'ನಾದಯೋಗಿ ಡಾ.ರಾಜಕುಮಾರ್' ಬುಕ್ ರಿಲೀಸ್; ಇದು ಅಣ್ಣಾವ್ರ ಸಂಗೀತ ಜ್ಞಾನವನ್ನು ಪರಿಚಯಿಸೋ ವಿಶೇಷ ಪುಸ್ತಕ
ಕನ್ನಡದ ಕಣ್ಮಣಿ ವರನಟ ಡಾ.ರಾಜ್ಕುಮಾರ್ ಅಂತಹ ಬಹುಮುಖ ಪ್ರತಿಭೆ ಇದೂವರೆಗೂ ಮತ್ತೊಂದು ಬಂದಿಲ್ಲ. ಕನ್ನಡ ಚಿತ್ರರಂಗಕ್ಕೆ ಡಾ.ರಾಜ್ಕುಮಾರ್ ಒಬ್ಬರೇ ಅನ್ನುವಷ್ಟು ಅಗಾಧವಾದ ಮನರಂಜನೆಯನ್ನು ನೀಡಿ ಹೋಗಿದ್ದಾರೆ. ಅಣ್ಣಾವ್ರು ಕೇವಲ ನಟರಾಗಿ ಗುರುತಿಸಿಕೊಂಡಿರಲಿಲ್ಲ. ಅವರು ಅಭಿನಯಕ್ಕೆ ಎಷ್ಟು ಮಂದಿ ಅಭಿಮಾನಿಗಳು ಹುಟ್ಟಿಕೊಂಡಿದ್ದರೋ ಅಷ್ಟೇ ಮಂದಿ ಅವರ ಕಂಠಕ್ಕೂ ಅಭಿಮಾನಿಗಳು ಇದ್ದರು.
ಅಣ್ಣಾವ್ರು ಹಾಡಿದ ಒಂದೊಂದು ಹಾಡು ಇಂದಿಗೂ ಜನಪ್ರಿಯವಾಗಿದೆ. ಯಾವುದೇ ಜನರೇಷನ್ ಬಂದರೂ ಡಾ.ರಾಜ್ಕುಮಾರ್ ಹಾಡಿದ ಹಾಡುಗಳು ಕಣ್ಮರೆ ಆಗುವುದಕ್ಕೆ ಸಾಧ್ಯವೇ ಇಲ್ಲ. ಅದಕ್ಕೆ ಇಂದಿಗೂ ಅವರನ್ನು ನಟರಾಗಿ ನೋಡುವಂತೆ ಒಬ್ಬ ಗಾಯಕನಾಗಿಯೂ ಇಷ್ಟ ಪಡುತ್ತಾರೆ. ಅವರು ಒಬ್ಬ ಅದ್ಭುತ ಗಾಯಕರೂ ಅನ್ನೋದನ್ನು ಹಾಡುಗಳ ಮೂಲಕವೇ ಹೇಳಿದ್ದಾರೆ.

ಇನ್ನು ಅಣ್ಣಾವ್ರ ಕಂಠಕ್ಕೆ ಮನ ಸೋಲದವರೆ ಇಲ್ಲ. ಅಂತಹ ಅಪ್ರತಿಮ ಕಲಾವಿದ ಡಾ.ರಾಜಕುಮಾರ್. ಹೀಗಾಗಿ ಅಣ್ಣಾವ್ರ ಸಂಗೀತ ಜ್ಞಾನವನ್ನು ಪರಿಚಯಿಸೋಕೆ ಪುಸ್ತಕವೊಂದನ್ನು ಹೊರ ತರಲಾಗಿದೆ. ಅದುವೇ 'ನಾದಯೋಗಿ ಡಾ.ರಾಜಕುಮಾರ್'. ಈ ವಿಶೇಷ ಪುಸ್ತಕವನ್ನು ಆರ್. ಮಂಜುನಾಥ್ ಚವಾಣ್ ಹಾಗೂ ಡಾ.ಸೌಮ್ಯ ಮಂಜುನಾಥ್ ಚವಾಣ್ ಬರೆದಿದ್ದಾರೆ. ಇತ್ತೀಚೆಗೆ ಈ ಪುಸ್ತಕವನ್ನು ಅನಾವರಣಗೊಳಿಸಲಾಯ್ತು.
ಕಲಾವಿದರ ಸಂಘದಲ್ಲಿ ನಡೆದ ಈ ಅದ್ದೂರಿ ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು. 'ನಾದಯೋಗಿ ಡಾ.ರಾಜಕುಮಾರ್' ಪುಸ್ತಕವನ್ನು ಡಾ.ರಾಜಕುಮಾರ್ ಪುತ್ರಿ ಪೂರ್ಣಿಮಾ ರಾಮಕುಮಾರ್ ಲೋಕಾರ್ಪಣೆ ಮಾಡಿದರು. ಡಾ.ರಾಜಕುಮಾರ್ ಸಹೋದರ ವರದಪ್ಪ ಅವರ ಪುತ್ರಿ ಡಾ.ಲತಾ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಲಹರಿ ಸಂಸ್ಥೆಯ ಮನೋಹರ ನಾಯ್ಡು ಹಾಗೂ ಲಹರಿ ವೇಲು ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
'ನಾದಯೋಗಿ ಡಾ.ರಾಜಕುಮಾರ್' ಪುಸ್ತಕ ಮೇ 7ರಂದು ಲೋಕಾರ್ಪಣೆ ಗೊಂಡಿದೆ. ವಿಶೇಷ ಅಂದರೆ, ಅಣ್ಣಾವ್ರು ನಟಿಸಿದ ಚೊಚ್ಚಲ ಸಿನಿಮಾ 'ಬೇಡರ ಕಣ್ಣಪ್ಪ' ಸಿನಿಮಾ ಕೂಡ ಮೇ 7, 1954ರಲ್ಲಿ ರಿಲೀಸ್ ಆಗಿತ್ತು. ಹೀಗಾಗಿ ಈ ಕೃತಿ ಅಣ್ಣಾವ್ರ ಅಭಿಮಾನಿಗಳಿಗೆ ವಿಶೇಷ ಅನ್ನಬಹುದು. ಇನ್ನು ಕಾವೇರಿ ಕನ್ನಡ ಸಂಘ ಧಾರ್ ಎಸ್ ಸಲಾಂ ತಾಂಜಾನಿಯಾ ಪೂರ್ವ ಆಫ್ರಿಕಾ ಪ್ರತಿನಿಧಿ ಗೌಡ ಅವರು ಈ ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದರು .
ಕನ್ನಡ ಚಿತ್ರ ರಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವರನಟ ಡಾ.ರಾಜ್ ಕುಮಾರ್ ಅವರ ಈ ಕೃತಿ ಪೂರ್ವ ಆಫ್ರಿಕಾಕ್ಕೆ ತಲುಪುತ್ತಿದೆ. ಇದು ಕನ್ನಡ ನಾಡು ನುಡಿಯ ಹೆಮ್ಮೆಯ ಪ್ರತೀಕವಾಗಿದೆ. ಈ ಕೃತಿಯನ್ನು ಅನಾವರಣ ಮಾಡಿ ಮಾತನಾಡಿದ ಡಾ.ರಾಜಕುಮಾರ್ ಪುತ್ರಿ ಪೂರ್ಣಿಮಾ ರಾಮಕುಮಾರ್ "ನಮ್ಮ ತಂದೆಗೆ ಸಂಗೀತವೆಂದರೆ ಪ್ರಾಣ. ಗಜಲ್ ಬಹಳ ಇಷ್ಟ. ನಮ್ಮ ಮನೆಯಲ್ಲಿ ಎಲ್ಲರೂ ಸಂಗೀತ ಪ್ರೇಮಿಗಳೇ. ನಮ್ಮ ಕುಟುಂಬಕ್ಕೆ ಆತ್ಮೀಯರಾದ ಆರ್ ಮಂಜುನಾಥ್ ಹಾಗೂ ಸೌಮ್ಯ ಮಂಜುನಾಥ್ ಅವರು ಅಪ್ಪಾಜಿ ಅವರಿಗಿದ್ದ ಸಂಗೀತದ ಜ್ಞಾನವನ್ನು ಪರಿಚಯಿಸುವ ಈ ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕವನ್ನು ಅನಾವರಣ ಮಾಡಿದ್ದು ಬಹಳ ಖುಷಿಯಾಗಿದೆ" ಎಂದು ಹೇಳಿದ್ದಾರೆ.
ಇನ್ನು ಈ ಕೃತಿಯ ಲೇಖಕರಾದ ಆರ್ ಮಂಜುನಾಥ್ ಚವಾಣ್ ಕೆಲವು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹೇಳಿದ್ದಾರೆ. "1992 ಜೀವನ ಚೈತ್ರ ಸಿನಿಮಾದ ಸಂದರ್ಭದಲ್ಲಿ ಡಾ.ರಾಜಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ್ ಅವರ ಪರಿಚಯವಾಯಿತು. ಆನಂತರ ಅವರೊಂದಿಗೆ ಹತ್ತಿರದ ಒಡನಾಟವಿತ್ತು. ಡಾ.ರಾಜಕುಮಾರ್ ಅವರು ಬಹಳ ದೊಡ್ಡ ಸಂಗೀತ ಪ್ರೇಮಿ. ಅವರಿಗೆ ಸಂಗೀತದ ಎಲ್ಲಾ ಪ್ರಕಾರಗಳು ಗೊತ್ತಿತ್ತು. ಅವರ ಸಹೋದರ ವರದಪ್ಪ ಅವರು ಕೂಡ ಸಂಗೀತದ ಬಗ್ಗೆ ಅಪಾರ ಜ್ಞಾನವುಳ್ಳವರಾಗಿದ್ದರು" ಎಂದು ಅಣ್ಣಾವ್ರನ್ನು ನೆನಪಿಸಿಕೊಂಡಿದ್ದಾರೆ.
"ಡಾ.ರಾಜಕುಮಾರ್ ಅವರಿಗೆ ಕರ್ನಾಟಕ ಸಂಗೀತ ಅಷ್ಟೇ ಅಲ್ಲದೆ ಹಿಂದೂಸ್ತಾನಿ ಸಂಗೀತ ಕೂಡ ಪ್ರಿಯ. ಅದರಲ್ಲೂ ಗಜಲ್ ಎಂದರೆ ತುಂಬಾ ಇಷ್ಟ. ಎಪ್ಪತ್ತು ವರ್ಷಗಳಾಗಿದ್ದರೂ ಸಂಗೀತದಲ್ಲಿ ತಮಗೆ ತಿಳಿಯದ ಕೆಲವು ಸಂಗತಿಗಳ ಬಗ್ಗೆ ತಿಳಿದವರಿಂದ ತಿಳಿದುಕೊಳ್ಳುವ ಉತ್ಸಾಹ. ಇದನೆಲ್ಲಾ ಹತ್ತಿರದಿಂದ ಕಂಡಿದ್ದ ನಾನು ಹಾಗೂ ನನ್ನ ಶ್ರೀಮತಿ ಸೌಮ್ಯ, ಡಾ.ರಾಜಕುಮಾರ್ ಅವರಿಗಿದ್ದ ಸಂಗೀತ ಜ್ಞಾನವನ್ನು ಪುಸ್ತಕ ರೂಪದಲ್ಲಿ ಎಲ್ಲರಿಗೂ ತಿಳಿಸಬೇಕು ಎಂಬ ಉದ್ದೇಶದಿಂದ 'ನಾದಯೋಗಿ ಡಾ ರಾಜಕುಮಾರ್' ಎಂಬ ಪುಸ್ತಕವನ್ನು ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಬರೆದಿದ್ದೇವೆ. ರಾಜಕುಮಾರ್ ಅವರ ಪುತ್ರಿ ಪೂರ್ಣಿಮಾ ರಾಮ್ ಕುಮಾರ್ ಅವರು ಈ ಪುಸ್ತಕ ಅನಾವರಣ ಮಾಡಿಕೊಟ್ಟಿದ್ದು ಬಹಳ ಸಂತೋಷವಾಗಿದೆ. ಅವರಿಗೆ ಹಾಗೂ ಆಗಮಿಸಿರುವ ಗಣ್ಯರಿಗೆ ಧನ್ಯವಾದ. 7.5.1954 ರಾಜಕುಮಾರ್ ಅಭಿನಯದ ಮೊದಲ ಚಿತ್ರ 'ಬೇಡರ ಕಣ್ಣಪ್ಪ' ಬಿಡುಗಡೆಯಾಗಿತ್ತು. ಕಾಕತಾಳೀಯವಾಗಿ ಇಂದು 7.5.2026 ನಮ್ಮ 'ನಾದಯೋಗಿ ಡಾ.ರಾಜಕುಮಾರ್' ಪುಸ್ತಕ ಅನಾವರಣವಾಗಿದೆ" ಎಂದು ಪುಸ್ತಕ ಲೇಖಕ ಆರ್ ಮಂಜುನಾಥ್ ಚವಾಣ್ ತಿಳಿಸಿದ್ದಾರೆ.


Click it and Unblock the Notifications
