ಕನ್ನಡಿಗರಿಗೆ ಅವಮಾನ, ಕ್ರಮ ತಗೊಳ್ಳಿ ಎಂದ ನವೀನ್ ಶಂಕರ್: ಸೂಪರ್ಸ್ಟಾರ್ಗಳೆಲ್ಲಿ ಎಂದು ಆಕ್ರೋಶ
ಕರ್ನಾಟಕದ ಗಡಿಭಾಗ ಬೆಳಗಾವಿಯಲ್ಲಿ ಮರಾಠಿಗರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಮರಾಠಿ ಪುಂಡರು ಕನ್ನಡಿಗರ ವಿರುದ್ಧ ತಗಾದೆ ತೆಗೆಯುತ್ತಲೇ ಇದ್ದಾರೆ. ಒಂದಲ್ಲ ಒಂದು ಕಾರಣಕ್ಕೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿದ್ದಾರೆ. ಅದೆಷ್ಟು ಬಾರಿ ಪಾಠ ಕಲಿಸಿದರೂ ಮರಾಠಿಗರು ಇನ್ನು ಬುದ್ದಿ ಕಲಿತಿಲ್ಲ. ಈಗ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಅನ್ನು ಅವಮಾನಿಸಿದ ಪ್ರಕರಣ ಸಂಚಲ ಸೃಷ್ಟಿಸಿದೆ. ಕನ್ನಡ ಪರ ಹೋರಾಟಗಾರರು ಮರಾಠಿ ಪುಂಡರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಬಸ್ ಕಂಡಕ್ಟರ್ಗೆ ಮರಾಠಿ ಪುಂಡರು ಅವಮಾನ ಮಾಡಿದ್ದನ್ನು ಕನ್ನಡ ಪರ ಸಂಘಟನೆಗಳು ವಿರೋಧಿಸುತ್ತಿವೆ. ಬೀದಿಗಿಳಿದು ಪ್ರತಿಭಟನೆಯನ್ನು ಮಾಡುತ್ತಿವೆ. ಈ ಬೆನ್ನಲ್ಲೇ ಕನ್ನಡದ ಯುವ ನಟ ನವೀನ್ ಶಂಕರ್ ನಿನ್ನೆ (ಫೆಬ್ರವರಿ 25) ಟ್ವೀಟ್ (ಎಕ್ಸ್) ಮಾಡಿ ಬೆಳಗಾವಿಯಲ್ಲಿ ಆದ ಬೆಳವಣಿಗೆ ಬಗ್ಗೆ ಆತಂಕ ಹೊರ ಹಾಕಿದ್ದರು. ರಾಜ್ಯ ಸರ್ಕಾರಕ್ಕೆ ಕನ್ನಡಿಗರನ್ನು ಅವಮಾನಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದರು.

ಇದೂವರೆಗೂ ಕನ್ನಡದ ನಟರು, ಸೂಪರ್ಸ್ಟಾರ್ಗಳು ಮುಂದು ಬಂದು ಹೇಳಿಕೆ ಕೊಟ್ಟಿಲ್ಲ. ಈ ಕಾರಣಕ್ಕೆ ಕನ್ನಡಿಗರು ಸೂಪರ್ಸ್ಟಾರ್ಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸುದೀಪ್, ಯಶ್, ರಿಷಬ್ ಶೆಟ್ಟಿ ಸೇರಿದಂತೆ ಕನ್ನಡದ ಸ್ಟಾರ್ ಮೌನ ತಾಳಿದ್ದಕ್ಕೆ ಕಿಡಿಕಾರುತ್ತಿದ್ದಾರೆ. ಕನ್ನಡದ ಪರ ನಿಂತಿರುವ ಸ್ಟಾರ್ಗಳಿಗೆ ಬೆಂಬಲ ನೀಡೋಣ ಅಂತ ಸಾಲು ಸಾಲು ಟ್ವೀಟ್ಗಳನ್ನು ಮಾಡುತ್ತಿದ್ದಾರೆ.
ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದ್ದಕ್ಕೆ ಬೆಳಗಾವಿಯಲ್ಲಿ ಮರಾಠಿ ಪುಂಡರು ಹಲ್ಲೆ ಮಾಡಿದ್ದಾರೆ. ಈ ಪ್ರಕರಣ ಈಗ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಹೊರತಾಗಿಯೂ ಮರಾಠಿ ಪುಂಡರು ಗೂಂಡಾಗಿರಿ ಮುಂದುವರೆಸಿದ್ದಾರೆ. ಈ ಬೆನ್ನಲ್ಲೇ ಕನ್ನಡದ ನಟ ನವೀನ್ ಶಂಕರ್ ನಿನ್ನೆ (ಫೆಬ್ರವರಿ 25) ಒಂದು ಟ್ವೀಟ್ ಮಾಡಿದ್ದರು. "ಬೆಳಗಾವಿಯಲ್ಲಿ ಆಗುತ್ತಿರುವ ಬೆಳವಣಿಗೆಗಳು ಆತಂಕ ಮೂಡಿಸುತ್ತಿದೆ. ಕನ್ನಡಿಗರನ್ನು ಅವಮಾನಿಸಿದವರ ಮೇಲೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜಕಾರಣಿಗಳು ಪದೇ ಪದೇ ತೊಂದರೆ ಅನುಭವಿಸುತ್ತಿರುವ ಕನ್ನಡಿಗರಿಗೆ, ಶಾಶ್ವತ ಪರಿಹಾರ ದೊರಕಿಸಿಕೊಡಬೇಕು." ಎಂದಿದ್ದರು.
ನವೀನ್ ಶಂಕರ್ ಶೀಘ್ರವೇ ಕನ್ನಡಿಗರ ಬೆಂಬಲಕ್ಕೆ ನಿಂತಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿವೆ. ನವೀನ್ ಶಂಕರ್ 'ಉತ್ತರ ಕರ್ನಾಟಕದ ಹುಲಿ' ಎಂದು ಕನ್ನಡಿಗರು ಬಣ್ಣಿಸುತ್ತಿದ್ದಾರೆ. ಕನ್ನಡದ ಪರ ನಿಂತಿರುವ ನವೀನ್ ಶಂಕರ್ಗೆ ಬೆಂಬಲಿಸಬೇಕು ಅಂತ ನೆಟ್ಟಿಗರು ಸಾಲು ಸಾಲು ಟ್ವೀಟ್ಗಳನ್ನು (ಎಕ್ಸ್) ಮಾಡುತ್ತಿದ್ದಾರೆ. ಇದರ ಜೊತೆ ಇನ್ನೂ ಪ್ರತಿಕ್ರಿಯಿಸದೇ ಇರುವ ಕನ್ನಡದ ಸೂಪರ್ಸ್ಟಾರ್ಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಕನ್ನಡ ಸೂಪರ್ಸ್ಟಾರ್ಗಳು ಎಲ್ಲಿಗೆ ಹೋದರು ಅಂತ ಪ್ರಶ್ನೆ ಮಾಡುತ್ತಿದ್ದಾರೆ.
"ಚಿತ್ರರಂಗದಿಂದ ಒಬ್ಬರಾದರು ಧ್ವನಿ ಎತ್ತಿದ್ರಲ್ಲ ಧನ್ಯವಾದಗಳು ಸರ್. ಕಿಚ್ಚ ಸುದೀಪ್, ಯಶ್, ನೀವುಗಳು ಇದರ ಬಗ್ಗೆ ಧ್ವನಿ ಎತ್ತಬೇಕು. ಕನ್ನಡದ ಪ್ರೇಕ್ಷಕರಿಂದ ಗಳಿಸಿದ ಹಣ ಕೀರ್ತಿ ಯಶಸ್ಸು ಮಾತ್ರ ಬೇಕು, ಅದೇ ಕನ್ನಡಿಗರಿಗೆ ಆದ ಅವಮಾನ, ನೋವು ಸಂಕಟದ ಬಗ್ಗೆ ಮಾತನಾಡಲು ಸಮಯವಿಲ್ಲ, ಜಾಣ ಕುರುಡು, ಕಿವುಡು ಪ್ರದರ್ಶನ" ಎಂದು ನೆಟ್ಟಿಗರೊಬ್ಬರು ಕಿಡಿಕಾರಿದ್ದಾರೆ.
ಹಾಗೇ ಮತ್ತೊಬ್ಬರು " ಬಸ್ ಡ್ರೈವರ್, ಬಡವರ ಮಗ, ಕುಂದಾಪುರದ ಹುಡುಗ, ನಮ್ಮ ಶೆಟ್ರುಗಳು, ನಮ್ಮ ನಾಯಕರ ಹುಡುಗ, ನಮ್ಮ ಅಣ್ಣಾರ್ ಮಕ್ಕಳು ಅಂತ ಎಲ್ಲರನ್ನೂ ಬೆಳೆಸಿದೆವು. ಆದರೆ, ನಮ್ಮ ಕನ್ನಡಿಗರಿಗೆ ಕಷ್ಟ ಬಂದಾಗ ಒಬ್ಬರೂ ಮಾತಾಡಲಿಲ್ಲ. ಮುಂದೆ ನಮ್ಮ ಕನ್ನಡಪರ ಜನರ ಜೊತೆ ಬರುವ ನವೀನ್ ಅಂತಹ ನಟರನ್ನು ಬೆಳೆಸೋಣ. ದುಡ್ಡಿಗೆ ಕನ್ನಡ ಅನ್ನೋನು ಬೇಡ." ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ಬೆಳಗಾವಿ ಗಡಿಯಲ್ಲಿ ಮತ್ತೆ ಮರಾಠಿ ಪುಂಡರ ಅಟ್ಟಹಾಸ ಜೋರಾಗಿದೆ. ಈ ಕಾರಣಕ್ಕೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡ ಪರ ಹೋರಾಟಗಾರರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳುತ್ತೋ ಮುಂದೆ ಗೊತ್ತಾಗಲಿದೆ.


Click it and Unblock the Notifications











