ಜನರ ಸಹಾಯಕ್ಕೆ ಧಾವಿಸಿದ ನಿಖಿಲ್-ರೇವತಿ ದಂಪತಿ: ಬಡವರಿಗೆ ಆಹಾರದ ಕಿಟ್ ವಿತರಣೆ
ಮದುವೆ ಬಳಿಕ ನಿಖಿಲ್ ಕುಮಾರ್ ಸಾರ್ವಜನಿಕವಾಗಿ ಅಥವಾ ಮಾಧ್ಯಮದ ಮುಂದೆ ಕಾಣಿಸಿಕೊಂಡಿರಲಿಲ್ಲ. ಸಾಮಾಜಿಕ ಜಾಲತಾಣಗಳಿಂದಲೂ ದೂರ ಉಳಿದಿದ್ದರು. ಮದುವೆಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ರೇವತಿ ಅವರೊಂದಿಗಿನ ಅನೇಕ ಫೋಟೊಗಳನ್ನು ನಿರಂತರವಾಗಿ ಅಪ್ಲೋಡ್ ಮಾಡುತ್ತಿದ್ದರು.
Recommended Video
ಏಪ್ರಿಲ್ 17ರಂದು ರಾಮನಗರದ ಕೇತುಗಾನಹಳ್ಳಿಯ ಫಾರ್ಮ್ಹೌಸ್ನಲ್ಲಿ ರೇವತಿ ಅವರೊಂದಿಗೆ ಸಪ್ತಪದಿ ತುಳಿದು ವೈವಾಹಿಕ ಬದುಕಿಗೆ ಕಾಲಿರಿಸಿದ್ದರು. ಅದರ ಬಳಿಕ ನಿಖಿಲ್ ಮತ್ತೆ ಪ್ರತ್ಯಕ್ಷವಾಗಿರಲಿಲ್ಲ. ಮದುವೆ ಜಂಜಾಟದ ನಂತರ ಸ್ವಲ್ಪ ವಿರಾಮದ ಬಳಿಕ ನಿಖಿಲ್ ಪತ್ನಿ ಸಮೇತ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಸಂಕಷ್ಟದಲ್ಲಿರುವ ಜನರಿಗೆ ಆಹಾರದ ಕಿಟ್ ವಿತರಿಸಿದರು.
ತಂದೆ ಎಚ್ ಡಿ ಕುಮಾರಸ್ವಾಮಿ ಮತ್ತು ತಾಯಿ ಅನಿತಾ ಕುಮಾರಸ್ವಾಮಿ ಜತೆಗೆ ನಿಖಿಲ್ ಹಾಗೂ ರೇವತಿ ದಂಪತಿ ರಾಮನಗರದ ಮಂಜುನಾಥ ಕನ್ವೆನ್ಷನ್ ಹಾಲ್ನಲ್ಲಿ ದಿನಸಿ ಕಿಟ್ಗಳನ್ನು ವಿತರಿಸಿದರು.

ದೇವರನ್ನು ಪ್ರಾರ್ಥಿಸೋಣ
ಈ ವೇಳೆ ಮಾತನಾಡಿದ ನಿಖಿಲ್, ಕೊರೊನಾ ಎಫೆಕ್ಟ್ನಿಂದ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದಷ್ಟು ಬೇಗನೆ ಕೊರೊನಾ ಸಂಕಟ ನಮ್ಮಿಂದ ದೂರವಾಗಲಿ ಎಂದು ದೇವರನ್ನು ನಾವೆಲ್ಲರೂ ಪ್ರಾರ್ಥಿಸೋಣ ಎಂದು ಹೇಳಿದರು.

ಹೀರೋ ಆಗಿ ಕಾರ್ಮಿಕ ಪರ ಮಾತು
ಇಂದು ಕುಮಾರಸ್ವಾಮಿ ಮತ್ತು ಅವರ ಪಕ್ಷದ ಮುಖಂಡರು ಕಷ್ಟದಲ್ಲಿರುವ ಬಡ ಜನರಿಗೆ ಆಹಾರದ ಕಿಟ್ ವಿತರಣೆ ಮಾಡುತ್ತಿದ್ದಾರೆ. ಮುಂದೆ ಕೂಡ ನಾವು ರಾಮನಗರ ಜಿಲ್ಲೆಯ ಜನರ ಪರವಾಗಿ ನಿಲ್ಲುತ್ತೇವೆ. ಚಿತ್ರರಂಗದ ದಿನಗೂಲಿ ಕಾರ್ಮಿಕರು ಬಹಳ ತೊಂದರೆಯಲ್ಲಿದ್ದಾರೆ. ನಾನು ಒಬ್ಬ ನಾಯಕ ನಟನಾಗಿ ಅವರ ಪರವಾಗಿ ಮಾತನಾಡುತ್ತೇನೆ ಎಂದರು.

ಕಾರ್ಮಿಕ ಶ್ರಮದಿಂದ ಉಳಿದಿದೆ
ಚಿತ್ರರಂಗದ ಕಾರ್ಮಿಕರ ಶ್ರಮದಿಂದಲೇ ಇಂದು ಆ ಉದ್ಯಮ ಉಳಿದಿದೆ. ನಾನು ವೈಯಕ್ತಿಕವಾಗಿ ಸಾಧ್ಯವಾದಷ್ಟು ಅವರಿಗೆ ಸಹಾಯ ಮಾಡಿದ್ದೇನೆ. ಸರ್ಕಾರವೂ ಅವರ ಸಮಸ್ಯೆಗಳ ಕುರಿತು ಗಮನಹರಿಸಬೇಕು ಎಂದು ಮನವಿ ಮಾಡುತ್ತೇನೆ. ಸರ್ಕಾರಕ್ಕೆ ಸಲಹೆ ಕೊಡುವಷ್ಟು ನಾನು ದೊಡ್ಡವನಲ್ಲ. ಹಾಗಾಗಿ ಅವರಿಗೆ ಮನವಿ ಮಾಡುತ್ತೇನೆ ಅಷ್ಟೇ ಎಂದರು.

ಮದುವೆ ಹಣ ನೆರವಿಗೆ
'ನನ್ನ ಆಸೆಯಂತೆ ಮಗನ ಮದುವೆ ನಡೆಸಲು ಸಾಧ್ಯವಾಗಿಲ್ಲ. ಮದುವೆಗೆ ಎಂದು ನಾನು ಖರ್ಚು ಮಾಡಲು ಉದ್ದೇಶಿಸಿದ್ದ ಆ ಹಣವನ್ನು ಎರಡು ಕ್ಷೇತ್ರಗಳಲ್ಲಿನ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಲು ಈಗ ವಿನಿಯೋಗ ಮಾಡುತ್ತಿದ್ದೇನೆ' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.

ಐದೂವರೆ ಕೋಟಿ ವೆಚ್ಚದ ಸಾಮಗ್ರಿ
1 ಲಕ್ಷದ 4 ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ನಡೆಯಲಿದೆ. ಚನ್ನಪಟ್ಟಣ ಹಾಗೂ ರಾಮನಗರ ಕ್ಷೇತ್ರಗಳ ಎಲ್ಲಾ ಮನೆಗಳಿಗೂ ಈ ಆಹಾರ ಕಿಟ್ ತಲುಪಲಿದೆ. ಐದೂವರೆ ಕೋಟಿ ವೆಚ್ಚದ ಸಾಮಗ್ರಿಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.


Click it and Unblock the Notifications











