟಿರುವ ಕೊಡುಗೆ ಕಡೆ ನೋಡೋಣ." ಎಂದು ದರ್ಶನ್ ಜೈಲು ಸೇರಿರುವ ಬಗ್ಗೆ ಹಂಸಲೇಖ ಹೇಳಿಕೊಂಡಿದ್ದಾರೆ.
ದರ್ಶನ್ ಬಂಧನದ ಬಗ್ಗೆ ಈಗಾಗಲೇ ಚಿತ್ರರಂಗ ಸ್ಟಾಫ್ಟ್ ಕಾರ್ನರ್ ಹೊಂದಿದೆ. ರೇಣುಕಾಸ್ಟಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿಲ್ಲ ಅನ್ನೋ ನಂಬಿಕೆಯಲ್ಲಿ ಕೆಲ ಕಲಾವಿದರು ಇದ್ದಾರೆ. ಮತ್ತೆ ಕೆಲವರು ಕಾನೂನಿನ ಬಗ್ಗೆ ಮಾತಾಡಿ ನುಣುಚಿಕೊಂಡಿದ್ದಾರೆ. ಒಟ್ನಲ್ಲಿ ದರ್ಶನ್ ಪ್ರಕರಣ ಸದ್ಯ ಸ್ಯಾಂಡಲ್ವುಡ್ ತಾರೆಯರಿಗೆ ತಲೆನೋವಾಗಿರುವುದಂತೂ ಸತ್ಯ.
ಕನ್ನಡ ಚಿತ್ರರಂಗದ ನಷ್ಟದ ಹಾದಿ ಹಿಡಿದಿರುವ ಬಗ್ಗೆನೂ ಹಂಸಲೇಖ ಪ್ರತಿಕ್ರಿಯೆ ನೀಡಿದ್ದಾರೆ. "ಚಂದನವನ ಎಷ್ಟು ಕೀರ್ತಿಯನ್ನು ಗಳಿಸಿತು. ಎಷ್ಟು ಪ್ರಶಸ್ತಿಗಳು. ಎಷ್ಟು ರಾಷ್ಟ್ರ ಪ್ರಶಸ್ತಿಗಳು. ಎಷ್ಟು ಗೌರವ. ಎಂತಹ ಪ್ರತಿಭಾವಂತರು ಹುಟ್ಟಿ ಬೆಳೆದಿದ್ದಾರೆ. ಅಂದರೆ, ಆ ಎತ್ತರಕ್ಕೆ ಏರಿದ್ದಾರೆ. ಆ ಎತ್ತರಕ್ಕೆ ಹೋದ ಮೇಲೆ ಅಲ್ಲಿಂದ ಕೆಳಗೆ ಬೀಳಬೇಕಾಗುತ್ತೆ. ಹಾಗಾಗುವುದು ಬೇಡ. ಅಲ್ಲಿಂದ ಬಿದ್ದ ಕೂಡಲೇ ಅಲ್ಲಿಂದ ಮತ್ತೆ ಏಳುವ ಚಾನ್ಸ್ ಇದೆ. ಕೇರಳ ಚಿತ್ರೋದ್ಯಮ ಹೀಗೆ ಆಗಿತ್ತು. ಅದು ಈಗ ಉತ್ತುಂಗದಲ್ಲಿದೆ. ಚಂದನವನ ಅದು ಚಂದನವನ ಕಣಯ್ಯ. ಒಂದು ಮಳೆಗೆ ಮರ ಒಣಗಿ ಹೋಗಿರುತ್ತೆ. ಇನ್ನೊಂದು ಮಳೆಗೆ ಕಾಡು ಬೆಳೆದೇ ಬೆಳೆಯುತ್ತೆ." ಎಂದು ಹಂಸಲೇಖ ಚಿತ್ರರಂಗದ ಬಗ್ಗೆ ಹೇಳಿದ್ದಾರೆ.


Click it and Unblock the Notifications











