ಬಿಡುಗಡೆಯಾದ ಎರಡೇ ದಿನಕ್ಕೆ ನಿಖಿಲ್ ಕುಮಾರಸ್ವಾಮಿ 'ರೈಡರ್' ಸಿನಿಮಾ ಲೀಕ್: ಪೈರಸಿ ಮಾಡಿದ್ದು ಯಾರು?
ಬಿಡುಗಡೆಯಾಗುವ ಹೊಸ ಕನ್ನಡ ಸಿನಿಮಾಗಳಿಗೆ ತಲೆನೋವು ಒಂದೆರಡಲ್ಲ. ಪರಭಾಷಾ ಸಿನಿಮಾಗಳ ಹಾವಳಿ ಒಂದೆಡೆಯಾದರೆ, ಇನ್ನೊಂದು ಕಡೆ ಸಿನಿಮಾ ಪೈರಸಿ ಮಾಡುವ ಕಿಡಿಗೇಡಿಗಳು. ಕೋಟ್ಯಾಂತರ ರೂಪಾಯಿ ಬಂಡವಾಳ ಹಾಕಿರುವ ನಿರ್ಮಾಪಕರಿಗೆ ಸಿನಿಮಾ ಗೆಲ್ಲಿಸಬೇಕಾದ ಒತ್ತಡದ ನಡುವೆ ಇಂತಹ ಸಮಸ್ಯೆಗಳ ಮೇಲೂ ಗಮನ ಹರಿಸಬೇಕಾದ ಅನಿವಾರ್ಯತೆ. ಈಗ ಸಿನಿಮಾ ಪೈರಸಿ ಮಾಡುವ ಕಿಡಿಗೇಡಿಗಳ ಕಣ್ಣಿಗೆ 'ರೈಡರ್' ಸಿನಿಮಾ ಬಿದ್ದಿದೆ.
ನಿಖಿಲ್ ಕುಮಾರಸ್ವಾಮಿ ನಟನೆಯ 'ರೈಡರ್' ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಮಾಸ್ ಹಾಗೂ ಕ್ಲಾಸ್ ಪ್ರೇಕ್ಷಕರ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದ್ದು, ನಿಖಿಲ್ ಕುಮಾರಸ್ವಾಮಿ ಬಿಡುಗಡೆ ಬಳಿಕವೂ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಇದೇ ವೇಳೆ 'ರೈಡರ್' ಸಿನಿಮಾ ಸೋರಿಕೆಯಾಗಿದ್ದು, ರಾಜ್ಯದ ಜನರಲ್ಲಿ ನಿಖಿಲ್ ಮನವಿ ಮಾಡಿಕೊಂಡಿದ್ದಾರೆ.

ಮರಾಠಿ ಹಾಗೂ ತಮಿಳು ರಾಕರ್ಸ್ನಿಂದ 'ರೈಡರ್' ಪೈರಸಿ
ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದ 'ರೈಡರ್' ಬಿಡುಗಡೆಯಾದ ಎರಡನೇ ದಿನವೇ ಆನ್ಲೈನ್ನಲ್ಲಿ ಸೋರಿಕೆಯಾಗಿದೆ. ನಿಖಿಲ್ ಕುಮಾರಸ್ವಾಮಿ ನಟನೆಯ ಕನ್ನಡ ಚಿತ್ರ 'ರೈಡರ್' ಮೇಲೆ ಮರಾಠಿ ಹಾಗೂ ತಮಿಳು ರಾಕರ್ಸ್ ಕಣ್ಣು ಬಿದ್ದಿದ್ದು, 'ರೈಡರ್' ಚಿತ್ರವನ್ನು ಕಿಡಿಗೇಡಿಗಳು ಪೈರಸಿ ಮಾಡಿದ್ದಾರೆ. ವಿವಿಧ ವೆಬ್ಸೈಟ್ನಲ್ಲಿ ಸಿನಿಮಾ ಹರಿಬಿಟ್ಟ ಮರಾಠಿ ಹಾಗೂ ತಮಿಳು ರಾಕರ್ಸ್ ಈ ಸಿನಿಮಾವನ್ನು ಲೀಕ್ ಮಾಡಿದ್ದಾರೆ. ಇದರೊಂದಿಗೆ ಟೆಲಿಗ್ರಾಂನಲ್ಲೂ ಕೂಡ 'ರೈಡರ್' ಹರಿದಾಡುತ್ತಿದೆ. ಡಿಸೆಂಬರ್ 24 ರಂದು 'ರೈಡರ್' ರಾಜ್ಯಾದ್ಯಂತ ರಿಲೀಸ್ ಆಗಿತ್ತು.

ಚಿತ್ರಮಂದಿರದಲ್ಲಿಯೇ ಸಿನಿಮಾ ನೋಡುವಂತೆ ನಿಖಿಲ್ ಮನವಿ
ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ರೈಡರ್' ಚಿತ್ರ ಪೈರಸಿಯಾಗಿದ್ದಕ್ಕೆ ನಿಖಿಲ್ ಪ್ರತಿಕ್ರಿಯಿಸಿದ್ದಾರೆ. "ನಮ್ಮ 'ರೈಡರ್' ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೀಗ ಕೆಲವು ಕಿಡಿಗೇಡಿಗಳು ನಮ್ಮ ಚಿತ್ರವನ್ನು ಪೈರಸಿ ಮಾಡಿದ್ದಾರೆ. ದಯವಿಟ್ಟು ಪೈರಸಿ ವಿಡಿಯೋವನ್ನು ನೋಡದೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ. ಕನ್ನಡ ಚಿತ್ರರಂಗವನ್ನು ಉಳಿಸಿ, ಚಿತ್ರತಂಡವನ್ನು ಪ್ರೋತ್ಸಾಹಿಸಿ," ಎಂದು ನಿಖಿಲ್ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಕನ್ನಡಪರ ಹೋರಾಟಗಾರರ ವಿರುದ್ಧ ಆಕ್ರೋಶ
'ರೈಡರ್' ಸಿನಿಮಾಗೆ ಪೈರಸಿ ಜೊತೆಗೆ ಕರ್ನಾಟಕ ಬಂದ್ ಬಿಸಿ ಕೂಡ ಮುಟ್ಟಿದೆ. ಡಿಸೆಂಬರ್ 31 ರಂದು ಕನ್ನಡಪರ ಹೋರಾಟಗಾರರು ಕರ್ನಾಟಕ ಬಂದ್ಗೆ ಕರೆ ನೀಡಿದ್ದಾರೆ. ಇವರ ವಿರುದ್ದ ನಿಖಿಲ್ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. ಕರ್ನಾಟಕ ಬಂದ್ ಮಾಡುವುದರಿಂದ ಏನಾದರು ಪ್ರಯೋಜನಾ ಆಗುತ್ತದೆಯೇ? ಕೇವಲ ಮಾಧ್ಯಮದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಬಂದ್ ಮಾಡಬಾರದು ಎಂದು ಹೋರಾಟಗಾರರ ವಿರುದ್ಧ ಕೋಪ ಹೊರಹಾಕಿದ್ದಾರೆ.

ಭರ್ಜರಿ ಪ್ರಚಾರದಲ್ಲಿ ನಿಖಿಲ್ ಕುಮಾರಸ್ವಾಮಿ
ಡಿಸೆಂಬರ್ 24 ರಂದು ತೆರೆಕಂಡಿರುವ 'ರೈಡರ್' ಸಿನಿಮಾದ ಪ್ರಚಾರದಲ್ಲಿ ನಿಖಿಲ್ ಬ್ಯುಸಿಯಾಗಿದ್ದಾರೆ. ಬೆಂಗಳೂರಿನ ಥಿಯೇಟರ್ಗಳಿಗೆ ಭೇಟಿ ನೀಡುವುದರಿಂದ ಆರಂಭ ಆಗಿದ್ದು, ಇನ್ನೂ ನಿಂತಿಲ್ಲ. ರಾಮನಗರ, ಕೋಲಾರ ಸೇರಿದಂತೆ ಹಲವೆಡೆ ಸ್ಯಾಂಡಲ್ವುಡ್ ಯುವರಾಜ 'ರೈಡರ್' ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ನಿಖಿಲ್ ಭೇಟಿ ಕೊಟ್ಟ ಕಡೆಗಳಲ್ಲೆಲ್ಲಾ ಅಭಿಮಾನಿಗಳು ಭರ್ಜರಿ ಸ್ವಾಗತ ನೀಡಿದ್ದಾರೆ.


Click it and Unblock the Notifications











