ಸಿನಿಮಾ ಕಾರ್ಮಿಕರಿಗೆ ನೆರವು: ಮಾನವೀಯತೆ ಮೆರೆದ ನಿಖಿಲ್ ಕುಮಾರಸ್ವಾಮಿ
ಸಂಕಷ್ಟದಲ್ಲಿರುವ ಚಲನಚಿತ್ರ ರಂಗದ ಕಾರ್ಮಿಕರಿಗೆ ಕೊಟ್ಟ ಮಾತಿನಂತೆ ಸಹಾಯ ಹಸ್ತ ಚಾಚುವ ಮೂಲಕ ನಟ ನಿಖಿಲ್ ಕುಮಾರಸ್ವಾಮಿ ಮಾನವೀಯತೆ ಮೆರೆದಿದ್ದಾರೆ. ಈ ಮೂಲಕ ಚಿತ್ರರಂಗದ ಇತರೆ ಕಲಾವಿದರಿಗೂ ಅವರು ಮಾದರಿಯಾಗಿದ್ದಾರೆ.
ಕೊರೊನಾ ವೈರಸ್ ಕಾರಣ ಲಾಕ್ಡೌನ್ ಘೋಷಣೆ ಮಾಡಿರುವುದರಿಂದ ಚಿತ್ರರಂಗದ ಎಲ್ಲ ಚಟುವಟಿಕೆಗಳೂ ಸ್ಥಗಿತಗೊಂಡಿವೆ.ಇದರಿಂದ ಚಿತ್ರೀಕರಣ ಹಾಗೂ ಇನ್ನಿತರೆ ಕಾರ್ಯಗಳನ್ನು ನೆಚ್ಚಿಕೊಂಡಿರುವ ದಿನಗೂಲಿ ಕಾರ್ಮಿಕರು ಹಾಗೂ ಕಡಿಮೆ ವೇತನದ ಕಾರ್ಮಿಕರ ಬದುಕು ಬೀದಿಗೆ ಬಂದಿದೆ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಗೆ ಅನೇಕರು ತಲುಪಿದ್ದಾರೆ. ಅಸಹಾಯಕ ಸ್ಥಿತಿಯಲ್ಲಿರುವ ಈ ಕಾರ್ಮಿಕರಿಗೆ ಸಹಾಯ ಮಾಡುವುದಾಗಿ ನಿಖಿಲ್ ಕುಮಾರಸ್ವಾಮಿ ಘೋಷಿಸಿದ್ದರು. ಅದರಂತೆ ನಿಖಿಲ್ ಸುಮಾರು ಮೂರು ಸಾವಿರ ಕಾರ್ಮಿಕರಿಗೆ ನೆರವು ನೀಡಿದ್ದಾರೆ.

ಪಡಿತರ ವಿತರಣೆ ಯೋಜನೆ
ಗಾಂಧಿನಗರದಲ್ಲಿರುವ ಚಲನಚಿತ್ರ ಕಾರ್ಮಿಕರ ಒಕ್ಕೂಟದಲ್ಲಿ ಶನಿವಾರ ಕಾರ್ಮಿಕರಿಗೆ ಆಹಾರ ಪಡಿತರಗಳನ್ನು ವಿತರಿಸುವುದಾಗಿ ನಿಖಿಲ್ ತಿಳಿಸಿದ್ದರು. ಆದರೆ ಅತಿ ಹೆಚ್ಚು ಜನರು ಅಲ್ಲಿ ಸೇರಿಕೊಳ್ಳುವ ಭೀತಿ ಎದುರಾಗಿದ್ದರಿಂದ ಅವರಿಗೆ ಹಣ ವರ್ಗಾವಣೆ ಮಾಡುವುದಾಗಿ ನಿರ್ಧಾರ ಬದಲಿಸಲಾಗಿತ್ತು.

3,000 ಸಿನಿಮಾ ಕಾರ್ಮಿಕರಿಗೆ ನೆರವು
ಈ ಮೊದಲು ನೀಡಿದ್ದ ಮಾತನ್ನು ನಿಖಿಲ್ ಈಡೇರಿಸಿದ್ದಾರೆ. 3,000 ಸಿನಿಮಾ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡಿದ್ದಾರೆ. ಕಾರ್ಮಿಕರ ಒಕ್ಕೂಟಗಳ ಕಾರ್ಯದರ್ಶಿ ರವೀಂದ್ರ ಅವರು ಸಾ.ರಾ. ಗೋವಿಂದು ಅವರಿಂದ ಚೆಕ್ ಸ್ವೀಕರಿಸಿದರು.

18 ಸಂಘಟನೆಗಳು
ರಾಜ್ಯ ಚಲನಚಿತ್ರರಂಗದ ಜೂನಿಯರ್ ಆರ್ಟಿಸ್ಟ್ಗಳು, ಪೋಷಕರ ಕಲಾವಿದರು, ಲೈಟ್ ಮ್ಯಾನ್ಗಳು ಸೇರಿದಂತೆ 18 ವಿವಿಧ ಸಂಘಗಳಲ್ಲಿನ ಕಾರ್ಮಿಕರಿಗೆ ಒಟ್ಟು 31.67 ಲಕ್ಷ ರೂಪಾಯಿ ಮೊತ್ತದ ಚೆಕ್ಅನ್ನು ನಿಖಿಲ್ ಕುಮಾರಸ್ವಾಮಿ ನೀಡಿದ್ದಾರೆ.

ಕಿರುತೆರೆ ಕಾರ್ಮಿಕರಿಗೂ ಸಹಾಯ
ಸಿನಿಮಾ ಕಾರ್ಮಿಕರ ಒಕ್ಕೂಟಕ್ಕೆ ಮಾತ್ರವಲ್ಲದೆ, ನಿಖಿಲ್ ಕುಮಾರಸ್ವಾಮಿ, ಕಿರುತೆರೆಯಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೂ ಧನ ಸಹಾಯ ಮಾಡಿದ್ದಾರೆ. ಕಿರುತೆರೆ ಕಾರ್ಮಿಕರಿಗಾಗಿ ಅವರು ಐದು ಲಕ್ಷ ರೂ. ನೆರವು ನೀಡಿದ್ದಾರೆ. ಟಿಲಿವಿಷನ್ ಅಸೋಸಿಯೇಷನ್ ಪರವಾಗಿ ನಟಿ ಅಭಿನಯ ಚೆಕ್ ಸ್ವೀಕರಿಸಿದರು.

ಇವರಿಲ್ಲದೆ ನಾನೂ ಇಲ್ಲ
ಕಾರ್ಮಿಕರ ದುಡಿಮೆಯ ಎಲ್ಲ ಬಾಗಿಲುಗಳೂ ಮುಚ್ಚಿರುವ ಸಂದರ್ಭದಲ್ಲಿ ಸಿನಿಮಾವನ್ನೇ ನಂಬಿ ಬದುಕುತ್ತಿದ್ದ ಹಲವು ಸಿನಿ ಕಾರ್ಮಿಕರು ಇಂದು ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಇಂತಹವರಿಲ್ಲದೇ ಸಿನಿಮಾ ಇಲ್ಲ, ನಾನೂ ಇಲ್ಲ. ಆದ್ದರಿಂದ ನನ್ನ ಪ್ರೀತಿಯ ಸಿನಿಮಾ ರಂಗದ ಕೆಲಸಗಾರರ ಖಾತೆಗೆ ನೇರವಾಗಿ ಧನ ಸಹಾಯ ಮಾಡುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು ನಿಖಿಲ್ ಹೇಳಿದ್ದಾರೆ.

ಆದಷ್ಟು ಸಹಾಯ ಮಾಡೋಣ
ಸಹಾನುಭೂತಿ ಹೊಂದಿದ್ದರೆ ಮಾತ್ರ ಗಾಯವನ್ನು ವಾಸಿ ಮಾಡಲು ಸಾಧ್ಯ. ನಮ್ಮಿಂದ ಎಲ್ಲರಿಗೂ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಪ್ರತಿಯೊಬ್ಬರೂ ಕೆಲವರಿಗೆ ಸಹಾಯ ಮಾಡಬಹುದು. ಆದಷ್ಟು ಸಹಾಯ ಮಾಡೋಣ. ಒಟ್ಟಾಗಿ ಬದುಕೋಣ ಎಂದು ನಿಖಿಲ್ ಕೋರಿದ್ದಾರೆ.


Click it and Unblock the Notifications











