'ನಂದಗೋಕುಲ' ಸೀರಿಯಲ್ ಅಭಿ ದಾಸ್ ಸಿನಿಮಾ 'ಕಾಲಘಟ್ಟ' ಸಿನಿಮಾ ರಿಲೀಸ್ಗೆ ರೆಡಿ
ಈ ಹಿಂದೆ ಖಾಲಿ ಡಬ್ಬ ಎಂಬ ಸಿನಿಮಾ ಮಾಡಿದ್ದ ನಿರ್ದೇಶಕ ಕೆ ಪ್ರಕಾಶ್ ಅಂಬಳೆ ಈಗ ಕಾಲಘಟ್ಟ ಎಂಬ ಹೊಸ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಇದೇ ತಿಂಗಳ 19ರಂದು ಚಿತ್ರ ತೆರೆಗೆ ಬರ್ತಿದ್ದು, ಈ ಕುರಿತ ಸುದ್ದಿ ಗೋಷ್ಠಿ ನಿನ್ನೆ ಬೆಂಗಳೂರಿನ ಎಸ್ ಆರ್ ವಿ ಥಿಯೇಟರ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಇಡೀ ಚಿತ್ರತಂಡ ಭಾಗಿಯಾಗಿತ್ತು.
ನಾಯಕ ಅಭಿದಾಸ್ ಮಾತನಾಡಿ, ಕಾಲಘಟ್ಟ ಸಿನಿಮಾದಲ್ಲಿ ಹೀರೋ ಆಗಿ ನಟನೆ ಮಾಡಿದ್ದೇನೆ. ಪಾತ್ರ ತುಂಬಾ ವಿಭಿನ್ನವಾಗಿದೆ. 1995 ಹಾಗೂ 2025ರಲ್ಲಿ ಎರಡು ಟೈಮ್ ನಲ್ಲಿ ನಡೆಯುವ ಕಥೆ. ನನ್ನದು 1990ರಲ್ಲಿ ಬರುವ ಪಾತ್ರ. ಮೊದಲ ಬಾರಿಗೆ ಹಳ್ಳಿ ಹುಡುಗನ ಪಾತ್ರ ಮಾಡಿದ್ದೇನೆ. ಕಿರಾತಕ ಸಿನಿಮಾದಲ್ಲಿ ಯಶ್ ಸರ್ ಮಾಡಿರುವ ಪಾತ್ರದ ರೆಫರೆನ್ಸ್ ತರ ಇದೆ. ನನ್ನ ಪಾತ್ರ ಚೆನ್ನಾಗಿ ಬಂದಿದೆ ಎಂದುಕೊಳ್ಳುತ್ತೇನೆ. ನಿರ್ಮಾಪಕರು ಕೃಷಿಕರು. ಅವರಿಗೆ ಸಿನಿಮಾ ಮೇಲೆ ಆಸಕ್ತಿ ಬಂದಿರುವುದು ಖುಷಿ ವಿಚಾರ. ನಿಮ್ಮಂತವರು ಇಂಡಸ್ಟ್ರಿಗೆ ಬೇಕು. ಇದೇ 19ಕ್ಕೆ ಕಾಲಘಟ್ಟ ಸಿನಿಮಾ ತೆರೆಗೆ ಬರಲಿದೆ ಎಂದರು.

ಕಿರುತೆರೆಯಲ್ಲಿ ಖ್ಯಾತಿಗಳಿಸಿರುವ ಅಭಿದಾಸ್ ಹಾಗೂ ನಿತಿನ್ ʼಕಾಲಘಟ್ಟʼ ದ ನಾಯಕರಾಗಿ ನಟಿಸಿದ್ದು, ಮೇಘ ಮತ್ತು ಖುಷಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ಹಿರಿಯ ಕಲಾವಿದರಾದ ಶೋಭ್ ರಾಜ್, ಭವ್ಯ, ಪ್ರಶಾಂತ್ ಹಾಗೂ ಅನೇಕ ರಂಗಭೂಮಿ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ನಿರ್ದೇಶಕ ಕೆ ಪ್ರಕಾಶ್ ಅಂಬಳೆ ಅವರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಸದಾಶಿವ ಹಿರೇಮಠ ಹಾಗೂ ರಾಜ್ ಕಡೂರ್ ಅವರ ಛಾಯಾಗ್ರಹಣ, ಎ.ಎಂ. ನೀಲ್ ಸಂಗೀತ ನಿರ್ದೇಶನ, ವೆಂಕಿ ಯು.ಡಿ.ವಿ. ಸಂಕಲನ ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನವಿದೆ.
ಇದು ಎರಡು ʼಕಾಲಘಟ್ಟʼ ಗಳಲ್ಲಿ ನಡೆಯುವ ಕಥೆ. ಪೂರ್ವಾರ್ಧ ಮೂವತ್ತು ವರ್ಷಗಳ ಹಿಂದೆ , ದ್ವಿತೀಯಾರ್ಧ ಪ್ರಸ್ತುತ ಕಾಲಘಟ್ಟದಲ್ಲಿ ನಡೆಯುತ್ತದೆ. ಗ್ರಾಮೀಣ ಸೊಗಡಿನ ಜಾನಪದ ಕಲೆಯ ಬಗ್ಗೆ ಕೂಡ ಈ ಚಿತ್ರದಲ್ಲಿ ತೋರಿಸಲಾಗಿದೆ.
ಲಯನ್ ಚಿಕ್ಕೇಗೌಡ ಹಾಗೂ ಟಿ.ಸಿ. ತಳಗವಾಡಿ ಚಿತ್ರಕ್ಕೆ ಹಣ ಹಾಕಿದ್ದು, ಇದೇ ತಿಂಗಳ 19ಕ್ಕೆ ಕಾಲಘಟ್ಟ ಸಿನಿಮಾ ತೆರೆಗೆ ಎಂಟ್ರಿ ಕೊಡಲಿದೆ.


Click it and Unblock the Notifications