ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ದಾಂಪತ್ಯದಲ್ಲಿ ಬಿರುಕು:"ಪತ್ನಿಗೆ ಮಾನಸಿಕ ಸಮಸ್ಯೆ" ಎಂದು ಪೊಲೀಸರಿಗೆ ಪತ್ರ
ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ ಮಂಸೋರೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕನ್ನಡದಲ್ಲಿ ತಮ್ಮದೇ ಶೈಲಿಯಲ್ಲಿ ಸಿನಿಮಾಗಳನ್ನು ನಿರ್ದೇಶನ ಮಾಡಿ ರಾಷ್ಟ್ರ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದಾರೆ. ಈ ಜನಪ್ರಿಯ ನಿರ್ದೇಶಕನ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಬೀಸಿದೆ.
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ವಿರುದ್ಧ ಅವರ ಪತ್ನಿ ಅಖಿಲಾ ದೂರು ದಾಖಲಿಸಿದ್ದಾರೆ. ತಮ್ಮ ಪತಿ ಮಾನಸಿಕ, ದೈಹಿಕ ಹಿಂಸೆ, ವರದಕ್ಷಿಣೆ ಹಾಗೂ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ದೂರು ಸಲ್ಲಿಸಿದ್ದಾಗಿ ವರದಿಯಾಗಿದೆ. ಪತ್ನಿ ದೂರನ್ನು ದಾಖಲಿಸುತ್ತಿದ್ದಂತೆ ಇತ್ತ ಮಂಸೋರೆ ಕೂಡ ಪೊಲೀಸರಿಗೆ ಪತ್ರ ಬರೆದಿದ್ದಾರೆ.

ಮಂಸೋರೆ ಬರೆದ ಪತ್ರದಲ್ಲಿ ತಮ್ಮ ಪತ್ನಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆಂದು ಹೇಳಿದ್ದಾರೆ. "ನಾನು ಸದ್ಯ ನನ್ನ ಸಾಂಸಾರಿಕ ಜೀವನದಲ್ಲಿ ಜೀವನದಲ್ಲಿ ಬಿಕ್ಕಟ್ಟನ್ನು ಎದುರಿಸುತ್ತಿದ್ದೇನೆ. ನನ್ನ ಪತ್ನಿ ಅಖಿಲಾ ಸಿ ಅವರ ಮಾನಸಿಕ ಸಮಸ್ಯೆಯೇ ನನ್ನ ವೈಯಕ್ತಿಕ ಜೀವನದ ಸಮಸ್ಯೆಗಳಿಗೆ ಕಾರಣವಾಗಿದೆ.ಈ ಬಗ್ಗೆ ಮುತುವರ್ಜಿ ವಹಿಸಿರುವ ನಾನು, ನನ್ನ ಪತ್ನಿ ಅಖಿಲಾ ಸಿ.ಯವರ ಮಾನಸಿಕ ಸಮಸ್ಯೆಯನ್ನು ಹೋಗಲಾಡಿಸಬೇಕು ಎಂಬ ಕಾಳಜಿಯಿಂದ ಬೆಂಗಳೂರಿನ ದುಬಾಸಿ ಪಾಳ್ಯದಲ್ಲಿರುವ ಸಂಪೂರ್ಣ ಕೌನ್ಸಿಲಿಂಗ್ ಸೆಂಟರ್ಗೆ ಕರೆದುಕೊಂಡು ಹೋಗಿರುತ್ತೇನೆ. ಕೌನ್ಸಿಲಿಂಗ್ ಮಾಡಿದ ಕಾರ್ಮೆಲಿಟಾ ಅವರು ಅಖಿಲಾ ಸಿ ಅವರಿಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದರು. ಮಾತ್ರವಲ್ಲದೆ ನಿರಂತರ ಕೌನ್ಸಿಲಿಂಗ್ ಮಾಡುತ್ತಲೇ ಚಿಕಿತ್ಸೆ ಆರಂಭಿಸೋಣ ಎಂದು ಸಲಹೆ ನೀಡಿದ್ದರು." ಎಂದು ಪೊಲೀಸರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಇತ್ತ ಮಂಸೋರೆ ಪತ್ನಿ ಅಖಿಲಾ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ. ತಮ್ಮ ಪತಿ ಮಂಸೊರೆ (ಮಂಜುನಾಥ ಎಸ್) ಕೋವಿಡ್ ವೇಳೆ ಸಿನಿಮಾ ನಿರ್ಮಾಣ ಮಾಡುವುದಕ್ಕಾಗಿ ತಮ್ಮ ಮನೆಯವರಿಂದ 10 ಲಕ್ಷ ರೂಪಾಯಿ ಹಣ ಪಡೆದಿದ್ದಾರೆ. ಹಾಗೇ ಮಂಸೋರೆ ಅವರ ತಾಯಿ ವೆಂಕಟಲಕ್ಷ್ಮಮ್ಮ, ಸಹೋದರಿ ಹೇಮಲತಾ ಇಬ್ಬರೂ ತಮಗೆ 30 ಲಕ್ಷ ರೂಪಾಯಿತ SUV ಕಾರನ್ನು ಕೊಡಿಸಿಕೊಡುವಂತೆ ಪೀಡಿಸಿದ್ದಾರೆ. ಈ ವಿಷಯ ಬಾಯಿಬಿಟ್ಟರೆ ಕೊಂದು ಬಿಡುವುದಾಗಿ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾಗಿ ವರದಿ ಮಾಡಲಾಗಿದೆ.
ಹೀಗಾಗಿ ಮಂಸೋರೆ ಪ್ರತಿಯಾಗಿ ಪೊಲೀಸರಿಗೆ ಪತ್ರ ಬರೆದಿದ್ದು, ಅದರಲ್ಲೂ ಪತ್ನಿಯ ಬಗ್ಗೆ ದೂರಿದ್ದಾರೆ. "ನಾನು ಮದುವೆಯಾದ ಸಂದರ್ಭದಲ್ಲಾಗಲಿ, ಮದುವೆ ಬಳಿಕವಾಗಲಿ,ಯಾವುದೇ ರೀತಿಯ ವರದಕ್ಷಿಣೆಯನ್ನು ಪಡೆದುಕೊಂಡಿಲ್ಲ. ಪತ್ನಿ ಮನೆಯವರಿಂದ ಈವರೆಗೆ ಹಣಕಾಸು, ಆಭರಣ, ವಾಹನ, ವಸ್ತುಗಳ ಯಾವ ಸಹಾಯವನ್ನೂ ಯಾವುದೇ ರೂಪದಲ್ಲೂ ಪಡೆದಿಲ್ಲ. ಈ ಬಗೆಗೆಗ ನನ್ನ ಅಕೌಂಟ್ ಡಿಟೈಲ್ಸ್ ಬಗ್ಗೆಯಾಗಲಿ, ಯಾವುದೇ ವ್ಯವಹಾರದ ಬಗ್ಗೆಯಾಗಲಿ ಮುಕ್ತ ತನಿಖೆ ನಡೆಸಬಹುದು" ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಇದೇ ಪತ್ರದಲ್ಲಿ ಪತ್ನಿ ಮನೆಯಿಂದ ಹೊರಗೆ ಹೋಗುವಾಗ ಅವರಿಗೆ ಕೊಡಿಸಿದ ಚಿನ್ನಾಭರಣದ ಜೊತೆಯಲ್ಲಿ ಅವರಿಗೆ ಬಂದಿದ್ದ ರಾಷ್ಟ್ರ ಪ್ರಶಸ್ತಿ ಜೊತೆ ಇತರೆ ಪದಕಗಳನ್ನು ತೆಗೆದುಕೊಂಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ. ಹಾಗೇ ಪತ್ನಿ ದಾಖಲಿಸಿರುವ, ಕಿರುಕುಳ, ವರದಕ್ಷಿಣೆ, ದಲಿತ ದೌರ್ಜನ್ಯ ದೂರನ್ನು ಪರಿಗಣನೆಗೆ ತೆಗೆದುಕೊಳ್ಳಬಾರದೆಂದು ವಿನಂತಿಸಿಕೊಂಡಿದ್ದಾರೆ.
ಕನ್ನಡದ ನಿರ್ದೇಶಕ ಮಂಸೋರೆ ಹಾಗೂ ಅಖಿಲಾ ಪ್ರೀತಿಸಿ 2021ರಲ್ಲಿ ಮದುವೆಯಾಗಿದ್ದರು. ಮದುವೆಯಾದ ಮೂರು ವರ್ಷಗಳ ಅಂತರದಲ್ಲಿಯೇ ವೈವಾಹಿಕ ಜೀವನದ ಸಂಕಷ್ಟಕ್ಕೆ ಸಿಲುಕಿದೆ. ಸದ್ಯ ಆರೋಪ-ಪ್ರತ್ಯಾರೋಪ ಮಾಡುತ್ತಿರುವ ಈ ಪ್ರಕರಣ ಮತ್ಯಾವ ರೂಪ ಪಡೆದುಕೊಳ್ಳುತ್ತೋ ಸದ್ಯಕ್ಕೆ ಯಕ್ಷ ಪ್ರಶ್ನೆ.


Click it and Unblock the Notifications











