ಕಾಶಿಯ ನಾಗಸಾಧುವಿನಿಂದ'ರಂಗ ಸಮುದ್ರ'ದ 'ಕೈಲಾಸ'ಸಾಂಗ್ ರಿಲೀಸ್!
ಕಳೆದ ಕೆಲವು ದಿನಗಳಿಂದ ಕನ್ನಡ ಸಿನಿಮಾ 'ರಂಗ ಸಮುದ್ರ' ಕನ್ನಡಿಗರ ಗಮನ ಸೆಳೆಯುತ್ತಿದೆ. ಈಗ ಸಿನಿಮಾ ಹಾಡನ್ನು ವಿಶಿಷ್ಠವಾಗಿ ಬಿಡುಗಡೆ ಮಾಡುವ ಮೂಲಕ ಸದ್ದು ಮಾಡುತ್ತಿದೆ.
'ರಂಗ ಸಮುದ್ರ' ಸಿನಿಮಾದ 'ಕೈಲಾಸ' ಅನ್ನೋ ಹಾಡನ್ನು ಪವಿತ್ರ ಕ್ಷೇತ್ರ ಕಾಶಿಯಲ್ಲಿ ಬಿಡುಗಡೆ ಮಾಡಲಾಗಿದೆ. ಸಿನಿಮಾ ತಂಡ ಕಾಶಿಗೆ ತೆರಳಿ ಅಲ್ಲಿ ಒಬ್ಬ ನಾಗಸಾಧುವಿನಿಂದ ಹಾಡನ್ನು ಬಿಡುಗಡೆ ಮಾಡಿಸಿದ್ದಾರೆ.
ಕಂಚಿನ ಕಂಠದ ಗಾಯಕ ಕೈಲಾಶ್ ಕೇರ್ ಈ ಹಾಡನ್ನು ಹಾಡಿದ್ದು, ಈಗಾಗಲೇ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಕನ್ನಡದಿಂದ ಹಿಂದಿಗೆ ಅವರೇ ತರ್ಜುಮೆ ಮಾಡಿಕೊಂಡು ಕಷ್ಟಪಟ್ಟು ಹಾಡಿದ್ದಾರೆ. ಅದೇ ಹಾಡನ್ನೇ ಕಾಶಿಯಲ್ಲಿ ರಿಲೀಸ್ ಮಾಡಲಾಗಿದೆ.

ಇನ್ನು 'ರಂಗ ಸಮುದ್ರ' ಸಿನಿಮಾದ ಪ್ರಮುಖ ಪಾತ್ರದಲ್ಲಿ ರಂಗಾಯಣ ರಘು ಕಾಣಿಸಿಕೊಂಡಿದ್ದಾರೆ. ಹೆಚ್ಚಾಗಿ ಕಾಮಿಡಿ ಪಾತ್ರಗಳಲ್ಲಿಯೇ ನಟಿಸಿದ್ದ ರಂಗಾಯಣ ರಘು ಈ ಬಾರಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಅಂದ್ಹಾಗೆ ಈ ಹಾಡನ್ನು ಮೊದಲ ಬಾರಿಗೆ ಸಂಪೂರ್ಣ ಭಂಡಾರವನ್ನೇ ಉಪಯೋಗಿಸಿ ಚಿತ್ರೀಕರಿಸಲಾಗಿದೆ. ಈ ಹಾಡನ್ನು ನೈಜತೆಗಾಗಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಹುಲಿ ಜಯಂತಿ ಊರನ್ನು ಆಯ್ಕೆ ಮಾಡಿಕೊಂಡು ಚಿತ್ರೀಕರಣ ಮಾಡಿದ್ದಾರೆ. ಇಲ್ಲಿನ ಜಾತ್ರೆಗೆ ಸುಮಾರು 15 ಲಕ್ಷಕ್ಕೂ ಅಧಿಕ ಮಂದಿ ಸೇರುತ್ತಾರೆ. ಇದನ್ನೇ ಕಾದು ಹಾಡನ್ನು ಶೂಟ್ ಮಾಡಲಾಗಿದೆ. ನಿರ್ದೇಶಕ ರಾಜಕುಮಾರ್ ಅಸ್ಕಿ ಹಾಗೂ ಕೋರಿಯೋಗ್ರಫರ್ ಬಿ.ಧನಂಜಯ್. ಪ್ಲ್ಯಾನ್ ಮಾಡಿ ಶೂಟ್ ಮಾಡಿದ್ದಾರೆ.

'ರಂಗ ಸಮುದ್ರ' ಸಿನಿಮಾದಲ್ಲಿ ಸುಮಾರು 5 ಹಾಡುಗಳಿದ್ದು ಕೈಲಾಶ್ ಕೇರ್, ಬಾಹುಬಲಿ ಖ್ಯಾತಿಯ ಎಮ್ ಎಮ್ ಕೀರವಾಣಿ, ವಿಜಯ್ ಪ್ರಕಾಶ್, ಸಂಚಿತ್ ಹೆಗ್ಡೆ ಹಾಗು ದೇಸಿ ಮೋಹನ್ ಧ್ವನಿಯಾಗಿದ್ದಾರೆ.ಈ 5 ಗೀತೆಗಳಿಗೂ ವಾಗೀಶ್ ಚನ್ನಗಿರಿ ಸಾಹಿತ್ಯ ಬರೆದಿದ್ದಾರೆ. ದೇಸಿಮೋಹನ್ ಸಂಗೀತ, ಬಿ ಧನಂಜಯ್ ನೃತ್ಯ ನಿರ್ದೇಶನ, ಕೆ.ಜಿ.ಎಫ್ ಖ್ಯಾತಿಯ ಶ್ರೀಕಾಂತ್ ಎಡಿಟಿಂಗ್ ಮಾಡಿದ್ದಾರೆ.


Click it and Unblock the Notifications











